ಆ್ಯಪ್ನಗರ

ಸಿಖ್ ವಿರೋಧಿ ದಂಗೆ ಸಮರ್ಥಿಸಿದ ಸ್ಯಾಮ್ ಪಿತ್ರೋಡಾ: ಕಾಂಗ್ರೆಸ್ ವಿರುದ್ಧ ಬಿಜೆಪಿ-ಅಕಾಲಿದಳ ಪ್ರತಿಭಟನೆ

ಕಾಂಗ್ರೆಸ್‌ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಗುರುವಾರದಂದು ಸಿಖ್ ವಿರೋಧಿ ದಂಗೆಯನ್ನು ಪ್ರಸ್ತಾಪಿಸುತ್ತ, '1984ರಲ್ಲಿ ಅದು ನಡೆದುಹೋಗಿದೆ. ಏನೀಗ?' ಎಂದು ಪ್ರಶ್ನಿಸಿದ್ದರು. ತಮ್ಮ ಹೇಳಿಕೆ ಭಾರೀ ವಿವಾದ ಸೃಷ್ಟಿಸುತ್ತಿದೆ ಎಂದು ಅರಿತ ಬಳಿಕ ಪಿತ್ರೋಡಾ, ತನ್ನ ಹೇಳಿಕೆಯನ್ನು ಬಿಜೆಪಿ ತಿರುಚಿದೆ ಎಂದು ಆರೋಪಿಸಿದರು.

Vijaya Karnataka Web 10 May 2019, 1:08 pm
ಅಮೃತಸರ: 1984ರ ಸಿಖ್ ವಿರೋಧಿ ದಂಗೆಯನ್ನು ಸ್ಯಾಮ್ ಪಿತ್ರೋಡಾ ಸಮರ್ಥಿಸಿರುವುದನ್ನು ವಿರೋಧಿಸಿ ಬಿಜೆಪಿ ಮತ್ತು ಅಕಾಲಿದಳ ಅಮೃತಸರದಲ್ಲಿ ತೀವ್ರ ಪ್ರತಿಭಟನೆ ನಡೆಸಿವೆ.
Vijaya Karnataka Web Protest against Pitroda


ಕಾಂಗ್ರೆಸ್‌ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಗುರುವಾರದಂದು ಸಿಖ್ ವಿರೋಧಿ ದಂಗೆಯನ್ನು ಪ್ರಸ್ತಾಪಿಸುತ್ತ, '1984ರಲ್ಲಿ ಅದು ನಡೆದುಹೋಗಿದೆ. ಏನೀಗ?' ಎಂದು ಪ್ರಶ್ನಿಸಿದ್ದರು.

ತಮ್ಮ ಹೇಳಿಕೆ ಭಾರೀ ವಿವಾದ ಸೃಷ್ಟಿಸುತ್ತಿದೆ ಎಂದು ಅರಿತ ಬಳಿಕ ಪಿತ್ರೋಡಾ, ತನ್ನ ಹೇಳಿಕೆಯನ್ನು ಬಿಜೆಪಿ ತಿರುಚಿದೆ ಎಂದು ಆರೋಪಿಸಿದರು.

'ಸತ್ಯವನ್ನು ನಾಶಪಡಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳುಗಳನ್ನೇ ವೈಭವೀಕರಿಸಲಾಗುತ್ತಿದೆ. ಆಯ್ದ ವ್ಯಕ್ತಿಗಳನ್ನು ವ್ಯವಸ್ಥಿತವಾಗಿ ಹೀಯಾಳಿಸಲಾಗುತ್ತಿದೆ. ಹಾಗಿದ್ದರೂ ಸತ್ಯ ಉಳಿಯುತ್ತದೆ ಮತ್ತು ಸುಳ್ಳಿಗೆ ಸೋಲಾಗುತ್ತದೆ. ಸ್ವಲ್ಪ ಕಾಲ ಕಾಯಬೇಕಷ್ಟೆ' ಎಂದು ಪಿತ್ರೋಡಾ ಇಂದು ಟ್ವೀಟ್ ಮಾಡಿದ್ದಾರೆ.

ಸಿಖ್ ವಿರೋಧಿ ದಂಗೆಯನ್ನು ಪಿತ್ರೋಡಾ ಸಮರ್ಥಿಸಿಕೊಂಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಿಜೆಪಿ ತೀಕ್ಷ್ಣ ವಾಗ್ದಾಳಿ ನಡೆಸಿದ್ದು, ಕ್ಷಮೆ ಕೋರುವಂತೆ ಪಿತ್ರೋಡಾಗೆ ಗುರುವಾರ ಆಗ್ರಹಿಸಿತ್ತು.

'1984ರ ಹತ್ಯಾಕಾಂಡ ನಡೆದಿದೆ. ಏನೀಗ? ಎಂದು ಪಿತ್ರೋಡಾ ಪ್ರಶ್ನಿಸಿದ್ದಾರೆ. ಇದು ಅವರ ಉದ್ಧಟತನದ ಸಂಕೇತ. ದೇಶ ಇಂಥ ವರ್ತನೆಯ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂತಹ ಮನಸ್ಥಿತಿ ಮುಂದುವರಿಯಲು ನಾವು ಬಿಡುವುದಿಲ್ಲ' ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದರು.

'ಭಾರತದಲ್ಲಿ ಅಂದು ನಡೆದ ಹತ್ಯಾಕಾಂಡ ಘೋರ. ಆಗ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ, ದೊಡ್ಡ ಮರಗಳು ಉರುಳಿದಾಗ ಭೂಕಂಪ ಸಂಭವಿಸುತ್ತದೆ ಎನ್ನುವ ಮೂಲಕ ಹತ್ಯಾಕಾಂಡವನ್ನು ಸಮರ್ಥಿಸಿಕೊಂಡಿದ್ದರು' ಎಂದು ಬಿಜೆಪಿ ನಾಯಕ ಹೇಳಿದರು.

'ಭೂಕಂಪ ಸಂಭವಿಸಿದಾಗ ದೊಡ್ಡ ಮರಗಳು ಉರುಳುತ್ತವೆ ಎಂದು ವಿಜ್ಞಾನ ಹೇಳುತ್ತದೆ. ಆದರೆ ಇದು ವಿಜ್ಞಾನಕ್ಕೆ ಸಂಪೂರ್ಣ ವಿರುದ್ಧವಾಗಿದೆ' ಎಂದು ಜಾವಡೇಕರ್ ಹೇಳಿದ್ದು, ಕಾಂಗ್ರೆಸ್ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ದೂಷಿಸಿದರು.

'ಪಿತ್ರೋಡಾ ರಾಜೀವ್ ಗಾಂಧಿಯ ಸಹೋದ್ಯೋಗಿ ಮತ್ತು ರಾಹುಲ್ ಗಾಂಧಿಯ ಗುರು. ಗುರುವೇ ಹೀಗಿದ್ದರೆ ಇನ್ನು ಶಿಷ್ಯ ಹೇಗಿದ್ದಾನು? ಕಾಂಗ್ರೆಸ್ ಮಾಡುತ್ತಿರುವುದು ಇದನ್ನೇ. ಸಾರ್ವಜನಿಕರ ಭಾವನೆಗಳಿಗೆ ಕಿಂಚಿತ್ತೂ ಸ್ಪಂದಿಸದವರು ಕಾಂಗ್ರೆಸ್‌ನವರು' ಎಂದು ಜಾವಡೇಕರ್ ನುಡಿದರು.

'ಅವರು ಕ್ಷಮೆ ಯಾಚಿಸಬೇಕು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕೆಂದು ನಾವು ಆಗ್ರಹಿಸುತ್ತೇವೆ. ಸಿಖ್ಖರಿಗಷ್ಟೇ ಅಲ್ಲ, ಇಡೀ ದೇಶದ ಕ್ಷಮೆ ಕೋರಬೇಕು' ಎಂದು ಜಾವಡೇಕರ್ ಆಗ್ರಹಿಸಿದರು.

ಶಿರೋಮಣಿ ಅಕಾಲಿದಳ ಖಂಡನೆ:
ಪಿತ್ರೋಡಾ ಹೇಳಿಕೆಯನ್ನು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಖಂಡಿಸಿದ್ದು, 'ಕಾಂಗ್ರೆಸ್‌ನ ಸಿಖ್ ವಿರೋಧಿ ಮನಸ್ಥಿತಿಯನ್ನು ಪಿತ್ರೋಡಾ ಹೇಳಿಕೆ ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದೆ' ಎಂದು ಎಸ್‌ಎಡಿ ನಾಯಕ ಮಂಜೀಂದರ್ ಸಿಂಗ್ ಟೀಕಿಸಿದ್ದಾರೆ.

ಅಂದು ಸಿಖ್ ಹತ್ಯಾಕಾಂಡ ನಡೆಸುವಂತೆ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರ ಕಚೇರಿಯಿಂದಲೇ ನೇರವಾಗಿ ನಿರ್ದೇಶನ ಹೋಗಿತ್ತು ಎಂಬ ನಾನಾವತಿ ಆಯೋಗದ ವರದಿಯನ್ನು ಬಿಜೆಪಿ ಉಲ್ಲೇಖಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ