ಆ್ಯಪ್ನಗರ

ಮಣ್ಣಿನ ರಸಗುಲ್ಲಾವೂ ನನಗೆ ಪ್ರಸಾದ: ದೀದಿಗೆ ಮೋದಿ ಟಾಂಗ್

ಸೋಮವಾರ ಶ್ರೀರಾಮ್‌ಪುರ, ಬ್ಯಾರಕ್‌ಪುರದಲ್ಲಿ ನಡೆಸಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿ, ತೀಕ್ಷ್ಣವಾಗಿ ಮತ್ತು ಜಾಣ್ಮೆಯಿಂದ ಪ್ರತ್ಯುತ್ತರ ನೀಡಿದರು.

Vijaya Karnataka 30 Apr 2019, 7:14 am
ಶ್ರೀರಾಮ್‌ಪುರ/ಬ್ಯಾರಕ್‌ಪುರ: ಪಶ್ಚಿಮ ಬಂಗಾಳ ಮಹಾನ್‌ ಚೇತನಗಳ ನಾಡು. ಇಲ್ಲಿಯ ಮಣ್ಣು ಮತ್ತು ಕಲ್ಲಿನಿಂದ ತಯಾರಿಸಿದ ರಸಗುಲ್ಲಾವನ್ನು ಪ್ರಸಾದವಾಗಿ ಸ್ವೀಕರಿಸುತ್ತೇನೆ....ಹೀಗೆ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಡೆ ಬಂಗಾಳದ ನೆಲವನ್ನು ಕೊಂಡಾಡಿ, ಮತ್ತೊಂದು ಕಡೆ 'ದೀದಿ'ಗೆ ಟಾಂಗ್‌ ಕೊಟ್ಟಿದ್ದಾರೆ.
Vijaya Karnataka Web 2-2-05032-PTI3_5_2019_000084B


ಇತ್ತೀಚೆಗೆ ನಟ ಅಕ್ಷಯ್‌ ಕುಮಾರ್‌ ಅವರಿಗೆ ನೀಡಿದ ಸಂದರ್ಶನದಲ್ಲಿ ಮೋದಿ ತಮ್ಮ ಬದುಕಿನ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರತಿವರ್ಷ ತಮಗೆ ಕುರ್ತಾ, ಸಿಹಿ ತಿಂಡಿಯನ್ನು ಉಡುಗೊರೆಯಾಗಿ ಕಳುಹಿಸಿಕೊಡುತ್ತಾರೆ ಎಂದು ಹೇಳಿದ್ದರು. ಇದಕ್ಕೆ 'ದೀದಿ' ''ಮೋದಿ ಮಹಾನ್‌ ಸುಳ್ಳುಗಾರ. ಬಂಗಾಳದ ಜನತೆ ಬಿಜೆಪಿಗೆ ಮತ ಹಾಕುವ ಬದಲು, ಸ್ವಾಭಿಮಾನದ ಮಣ್ಣು ಮತ್ತು ಕಲ್ಲಿನಿಂದ ತಯಾರಿಸಿದ ರಸಗುಲ್ಲಾವನ್ನು ಕಳುಹಿಸಿಕೊಡಲಿದ್ದಾರೆ. ಇದನ್ನು ತಿಂದು ಅವರ ಹಲ್ಲು ಮುರಿಯಲಿ,'' ಎಂದು ಕೋಪದಿಂದ ಪ್ರತಿಕ್ರಿಯಿಸಿದ್ದರು.

ಸೋಮವಾರ ಶ್ರೀರಾಮ್‌ಪುರ, ಬ್ಯಾರಕ್‌ಪುರದಲ್ಲಿ ನಡೆಸಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿ, ಇದೆಲ್ಲಕ್ಕೂ ಅಷ್ಟೇ ತೀಕ್ಷ್ಣವಾಗಿ ಮತ್ತು ಜಾಣ್ಮೆಯಿಂದ ಪ್ರತ್ಯುತ್ತರ ನೀಡಿದರು. ''ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಸುಭಾಷ್‌ ಚಂದ್ರ ಬೋಸರು, ರವೀಂದ್ರನಾಥ ಟ್ಯಾಗೋರರು...ಹೀಗೆ ಮಹನೀಯರ ಸಾಧನೆಯ ನಾಡು ಪಶ್ಚಿಮ ಬಂಗಾಳ. ಹಾಲಿನ ಬದಲು, ಇಲ್ಲಿಯ ಮಣ್ಣು ಮತ್ತು ಕಲ್ಲಿನಿಂದ ತಯಾರಿಸಿದ ರಸಗುಲ್ಲಾವನ್ನು ತಯಾರಿಸಿ ಕಳುಹಿಸಿದರೆ, ಅದನ್ನೂ ನಾನು ಪ್ರಸಾದವಾಗಿ ಸ್ವೀಕರಿಸುತ್ತೇನೆ,'' ಎಂದು ಹೇಳಿದರು. ಇಲ್ಲಿನ ಮಣ್ಣು ನಾಡಿನ ಸಂಸ್ಕೃತಿ ಹಾಗೂ ಬೌದ್ಧಿಕ ಸಿರಿವಂತಿಕೆ ತೋರಿದರೆ, ರಸಗುಲ್ಲಾಕ್ಕೆ ಕಲ್ಲುಗಳು ಬಳಕೆಯಾಗುವುದರಿಂದ ಟಿಎಂಸಿ ಗೂಂಡಾಗಳಿಗೆ ಜನರ ಮೇಲೆ ಹಲ್ಲೆ ನಡೆಸಲು ಕಲ್ಲುಗಳು ಸಿಗದಂತಾಗುತ್ತವೆ. ಇದರಿಂದ ರಾಜ್ಯಕ್ಕೆ ಒಳ್ಳೆಯದು ಎಂದೂ ತಮ್ಮದೇ ಶೈಲಿಯಲ್ಲಿ ಹೇಳಿಕೆಯನ್ನು ವ್ಯಾಖ್ಯಾನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ