ಆ್ಯಪ್ನಗರ

ದೇವೇಗೌಡರ ಪತ್ನಿ ಮೋದಿಗೆ ವೋಟ್‌ ಹಾಕಿದರೂ ಅಚ್ಚರಿ ಇಲ್ಲ, ಕಾಂಗ್ರೆಸ್‌ನವರ ಪತ್ನಿ, ಮಕ್ಕಳು ನಮೋ ಜಪ ಮಾಡುತ್ತಿದ್ದಾರೆ

ಪ್ರತಿ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ಎಂದು ಕೇಳಬೇಕಿತ್ತು. ಆದರೀಗ, ಪರಿಸ್ಥಿತಿ ಬದಲಾಗಿದೆ. ಜನರೇ ಬಿಜೆಪಿಗೆ ಮತ ಹಾಕಲು ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕೆ ನರೇಂದ್ರ ಮೋದಿ ಅವರ ಆಡಳಿತವೇ ಕಾರಣ. ಬಿಜೆಪಿ ಕಾರ್ಯಕರ್ತರು ವೀರ ಯೋಧರಿದ್ದಂತೆ, ಮೋದಿ ಅವರ ಸೈನ್ಯದಲ್ಲಿದ್ದೇವೆ.

Vijaya Karnataka Web 24 Mar 2019, 9:27 pm
ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಮಹಾಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದ ಪಕ್ಷಗಳೀಗ ಕಾಂಗ್ರೆಸ್‌ಗೆ ಕೈಕೊಟ್ಟಿವೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
Vijaya Karnataka Web ಕೆಎಸ್‌ ಈಶ್ವರಪ್ಪ
ಕೆಎಸ್‌ ಈಶ್ವರಪ್ಪ


ನಗರದ ಎನ್‌ಡಿವಿ ಹಾಸ್ಟೆಲ್ ಆವರಣದಲ್ಲಿ ನಡೆದ ನಗರ ಬಿಜೆಪಿ ಬೂತ್ ಮತ್ತು ಪೇಜ್ ಪ್ರಮುಖರ ಸಭೆಯಲ್ಲಿ ಮಾತನಾಡಿ, ಜೆಡಿಎಸ್, ಕಾಂಗ್ರೆಸ್, ಕಮ್ಯೂನಿಸ್ಟ್ ಪಾರ್ಟಿ ಮತ್ತು ಬಿಎಸ್‌ಪಿನವರು ಮಹಾಘಟಬಂದನ್ ಮಾಡಿಕೊಳ್ಳುವ ಬಗ್ಗೆ ಹೇಳಿಕೊಂಡಿದ್ದರು. ಆದರೀಗ, ಇವರು ಕೈಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರತಿ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ಎಂದು ಕೇಳಬೇಕಿತ್ತು. ಆದರೀಗ, ಪರಿಸ್ಥಿತಿ ಬದಲಾಗಿದೆ. ಜನರೇ ಬಿಜೆಪಿಗೆ ಮತ ಹಾಕಲು ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕೆ ನರೇಂದ್ರ ಮೋದಿ ಅವರ ಆಡಳಿತವೇ ಕಾರಣ. ಬಿಜೆಪಿ ಕಾರ್ಯಕರ್ತರು ವೀರ ಯೋಧರಿದ್ದಂತೆ, ಮೋದಿ ಅವರ ಸೈನ್ಯದಲ್ಲಿದ್ದೇವೆ. ಕಳೆದ ಬಾರಿ ನಗರದಲ್ಲಿ 24 ಸಾವಿರ ಲೀಡ್ ಕೊಟ್ಟಿದ್ದೇವು. ಈ ಬಾರಿ 50 ಸಾವಿರ ಲೀಡ್ ಕೊಡಲು ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

ಯುಪಿಎ ಅವಧಿಯಲ್ಲಿ ಬ್ರಹ್ಮಾಂಡ ಭಷ್ಟಾಚಾರ ನಡೆದಿದೆ. ಆದರೆ, ನರೇಂದ್ರ ಮೋದಿ ಅವಧಿಯಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ. ಮಾಜಿ ಪ್ರಧಾನಿ ದೇವೇಗೌಡರು ಈ ಬಾರಿ ಬಿಜೆಪಿಗೆ ಒಂದಂಕಿ ದಾಟಲು ಬಿಡಲ್ಲ ಅಂದು ಹೇಳುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಎರಡು ಸೀಟಾದರೂ ಗೆದ್ದಿದ್ದರು ಈ ಸಲ ಅದೂ ಅನುಮಾನ ಎಂದು ಹೇಳಿದರು.

ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಅಭ್ಯರ್ಥಿಗಳೇ ಸಿಗದ ದುಸ್ಥಿತಿ ಬಂದಿದೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ ಮೈತ್ರಿ ಹೇಗಿದೆಯೆಂದರೆ, ಎಲ್ಲ ರೀತಿಯ ಗಲಾಟೆಗಳಾಗಿವೆ. ಚಾಕು ಹಿಡಿದು ಕೊಲೆ ಮಾಡಿಕೊಂಡಿಲ್ಲವಷ್ಟೆ ಎಂದು ಲೇವಡಿ ಮಾಡಿದರು.

ಕಳೆದ ಬಾರಿ 8-9 ಸೀಟು ಗೆಲ್ಲಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಕಾಂಗ್ರೆಸ್ ಸರಕಾರ ಇದ್ದರೂ 9 ಸ್ಥಾನ ಗೆದ್ದರು. ನಾವು 17 ಸ್ಥಾನ ಗೆದ್ದಿದ್ದೆವು ಎಂದರು.

ಮೋದಿಗೆ ‘ಚನ್ನಮ್ಮ’ರ ಮತ!

ಕಾಂಗ್ರೆಸ್ ಕೆಲ ಮುಖಂಡರು ಅವರ ಪತ್ನಿಯೇ ಅವರಿಗೆ ಮತ ಹಾಕಲ್ಲ. ಬಿಜೆಪಿಗೆ, ಮೋದಿಗೆ ಓಟ್ ಮಾಡುತ್ತೇವೆ ಎನ್ನುತ್ತಿದ್ದಾರಂತೆ. ಅವರ ಮಕ್ಕಳೂ ಅಷ್ಟೆ. ಈ ಬೆಳವಣಿಗೆಗಳ ಮಧ್ಯೆ ದೇವೇಗೌಡರ ಪತ್ನಿ ಚನ್ನಮ್ಮ ಅವರೂ ನರೇಂದ್ರ ಮೋದಿಗೆ ಮತ ಹಾಕಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಟಾಂಗ್ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ