ಆ್ಯಪ್ನಗರ

ಮೋದಿ ಸುಂಟರಗಾಳಿಯಷ್ಟೇ ಅಲ್ಲ, ಸುನಾಮಿ: ಶೆಟ್ಟರ್

ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೋದಿಗೆ ಅಧಿಕಾರ ಬೇಕಿಲ್ಲ. ಆದರೆ, ಜನರಿಗೆ ಮೋದಿ ಬೇಕಾಗಿದ್ದಾರೆ. ದೇಶದ ಹಿತರಕ್ಷಣೆಗೆ, ಸುರಕ್ಷತೆಗೆ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ.

Vijaya Karnataka Web 5 Apr 2019, 2:06 pm
ಹುಬ್ಬಳ್ಳಿ: ದೇಶದಲ್ಲಿ ಇರುವುದು ಪ್ರಧಾನಿ ನರೇಂದ್ರ ಮೋದಿ ಕೇವಲ ಗಾಳಿ, ಬಿರುಗಾಳಿ, ಸುಂಟರಗಾಳಿಯಷ್ಟೇ ಅಲ್ಲ, ಅವರೊಂದು ಸುನಾಮಿಯಾಗಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬೇಕಾದ ಗುರುತರ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದರು.
Vijaya Karnataka Web Narendra Modi 1200


ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೋದಿಗೆ ಅಧಿಕಾರ ಬೇಕಿಲ್ಲ. ಆದರೆ, ಜನರಿಗೆ ಮೋದಿ ಬೇಕಾಗಿದ್ದಾರೆ. ದೇಶದ ಹಿತರಕ್ಷಣೆಗೆ, ಸುರಕ್ಷತೆಗೆ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ. ಕಳೆದ ಐದು ವರ್ಷದಲ್ಲಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಿಕೊಟ್ಟು ಚುನಾವಣಾ ಪ್ರಚಾರ ಮಾಡಬೇಕು ಎಂದು ಸಲಹೆ ಮಾಡಿದರು.

ಕಳೆದ ಮೂರು ಬಾರಿ ಸಂಸದರಾದ ಪ್ರಹ್ಲಾದ್‌ ಜೋಶಿಯವರು ಮಾಡಿರುವ ಅಭಿವೃದ್ಧಿ ಕೆಲಸಗಳು ಎಲ್ಲರ ಕಣ್ಣಿಗೆ ಕಾಣುತ್ತಿವೆ. ಅವರನ್ನು ಯಾವ ರೀತಿ ವಿರೋಧಿಸಬೇಕು ಎಂದು ಪ್ರತಿಪಕ್ಷಗಳು ತಲೆ ಕೆಡಿಸಿಕೊಳ್ಳುತ್ತಿವೆ. ಜೋಶಿಯವರ ಗೆಲುವು ನಿಶ್ಚಿತ, ಆದರೆ, ಮತಗಳ ಅಂತರವನ್ನು 2ಲಕ್ಷ ದಾಟಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಕೊಟ್ಟರೂ ಬೇಡ ಎನ್ನುವ ಸ್ಥಿತಿಯಿದೆ. ಆದಾಗ್ಯೂ ಧಾರವಾಡದ ಅಭ್ಯರ್ಥಿ ಇಷ್ಟೊಂದು ಹೈರಾಣ ಆಗಿ ಯಾಕೆ ಟಿಕೆಟ್‌ ತಂದಿದ್ದಾರೆಯೋ ಗೊತ್ತಾಗುತ್ತಿಲ್ಲ ಎಂದ ಅವರು, ಕಾಂಗ್ರೆಸ್‌ನ ಒಳ ಹೊಡೆತ, ಹೊರ ಹೊಡೆತ ಬೇರೆ ಬೇರೆಯೇ ಇದ್ದು, ಅದು ಆ ಪಕ್ಷದ ಅಭ್ಯರ್ಥಿ ಮೇಲೆ ಪರಿಣಾಮ ಬೀರಲಿದೆ ಎಂದರು.

ಉದ್ಯಮಿ ವಿಜಯ ಸಂಕೇಶ್ವರ ಮಾತನಾಡಿ, ಸ್ವಾತಂತ್ರ್ಯ ನಂತರ 58 ವರ್ಷಗಳ ಕಾಲ ಭ್ರಷ್ಟರು, ಅಯೋಗ್ಯರ ಕೈಯಲ್ಲಿ ದೇಶವನ್ನು ಕೊಟ್ಟಿಲ್ಲ. ದೇಶದ್ರೋಹಿಗಳ ಕೈಗೆ ನೀಡಿದ್ದೇವೆ. ಅದು ನಮ್ಮ ಹಿರಿಯರ ತಪ್ಪು ಅಥವಾ ನಮ್ಮ ಸೋಗಲಾಡಿತನವೂ ಇರಬಹುದು. ಮುಂದೆಯೂ ಅವರಿಗೆ ಬೆಂಬಲ ನೀಡಿದರೆ, ಭವಿಷ್ಯದ ನಮ್ಮ ಮಕ್ಕಳಿಗೆ ನಾವೇ ಮಾಡುವ ಅನ್ಯಾಯವಾಗುತ್ತದೆ. ಅವರ ಭವಿಷ್ಯಕ್ಕೆ ತಿಲಾಂಜಲಿ ಇಡಬೇಕಾಗುತ್ತದೆ ಎಂದು ಹೇಳಿದರು.

ನೆಹರು ಕಾಲದಿಂದಲೂ ದೇಶದ ಕಡು ವೈರಿಗಳಾದ ಚೀನಾ, ಪಾಕಿಸ್ತಾನ ಚೀನಾಕ್ಕೆ ಸಹಾಯ ಮಾಡುತ್ತಲೇ ಬರಲಾಗಿದೆ ಎಂದ ಅವರು, ಚೌಕಿದಾರ ಚೋರ್‌ ಎಂದು ಕಾಂಗ್ರೆಸ್‌ ನವರು ಹೇಳುತ್ತಾರೆ. ನಿಜವಾಗಲೂ ಪ್ರಧಾನಿ ಮೋದಿ ಜಗತ್ತಿನ ಜನರ ಮನಸ್ಸು ಕದಿಯುವ ಮೂಲಕ ದಿಲ್‌ ಕಾ ಚೋರ್‌ ಆಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಸಂಸದ ಪ್ರಲ್ಹಾದ ಜೋಶಿ ಮಾತನಾಡಿ, ಕಾಂಗ್ರೆಸ್‌ ಕನಿಷ್ಠ ಆದಾಯ ಎನ್ನುವ ಹೊಸ ವರಸೆ ಆರಂಭಿಸಿದೆ. ಹಿಂದೆ ಅವರದೇ ಸರಕಾರ ಇದ್ದಾಗ ಇದನ್ನು ಯಾಕೆ ಜಾರಿ ಮಾಡಲಿಲ್ಲ ಎಂದು ಪ್ರಶ್ನಿಸಿದರಲ್ಲದೇ, ಅಲ್ಪ ಸಂಖ್ಯಾತರ ಮತಗಳಿಕೆಗಾಗಿ ತುಚ್ಚ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್‌ ವೋಟಿಗಾಗಿ ಎಂತಹ ದ್ರೋಹ ಎಸಗಲು ಸಿದ್ದ ಎನ್ನುವುದಕ್ಕೆ ಪ್ರಣಾಳಿಕೆಯಲ್ಲಿ 370 ಕಲಂ ಕಾಯಂಗೊಳಿಸುವ ವಿಚಾರವೇ ಇದಕ್ಕೆ ಸಾಕ್ಷಿ ಎಂದು ತಿಳಿಸಿದರು. ನಾಲ್ಕನೇ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತವಾಗಿದ್ದು, ಆದರೆ, ಮತಗಳ ಅಂತರ ಹೆಚ್ಚಳವಾಗಬೇಕು. ಅದಕ್ಕಾಗಿ ಪ್ರಯತ್ನಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌