ಆ್ಯಪ್ನಗರ

ಇದು 'ಲೋಟಸ್ ಮತ್ತು ಲೂಟ್ ಅಸ್‍' ನಡುವಣ ಚುನಾವಣೆ: ಸಿ.ಟಿ ರವಿ

ಇದು ಜಾತಿ ಚುನಾವಣೆಯಲ್ಲ. ದೇಶ ಗೆಲ್ಲಿಸುವ ಚುನಾವಣೆ. ಲೋಟಸ್‍ವೆಂದರೆ ಬಿಜೆಪಿ. ಲೂಟಸ್‍ವೆಂದರೆ ಈ ದೇಶವನ್ನು ಲೂಟಿ ಹೊಡೆಯಲು ಕಾಯುತ್ತಿರುವ ಜೆಡಿಎಸ್, ಕಾಂಗ್ರೆಸ್‍ನಂತಹ ಮಹಾಗಠಬಂಧನ್. ತಾನು ತಿನ್ನದೇ ಇನ್ನೊಬ್ಬರಿಗೂ ತಿನ್ನಲು ಬಿಡದ ಮೋದಿ ಬೇಕೇ? ಈ ದೇಶವನ್ನು ಲೂಟಿ ಮಾಡಿ, ಇತರರಿಗೂ ಲೂಟಿ ಮಾಡಲು ಬಿಡುವ ಲೂಟಸ್ ಪಕ್ಷ ಬೇಕೇ ನೀವೇ ನಿರ್ಧರಿಸಿ ಎಂದು ಸಲಹೆ ನೀಡಿದರು.

Vijaya Karnataka Web 15 Apr 2019, 9:57 pm
ಉಡುಪಿ: 2019 ರ ಲೋಕಸಭಾ ಚುನಾವಣೆ ಲೋಟಸ್ ವರ್ಸಸ್ ಲೂಟಸ್ ಪಕ್ಷದ ಅಭ್ಯರ್ಥಿಗಳ ನಡುವಿನ ಸಮರವೆಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.
Vijaya Karnataka Web CT Ravi in Udupi


ಅವರು ಬಿಜೆಪಿ ವತಿಯಿಂದ ಮಲ್ಪೆ ಶ್ರೀ ವಡಭಾಂಡೇಶ್ವರ ಸರ್ಕಲ್ ಪಕ್ಕದ ಮೈದಾನದಲ್ಲಿ ಸೋಮವಾರ ನಡೆದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಪ್ರಚಾರದ ಅಂಗವಾಗಿ ಉಡುಪಿ ನಗರ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು.

ಇದು ಜಾತಿ ಚುನಾವಣೆಯಲ್ಲ. ದೇಶ ಗೆಲ್ಲಿಸುವ ಚುನಾವಣೆ. ಲೋಟಸ್‍ವೆಂದರೆ ಬಿಜೆಪಿ. ಲೂಟಸ್‍ವೆಂದರೆ ಈ ದೇಶವನ್ನು ಲೂಟಿ ಹೊಡೆಯಲು ಕಾಯುತ್ತಿರುವ ಜೆಡಿಎಸ್, ಕಾಂಗ್ರೆಸ್‍ನಂತಹ ಮಹಾಗಠಬಂಧನ್. ತಾನು ತಿನ್ನದೇ ಇನ್ನೊಬ್ಬರಿಗೂ ತಿನ್ನಲು ಬಿಡದ ಮೋದಿ ಬೇಕೇ? ಈ ದೇಶವನ್ನು ಲೂಟಿ ಮಾಡಿ, ಇತರರಿಗೂ ಲೂಟಿ ಮಾಡಲು ಬಿಡುವ ಲೂಟಸ್ ಪಕ್ಷ ಬೇಕೇ ನೀವೇ ನಿರ್ಧರಿಸಿ ಎಂದು ಸಲಹೆ ನೀಡಿದರು.

ಮತದಾರ ಒಂದು ಕ್ಷಣ ಮೈ ಮರೆತರೆ ಈ ರಾಷ್ಟ್ರದ ವಿನಾಶಕ್ಕೆ ಕಾರಣವಾಗಬಹುದು. ನಮ್ಮದ್ದು ಚೌಕೀದಾರ ಮತ್ತು ಚೋರರ ನಡುವಿನ ಚುನಾವಣೆ. ನಮ್ಮಲ್ಲಿ (ಬಿಜೆಪಿ) ಕೊಟ್ರೋಚಿ ಅಂಕಲ್‌ ಇಲ್ಲ. ಮಿಶಲ್ ಮಾಮನೂ ಇಲ್ಲ. ವಾದ್ರಾನಂತ ಭಾವ ಮೈದನೂ ಇಲ್ಲ. ಜೆಡಿಎಸ್‍ನಲ್ಲಿರುವ ದೊಡ್ಡಗೌಡ್ರು, ಸಣ್ಣಗೌಡ್ರು, ಮರಿಗೌಡ್ರರ ರಾಯಭಾರವೂ ಇಲ್ಲ. ನಮ್ಮ ಮೋದಿಗೆ ಈ ದೇಶವೇ ಆಸ್ತಿ. 130 ಕೋಟಿ ಜನರೇ ಕುಟುಂಬ ಎಂದು ಅಭಿಪ್ರಾಯ ಪಟ್ಟರು.

ನಮಗೆ ಕುಂಕುಮ ಇಟ್ಟವರನ್ನು ಕಂಡರೆ ಭಯ ಅನ್ನುತ್ತಿದ್ದರು. ನಾನು ಅವರ ಮನೆಯವರು ಕೂಡಾ ಕುಂಕುಮ ಅಳಿಸಿ ಓಡಾಡುತ್ತಾರೆ ಅಂದುಕೊಂಡೆ. ಆದರೆ ರಾಹುಲ್ ಗಾಂಧಿ ಕುಂಕುಮ ಮೆತ್ಕೊಂಡಿದ್ದಾರೆ. ಇದು ಒಂದು ರೀತಿಯ ಹರಕೆ ಕುರಿ ಥರ ಕಾಣುತ್ತಿದೆ ಲೇವಡಿ ಮಾಡಿದರು.

ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಅನ್ನುತ್ತಿದ್ದವರೇ ಈಗ ಮಗನ ಕೈಗೊಂದು ನಿಂಬೆ ಹಣ್ಣು ಕೊಟ್ಟಿದ್ದಾರೆ. ನಮ್ಮ ಕರಾವಳಿ ದೈವಗಳ ಊರು. ಇಲ್ಲಿ ನಿಂಬೆ ಹಣ್ಣು, ಮಂತ್ರವೆಲ್ಲ ನಡೆಯಲ್ಲ. ಅದೆಲ್ಲ ಹೊಳೆ ನರಸೀಪುರದಲ್ಲಿ ನಡೆಯಬಹುದು. ಪ್ರಮೋದ್ ಮಧ್ವರಾಜ್ ಅವರ ತಾಯಿ ಪ್ರಮೋದ್‍ಗೊಂದು ತಾಯತ ಕಟ್ಟಲಿ. ಜೆಡಿಎಸ್ ಅನೇಕರನ್ನು ಹರಕೆಯ ಕುರಿ ಮಾಡಿದೆ ಎಂದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಾತನಾಡಿ, ಈ ದೇಶದ ಉಳಿವಿಗೆ ಮೋದಿ ಬರಬೇಕು. ಮಹಾಗಠಬಂಧನ್‌ ಆಳ್ವಿಕೆಯಿಂದ ದೇಶವನ್ನು ಕಾಪಾಡಬೇಕಿದೆ. ಇದಕ್ಕಾಗಿ ಉಳಿದಿರುವ 2 ದಿನ ಕಾರ್ಯಕರ್ತರು ಪ್ರತಿ ಬೂತ್‍ನಲ್ಲಿ ಸೈನಿಕರಂತೆ ಕೆಲಸ ಮಾಡಿ ಮೋದಿ ಕೈಗೆ ದೇಶ ಕೊಡಿ. ಮುಂದಿನ 5 ವರ್ಷ ಪ್ರಾಮಾಣಿಕ ರಾಜಕೀಯ ಮಾಡುತ್ತೇವೆ ಎಂದರು.

ಶಾಸಕ ಕೆ. ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಮೀನುಗಾರರ ಸಮುದಾಯದಲ್ಲಿ ಹುಟ್ಟಿ, ಮೀನುಗಾರಿಕಾ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ತನ್ನ ಆಳ್ವಿಕೆಯಲ್ಲಿ ಮೀನುಗಾರರಿಗೆ ಯಾವ ಸ್ಪಂದನೆಯೂ ಕೊಟ್ಟಿಲ್ಲ. ಈಗ ಚುನಾವಣೆಗಾಗಿ ಸುಳ್ಳಿನ ಭರವಸೆ ಕೊಡುತ್ತಿದ್ದಾರೆ. ಮರಳಿನ ಸಮಸ್ಯೆ ಪರಿಹಾರಕ್ಕೆ ಪ್ರಮೋದ್‍ನ ಅವಶ್ಯವಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಸುರೇಶ್ ಶೆಟ್ಟಿ ಗುರ್ಮೆ, ಕೆ. ಉದಯ್ ಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಯಶ್‍ಪಾಲ್ ಎ. ಸುವರ್ಣ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ