ಆ್ಯಪ್ನಗರ

UPA ಆಡಳಿತದಲ್ಲಿ ದೇಶವನ್ನು ನೂರು ವರ್ಷಕ್ಕೆ ಹಿಂದಕ್ಕೆ ತಳ್ಳಿದ್ದರು: ಮಾಳವಿಕಾ ವಾಗ್ದಾಳಿ

ಯುಪಿಎ ಹತ್ತು ವರ್ಷದ ಆಡಳಿತದಲ್ಲಿ ದೇಶವನ್ನು ನೂರು ವರ್ಷಕ್ಕೆ ಹಿಂದಕ್ಕೆ ತಳ್ಳಿದ್ದರು. 2013 ರಲ್ಲಿ ಭಾರತ ಎಂದರೆ ಭ್ರಷ್ಟಾಚಾರದ ದೇಶ ಎಂದು ಪ್ರಪಂಚ ನೋಡುತ್ತಿತ್ತು.

Vijaya Karnataka Web 25 Mar 2019, 5:23 pm
ದಾವಣಗೆರೆ: ಯುಪಿಎ ಹತ್ತು ವರ್ಷದ ಆಡಳಿತದಲ್ಲಿ ದೇಶವನ್ನು ನೂರು ವರ್ಷಕ್ಕೆ ಹಿಂದಕ್ಕೆ ತಳ್ಳಿದ್ದರು. 2013 ರಲ್ಲಿ ಭಾರತ ಎಂದರೆ ಭ್ರಷ್ಟಾಚಾರದ ದೇಶ ಎಂದು ಪ್ರಪಂಚ ನೋಡುತ್ತಿತ್ತು. ಭೂಮಿಯಿಂದ ಬಾನಿನವರೆಗೂ ಎಲ್ಲ ಕಡೆ ಭ್ರಷ್ಟಾಚಾರ ಮಾಡಿದ್ದರು. 150 ಹಗರಣಗಳು ಹೊರ ಬಿದ್ದಿದ್ದು ಬಿಲಿಯನ್‌ ಕೋಟಿಗಳಷ್ಟು ಹಣ ಪೋಲಾಗಿತ್ತು. ದೇಶಕ್ಕೆ ರಕ್ಷಣೆಯಿರಲಿಲ್ಲ, ಆರ್ಥಿಕತೆ ಹಳಿ ತಪ್ಪಿತ್ತು. ದೇಶದ ಜನ ನೈತಿಕವಾಗಿ ಕುಸಿದಿದ್ದರು, ಆಂತರಿಕವಾಗಿಯೂ ಸುರಕ್ಷತೆಯಿರಲಿಲ್ಲಎಂದು ಬಿಜೆಪಿ ನಾಯಕಿ ಮಾಳವಿಕಾ ವಾಗ್ದಾಳಿ ನಡೆಸಿದರು.
Vijaya Karnataka Web malavika


ದಾವಣಗೆರೆ ಉತ್ತರ ವಿಧಾನಸಭೆ ಕ್ಷೇತ್ರ ವಿಭಾಗದಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಪ್ರಬುದ್ಧರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಿಯಾಂಕಾ ಗಾಂಧಿ ವಿರುದ್ಧ ವಾಕ್‌ಪ್ರಹಾರ

ಮುದ್ರಾಬ್ಯಾಂಕ್‌ ಯೋಜನೆಯಡಿ 12.34 ಕೋಟಿ ಜನರಿಗೆ ಸಾಲ ನೀಡಿದ್ದು ಅವರೆಲ್ಲಾ ಸ್ವ ಉದ್ಯೋಗ ಕೈಗೊಂಡಿರುವಾಗ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾಗಾಂಧಿ 2 ಕೋಟಿ ಉದ್ಯೋಗ ಎಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ, ಈ ಎರಡರಲ್ಲಿ ಯಾವುದು ದೊಡ್ಡದು ಎಂದು ಪ್ರಶ್ನಿಸುವ ಮೂಲಕ ರಾಜ್ಯ ಬಿಜೆಪಿ ಸಹ ವಕ್ತಾರ ಮಾಳವಿಕಾ ಅವಿನಾಶ್‌ ಪ್ರಿಯಾಂಕಾಗಾಂಧಿ ವಿರುದ್ಧ ಹರಿಹಾಯ್ದರು.

ಗಂಗಾಯಾತ್ರೆ ಮಾಡಿ ಆ ನೀರನ್ನು ಪ್ರೋಕ್ಷಣೆ ಮಾಡಿಕೊಂಡು ತಾವು ಬಾಯಿಗೆ ಹಾಕಿಕೊಂಡು ಕುಡಿದರು, ಆ ಗಂಗಾ ನದಿಯನ್ನು ಸ್ವಚ್ಛಗೊಳಿಸಿದ್ದು ನರೇಂದ್ರ ಮೋದಿ ಎಂದು ತಿರುಗೇಟು ನೀಡಿದರು.

ಮೋದಿ ಪರ ಘೋಷಣೆ:

ಹೀಗಿದ್ದ ಭಾರತವನ್ನು ಕಳೆದ ನಾಲ್ಕು ಮುಕ್ಕಾಲು ವರ್ಷದಲ್ಲಿ ನರೇಂದ್ರ ಮೋದಿ ಅವರು ವಿಶ್ವಗುರು ಆಗುವಂತೆ ಮಾಡಿದ್ದಾರೆ. ಆರ್ಥಿಕವಾಗಿ ಪ್ರಪಂಚದಲ್ಲಿ ಐದನೇ ದೇಶವಾಗಿದ್ದು ಫ್ರಾನ್ಸ್‌ನ್ನು ಹಿಂದಿಕ್ಕಿ ಮುಂದೆ ಸಾಗಿದೆ. ಒಂದೇ ಒಂದು ಹಗರಣವಿಲ್ಲದಂತೆ ಪಾರದರ್ಶಕ ಆಡಳಿತ ನೀಡಲಾಗಿದೆ. ಪುಲ್ವಾಮಾ ಘಟನೆ ನಂತರ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಹೇಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅದೇ ರೀತಿ ಬಾಲಕೋಟ್‌ಗೆ ನುಗ್ಗಿ ನೂರಾರು ಭಯೋತ್ಪಾದಕರನ್ನು ಹೊಡೆದು ಹಾಕಿದರು. ಈ ಚುನಾವಣೆ ಎಂಬ ಪರೀಕ್ಷೆಯಲ್ಲಿ ಪ್ರಧಾನಮಂತ್ರಿ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ತರುವ ಮೂಲಕ ಭಾರತವನ್ನು ಗೆಲ್ಲಿಸುವ ನಿರ್ಧಾರ ಮಾಡಬೇಕಿದೆ ಎಂದು ಸಭೆಯಲ್ಲಿ ನೆರೆದಿದ್ದ ಎಲ್ಲರಿಂದಲೂ ಮತ್ತೊಮ್ಮೆ ಮೋದಿ ಎಂದು ಘೋಷಣೆ ಕೂಗಿಸಿದರು.

ಉತ್ತರ ವಿಧಾನಸಭೆ ಕ್ಷೇತ್ರದ ಮಹಿಳಾ ವಿಭಾಗದ ಅಧ್ಯಕ್ಷೆ ಭಾಗ್ಯಮ್ಮ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್‌.ಎ. ರವೀಂದ್ರನಾಥ್‌, ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ಮಹಿಳಾ ವಿಭಾಗ ಜಿಲ್ಲಾಧ್ಯಕ್ಷೆ ಜಯಮ್ಮ, ಮುಖಂಡರಾದ ರುದ್ರಮುನಿಸ್ವಾಮಿ, ಸಂಚಾಲಕ ಲಕ್ಷ್ಮಣ್‌, ಮಂಡಲ ಪ್ರಮುಖರಾದ ಶಿವರಾಜ್‌ ಪಾಟೀಲ್‌, ಸವಿತಾ ರವಿಕುಮಾರ್‌ ಇತರರು ಇದ್ದರು.

300ರಲ್ಲಿ ಸಿದ್ದೇಶ್ವರ ಇರಲಿ

ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಲು 300 ಲೋಕಸಭೆ ಸದಸ್ಯರನ್ನು ಸಂಸತ್‌ಗೆ ಕಳುಹಿಸಬೇಕಿದೆ. ಆ ಮುನ್ನೂರು ಜನ ಸಂಸದರಲ್ಲಿ ದಾವಣಗೆರೆ ಕ್ಷೇತ್ರದಿಂದ ಜಿ.ಎಂ. ಸಿದ್ದೇಶ್ವರ ಕೂಡ ಇರಲಿ. ಈ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಇರಲಿ ಎಂದು ಮಾಳವಿಕಾ ಅವಿನಾಶ್‌ ಮನವಿ ಮಾಡಿದರು.

ವಿದೇಶಕ್ಕೆ ಹೋಗಿ ಬಂದ ಶ್ರಮಕ್ಕೆ ಬೆಂಬಲ

ಈ ಹಿಂದೆಯೂ ದೇಶದಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ತಾಜ್‌ಹೋಟೆಲ್‌ನಲ್ಲಿ 200 ಮಂದಿಯನ್ನು ಕೊಂದು ಹಾಕಿದರು, ಅಂದಿನ ಯುಪಿಎ ಸರಕಾರ ಉಗ್ರರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಆದರೆ ನರೇಂದ್ರ ಮೋದಿ ದೇಶ ರಕ್ಷಣೆಗೆ ತೆಗೆದುಕೊಂಡ ಕ್ರಮಕ್ಕೆ ಪ್ರಪಂಚದ ಎಲ್ಲ ರಾಷ್ಟ್ರಗಳು ಬೆಂಬಲ ನೀಡಿದವು. ವಿದೇಶ ಸುತ್ತುವ ಪ್ರಧಾನಮಂತ್ರಿ ಎಂದು ಟೀಕೆ ಮಾಡುತ್ತಿದ್ದವರು ಗಮನಿಸಬೇಕು, ಅಂದು ರಾಷ್ಟ್ರಗಳನ್ನು ಸುತ್ತಿದ್ದಕ್ಕೆ ಇಂದು ಪ್ರಪಂಚದ ಬೆಂಬಲ ಸಿಕ್ಕಿದೆ ಎನ್ನುವುದನ್ನು ಮರೆಯಬಾರದು ಎಂದರು.

ಈ ದೇಶದಲ್ಲಿ ಪ್ರಧಾನಮಂತ್ರಿ ಆಗುವವರು ಯಾರಿದ್ದಾರೆ, ರಾಹುಲ್‌ ಗಾಂಧಿ ಆಗಲಿ, ಮಾಯಾವತಿ, ಚಂದ್ರಬಾಬು ನಾಯ್ಡು ಸೇರಿ ಇನ್ಯಾರಾದರೂ ಪ್ರಧಾನಮಂತ್ರಿ ಆಗಲು ಸಾಧ್ಯವೇ ಎಂದು ಮಾಳವಿಕಾ ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌