ಆ್ಯಪ್ನಗರ

ಇಂದು ಬಿಜೆಪಿ ಸಂಸದೀಯ ಪಕ್ಷದ ಸಭೆ

ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ದಿಲ್ಲಿಯ ಬಿಜೆಪಿ ಮುಖ್ಯ ಕಚೇರಿಯ ಮುಂದೆ ಬೆಳಗ್ಗೆಯಿಂದಲೇ ಹಬ್ಬದ ವಾತಾವರಣ ಮನೆ ಮಾಡಿತ್ತು...

Vijaya Karnataka 24 May 2019, 9:00 am
* ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ದಿಲ್ಲಿಯ ಬಿಜೆಪಿ ಮುಖ್ಯ ಕಚೇರಿಯ ಮುಂದೆ ಬೆಳಗ್ಗೆಯಿಂದಲೇ ಹಬ್ಬದ ವಾತಾವರಣ ಮನೆ ಮಾಡಿತ್ತು. ಎನ್‌ಡಿಎಗೆ ಭರ್ಜರಿ ಮುನ್ನಡೆಯ ಸುದ್ದಿ ತಿಳಿದ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿ, ಬಣ್ಣ ಎರಚಿ, ಹರ್ಷೋದ್ಘಾರಗಳೊಂದಿಗೆ ವಿಜಯೋತ್ಸವ ಆಚರಿಸಿದರು. ಪಕ್ಷದ ಗೆಲುವಿನ ಸಂಖ್ಯೆ ಹೆಚ್ಚುತ್ತಾ ಹೋದಂತೆ, ದಿಲ್ಲಿಯಲ್ಲಿ ಗೆಲುವಿನ ಕೇಕೆಯೂ ಜೋರಾಯಿತು. ಕಾರ್ಯಕರ್ತರು ನಗಾರಿ ಬಾರಿಸಿ ಗೆಲುವಿನ ಕಹಳೆ ಮೊಳಗಿಸಿದರು. 'ಮೋದಿ ಮತ್ತೊಮ್ಮೆ' ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.
Vijaya Karnataka Web Modi Meet


* ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಪಕ್ಷದ ಮುಖ್ಯ ಕಚೇರಿಗೆ ಆಗಮಿಸಿದರು. ಅದಾಗಲೇ ಭಾರಿ ಸಂಭ್ರಮಾಚರಣೆಯಿಂದ ಕಳೆಕಟ್ಟಿದ್ದ ಬಿಜೆಪಿ ಕಚೇರಿಯಲ್ಲಿ ಶಾ ಅವರ ಮೇಲೆ ಪುಷ್ಪವರ್ಷ ಸುರಿಸಿ ಅದ್ಧೂರಿ ಸ್ವಾಗತ ಕೋರಲಾಯಿತು. ಪಕ್ಷದ ಭರ್ಜರಿ ಗೆಲುವಿಗಾಗಿ ಮತ್ತು ಗಾಂಧಿ ನಗರ ಕ್ಷೇತ್ರದಿಂದ ಶಾ ಗೆಲುವಿಗಾಗಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

* ಚುನಾವಣೆ ಫಲಿತಾಂಶದ ಒಂದೊಂದೇ ಸುತ್ತಿನ ಮತ ಎಣಿಕೆ ಮುಗಿಯುತ್ತಿದ್ದಂತೆ ಕಾಂಗ್ರೆಸ್‌ನ ಮತ್ತೊಂದು ಮಹಾಸೋಲು ವೇದ್ಯವಾಗುತ್ತಿತ್ತು. ಇದಕ್ಕೆ ಸಾಕ್ಷಿಯೆಂಬಂತೆ ದಿಲ್ಲಿಯ ಎಐಸಿಸಿ ಕಚೇರಿಯಲ್ಲಿ ಸೂತಕದ ವಾತಾವರಣ ಮನೆ ಮಾಡಿತ್ತು. ಗೋಡೆಗಳ ಮೇಲೆ ನಾಯಕರ ಬೃಹತ್‌ ಕಟೌಟ್‌ಗಳು, ಫೋಟೊಗಳು ಬಿಟ್ಟರೆ ಪಕ್ಷದ ಕಾರ್ಯಕರ್ತರ ಸಂಭ್ರಮಾಚರಣೆಯಾಗಲೀ, ಹರ್ಷೋದ್ಘಾರವಾಗಲೀ ಅಲ್ಲಿರಲಿಲ್ಲ. ಪಕ್ಷದ ದೊಡ್ಡ ನಾಯಕರೂ ಸಹ ಅತ್ತ ತಲೆ ಹಾಕಲಿಲ್ಲ. ಉತ್ತರ ಪ್ರದೇಶದ ಲಖನೌ, ಅಸ್ಸಾಂನ ಗುವಾಹಟಿ ಸೇರಿಂದಂತೆ ಇತರೆ ನಗರಗಳಲ್ಲೂ ಕಾಂಗ್ರೆಸ್‌ ಕಚೇರಿಗಳು ಇಥದ್ದೇ ದೃಶ್ಯಕ್ಕೆ ಸಾಕ್ಷಿಯಾದವು.

* ಶುಕ್ರವಾರ ಸಂಜೆ 5.30ಕ್ಕೆ ದಿಲ್ಲಿಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ಪಕ್ಷದ ಸಂಸದೀಯ ಪಕ್ಷದ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಭಾಷಣ ಮಾಡಲಿದ್ದು, ನಂತರ ಕಾರ್ಯಕರ್ತರನ್ನು ಉದ್ದೇಶಿಸಿಯೂ ಅವರು ಮಾತನಾಡಲಿದ್ದಾರೆ. ಬಿಜೆಪಿಯನ್ನು ಗೆಲ್ಲಿಸಿದ್ದಕ್ಕಾಗಿ ಮತದಾರರಿಗೆ ಧನ್ಯವಾದ ಅರ್ಪಿಸುವ ನಿರ್ಣಯವನ್ನೂ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆಯಿದೆ.

* ಫಲಿತಾಂಶದಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು ಖಚಿತವಾಗುತ್ತಿದ್ದಂತೆಯೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ದಿಲ್ಲಿಯ ನಿವಾಸದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ರಾಹುಲ್‌ ಗಾಂಧಿ ನಿವಾಸಕ್ಕೆ ತೆರಳಿ, ಚರ್ಚೆ ನಡೆಸಿದರು.

* ರಾಜಸ್ಥಾನ ಸಿಎಂ, ಕಾಂಗ್ರೆಸ್‌ ಹಿರಿಯ ನಾಯಕ ಅಶೋಕ್‌ ಗೆಹ್ಲೊಟ್‌ ಅವರಿಗೆ ಪಕ್ಷದ ಹೈಕಮಾಂಡ್‌ ದಿಲ್ಲಿಗೆ ಬರುವಂತೆ ಬುಲಾವ್‌ ನೀಡಿದ್ದು, ಗುರುವಾರ ರಾತ್ರಿ ಅವರು ರಾಜಧಾನಿ ತಲುಪಲಿದ್ದಾರೆ.

* ಸಂಜೆ 5.30ರ ವೇಳೆಗೆ ರಾಹುಲ್‌ ಗಾಂಧಿ ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಪರಾಭವವನ್ನು ಜನರ ತೀರ್ಪೆಂದು ಬಣ್ಣಿಸಿ ಒಪ್ಪಿಕೊಂಡರು. ಇದೇ ವೇಳೆ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಅಮೇಠಿಯಲ್ಲಿ ತಮ್ಮ ವಿರುದ್ಧ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿಗೂ ಅಭಿನಂದನೆ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌