ಆ್ಯಪ್ನಗರ

ಬಾಲಿಶ ಮನಸ್ಥಿತಿಯ ರಾಹುಲ್ ‌ಪ್ರಧಾನಿ ಆಗಲ್ಲ: ಮಾಲೀಕಯ್ಯ ಗುತ್ತೇದಾರ್‌

ಕಲಬುರಗಿಯ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಡಾ. ಎ.ಬಿ. ಮಲಕರಡ್ಡಿ ಅವರನ್ನು ಸನ್ಮಾನಿಸಿ ಪಕ್ಷಕ್ಕೆ ಸ್ವಾಗತಿಸಲಾಯಿತು. ಎನ್‌. ರವಿಕುಮಾರ, ಮಾಲೀಕಯ್ಯ ಗುತ್ತೇದಾರ್‌, ಬಿ.ಜಿ. ಪಾಟೀಲ್‌, ದೊಡ್ಡಪ್ಪಗೌಡ ಪಾಟೀಲ್‌ ಇತರರು ಇದ್ದರು.

Vijaya Karnataka Web 26 Mar 2019, 11:40 am
ಕಲಬುರಗಿ: ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಓರ್ವ ಇಮ್ಮೆಚೂರ್ಡ್‌ ಮನುಷ್ಯ. ಹೀಗಾಗಿ, ಪ್ರಧಾನಿ ಆಗುವ ಅರ್ಹತೆ ರಾಹುಲ್‌ ಗಾಂಧಿಗೆ ಇಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ್‌ ಟೀಕಿಸಿದರು.
Vijaya Karnataka Web Rahul 1200


ಬಿಜೆಪಿ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೆಲವರು ಕಾಂಗ್ರೆಸ್‌ ಪಕ್ಷವನ್ನು ಸ್ವಾರ್ಥಕ್ಕಾಗಿ ತಮ್ಮ ಮನೆಯ ಆಸ್ತಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ರಾಹುಲ್‌ ಆಗಲಿ, ಪಕ್ಷದ ಯಾವೊಬ್ಬ ಹೈಕಮಾಂಡ್‌ ಆಗಲಿ ಏನೂ ಮಾತನಾಡುವುದಿಲ್ಲ. ಇಂತಹ ಪಕ್ಷದಲ್ಲಿ ಇರುವ ಯಾರೊಬ್ಬರಿಗೂ ರಾಜಕೀಯ ಭವಿಷ್ಯ ಇಲ್ಲ. ಹಾಗಾಗಿ, ಕಾಂಗ್ರೆಸ್‌ ಪಕ್ಷವನ್ನು ತ್ಯಜಿಸಿ ಬರುವ ಎಲ್ಲರಿಗೂ ಬಿಜೆಪಿ ಮುಕ್ತ ಆಹ್ವಾನ ನೀಡುತ್ತದೆ ಎಂದರು.

ಗುಲ್ಬರ್ಗ ವಿಮಾನ ನಿಲ್ದಾಣವನ್ನು ತಾವೇ ನಿರ್ಮಿಸಿದ್ದು ಎಂದು ಕ್ರೆಡಿಟ್‌ ತೆಗೆದುಕೊಳ್ಳಲು ಕೆಲವರು ಪ್ರೈವೇಟ್‌ ವಿಮಾನ ತಂದು ನಿಲ್ಲಿಸುವ ಕೆಲಸ ಮಾಡಿದ್ದಾರೆ. ಆದರೆ, ಈ ಬಾರಿ ಡಾ.ಉಮೇಶ್‌ ಜಾಧವ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮುಂದಿನ ಆರು ತಿಂಗಳಲ್ಲಿ ಗುಲ್ಬರ್ಗ ಏರ್‌ಪೋರ್ಟ್‌ ಕಾರ್ಯಾರಂಭಗೊಳಿಸುತ್ತದೆ. ಮೇಲಾಗಿ, ಇದೇ ಏರ್‌ಪೋರ್ಟ್‌ನಲ್ಲಿ ಪ್ರಧಾನಿ ಮೋದಿ ಬಂದಿಳಿಯುತ್ತಾರೆ. ಕೆಲವರು ಇನ್ನಾದರೂ ಸುಮ್ಮಸುಮ್ಮನೆ ಕ್ರೆಡಿಟ್‌ ತೆಗೆದುಕೊಳ್ಳುವುದನ್ನು ಬಿಡಬೇಕು ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಮಾಲೀಕಯ್ಯ ಟಾಂಗ್‌ ನೀಡಿದರು.

ಪ್ರಿಯಾಂಕ್‌ಗೆ ಬುದ್ಧಿ ಇಲ್ಲ

ಬಾಯಿಗೆ ಬಂದಂತೆ ಮಾತನಾಡುವ ಪ್ರಿಯಾಂಕ್‌ ಖರ್ಗೆ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಆತನಿಗೆ ಬುದ್ಧಿ ಇಲ್ಲ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್‌ ನುಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಪೌರ ಕಾರ್ಮಿಕರ ಕಾಲು ತೊಳೆದ ಪ್ರಸಂಗವನ್ನು ಪ್ರಿಯಾಂಕ್‌ ಲೇವಡಿ ಮಾಡಿದ್ದಲ್ಲದೆ, ತೊಳೆಯೋದಾದರೆ ತಮ್ಮ ಕಾಲು ತೊಳೆಯಲಿ ಎಂದು ಸವಾಲು ಹಾಕುವ ಧಾಟಿಯಲ್ಲಿ ಮಾತನಾಡಿದ್ದರು. ಹೀಗೆ ಬುದ್ಧಿ ಇಲ್ಲದವರ ಬಗ್ಗೆ ಮಾತನಾಡುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಮಾಲೀಕಯ್ಯ ಪುನರುಚ್ಚರಿಸಿದರು.

ತಾಕತ್ತಿದ್ದರೆ ಪ್ರಧಾನಿ ಮೋದಿ ತಮ್ಮ ತಂದೆ ಖರ್ಗೆ ಅವರ ವಿರುದ್ಧ ಸ್ಪರ್ಧಿಸಲಿ ಎಂದು ಪ್ರಿಯಾಂಕ್‌ ಸವಾಲು ಹಾಕುತ್ತಾರೆ. ಇಷ್ಟಕ್ಕೂ, ಮೀಸಲು ಕ್ಷೇತ್ರದಿಂದ ಮೋದಿ ಅವರು ಹೇಗೆ ಸ್ಪರ್ಧಿಸುತ್ತಾರೆ?. ಸ್ವಲ್ಪವಾದರೂ ಮೋದಿ ಅವರಿಗೆ ಬುದ್ಧಿ ಬೇಡವಾ? ಎಂದು ಪ್ರಶ್ನಿಸಿದರು.

ಮೋದಿ ದಕ್ಷ, ಸ್ವಚ್ಛ ಆಡಳಿತಗಾರ: ಮಾಲಕರೆಡ್ಡಿ ಶ್ಲಾಘನೆ

ಕಳೆದ ನಾಲ್ಕುವರೆ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಮತ್ತು ದಕ್ಷ ಆಡಳಿತ ವೈಖರಿ ಕಂಡು ಬೆರಗಾಗಿ ತಾವು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಆಗಿದ್ದಾಗಿ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ಧುರೀಣ ಡಾ.ಮಾಲಕರೆಡ್ಡಿ ತಿಳಿಸಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ತಮಗಾಗಿ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಸ್ವಾಗತ ಸ್ವೀಕರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಭ್ರಷ್ಟಾಚಾರ ಮುಕ್ತ ಹಾಗೂ ಭವ್ಯ ಭಾರತದ ನಿರ್ಮಾಣದ ಪರಿಕಲ್ಪನೆ ಹೊಂದಿರುವ ಮೋದಿ ಅವರ ಬಗ್ಗೆ ಅಭಿಮಾನದಿಂದ ಪಕ್ಷಕ್ಕೆ ಸೇರ್ಪಡೆ ಆಗಿರುವುದಾಗಿ ಹೇಳಿದರು.

ಯಾವುದೇ ಆಸೆಯಿಂದಾಗಲಿ, ಆಮಿಷಕ್ಕೆ ಒಳಗಾಗಿಯಾಗಲಿ ಬಿಜೆಪಿಗೆ ಸೇರ್ಪಡೆ ಆಗಿಲ್ಲ. ತಮ್ಮದೇ ಆದ ಸಕಾರಾತ್ಮಕ ಕಾರಣಗಳಿಗಾಗಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾಗಿ ಅವರು ಸ್ಪಷ್ಟಪಡಿಸಿದರು.

ಒಂದು ವರ್ಷದ ಹಿಂದೆಯೇ ಬಿಜೆಪಿಗೆ ಸೇರ್ಪಡೆ ಆಗಲು ಮನಸ್ಸು ಮಾಡಿದ್ದಾಗಿ ಹೇಳಿದ ಅವರು, ಮೋದಿ ಅವರ ಜನಪರ ಕಾರ್ಯಗಳಿಗೆ ಮಾರು ಹೋಗಿ ಕೆಪಿಸಿಸಿ ಸಭೆಯಲ್ಲಿಯೇ ತಾವು ಮೋದಿ ಗುಣಗಾನ ಮಾಡಿದ್ದಾಗಿ ಸ್ಮರಿಸಿದರು.

ದೇಶಾದ್ಯಂತ ಬಿಜೆಪಿ ಬಹುಮತ ಪಡೆದ ನಂತರ ಪ್ರಧಾನಿ ಹುದ್ದೆಯ ಅಧಿಕಾರ ಸ್ವೀಕಾರಕ್ಕೂ ಮುನ್ನ ಮೋದಿ ಆತುರಕ್ಕೆ ಬಿದ್ದು ಅಧಿಕಾರ ಸ್ವೀಕರಿಸಲಿಲ್ಲ. ಅದರಬದಲು, ನೆರೆಯ ಎಲ್ಲ ರಾಷ್ಟ್ರಗಳ ಮುಖ್ಯಸ್ಥರಿಗೆ ಕರೆ ಮಾಡಿ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದರು. ಅದೇದಿನವೇ ಮೋದಿ ಅವರಲ್ಲೊಬ್ಬ ಅತ್ಯುತ್ತಮ ಪ್ರಬಲ ರಾಜತಾಂತ್ರಿಕ ಅಡಗಿದ್ದಾನೆ ಎಂಬ ಅಂಶ ತಮಗೆ ಸ್ಪಷ್ಟವಾಗಿತ್ತು. ಈಗ ಇಡೀ ಜಗತ್ತಿಗೆ ಪ್ರಧಾನಿ ಮೋದಿ ಎಂತಹ ಮಹಾನ್‌ ರಾಜತಾಂತ್ರಿಕ ನಿಪುಣ ಎಂಬುದು ಅರ್ಥವಾಗಿದೆ ಎಂದು ಡಾ.ರೆಡ್ಡಿ ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ