ಆ್ಯಪ್ನಗರ

ಪಾಕ್ ಎಂಬ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಪ್ರಯೋಗಿಸಿದ್ದು ಯಾವ ಪುರುಷಾರ್ಥಕ್ಕೆ ಎಂದ ಕೈ ನಾಯಕ

ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ.ನಾಯಕ ಅವರು, ''ಕಳೆದ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರು ದೇಶದ ಜನತೆಗೆ ನೀಡಿದ ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ. ಜನರು ಮತ್ತೊಮ್ಮೆ ಅವರ ಮಾತು ನಂಬಿ ಮೂರ್ಖರಾಗುವ ಪರಿಸ್ಥಿತಿಯಿಲ್ಲ. ಚುನಾವಣೆ ಸಂದರ್ಭದಲ್ಲಿ ಜನರ ಗಮನಸೆಳೆಯಲು ರಕ್ಷಣಾ ಇಲಾಖೆ ಬಳಸಿಕೊಂಡು ಪಾಕ್‌ ಎಂಬ ಸಣ್ಣ ರಾಷ್ಟ್ರದ ಮೇಲೆ, 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಎಂಬ ರೀತಿಯಲ್ಲಿ ದಾಳಿಮಾಡಿ ಪೌರುಷ ಮೆರೆದಿದ್ದು, ಯಾವ ಪುರುಷಾರ್ಥಕ್ಕೆ ಎಂಬುದು ನನಗೆ ಅರ್ಥವಾಗಿಲ್ಲ'', ಎಂದು ಲೇವಡಿ ಮಾಡಿದ್ದರು.

Vijaya Karnataka 26 Mar 2019, 9:26 am
ರಾಯಚೂರು: ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ ನಾಯಕರು, ದೇಶದ ಭದ್ರತೆಯ ವಿಚಾರವನ್ನು ಮುಂದಿರಿಸಿಕೊಂಡು ಸರ್ಜಿಕಲ್‌ ಸ್ಟ್ರೈಕ್‌ ನಡೆದೇ ಇಲ್ಲ ಎಂದು ವಾದಿಸಿದ್ದು ಹಳೆಯ ವಿಚಾರ. ಅಷ್ಟೇ ಅಲ್ಲ ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿ ನೂರಾರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ಬೀಗಿತ್ತು. ಅದೇ ವೇಳೆ ಸಾಕ್ಷ್ಯಾಧಾರ ಕೇಳುವ ಮೂಲಕ ಕಾಂಗ್ರೆಸ್‌ ರಾಜಕೀಯ ಲಾಭ ಪಡೆಯಲೂ ತಂತ್ರ ಹೂಡಿತ್ತು.
Vijaya Karnataka Web Air Strike


ಆದರೆ, ಚುನಾವಣೆ ಘೋಷಣೆಯಾದ ನಂತರ ಕೇಂದ್ರ ಚುನಾವಣೆ ಆಯೋಗವು ಸೈನಿಕರ ದಾಳಿಯ ವಿಚಾರವನ್ನು ಚುನಾವಣೆಯ ವೇಳೆ ರಾಜಕೀಯ ಪ್ರಚಾರಕ್ಕೆ ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಆದರೂ ಅಲ್ಲಲ್ಲಿ ರಾಜಕೀಯ ಪಕ್ಷಗಳ ನಾಯಕರು ಸುತ್ತು ಬಳಸಿ ಅದೇ ವಿಚಾರಕ್ಕೆ ಅಂಟಿಕೊಂಡು ಮತ ಓಲೈಕೆಗೆ ಮುಂದಾಗುತ್ತಿರುವುದು ಕಾಣಸಿಗುತ್ತಿದೆ. ಪಾಕ್‌ ವಿರುದ್ಧ ನಡೆದ ಸರ್ಜಿಕಲ್‌ ಸ್ಟ್ರೈಕ್‌ ವಿಚಾರವನ್ನು ಪ್ರಚಾರಕ್ಕೆ ಬಳಸದಂತೆ ರಾಜಕೀಯ ಪಕ್ಷಗಳಿಗೆ ಕೇಂದ್ರ ಚುನಾವಣೆ ಆಯೋಗ ತಾಕೀತುಮಾಡಿದೆ. ಆದರೆ, ರಾಜಕೀಯ ಪಕ್ಷಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ರಾಯಚೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ.ನಾಯಕ ಅವರು, ತಮ್ಮ ಚುನಾವಣೆ ಪ್ರಚಾರ ವೇಳೆ ಪ್ರಧಾನಿ ಮೋದಿ ಅವರ ವಿರುದ್ಧ ಹರಿಹಾಯುವ ಭರದಲ್ಲಿ ಪಾಕ್‌ ಪರ ಬ್ಯಾಟಿಂಗ್‌ ಮಾಡಿರುವುದು ಸದ್ಯ ವಿವಾದ ಎಬ್ಬಿಸಿದೆ.

ಖಾಸಗಿ ಸುದ್ದಿವಾಹಿನಿಗೆ ನೀಡಿದ ಹೇಳಿಕೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ.ನಾಯಕ ಅವರು, ''ಕಳೆದ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರು ದೇಶದ ಜನತೆಗೆ ನೀಡಿದ ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ. ಜನರು ಮತ್ತೊಮ್ಮೆ ಅವರ ಮಾತು ನಂಬಿ ಮೂರ್ಖರಾಗುವ ಪರಿಸ್ಥಿತಿಯಿಲ್ಲ. ಚುನಾವಣೆ ಸಂದರ್ಭದಲ್ಲಿ ಜನರ ಗಮನಸೆಳೆಯಲು ರಕ್ಷಣಾ ಇಲಾಖೆ ಬಳಸಿಕೊಂಡು ಪಾಕ್‌ ಎಂಬ ಸಣ್ಣ ರಾಷ್ಟ್ರದ ಮೇಲೆ, 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಎಂಬ ರೀತಿಯಲ್ಲಿ ದಾಳಿಮಾಡಿ ಪೌರುಷ ಮೆರೆದಿದ್ದು, ಯಾವ ಪುರುಷಾರ್ಥಕ್ಕೆ ಎಂಬುದು ನನಗೆ ಅರ್ಥವಾಗಿಲ್ಲ'', ಎಂದು ಲೇವಡಿ ಮಾಡಿದ್ದರು.

''ಆದರೆ, ಕಾಂಗ್ರೆಸ್‌, ದೇಶದ ಜನರ ಒಳಿತಿಗಾಗಿಯೇ ನಿರಂತರ ದುಡಿದು ಇತಿಹಾಸ ಸೃಷ್ಟಿಸಿದೆ. ಐತಿಹಾಸಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ದೇಶದ ಜನರ ಹಿತ ಕಾಯುವ ಕೆಲಸಮಾಡಿದೆ'' ಎಂದು ಹೇಳಿದ್ದು ಇದೀಗ ವಿವಾದದ ಕಿಡಿ ಹೊತ್ತಿಸಿದೆ.

ದೂರಿಗೆ ಸಿದ್ಧತೆ:

ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ.ನಾಯಕ ಅವರ ಹೇಳಿಕೆಯ ವಿಡಿಯೊ ವೈರಲ್‌ ಆಗಿದೆ. ಈ ವಿಡಿಯೊ ತುಣಕು ಆಧಾರವಾಗಿರಿಸಿಕೊಂಡು ಬಿಜೆಪಿ ಜಿಲ್ಲಾ ನಾಯಕರು, ಇದೀಗ ರಾಜಕೀಯ ದಾಳಿಗೆ ಮುಂದಾಗಿದ್ದಾರೆ. ರಾಜ್ಯ ಚುನಾವಣೆ ಆಯೋಗಕ್ಕೆ ಈ ಬಗ್ಗೆ ದೂರು ಸಲ್ಲಿಸಲೂ ಸಿದ್ಧತೆ ನಡೆಸಿದ್ದಾರೆ.

ಕೇಂದ್ರ ಚುನಾವಣೆ ಆಯೋಗವು ಸೈನಿಕರು ಹಾಗೂ ದಾಳಿಯ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸದಂತೆ ತಾಕೀತು ಮಾಡಿದ್ದರೂ ಕಾಂಗ್ರೆಸ್‌ ಅಭ್ಯರ್ಥಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅಷ್ಟೇ ಅಲ್ಲ ಪಾಕಿಸ್ತಾನ ಪರ ನಿಲುವು ಪ್ರಕಟಿಸಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ನಡೆಯುವ ಪ್ರಚಾರದ ವೇಳೆ ಮತದಾರರ ಬಳಿ ಈ ವಿಷಯವನ್ನು ಚುನಾವಣೆ ಅಸ್ತ್ರವಾಗಿ ಕೊಂಡೊಯ್ಯುವ ನಿಟ್ಟಿನಲ್ಲೂ ಬಿಜೆಪಿ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಬಗ್ಗೆ ಕಾಂಗ್ರೆಸ್‌ ಅಭ್ಯರ್ಥಿಗೆ ಅರಿವಿದ್ದಂತಿಲ್ಲ. ಕೇಂದ್ರ ಚುನಾವಣೆ ಆಯೋಗದ ನಿರ್ದೇಶನ ಮೀರಿ ಸೈನಿಕರು ಮತ್ತು ದಾಳಿಯ ವಿಚಾರವನ್ನು ಅಲ್ಪಸಂಖ್ಯಾತರ ಮತ ಓಲೈಕೆಗೆ ಬಳಸಿರುವುದು ಖಂಡನೀಯ. ಈ ಬಗ್ಗೆ ಚುನಾವಣೆ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಲಿದೆ-ತ್ರಿವಿಕ್ರಮ್‌ ಜೋಷಿ, ಮುಖಂಡರು, ಭಾರತೀಯ ಜನತಾ ಪಾರ್ಟಿ, ರಾಯಚೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ