ಆ್ಯಪ್ನಗರ

ಕರಾವಳಿಯಲ್ಲಿ ಶಪಥ ರಾಜಕೀಯ!

ಸಂಸತ್‌ ಚುನಾವಣೆ ಸಮೀಪಿಸುತ್ತಿದ್ದಂತೆ ಕರಾವಳಿ ಮತ್ತೆ ರಂಗೇರಲಾರಂಭಿಸಿದೆ. ಶಪಥ, ಶಾಪ ರಾಜಕೀಯ ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡಲಾರಂಭಿಸಿದೆ.

Vijaya Karnataka Web 26 Mar 2019, 4:06 pm
ಮಂಗಳೂರು: ದೇಶ ಹಾಗೂ ರಾಜ್ಯ ರಾಜಕೀಯಕ್ಕೆ ಆಣೆ, ಶಪಥ ಹೊಸತೇನಲ್ಲ. ಆದರೆ ಕರಾವಳಿ ಮಟ್ಟಿಗೆ ಇದೆಲ್ಲ ಹೊಸತೇ ಎನ್ನಬಹುದು. ಸಂಸತ್‌ ಚುನಾವಣೆ ಸಮೀಪಿಸುತ್ತಿದ್ದಂತೆ ಕರಾವಳಿ ಮತ್ತೆ ರಂಗೇರಲಾರಂಭಿಸಿದೆ. ಶಪಥ, ಶಾಪ ರಾಜಕೀಯ ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡಲಾರಂಭಿಸಿದೆ.
Vijaya Karnataka Web bjp


ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹಾಗೂ ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ್‌ ಅವರ ನಡುವೆ ಆಣೆ ರಾಜಕೀಯ ನಡೆದಿತ್ತು. ಕಾಂಗ್ರೆಸ್‌ನ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ಅವರ ವಿಷಯಕ್ಕೆ ಸಂಬಂಧಿಸಿದಂತೆ ರೈ ಹಾಗೂ ಬಂಟ್ವಾಳ್‌ ನಡುವೆ ಆಣೆ ನಡೆದಿತ್ತು. ಇದೀಗ ವಿಶೇಷವೆಂದರೆ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪೂಜಾರಿ ಅವರೇ ಶಪಥ ಮಾಡಿ ಸಾಕಷ್ಟು ಸದ್ದು ಮಾಡಿದ್ದಾರೆ.

ಪೂಜಾರಿಯವರ ಶಪಥಕ್ಕೆ ಕಾರಣವೂ ಇದೆ. ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲ್‌ ಅವರು ಭಾನುವಾರ ಕುದ್ರೋಳಿ ದೇಗುಲಕ್ಕೆ ಭೇಟಿ ನೀಡಿ ಪೂಜಾರಿ ಅವರ ಕಾಲು ಹಿಡಿದು ಆಶೀರ್ವಾದ ಪಡೆದಿದ್ದರು. ನಳಿನ್‌ ಅವರಿಗೆ ಮತ್ತೆ ಗೆಲ್ಲುವಂತೆ ಪೂಜಾರಿ ಆಶೀರ್ವಾದ ಮಾಡಿದ್ದರು.

ನಳಿನ್‌ ಭೇಟಿಯ ಮರು ದಿನವಾದ ಸೋಮವಾರ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಅವರು ಕುದ್ರೋಳಿ ದೇವಾಲಯಕ್ಕೆ ಭೇಟಿ ನೀಡಿ ಪೂಜಾರಿ ಅವರ ಆಶೀರ್ವಾದ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಪೂಜಾರಿ, 'ನನಗೆ ಅಹಂಕಾರ ಬಂದಿದೆ ಎಂದು ದೇವರು ಕನಸಿನಲ್ಲಿ ಎಚ್ಚರಿಸಿದ್ದಾನೆ. ನಿನ್ನೆ ನಳಿನ್‌ ಕುಮಾರ್‌ ಕಟೀಲ್‌ ಗೆಲ್ಲುತ್ತಾರೆ ಎಂದು ಹೇಳಿದ್ದೆ.

ನಾನು ನಳಿನ್‌ಗೆ ಹಿರಿಯನಾಗಿ ಕೊಟ್ಟ ಆಶೀರ್ವಾದ ಇದಾಗಿದೆ. ಅದನ್ನು ನಾನು ಈ ಮೊದಲು ಎರಡು ಬಾರಿ ಕೊಟ್ಟಿದ್ದೇನೆ. ಕಾಂಗ್ರೆಸ್‌ ಪಕ್ಷದವನಾದ ನಾನು ಮಿಥುನ್‌ ಜತೆಯೇ ಸಾಗುತ್ತೇನೆ. ಪಕ್ಷವು ಅಳೆದು, ತೂಗಿ, ಅರೆದು ಸಮರ್ಥ ಯುವ ನಾಯಕನ್ನು ಆರಿಸಿದೆ. ಮಿಥುನ್‌ ಗೆಲ್ಲುವ ವಿಶ್ವಾಸ ನನಗಿದೆ' ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೆ ಮಿಥುನ್‌ ಗೆಲ್ಲದಿದ್ದರೆ ನಾನು ಕುದ್ರೋಳಿ ದೇವಾಲಯಕ್ಕೆ ಬರುವುದನ್ನೇ ನಿಲ್ಲಿಸುತ್ತೇನೆ ಎಂದು ಭೀಷ್ಮ ಪ್ರತಿಜ್ಞೆ ಕೈಗೊಂಡಿದ್ದಾರೆ.

ಅಣೆ ಪರಂಪರೆಎಚ್‌.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್‌. ಯಡಿಯೂರಪ್ಪ ಅವರ ನಡುವೆ ಈ ಹಿಂದೆ ಅಣೆ ಪ್ರಮಾಣ ನಡೆದು ರಾಜ್ಯಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಎಂ. ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಪಕ್ಷೇತರ ಶಾಸಕ ಭೈರೇಗೌಡ ಅವರು ಮಾಡಿದ ಆರೋಪಕ್ಕೆ ಧರ್ಮಸ್ಥಳದಲ್ಲಿ ಆಣೆ ಮಾಡುವುದಾಗಿ ಪ್ರತಿಕ್ರಿಯೆ ನೀಡಿದ್ದರು. ನಂತರ ಇದು ತಣ್ಣಗಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ