ಆ್ಯಪ್ನಗರ

ಪಾಕ್‌ ಸಮರ್ಥಕ ಕಾಂಗ್ರೆಸನ್ನು ಅಧಿಕಾರದಿಂದ ದೂರವಿಡಿ: ನಿರ್ಮಲಾ

ಪ್ರಧಾನಿ ಮೋದಿ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ತೋರಿದ್ದರೆ ಯುಪಿಎ ಆಡಳಿತದುದ್ದಕ್ಕೂ ಸೇನೆ ಬಲಪಡಿಸುವ ಬದಲು ಗೌರವ ಕುಂದಿಸುವ ಕೆಲಸವಾಗಿದೆ.

Vijaya Karnataka Web 26 Mar 2019, 6:25 pm
ಉಡುಪಿ: ಭ್ರಷ್ಟಾಚಾರ, ಭಯೋತ್ಪಾದನೆ ನಿವಾರಣೆಗೆ ದಿಟ್ಟ ಕ್ರಮ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಅವಕಾಶ ಕೊಡಿ, ಪಾಕ್‌ ಸಮರ್ಥಕ ಕಾಂಗ್ರೆಸನ್ನು ಅಧಿಕಾರದಿಂದ ದೂರವಿಡಿ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.
Vijaya Karnataka Web n s


ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಂಸದೆ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಕೆಗೆ ಮೊದಲು ಕುಂಜಿಬೆಟ್ಟಿನಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿ ಬಳಿ ಮಂಗಳವಾರ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದರು.

ಪ್ರಧಾನಿ ಮೋದಿ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ತೋರಿದ್ದರೆ ಯುಪಿಎ ಆಡಳಿತದುದ್ದಕ್ಕೂ ಸೇನೆ ಬಲಪಡಿಸುವ ಬದಲು ಗೌರವ ಕುಂದಿಸುವ ಕೆಲಸವಾಗಿದೆ. ಕರ್ನಾಟಕದ ಜ್ಞಾನಿಯೊಬ್ಬರು ವಾಯುಪಡೆ ಮುಖ್ಯಸ್ಥರನ್ನೇ ಸುಳ್ಳುಗಾರರೆಂದಿದ್ದು ವಿಷಾದನೀಯ. ಸ್ವಾತಂತ್ರ್ಯಾ ನಂತರ ಬಡವರನ್ನು ಬಡವರಾಗಿಯೇ ಉಳಿಸಿದ ಕಾಂಗ್ರೆಸ್‌ ಬಡತನ ನಿವಾರಣೆ ನಿಟ್ಟಿನಲ್ಲಿ ಈಗ ಕೇವಲ ತುಟಿಯಂಚಿನ ಮಾತನಾಡುತ್ತಿದೆ. ಆಗಿನ ಪ್ರಧಾನಿ ಡಾ.ಸಿಂಗ್‌ ಆದೇಶವನ್ನೇ ಹರಿದು ಹಾಕಿ ಅಗೌರವ ತೋರಿದ್ದ ರಾಹುಲ್‌ ಗಾಂಧಿ ಕಂಡ ಪ್ರಧಾನಿ ಸ್ಥಾನದ ಕನಸು ನನಸಾಗದು ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಪ್ರಧಾನಿ ಮೋದಿ ಐದು ವರ್ಷಗಳಲ್ಲಿ ನೀಡಿದ ಭ್ರಷ್ಟಾಚಾರ ರಹಿತ ಆಡಳಿತ, ಪಾಕ್‌ ಭಯೋತ್ಪಾದನೆ ವಿರುದ್ಧ ದಿಟ್ಟ ಕ್ರಮದಿಂದಾಗಿ ಮತ್ತೆ ಬಹುಮತದಿಂದ ಅಧಿಕಾರಕ್ಕೆ ಬರುವಂತಹ ವಾತಾವರಣ ದೇಶದಲ್ಲಿದ್ದು, ಕೇವಲ ಅಧಿಕಾರಕ್ಕಾಗಿ ರೂಪುಗೊಂಡ ಮಹಾಘಟಬಂಧನ್‌ ಚುನಾವಣೆ ಬಳಿಕ ನುಚ್ಚು ನೂರಾಗಲಿದೆ ಎಂದರು.

ಕಾರ್ಕಳ ಶಾಸಕ ವಿ.ಸುನಿಲ್‌ ಕುಮಾರ್‌ ಮಾತನಾಡಿ, ಸಮ್ಮಿಶ್ರ ಸರಕಾರ ಕರಾವಳಿಗೆ ಅನ್ಯಾಯ ಮಾಡಿದ್ದು ಮೀನುಗಾರಿಕೆ, ಮರಳು, ಡೀಮ್ಡ್‌ ಫಾರೆಸ್ಟ್‌ ಸಮಸ್ಯೆಗೆ ಸ್ಪಂದಿಸಿಲ್ಲ. ಮುಖ್ಯಮಂತ್ರಿಗೆ ಕರಾವಳಿ ನೆಂಟಸ್ತಿಕೆ, ದೇವಸ್ಥಾನ ಬೇಕು. ಆದರೆ ಕರಾವಳಿ ಜನ ಬೇಡವೆಂದರೆ ಹೇಗೆ? ಲೋಕಸಭಾ ಚುನಾವಣೆಯಲ್ಲಿ ಕರಾವಳಿಗರು ತಮ್ಮ ಸ್ವಾಭಿಮಾನವನ್ನು ಮತಗಳ ಮೂಲಕ ತೋರಲಿದ್ದಾರೆ ಎಂದು ಹೇಳಿದರು.

ಉಡುಪಿ ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ, 2014ರಲ್ಲಿ 1.85 ಲಕ್ಷ ಮತಗಳ ಅಂತರದಿಂದ ಗೆದ್ದ ಶೋಭಾ ಕರಂದ್ಲಾಜೆ ಅವರನ್ನು ಈ ಬಾರಿ 2.5 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವ ಭರವಸೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಪಾಂಚಜನ್ಯದ ರಣಕಹಳೆ ಮೊಳಗಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಶೋಭಾ ಕರಂದ್ಲಾಜೆ ಗೆಲ್ಲಬೇಕು. ಬಿಜೆಪಿಗೆ 300, ಎನ್‌ಡಿಎಗೆ 350 ಸ್ಥಾನ ಖಚಿತ ಎಂದು ಹೇಳಿದರು.

ಕರ್ನಾಟಕ ಬಿಜೆಪಿ ಉಸ್ತುವಾರಿ ರಾಜಸ್ಥಾನದ ಕಿರಣ್‌ ಮಹೇಶ್ವರಿ ಮಾತನಾಡಿದರು. ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮೂಡಿಗೆರೆ ಶಾಸಕ ಎಂ. ಪಿ.ಕುಮಾರಸ್ವಾಮಿ, ಬಿಜೆಪಿ ನಾಯಕ ಆಯನೂರು ಮಂಜುನಾಥ್‌, ವಿಧಾನ ಪರಿಷತ್‌ ಮಾಜಿ ಸದಸ್ಯೆ ಭಾರತಿ ಶೆಟ್ಟಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಬಿಜೆಪಿ ಪ್ರಭಾರಿ ಕೆ.ಉದಯ ಕುಮಾರ್‌ ಶೆಟ್ಟಿ, ಜಿಪಂ ಅಧ್ಯಕ್ಷ ದಿನಕರ ಬಾಬು, ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ಜೀವರಾಜ್‌, ತರೀಕೆರೆ ಶಾಸಕ ಸುರೇಶ್‌, ಕುಯಿಲಾಡಿ ಸುರೇಶ್‌ ನಾಯಕ್‌, ಕುತ್ಯಾರು ನವೀನ್‌ ಶೆಟ್ಟಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌