ಆ್ಯಪ್ನಗರ

ಕಾಂಗ್ರೆಸ್‌ಗೆ ರಾಷ್ಟ್ರೀಯ ಭದ್ರತೆಗಿಂತಲೂ ಮತ ಬ್ಯಾಂಕ್‌ ಮುಖ್ಯವಾಗಿದೆ: ಶಾ ಕಿಡಿ

ಮತಬ್ಯಾಂಕ್‌ ರಾಜಕಾರಣದಲ್ಲಿಯೇ ಮುಳುಗೆದ್ದಿರುವ ಪಕ್ಷದಿಂದ ಇದಕ್ಕಿಂತಲೂ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗದು. ರಾಷ್ಟ್ರೀಯ ಭದ್ರತೆ ಕಾಪಾಡಲು ವಾಯುಪಡೆ ಕೈಗೊಂಡ ದಿಟ್ಟ ನಿರ್ಧಾರವನ್ನೂ ಪ್ರಶ್ನಿಸುವ ಕಾಂಗ್ರೆಸ್‌ಗೆ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ.

Vijaya Karnataka 24 Mar 2019, 5:00 am
ಹೊಸದಿಲ್ಲಿ: ಕೆಚ್ಚೆದೆಯ ಬಾಲಾಕೋಟ್‌ ವಾಯುದಾಳಿ ಕುರಿತು ಸಂಶಯ ವ್ಯಕ್ತಪಡಿಸಿ ಪಾಕಿಸ್ತಾನದ ಪರ ಕಾಂಗ್ರೆಸ್‌ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್‌ ಪಿತ್ರೋಡಾ ನೀಡಿದ ಹೇಳಿಕೆ ಮುಂದಿಟ್ಟುಕೊಂಡು ಬಿಜೆಪಿ ಶನಿವಾರವೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದೆ. ಮತಬ್ಯಾಂಕ್‌ ರಾಜಕಾರಣದಲ್ಲಿಯೇ ಮುಳುಗೆದ್ದಿರುವ ಪಕ್ಷದಿಂದ ಇದಕ್ಕಿಂತಲೂ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗದು. ರಾಷ್ಟ್ರೀಯ ಭದ್ರತೆ ಕಾಪಾಡಲು ವಾಯುಪಡೆ ಕೈಗೊಂಡ ದಿಟ್ಟ ನಿರ್ಧಾರವನ್ನೂ ಪ್ರಶ್ನಿಸುವ ಕಾಂಗ್ರೆಸ್‌ಗೆ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ.
Vijaya Karnataka Web amith


''ಮತಬ್ಯಾಂಕ್‌ ರಾಜಕಾರಣ ಮಾಡುವಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರು. ಚುನಾವಣಾ ಸಂದರ್ಭದಲ್ಲಿ ಪಿತ್ರೋಡಾರಂತೆ ಅನೇಕ ಕೈ ಪಾಳಯದ ನಾಯಕರಿಂದ ಇಂತಹ ಉದ್ಧಟತನದ ಹೇಳಿಕೆಗಳು ಹೊರಬೀಳುವುದು ಸಾಮಾನ್ಯವಾಗಿವೆ. ನಿಜಕ್ಕೂ ಅವರು ಏನನ್ನು ಹೇಳಲು ಹೊರಟಿದ್ದಾರೆ? ನಮ್ಮ ಯೋಧರ ಸಾಹಸ-ತ್ಯಾಗ-ಬಲಿದಾನವನ್ನು ಅವಮಾನಿಸಿರುವ, ರಾಷ್ಟ್ರೀಯ ಭದ್ರತೆಯನ್ನೂ ಪ್ರಶ್ನಿಸಿರುವ ಅವರ ಹೇಳಿಕೆ ಕುರಿತು ನಿಲುವನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರೇ ಸ್ಪಷ್ಟನೆ ನೀಡಬೇಕು,'' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

''ದೇಶದಲ್ಲಿ ನಡೆಯುವ ಉಗ್ರ ಕೃತ್ಯಗಳಲ್ಲಿ ಪಾಕಿಸ್ತಾನ ಸರಕಾರ, ಅಲ್ಲಿನ ಸೇನೆಯ ಗುಪ್ತಚರ ದಳ ಐಎಸ್‌ಐ ಕೈವಾಡವಿರುವುದು ಇಡೀ ಜಗತ್ತಿಗೇ ಗೊತ್ತಿದೆ. ಆದಾಗ್ಯೂ ಕಾಂಗ್ರೆಸ್‌ ನಾಯಕರಿಗೆ ಅದೇನೋ ಪಾಕಿಸ್ತಾನದ ಮೇಲೆ ಬಲು ಪ್ರೀತಿ. ಅದರಲ್ಲೂ ಚುನಾವಣೆ ಹೊತ್ತಿನಲ್ಲಿ ಇದು ತುಸು ಜಾಸ್ತಿಯೇ ಆಗುತ್ತದೆ. ಏಕೆಂದರೆ ಅದು ಮತಬ್ಯಾಂಕ್‌ ರಾಜಕಾರಣದಲ್ಲಿ ಪಳಗಿರುವ ಪಕ್ಷವಾಗಿದೆ,'' ಎಂದು ಕಿಡಿಕಾರಿದ್ದಾರೆ. ''ಪಿತ್ರೋಡಾ ಅವರ ಹೇಳಿಕೆ ಕುರಿತು ರಾಹುಲ್‌ ಗಾಂಧಿ ಸ್ಪಷ್ಟನೆ ನೀಡಬೇಕು. ಅದುಬಿಟ್ಟು ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿ ತೇಪೆ ಸಾರಿಸುವ ಕೆಲಸ ಮಾಡಬಾರದು,'' ಎಂದು ಶಾ ಹೇಳಿದ್ದಾರೆ.

2008ರ ಮುಂಬಯಿ ದಾಳಿ ಮತ್ತು ಪುಲ್ವಾಮಾ ಉಗ್ರ ದಾಳಿಗೆ ಇಡೀ ಪಾಕಿಸ್ತಾನವನ್ನು ದೂಷಿಸಲಾಗದು. ಅದರಲ್ಲೂ ನಿಜಕ್ಕೂ ಬಾಲಾಕೋಟ್‌ ದಾಳಿ ನಡೆದಿದೆಯೇ? 300 ಉಗ್ರರು ಸತ್ತಿದ್ದಾರೆಯೇ? ಹಾಗಾದರೆ ಈ ಬಗ್ಗೆ ಪುರಾವೆಗಳನ್ನು ಒದಗಿಸಲು ಸರಕಾರವೇಕೆ ಮೀನಾಮೇಷ ಮಾಡುತ್ತಿದೆ ಎಂದು ಸರಕಾರವನ್ನು ಪಿತ್ರೋಡಾ ಪ್ರಶ್ನಿಸಿದ್ದರು. ರಾಹುಲ್‌ ಗಾಂಧಿ ಅವರ ಆಪ್ತ ವಲಯದಲ್ಲಿರುವ ಸ್ಯಾಮ್‌ ಅವರ ಈ ಮಾತುಗಳಿಗೆ ದೇಶಾದ್ಯಂತ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌