ಆ್ಯಪ್ನಗರ

7 ಕ್ಷೇತ್ರಗಳಲ್ಲಿ ಬಿಜೆಪಿ ಸಸ್ಪೆನ್ಸ್‌: ಕುತೂಹಲಕ್ಕೆ ಕಾರಣವಾದ ಬೆಂಗಳೂರು ದಕ್ಷಿಣ ಕ್ಷೇತ್ರ

ಬೆಂಗಳೂರು ಗ್ರಾಮಾಂತರ, ಕೊಪ್ಪಳ, ಚಿಕ್ಕೋಡಿ, ಕೋಲಾರ, ರಾಯಚೂರು, ಮಂಡ್ಯ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಬಾಕಿ ಇರುವ ಕ್ಷೇತ್ರಗಳ ಬಗ್ಗೆ ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಇನ್ನೊಂದು ಸುತ್ತಿನ ಚರ್ಚೆ ನಡೆಸಲು ನಿರ್ಧರಿಸಲಾಗಿದೆ.

Vijaya Karnataka 22 Mar 2019, 5:30 am
ಬೆಂಗಳೂರು: ರಾಜ್ಯದ 21 ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡಿದೆ. ಕೊಪ್ಪಳ ಲೋಕಸಭಾ ಕ್ಷೇತ್ರ ಹೊರತುಪಡಿಸಿ ಎಲ್ಲ ಹಾಲಿ ಸಂಸದರಿಗೂ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತಕುಮಾರ್‌ ಹೆಸರನ್ನು ರಾಜ್ಯ ಘಟಕ ಅಂತಿಮಗೊಳಿಸಿದ್ದರೂ ವರಿಷ್ಠರು ತಡೆ ಹಿಡಿದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
Vijaya Karnataka Web bjp flag


ಉಳಿದಂತೆ ಬೆಂಗಳೂರು ಗ್ರಾಮಾಂತರ, ಕೊಪ್ಪಳ, ಚಿಕ್ಕೋಡಿ, ಕೋಲಾರ, ರಾಯಚೂರು, ಮಂಡ್ಯ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಬಾಕಿ ಇರುವ ಕ್ಷೇತ್ರಗಳ ಬಗ್ಗೆ ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಇನ್ನೊಂದು ಸುತ್ತಿನ ಚರ್ಚೆ ನಡೆಸಲು ನಿರ್ಧರಿಸಲಾಗಿದೆ. ಅದೇ ರೀತಿ ಮಂಡ್ಯದಿಂದ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೋ ಬೇಡವೋ ಎಂಬ ಬಗ್ಗೆ ವರಿಷ್ಠರು ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ಶುಕ್ರವಾರ ಈ ಎಲ್ಲ ಚರ್ಚೆಗಳಿಗೆ ತೆರೆಬೀಳಲಿದೆ ಎಂದು ಹೇಳಲಾಗುತ್ತಿದೆ.

ಫೈರ್‌ ಬ್ರ್ಯಾಂಡ್‌ಗಳಿಗೆ ಟಿಕೆಟ್‌

ಬಿಜೆಪಿ ಫೈರ್‌ ಬ್ರ್ಯಾಂಡ್‌ಗಳಾದ ಸಚಿವ ಅನಂತಕುಮಾರ್‌ ಹೆಗಡೆ, ಶೋಭಾ ಕರಂದ್ಲಾಜೆ, ನಳೀನ್‌ ಕುಮಾರ್‌ ಕಟೀಲ್‌ ಹಾಗೂ ಪ್ರತಾಪ್‌ ಸಿಂಹಗೆ ಟಿಕೆಟ್‌ ಅಂತಿಮಗೊಳಿಸಲಾಗಿದೆ. ಅದೇ ರೀತಿ ಪಕ್ಷಾಂತರಿಗಳಾದ ಎ. ಮಂಜು, ದೇವೇಂದ್ರಪ್ಪ ಹಾಗೂ ಡಾ. ಉಮೇಶ್‌ ಜಾಧವ್‌ ಹೆಸರನ್ನೂ ವರಿಷ್ಠರು ಅಂತಿಮಗೊಳಿಸಿದ್ದಾರೆ.

ಉಮೇಶ್‌ ಜಾಧವ್‌ ವಿಚಾರದಲ್ಲಿ ಬಿಜೆಪಿ ವರಿಷ್ಠರು ರಿಸ್ಕ್‌ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಜಾಧವ್‌ ರಾಜೀನಾಮೆಯನ್ನು ಸ್ಪೀಕರ್‌ ಅಂಗೀಕರಿಸಿಲ್ಲ. ಹೀಗಾಗಿ ತಾಂತ್ರಿಕ ಸಮಸ್ಯೆಗಳು ಎದುರಾಗಬಹುದೆಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿರುವ ಬಿಜೆಪಿ ನಾಯಕರು, 'ಏನಾದರಾಗಲಿ' ಎಂಬ ಧೋರಣೆಯೊಂದಿಗೆ ಜಾಧವ್‌ ಅವರನ್ನೇ ಕಣಕ್ಕೆ ಇಳಿಸಲು ನಿರ್ಧರಿಸಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

ಕೋಲಾರ ಲೋಕಸಭಾ ಕ್ಷೇತ್ರದಿಂದ ಬೋವಿ ಸಮಾಜಕ್ಕೆ ಸೇರಿದವರಿಗೆ ಟಿಕೆಟ್‌ ನೀಡಬೇಕೆಂದು ಪ್ರಬಲ ಒತ್ತಡ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಛಲವಾದಿ ನಾರಾಯಣಸ್ವಾಮಿ ಹೆಸರನ್ನು ಬಾಕಿ ಇಡಲಾಗಿದೆ. ಆದರೆ ಸಮರ್ಥ ಅಭ್ಯರ್ಥಿ ಲಭಿಸದೇ ಇದ್ದರೆ ಪರಿಶಿಷ್ಟ ಜಾತಿಯ ಬಲಗೈ ವರ್ಗಕ್ಕೆ ಸೇರಿದವರನ್ನೇ ಕಣಕ್ಕಿಳಿಸಲಾಗುತ್ತದೆ. ಅದೇ ರೀತಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ರಮೇಶ್‌ ಕತ್ತಿ ಹಾಗೂ ಅಣ್ಣಾ ಸಾಹೇಬ್‌ ಜೊಲ್ಲೆ ಪೈಕಿ ಯಾರ ಹೆಸರನ್ನು ಅಂತಿಮಗೊಳಿಸಬೇಕೆಂಬ ಬಗ್ಗೆ ವರಿಷ್ಠರು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ವಾಲ್ಮೀಕಿ ಸಮುದಾಯಕ್ಕೆ ಸೇರಿದ ಸಮರ್ಥರನ್ನು ಅಭ್ಯರ್ಥಿಯಾಗಿಸಬೇಕೆಂಬ ಕಾರಣಕ್ಕೆ ತಿಪ್ಪರಾಜ ಹವಾಲ್ದಾರ್‌ ಹಾಗೂ ರಾಜಾ ಅಮರೇಶ್‌ ನಾಯಕ್‌ ಪೈಕಿ ಯಾರು ಸೂಕ್ತ ಎಂಬುದನ್ನು ವರಿಷ್ಠರು ಇನ್ನೂ ಅಳೆದು ತೂಗುತ್ತಿದ್ದಾರೆ. ಮಂಡ್ಯಕ್ಕೆ ಸಂಬಂಧಪಟ್ಟಂತೆಯೂ ದ್ವಂದ್ವತೆ ಸೃಷ್ಟಿಯಾಗಿದೆ.

ರಾಹುಲ್‌ಗಾಗಿ ಪೆಂಡಿಂಗ್‌

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್‌ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ರಹಸ್ಯವಾಗಿಡಲಾಗಿದೆ. ಒಂದೊಮ್ಮೆ ರಾಹುಲ್‌ ಇಲ್ಲಿಂದ ಸ್ಪರ್ಧಿಸಿದರೆ ಪ್ರಬಲರನ್ನೇ ಕಣಕ್ಕೆ ಇಳಿಸುವ ಬಗ್ಗೆ ವರಿಷ್ಠರು ಲೆಕ್ಕಾಚಾರ ಹಾಕುತ್ತಿದ್ದಾರೆ. ರಾಹುಲ್‌ ಗಾಂಧಿಗೆ ಸರಿಸಾಟಿಯಾಗಿ ನಿಲ್ಲುವ ವ್ಯಕ್ತಿ ಯಾರು ಎಂಬ ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಡಿ.ಕೆ.ಸುರೇಶ್‌ ಅವರೇ ಅಭ್ಯರ್ಥಿಯಾದರೆ ನಿಶಾ ಯೋಗೇಶ್ವರನ್ನು ಕಣಕ್ಕಿಳಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಅದೇ ರೀತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆ ಕ್ಷಣದಲ್ಲಿ ಕೊಪ್ಪಳದಿಂದ ಸ್ಪರ್ಧಿಸಬಹುದೆಂಬ ಮಾತುಗಳಿವೆ. ಹೀಗಾಗಿ ಕರಡಿ ಸಂಗಣ್ಣ ಗೆ ಟಿಕೆಟ್‌ ಅಂತಿಮಗೊಳಿಸಿಲ್ಲ. ಹಾಲಿ ಸಂಸದರ ಪೈಕಿ ಅತಿ ಹೆಚ್ಚು ವಿರೋಧಿ ಅಲೆಯನ್ನು ಕರಡಿ ಸಂಗಣ್ಣ ಎದುರಿಸುತ್ತಿದ್ದರು ಎಂಬ ಮಾಹಿತಿಯನ್ನು ವರಿಷ್ಠರು ಸಂಗ್ರಹಿಸಿದ್ದಾರೆ.

ಅಂತಿಮಗೊಳ್ಳದ ಸಪ್ತ ಕ್ಷೇತ್ರಗಳು

ಕೊಪ್ಪಳ

ಬೆಂಗಳೂರು ದಕ್ಷಿಣ

ಬೆಂಗಳೂರು ಗ್ರಾಮಾಂತರ

ಚಿಕ್ಕೋಡಿ

ಕೋಲಾರ

ರಾಯಚೂರು

ಮಂಡ್ಯ

ಟಿಕೆಟ್‌ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದೇವೆ.
-ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌