ಆ್ಯಪ್ನಗರ

ನಕ್ಸಲರ ಅಟ್ಟಹಾಸಕ್ಕೆ ಬಿಜೆಪಿ ಶಾಸಕ ಬಲಿ

ನೆಲಬಾಂಬ್‌ ಸ್ಫೋಟಿಸಿ ಶಾಸಕ ಸಾಗುತ್ತಿದ್ದ ವಾಹನವನ್ನು ಛಿದ್ರಗೊಳಿಸಲಾಗಿದೆ. ಸ್ಫೋಟದ ಬಳಿಕ ಸಂತ್ರಸ್ತರ ಮೇಲೆ ನಕ್ಸಲರು ಗುಂಡಿನ ಸುರಿಮಳೆಗರೆದರು. ಭೀಮಾ ಮಾಂಡವಿ ಹಾಗೂ ಬೆಂಗಾವಲು ಪಡೆಯ ನಾಲ್ವರು ಯೋಧರು ಸ್ಥಳದಲ್ಲಿಯೇ ಮೃತಪಟ್ಟರು.

Vijaya Karnataka 10 Apr 2019, 5:00 am
ರಾಯಪುರ: ಹಿಂಸಾಚಾರ ಹಾಗೂ ಅಟ್ಟಹಾಸದ ಮೂಲಕ ಪ್ರಜಾಪ್ರಭುತ್ವದ ಸಾಮರ್ಥ್ಯ‌ವನ್ನು ಅಣಕಿಸುವ ನಕ್ಸಲರಿಂದ ಮತ್ತೊಂದು ದುಷ್ಕೃತ್ಯ ಛತ್ತೀಸ್‌ಗಢದಲ್ಲಿ ಮಂಗಳವಾರ ನಡೆದಿದೆ. ಚುನಾವಣೆ ಪ್ರಚಾರಕ್ಕೆ ಹೊರಟಿದ್ದ ಬಿಜೆಪಿ ಶಾಸಕ ಭೀಮಾ ಮಾಂಡವಿ ಅವರ ವಾಹನವನ್ನು ಮಾವೋವಾದಿಗಳು ಸ್ಫೋಟಿಸಿದ್ದು, ಶಾಸಕ ಹಾಗೂ ನಾಲ್ವರು ಭದ್ರತಾ ಸಿಬ್ಬಂದಿ ಬಲಿಯಾಗಿದ್ದಾರೆ.
Vijaya Karnataka Web bjp legislator 4 security personnel killed in maoist attack in dantewada
ನಕ್ಸಲರ ಅಟ್ಟಹಾಸಕ್ಕೆ ಬಿಜೆಪಿ ಶಾಸಕ ಬಲಿ


ನೆಲಬಾಂಬ್‌ ಸ್ಫೋಟಿಸಿ ಶಾಸಕ ಸಾಗುತ್ತಿದ್ದ ವಾಹನವನ್ನು ಛಿದ್ರಗೊಳಿಸಲಾಗಿದೆ. ಸ್ಫೋಟದ ಬಳಿಕ ಸಂತ್ರಸ್ತರ ಮೇಲೆ ನಕ್ಸಲರು ಗುಂಡಿನ ಸುರಿಮಳೆಗರೆದರು. ಭೀಮಾ ಮಾಂಡವಿ ಹಾಗೂ ಬೆಂಗಾವಲು ಪಡೆಯ ನಾಲ್ವರು ಯೋಧರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಖಂಡಿಸಿದ್ದಾರೆ.

ಛತ್ತೀಸ್‌ಗಢದಲ್ಲಿ ಕಳೆದ ವರ್ಷ ಅಂತ್ಯಕ್ಕೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತು ಕಾಂಗ್ರೆಸ್‌ ಅಧಿಕಾರ ಗದ್ದುಗೆ ಏರಿತ್ತು. ಆ ಬಳಿಕ ನಡೆದ ನಕ್ಸಲರ ಮೊದಲ ಅಟ್ಟಹಾಸವಿದು. ಹದಿನೈದು ವರ್ಷ ಕಾಲ ದಿಟ್ಟ ಕಾರ್ಯಾಚರಣೆಗಳ ಮೂಲಕ ನಕ್ಸಲರ ಹಾವಳಿಯನ್ನು ರಮಣ್‌ ಸಿಂಗ್‌ ನೇತೃತ್ವದ ಬಿಜೆಪಿ ಸರಕಾರ ಹತ್ತಿಕ್ಕಿತ್ತು. ಇದೇ ಕಾರಣಕ್ಕೆ ಬಿಜೆಪಿ ನಾಯಕರ ವಿರುದ್ಧ ನಕ್ಸಲರು ಕುದಿಯುತ್ತಿದ್ದರು. ಈ ಚುನಾವಣಾ ಪ್ರಚಾರವು ಸೇಡು ತೀರಿಸಿಕೊಳ್ಳಲು ಅವರಿಗೆ ಅವಕಾಶ ಒದಗಿಸಿಕೊಟ್ಟಿತು ಎಂದು ರಕ್ಷಣಾ ಪರಿಣಿತರು ವ್ಯಾಖ್ಯಾನಿಸಿದ್ದಾರೆ.

ದಾಂತೇವಾಡ ಮತ್ತು ಬಸ್ತಾರ್‌ ನಕ್ಸಲ್‌ ಪೀಡಿತ ಜಿಲ್ಲೆಗಳಾಗಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ಭಾರಿ ಬಿಗಿಭದ್ರತೆ ಒದಗಿಸಲಾಗಿದೆ. ಬಸ್ತಾರ್‌ ಒಂದರಲ್ಲಿಯೇ 80,000 ಭದ್ರತಾ ಸಿಬ್ಬಂದಿ ನಿಯೋಜನೆ ಹಾಗೂ ಅನೇಕ ಡ್ರೋನ್‌ಗಳ ಬಳಕೆ ಮಾಡಲಾಗಿದೆ. ಬಸ್ತಾರ್‌ನಲ್ಲಿ ಗುರುವಾರ ಮೊದಲ ಹಂತದ ಮತದಾನ ನಡೆಯಲಿದೆ. ದಾಂತೇವಾಡದಲ್ಲಿ ಏಪ್ರಿಲ್‌ 18ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಇಷ್ಟೆಲ್ಲ ಭದ್ರತೆಯ ನಡುವೆಯೂ ಉಗ್ರರು ಈ ದಾಳಿ ನಡೆಸಿದ್ದು, ಅಧಿಕಾರಿಗಳನ್ನು ಕಳವಳಕ್ಕೀಡು ಮಾಡಿದೆ.

ಅಟ್ಟಹಾಸದ ಕಹಿನೆನಪು

ಚುನಾವಣೆ ಸಮಯ ಸಾಧಿಸಿ ಅಮಾಯಕರ ಮೇಲೆ ಮಾವೋವಾದಿ ಉಗ್ರರು ಅಟ್ಟಹಾಸ ಮೆರೆದಿರುವುದು ಇದೇ ಮೊದಲೇನೂ ಅಲ್ಲ. 2013ರ ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲೂ ಇಂತಹದ್ದೇ ಘೋರ ದಾಳಿ ನಡೆದಿತ್ತು. ಅಂದಿನ ಉಗ್ರ ದಾಳಿಯಲ್ಲಿ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ನಂದ ಕುಮಾರ್‌ ಪಟೇಲ್‌, ಮಾಜಿ ಸಚಿವ ಮಹೇಂದ್ರ ಕರ್ಮಾ ಸೇರಿ 27 ಮಂದಿ ಮೃತಪಟ್ಟಿದ್ದರು. ಅಂದು, ಕಾಂಗ್ರೆಸ್‌ ಮುಖಂಡರ ಪ್ರಚಾರದ ವಾಹನಗಳು ಸಾಗುತ್ತಿದ್ದ ರಸ್ತೆಯಲ್ಲಿ ಮರದ ದಿಮ್ಮಿಗಳನ್ನು ಅಡ್ಡಹಾಕಿ ತಡೆದು, ನಂತರ ನೆಲಬಾಂಬ್‌ ಸ್ಫೋಟಿಸಿ ವಿಕೃತಿ ಮೆರೆಯಲಾಗಿತ್ತು. ಮಂಗಳವಾರ ನಡೆದ ದಾಳಿಗೂ ಇದೇ ತಂತ್ರವನ್ನು ನಕ್ಸಲರು ಅನುಸರಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ