ಆ್ಯಪ್ನಗರ

‘ದೋಸ್ತಿ’ ಅಬ್ಬರದಲ್ಲಿ ನೇಪಥ್ಯಕ್ಕೆ ಸರಿದ ಪರಮೇಶ್ವರ!

ಡಾ.ಪರಮೇಶ್ವರ್‌ ದಾಖಲೆ ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಮತ್ತು ಮೈತ್ರಿ ಸರಕಾರದಲ್ಲಿ ಕಾಂಗ್ರೆಸ್‌ ಕಡೆಯಿಂದ ನಾಯಕ.

Vijaya Karnataka 14 Apr 2019, 10:29 am
ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ 'ದೋಸ್ತಿ'ಯ ಚುನಾವಣಾ ಅಬ್ಬರದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ನೇಪಥ್ಯಕ್ಕೆ ಸರಿದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
Vijaya Karnataka Web g p


ಡಾ.ಪರಮೇಶ್ವರ್‌ ದಾಖಲೆ ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಮತ್ತು ಮೈತ್ರಿ ಸರಕಾರದಲ್ಲಿ ಕಾಂಗ್ರೆಸ್‌ ಕಡೆಯಿಂದ ನಾಯಕ. ಆದರೆ, ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರದ ಅಖಾಡದಲ್ಲಿ ಪರಮೇಶ್ವರ್‌ ಸುಳಿವಿಲ್ಲದೆ, ತವರು ತುಮಕೂರಿಗೆ ಸೀಮಿತವಾಗಿ ಉಳಿದಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

ಸಮ್ಮಿಶ್ರ ಸರಕಾರದಲ್ಲಿ ಸಿಎಂ ನಂತರದ ಸ್ಥಾನದಲ್ಲಿರುವ ಡಿಸಿಎಂ ಡಾ.ಪರಮೇಶ್ವರ್‌ ಅವರು ನಿರೀಕ್ಷೆಯಂತೆ ಮೈತ್ರಿಕೂಟದ ಪ್ರಚಾರದ ಮುಂದಾಳು ಆಗಬೇಕಿತ್ತು. ಪಕ್ಷಗಳ ಕಡೆಯಿಂದ ದೇವೇಗೌಡ ಮತ್ತು ಸಿದ್ದರಾಮಯ್ಯ ಅವರಂತೆ ಸರಕಾರದ ಕಡೆಯಿಂದ ಸಿಎಂ ಮತ್ತು ಡಿಸಿಎಂ ಮುಂಚೂಣಿ ಸ್ಥಾನದಲ್ಲಿ ನಿಂತು ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಬೇಕಿತ್ತು. ಆದರೆ, ಶನಿವಾರದ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಕೋಲಾರ, ಚಿತ್ರದುರ್ಗ ಹಾಗೂ ಕೆ.ಆರ್‌.ನಗರ ಪ್ರಚಾರ ಸಭೆಗಳಿಂದಲೇ ಪರಮೇಶ್ವರ್‌ ಹೊರಗುಳಿದಿರುವುದು ರಾಜಕೀಯ ವಲಯದಲ್ಲಿ ಹಲವರ ಹುಬ್ಬೇರುವಂತೆ ಮಾಡಿದೆ.

ಬೆಂಗಳೂರು ಹೊರವಲಯದ ಬಿಐಎಸಿ ಆವರಣದಲ್ಲಿ ನಡೆದ 'ದೋಸ್ತಿ'ಗಳ ಪ್ರಥಮ ಜಂಟಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಬಳಿಕ ತಾವಾಯಿತು, ತವರು ತುಮಕೂರಾಯಿತು ಎಂಬಂತೆ ಪರಮೇಶ್ವರ್‌ ನೇಪಥ್ಯದಲ್ಲಿ ಉಳಿದಿದ್ದಾರೆ. ಶುಕ್ರವಾರ ಚಿಕ್ಕಬಳ್ಳಾಪುರ ಪ್ರಚಾರಕ್ಕೆ ಹೋಗಿ ಬಂದರು, ಶನಿವಾರ ಹಾಸನದಲ್ಲಿ ಪತ್ರಿಕಾಗೋಷ್ಠಿಗೆ ಸೀಮಿತವಾಗಿದ್ದು ಬಿಟ್ಟರೆ ಬೇರಾವ ಕಡೆಯ ಪ್ರಚಾರ ಸಭೆಗಳಲ್ಲೂ ಪರಮೇಶ್ವರ್‌ ಕಾಣಸಿಗುತ್ತಿಲ್ಲ. ವಿಶೇಷವಾಗಿ ರಾಹುಲ್‌ಗಾಂಧಿ ಅವರ ಪ್ರಚಾರ ಸಭೆಗಳಿಂದಲೇ ಪರಮೇಶ್ವರ್‌ ದೂರ ಉಳಿದಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ತವರು ತುಮಕೂರಿನಲ್ಲಿ ಮೈತ್ರಿಕೂಟದ ಅಭ್ಯರ್ಥಿ ಎಚ್‌.ಡಿ.ದೇವೇಗೌಡರ ಪರವಾಗಿ ಕ್ಷೇತ್ರವಾರು ಗೆಲುವಿನ ಕಾರ್ಯತಂತ್ರದ ಸಭೆ ಹಾಗೂ ಪ್ರಚಾರ ಸಭೆಗಳನ್ನು ಶಿಸ್ತುಬದ್ಧವಾಗಿ ನಡೆಸುವುದಕ್ಕೆ ಮಾತ್ರ ಪರಮೇಶ್ವರ್‌ ಸೀಮಿತವಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಖಾತೆಗಳಿಗೆ ಸೀಮಿತವಾಗಿ ಉಳಿದಿದ್ದ ಡಿಸಿಎಂ, ಸರಕಾರ ಮತ್ತು ಪಕ್ಷದ ಚಟುವಟಿಕೆಗಳಲ್ಲಿ ಗಮನ ಸೆಳೆಯುವಂತೆ ಕ್ರಿಯಾಶೀಲರಾಗಿಲ್ಲ. ಇದೀಗ, ಪ್ರಚಾರ ಕಾರ್ಯದಿಂದಲೂ ಅಂತರ ಕಾಯ್ದುಕೊಂಡಿರುವುದು ಏಕೆ? ಕಾಂಗ್ರೆಸ್‌ ಪಕ್ಷದ ಕಡೆಯಿಂದಲೂ ಪರಮೇಶ್ವರ್‌ ಅವರಿಗೆ ಆಹ್ವಾನ ನೀಡದೆ ಅಲಕ್ಷ್ಯ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗಳೂ ಎದುರಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌