ಆ್ಯಪ್ನಗರ

ಎಲ್ಲೋ ಹುಟ್ಟಿ ಎಲ್ಲೋ ರಾಜಕಾರಣ ಮಾಡಿದವರು ಇಲ್ವೇ? ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆ ಕುರಿತು ಸಿಎಂ ಸಮರ್ಥನೆ

ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತಪಡಿಸುವವರು ಮತದಾರರೇ ಅಲ್ಲ. ಮಂಡ್ಯದಲ್ಲಿ ಮಾನಸಿಕವಾಗಿ ತೀರ್ಮಾನ ತೆಗೆದುಕೊಳ್ಳೋದಕ್ಕೆ ಅವರು ಸಿದ್ಧರಿದ್ದಾರೆ. ನಾನು ರಾಮ‌ನಗರದಲ್ಲಿ ಸ್ಪರ್ಧಿಸುವಾಗಲೂ ಕೆಲವರು ವಿರೋಧ ಎಂದು ತೋರಿಸಿದ್ರು. ಆಮೇಲೆ ಏನಾಯ್ತು ನಿಮಗೆ ಗೊತ್ತಿಲ್ವೇ? ಎಂದು ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

Vijaya Karnataka Web 12 Mar 2019, 3:36 pm
ಬೆಂಗಳೂರು: ತಮ್ಮ ಪುತ್ರ ನಿಖಿಲ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಎದುರಾಗಿರುವ ವಿರೋಧಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.
Vijaya Karnataka Web CM HDK with his Son Nikhil


'ಪರ- ವಿರೋಧ ಎಲ್ಲ ಕಡೆ ಇದ್ದಿದ್ದೇ. ಎಲ್ಲೋ ಹುಟ್ಟಿ ಬೇರೆ ಕಡೆ ಸಾಕಷ್ಟು ನಾಯಕರು ರಾಜಕಾರಣ ಮಾಡುತ್ತಿಲ್ವೆ? ಸದಾನಂದ ಗೌಡರು ಮಂಗಳೂರಿನಲ್ಲಿ ಹುಟ್ಟಿ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿಲ್ವೇ? ಯಡಿಯೂರಪ್ಪ ಮಂಡ್ಯದಲ್ಲಿ ಹುಟ್ಟಿ, ಶಿವಮೊಗ್ಗದಲ್ಲಿ ರಾಜಕಾರಣ ಮಾಡುತ್ತಿಲ್ವೇ? ಶೋಭಾ ಕರಂದ್ಲಾಜೆ ಬೆಂಗಳೂರಿಗೆ ಬಂದು ಮತ್ತೆ ಉಡುಪಿಗೆ ಹೋಗಿಲ್ವೇ? ನಾನು ಹಾಸನದಲ್ಲಿ ಹುಟ್ಟಿ, ರಾಮ ನಗರದಲ್ಲಿ ರಾಜಕಾರಣ ಮಾಡುತ್ತಿಲ್ವೇ? ಈ ರೀತಿ ನೂರಾರು ಉದಾಹರಣೆ ನಾನು ಕೊಡಬಲ್ಲೆ' ಎಂದು ಕುಮಾರಸ್ವಾಮಿ ಸಮರ್ಥಿಸಿಕೊಂಡರು.

'ಮಂಡ್ಯದಲ್ಲಿ ವಿರೋಧ ಬಗ್ಗೆ ನಾನು ಎಲ್ಲ ಗಮನಿಸುತ್ತಿದ್ದೇನೆ. ಮಂಡ್ಯ ಜಿಲ್ಲೆಯ ಪ್ರೀತಿ- ಅಭಿಮಾನವನ್ನು ದುರುಪಯೋಗ ಮಾಡಿಕೊಳ್ಳುವ ಕುಟುಂಬ ನಮ್ಮದಲ್ಲ. ಮಂಡ್ಯ ಜಿಲ್ಲೆಗೂ ನಮಗೂ ಹಲವಾರು ವರ್ಷಗಳಿಂದ ಸಂಬಂಧ ಇದೆ. ಯಾರ್ಯಾರ ಕೊಡುಗೆ ಏನಿದೆ ಎಂದು ಮಂಡ್ಯ ಜನರು ತೀರ್ಮಾನ ಮಾಡುತ್ತಾರೆ. ನನಗೆ ಯಾವುದೇ ಆತಂಕ ಇಲ್ಲ' ಎಂದು ಸಿಎಂ ಹೇಳಿಕೊಂಡರು.

ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತಪಡಿಸುವವರು ಮತದಾರರೇ ಅಲ್ಲ. ಮಂಡ್ಯದಲ್ಲಿ ಮಾನಸಿಕವಾಗಿ ತೀರ್ಮಾನ ತೆಗೆದುಕೊಳ್ಳೋದಕ್ಕೆ ಅವರು ಸಿದ್ಧರಿದ್ದಾರೆ. ನಾನು ರಾಮ‌ನಗರದಲ್ಲಿ ಸ್ಪರ್ಧಿಸುವಾಗಲೂ ಕೆಲವರು ವಿರೋಧ ಎಂದು ತೋರಿಸಿದ್ರು. ಆಮೇಲೆ ಏನಾಯ್ತು ನಿಮಗೆ ಗೊತ್ತಿಲ್ವೇ? ಎಂದು ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಸೀಟು ಹಂಚಿಕೆ ಬಗ್ಗೆ ಇನ್ನು ಮೂರು ದಿನಗಳಲ್ಲಿ ತೀರ್ಮಾನವಾಗುತ್ತದೆ. ಎಲ್ಲ ನಾಯಕರು ಕುಳಿತು ಚರ್ಚೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಗ್ಗಂಟಾದ ಮೈಸೂರು ಲೋಕಸಭಾ ಕ್ಷೇತ್ರ:
ದೋಸ್ತಿ ನಾಯಕರ ನಡುವೆ ಮೈಸೂರು ಲೋಕಸಭಾ ಕ್ಷೇತ್ರದ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ. ಮೈಸೂರು ಕ್ಷೇತ್ರ ಪಡೆಯುವ ಬಗ್ಗೆ ದೋಸ್ತಿ ನಾಯಕರಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ.

ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ನಿವಾಸದಲ್ಲಿ ಈ ಬಗ್ಗೆ ಮಹತ್ವದ ಮಾತುಕತೆ ನಡೆಯುತ್ತಿದೆ. ಸಚಿವ ಸಾ.ರಾ. ಮಹೇಶ್ ಹಾಗೂ ಸಿಎಂ ಕುಮಾರಸ್ವಾಮಿ ಜೊತೆ ದೇವೇಗೌಡರ ಚರ್ಚೆ ನಡೆಸುತ್ತಿದ್ದಾರೆ.

ಯಾವುದೇ ಕಾರಣಕ್ಕೂ ಮೈಸೂರು ಕ್ಚೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡದಂತೆ ಸಾ.ರಾ ಮಹೇಶ್ ಪಟ್ಟು ಹಿಡಿದಿದ್ದಾರೆ. ಅಲ್ಲದೆ ಮೈಸೂರು ಕ್ಷೇತ್ರದಿಂದ ನೀವೇ ಸ್ಪರ್ಧಿಸಿ ಎಂದು ದೇವೇಗೌಡರಿಗೆ ಸಚಿವ ಮಹೇಶ್ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಟ್ಟು ಸಡಿಲಿಸದ 'ಕೈ':
ಮೈಸೂರು ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಬಿಟ್ಟು ಕೊಡದಿರಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಹೀಗಾಗಿ ಹೇಗಾದರೂ ‌ಮಾಡಿ ಕಾಂಗ್ರೆಸ್ ನಾಯಕರನ್ನು ಮನವೊಲಿಸಿ, ಮೈಸೂರು ಕ್ಷೇತ್ರ ಪಡೆದುಕೊಳ್ಳುವ ಕುರಿತು ಚರ್ಚೆ ಜೆಡಿಎಸ್‌ ಕೂಡ ಚರ್ಚೆ ನಡೆಸಿದೆ.

ಇದಲ್ಲದೆ ಬೇರೆ ಬೇರೆ ಲೋಕಸಭಾ ಕ್ಷೇತ್ರಗಳ ಬಗ್ಗೆ ಹಾಗೂ ಅಲ್ಲಿ ಯಾವ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು, ಅಭ್ಯರ್ಥಿ ಗೆಲ್ಲಿಸಿಕೊಳ್ಳುವುದಕ್ಕೆ ಏನು ತಂತ್ರ ಮಾಡಿಕೊಳ್ಳಬೇಕು ಎಂಬುದರ ಬಗ್ಗೆಯೂ ಮಹತ್ವದ ಚರ್ಚೆ ನಡೆಯಿತು.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಿಕೊಳ್ಳುವ ಬಗ್ಗೆಯೂ ರಣತಂತ್ರ ಹೆಣೆಯಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ