ಆ್ಯಪ್ನಗರ

ರಾಹುಲ್, ಸೋನಿಯಾ, ರಾಜನಾಥ್ ಸಿಂಗ್ ಸಹಿತ 7 ಪ್ರಮುಖರ ಭವಿಷ್ಯ ನಾಳೆ ನಿರ್ಧಾರ

ಏಪ್ರಿಲ್ 1ರಿಂದ ಏಪ್ರಿಲ್ 29ರ ವರೆಗೆ ನಡೆದ ಮೊದಲ ನಾಲ್ಕು ಹಂತಗಳ ಚುನಾವಣೆಗಳಲ್ಲಿ ಶೇ 70ರಷ್ಟು ಸ್ಥಾನಗಳಿಗೆ ಮತದಾನ ಪೂರ್ಣಗೊಂಡಿದೆ. ಐದನೇ ಹಂತದ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಕೆಲವು ಪ್ರಮುಖ ಅಭ್ಯರ್ಥಿಗಳ ವಿವರ ಇಲ್ಲಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ, ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಸೇರಿದಂತೆ 7 ಪ್ರಮುಖರ ಭವಿಷ್ಯ ನಾಳೆ ಮತಯಂತ್ರ ಸೇರಲಿದೆ.

Vijaya Karnataka Web 5 May 2019, 6:40 pm
ಹೊಸದಿಲ್ಲಿ: ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ನಾಳೆ ನಡೆಯಲಿದೆ. ಬಿಹಾರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸಹಿತ 7 ರಾಜ್ಯಗಳ 51 ಲೋಕಸಭಾ ಸ್ಥಾನಗಳಿಗೆ ಮೇ 6ರಂದು ಚುನಾವಣೆ ನಡೆಯಲಿದೆ.
Vijaya Karnataka Web Sonia-Rahul Gandhi


ಏಪ್ರಿಲ್ 1ರಿಂದ ಏಪ್ರಿಲ್ 29ರ ವರೆಗೆ ನಡೆದ ಮೊದಲ ನಾಲ್ಕು ಹಂತಗಳ ಚುನಾವಣೆಗಳಲ್ಲಿ ಶೇ 70ರಷ್ಟು ಸ್ಥಾನಗಳಿಗೆ ಮತದಾನ ಪೂರ್ಣಗೊಂಡಿದೆ.

ಐದನೇ ಹಂತದ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಕೆಲವು ಪ್ರಮುಖ ಅಭ್ಯರ್ಥಿಗಳ ವಿವರ ಇಲ್ಲಿದೆ:

5ನೇ ಹಂತದ ಚುನಾವಣೆ: 7 ರಾಜ್ಯಗಳ 51 ಸ್ಥಾನಗಳಿಗೆ ನಾಳೆ ಮತದಾನ


ರಾಹುಲ್ ಗಾಂಧಿ, ಕಾಂಗ್ರೆಸ್:
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 2004ರ ವರೆಗೂ ತಮ್ಮ ಕುಟುಂಬದ ಭದ್ರಕೋಟೆ ಎಂದೇ ಪರಿಗಣಿತವಾಗಿದ್ದ ಅಮೇಥಿಯಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಬಾರಿ ಮತ್ತೆ ಅವರ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸ್ಪರ್ಧಿಸುತ್ತಿದ್ದು, ಭಾರೀ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ ಸ್ಮೃತಿ ಇರಾನಿ 3.1 ಲಕ್ಷ ಮತಗಳನ್ನು ಗೆದ್ದಿದ್ದರು. ರಾಹುಲ್ ಗಾಂಧಿ ಕೇವಲ 1 ಲಕ್ಷ ಮತಗಳ ಅಂತರದಲ್ಲಿ ಜಯಗಳಿಸಿದ್ದರು. ಅಮೇಥಿಯಲ್ಲಿ ಎಸ್‌ಪಿ-ಬಿಎಸ್ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ರಾಹುಲ್ ಗಾಂಧಿ ಕೇರಳದ ವಯನಾಡಿನಿಂದಲೂ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಅಮೇಥಿಯಿಂದ ಪಲಾಯನ ಮಾಡಿದ್ದಾರೆ ಎಂದು ಸ್ಮೃತಿ ಇರಾನಿ ಲೇವಡಿ ಮಾಡುತ್ತಿದ್ದಾರೆ.

ರಾಜನಾಥ್ ಸಿಂಗ್, ಬಿಜೆಪಿ:
ಬಿಜೆಪಿಯ ಅತ್ಯುನ್ನತ ನಾಯಕರಲ್ಲಿ ಒಬ್ಬರಾದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಲಖನೌ ಲೋಕಸಭಾ ಕ್ಷೇತ್ರದಿಂದ ಪುನರಾಯ್ಕೆ ಬಯಸಿದ್ದಾರೆ. ಬಿಜೆಪಿಯ ಮಾಜಿ ಅಧ್ಯಕ್ಷರೂ ಆಗಿರುವ ಅವರು, 2009ರಲ್ಲಿ ಗಾಜಿಯಾಬಾದ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. 2014ರಲ್ಲಿ ಲಖನೌದಿಂದ ಗೆದ್ದರು. ಎದುರಾಳಿ ಕಾಂಗ್ರೆಸ್‌ನ ರೀಟಾ ಬಹುಗುಣ ಜೋಶಿ ಅವರನ್ನು 2.8 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ, ಕೇಂದ್ರದ ಹಲವು ಖಾತೆಗಳ ಸಚಿವರಾಗಿ ನಿಭಾಯಿಸಿದ ಅನುಭವ ಅವರಿಗಿದೆ.

ಸೋನಿಯಾ ಗಾಂಧಿ, ಕಾಂಗ್ರೆಸ್:
ನೆಹರೂ-ಗಾಂಧಿ ಮನೆತನದ ಮತ್ತೊಂದು ಭದ್ರಕೋಟೆ ರಾಯ್‌ಬರೇಲಿಯಿಂದ ಸೋನಿಯಾ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ಸ್ವಾತಂತ್ರ್ಯಾನಂತರ ಈ ಕ್ಷೇತ್ರ ಕಾಂಗ್ರೆಸ್ ಕೈತಪ್ಪಿದ ನಿದರ್ಶನ ಅಪರೂಪ. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಅವರ ಪತಿ ಫಿರೋಜ್ ಗಾಂಧಿ ಈ ಕ್ಷೇತ್ರದಿಂದ ಗೆದ್ದಿದ್ದರು. ಈ ಬಾರಿ ಬಿಜೆಪಿ ಮಾಜಿ ಕಾಂಗ್ರೆಸಿಗ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಇಲ್ಲಿ ಕಣಕ್ಕಿಳಿಸಿದೆ. ಇವರು ಸೋನಿಯಾ ಗಾಂಧಿ ಅವರ ಮಾಜಿ ನಿಕಟವರ್ತಿ ಎನ್ನುವುದು ವಿಶೇಷ. 2004ರಿಂದಲೂ ಈ ಕ್ಷೇತ್ರವನ್ನು ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದು ನಾಲ್ಕು ಬಾರಿ ಗೆದ್ದಿದ್ದಾರೆ. ಈಗ ಐದನೇ ಬಾರಿಗೆ ಪುನರಾಯ್ಕೆ ಬಯಸಿದ್ದಾರೆ.

ಜಿತೇಂದ್ರ ಸಿಂಗ್, ಕಾಂಗ್ರೆಸ್:
ಮಾಜಿ ಕೇಂದ್ರ ಸಚಿವ, ರಾಜ ಮನೆತನದ ಜಿತೇಂದ್ರ ಸಿಂಗ್ ರಾಜಸ್ಥಾನದ ಆಲ್ವಾರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಬಾಲಕ್‌ ನಾಥ್‌ ಸ್ಪರ್ಧಿಸುತ್ತಿದ್ದು, ಕಳೆದ ಬಾರಿ ಅವರ ಗುರು, ರೋಹ್ಟಕ್ ಮೂಲದ ಮಠದ ಸನ್ಯಾಸಿ ಚಾಂದ್‌ ನಾಥ್‌ 2,ಲಕ್ಷಗಳಿಗೂ ಹೆಚ್ಚು ಮತಗಳಿಂದ ಜಿತೇಂದ್ರ ಸಿಂಗ್ ಅವರನ್ನು ಸೋಲಿಸಿದ್ದರು. 2009ರಲ್ಲಿ ಜಿತೇಂದ್ರ ಸಿಂಗ್ ಇಲ್ಲಿಂದ ಗೆದ್ದಿದ್ದರು. ಅವರ ತಾಯಿ ಬಿಜೆಪಿಯ ಮಾಜಿ ಸಂಸದೆ.

ಅರ್ಜುನ್ ಮುಂಡಾ, ಬಿಜೆಪಿ:
ಬುಡಕಟ್ಟು ಪ್ರಾಬಲ್ಯದ, ಪರಿಶಿಷ್ಟ ಬುಡಕಟ್ಟಿಗೆ ಮೀಸಲಾದ ಖುಂಟಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಅತ್ಯಂತ ಜನಪ್ರಿಯ ನಾಯಕ ಅರ್ಜುನ್ ಮುಂಡಾ ಸ್ಪರ್ಧಿಸುತ್ತಿದ್ದಾರೆ. ಅವರು ಮೂರು ಬಾರಿ ಮುಖ್ಯಮಂತ್ರಿಯಾಗಿದ್ದವರು. ಪ್ರತಿಪಕ್ಷಗಳ ದೋಸ್ತಿ ಅಭ್ಯರ್ಥಿ ಕಾಳಿಚರಣ್ ಮುಂಡಾ ಎದುರಾಳಿಯಾಗಿದ್ದಾರೆ. ಮೂರು ದಶಕಗಳಿಂದ ಬಿಜೆಪಿ ಈ ಕ್ಷೇತ್ರವನ್ನು ಬಿಗಿಯಾದ ಹಿಡಿತದಲ್ಲಿಟ್ಟುಕೊಂಡಿದೆ. 8 ಬಾರಿ ಸಂಸದರಾಗಿರುವ ಕರಿಯಾ ಮುಂಡಾ ಬದಲು ಈ ಬಾರಿ ಅರ್ಜುನ್ ಮುಂಡಾರನ್ನು ಬಿಜೆಪಿ ಕಣಕ್ಕಿಳಿಸಿದೆ.

ಸುಬೋಧ್‌ ಕಾಂತ್ ಸಹಾಯ್, ಕಾಂಗ್ರೆಸ್:
ರಾಂಚಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಮೂರು ಬಾರಿ ಈ ಕ್ಷೇತ್ರವನ್ನು ಗೆದ್ದಿರುವ ಅವರು ಮೂವರು ಪ್ರಧಾನಿಗಳ ಸಂಪುಟದಲ್ಲಿ ಸಚಿವರಾಗಿದ್ದ ಹೆಗ್ಗಳಿಕೆ ಹೊಂದಿದ್ದಾರೆ. ಐದು ಬಾರಿ ಸಂಸದರಾಗಿದ್ದ ರಾಮ್ ತಹಲ್ ಚೌಧರಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು, ಅವರು ಪಕ್ಷೇತರರಾಗಿ ಕಣದಲ್ಲಿದ್ದಾರೆ. ಬಿಜೆಪಿಯಿಂದ ಸಂಜಯ್ ಸೇಥ್ ಕಣದಲ್ಲಿದ್ದಾರೆ. ಒಟ್ಟಾರೆಯಾಗಿ ಇಲ್ಲಿ ತ್ರಿಕೋನ ಸ್ಪರ್ಧೆಯಿದೆ.

ದಿನೇಶ್ ತ್ರಿವೇದಿ, ಟಿಎಂಸಿ:
ಒಂದು ಕಾಲದಲ್ಲಿ ಎಡಪಕ್ಷಗಳ ಭದ್ರಕೋಟೆ ಎನಿಸಿದ್ದ ಬಾರಕ್‌ಪುರ ಲೋಕಸಭಾ ಕ್ಷೇತ್ರ 2009ರಲ್ಲಿ ದಿನೇಶ್ ತ್ರಿವೇದಿ ಗೆಲುವಿನೊಂದಿಗೆ ತೃಣಮೂಲ ಕಾಂಗ್ರೆಸ್ ಪಾಲಾಯಿತು. ಹಿರಿಯ ಟಿಎಂಸಿ ನಾಯಕ ಹಾಗೂ ಮಾಜಿ ರೈಲ್ವೆ ಸಚಿವರೂ ಆಗಿರುವ ಅವರು 2014ರಲ್ಲಿ ಸಿಪಿಎಂನ ಸುಭಾಷಿಣಿ ಆಲಿ ಅವರನ್ನು ಸೋಲಿಸಿ ಪುನರಾಯ್ಕೆಯಾಗಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಅರ್ಜುನ್ ಸಿಂಗ್ ಅವರನ್ನು ಕಣಕ್ಕಿಳಿಸಿದ್ದು ಗೆಲುವಿಗಾಗಿ ಶತಾಯಗತಾಯ ಹೋರಾಟ ನಡೆಸಿದೆ. ಈ ಅರ್ಜುನ್ ಸಿಂಗ್ ಮಾಜಿ ಟಿಎಂಸಿ ನಾಯಕರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌