ಆ್ಯಪ್ನಗರ

ಮೋದಿ ಕೇಂದ್ರಿತ ಪ್ರಣಾಳಿಕೆ: ಕಾಂಗ್ರೆಸ್‌ ಟೀಕೆ

​​ನಮ್ಮ ಪ್ರಣಾಳಿಕೆಯ ಮುಖಪುಟದಲ್ಲಿ ಜನರ ಗುಂಪು ಕಾಣಬಹುದು. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಒಬ್ಬ ವ್ಯಕ್ತಿಯ ಮುಖವಿದೆ ಎಂದು ಹೋಲಿಕೆಯ ವೈರುಧ್ಯವನ್ನು ಸಾರಿರುವ ಕಾಂಗ್ರೆಸ್‌, ಈ ಪ್ರಣಾಳಿಕೆಯಲ್ಲಿ ಬಿಜೆಪಿ ಹೊಸತೇನನ್ನೂ ಹೇಳಿಲ್ಲ.

Vijaya Karnataka 9 Apr 2019, 5:00 am
ಹೊಸದಿಲ್ಲಿ: ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಬಹುತ್ವಕ್ಕೆ ಅರ್ಥವೇ ಇಲ್ಲ. ಅದರ ಇಡೀ ಕೇಂದ್ರ ಬಿಂದು ಮೋದಿ ಒಬ್ಬರೇ ಆಗಿದ್ದು, ಅದು ಏಕವ್ಯಕ್ತಿ ಪ್ರದರ್ಶನದ ಹುಸಿ ಭರವಸೆಗಳ ಕರಡುಪತ್ರ ಎಂದು ಕಾಂಗ್ರೆಸ್‌ ಅಣಕವಾಡಿದೆ.
Vijaya Karnataka Web 64704-xrhzgnoxag-1501698325


ನಮ್ಮ ಪ್ರಣಾಳಿಕೆಯ ಮುಖಪುಟದಲ್ಲಿ ಜನರ ಗುಂಪು ಕಾಣಬಹುದು. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಒಬ್ಬ ವ್ಯಕ್ತಿಯ ಮುಖವಿದೆ ಎಂದು ಹೋಲಿಕೆಯ ವೈರುಧ್ಯವನ್ನು ಸಾರಿರುವ ಕಾಂಗ್ರೆಸ್‌, ಈ ಪ್ರಣಾಳಿಕೆಯಲ್ಲಿ ಬಿಜೆಪಿ ಹೊಸತೇನನ್ನೂ ಹೇಳಿಲ್ಲ. 2014ರ ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನೇ ಇಲ್ಲಿ ಪುನರಾವರ್ತಿಸಿದೆ ಎಂದು ಸರಣಿ ಟ್ವೀಟ್‌ಗಳ ಮೂಲಕ ಟೀಕಿಸಿದೆ.

'ಒಂದು ದೇಶ, ಒಂದು ತೆರಿಗೆ' ಘೋಷಣೆ ಮಾಡಲಾಯಿತು. ಆದರೆ ಅದನ್ನು 900 ಬಾರಿ ಬದಲಾಯಿತು. ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣ ವಿಷಯದಲ್ಲಿ ನೀಡಿದ್ದ ಆಶ್ವಾಸನೆಗಳು ಕೂಡ ಗಾಳಿಗೋಪುರವಾಗಿಯೇ ಉಳಿದಿವೆ. ಈಡೇರಿಸಲಾಗದ ಭರವಸೆಗಳನ್ನೇ ಈಗ ಪುನರಾವರ್ತಿಸಿರುವ ಬಿಜೆಪಿ, ಪ್ರಣಾಳಿಕೆ ಬದಲಿಗೆ ಕ್ಷಮಾಪಣೆ ಪತ್ರ ಬಿಡುಗಡೆ ಮಾಡಬೇಕಿತ್ತು ಎಂದು ಕಾಂಗ್ರೆಸ್‌ ಹಿರಿಯ ನಾಯಕ ಅಹ್ಮದ್‌ ಪಟೇಲ್‌ ಕುಟುಕಿದ್ದಾರೆ.

-----
ರಾಮ ಮಂದಿರ ವಿಷಯದಲ್ಲಿ ಬಿಜೆಪಿ ನೀಡಿರುವ ಆಶ್ವಾಸನೆಯಲ್ಲಿ ಅಚ್ಚರಿ ಪಡುವ ಸಂಗತಿ ಏನೂ ಇಲ್ಲ. ಕಳೆದ 30 ವರ್ಷಗಳಿಂದಲೂ ಆ ಪಕ್ಷ ಈ ಜುಮ್ಲಾ ಘೋಷಣೆ ಮಾಡುತ್ತಲೇ ಬಂದಿದೆ. ಪ್ರತಿ ಚುನಾವಣೆ ಸಂದರ್ಭ ಬಿಜೆಪಿ ಪ್ರಣಾಳಿಕೆಯಲ್ಲಿ ಮಂದಿರ ನಿರ್ಮಾಣ ಕುರಿತ ಘೋಷಣೆ ಮಿಸ್‌ ಆಗುವುದಿಲ್ಲ. ಈ ಪುನರಾವರ್ತನೆ ಹಿಂದಿನ ಉದ್ದೇಶ ಕೋಮು ವಿಭಜನೆ ಹಾಗೂ ಆ ಮೂಲಕ ಕೆಲವಷ್ಟು ಮತಗಳನ್ನು ಬುಟ್ಟಿಗೆ ಹಾಕುವುದೇ ಆಗಿದೆ. ಆದರೆ, ಈ ಬಾರಿ ಅದರ ಉದ್ದೇಶ ಫಲಿಸುವುದಿಲ್ಲ.
-ಸೀತಾರಾಮ್‌ ಯೆಚೂರಿ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ

2014ರಲ್ಲಿ ನೀಡಿದ್ದ ಆಶ್ವಾಸನೆಗಳ ಗತಿ ಏನಾಯಿತು ಎನ್ನುವುದರ ಮಾಹಿತಿಯೇ ನೀಡದೇ ಹೊಸ ಜುಮ್ಲಾಗಳ ಘೋಷಣೆ ಮಾಡಿದೆ. ನೋಟು ಅಮಾನ್ಯೀಕರಣ ಮಾಡಿದ್ದು ಯಾಕೆ ಎನ್ನುವ ಸತ್ಯ ಹೇಳುವ ಎದೆಗಾರಿಕೆ ಮೋದಿ-ಶಾ ಜೋಡಿಗೆ ಇಲ್ಲ. ಎರಡು ಕೋಟಿ ಉದ್ಯೋಗದ ಕಥೆ ಏನಾಯಿತು? ರೈತರ ಸಂಕಷ್ಟ ಹೆಚ್ಚಲು ಏನು ಕಾರಣ?
-ಅರವಿಂದ್‌ ಕೇಜ್ರಿವಾಲ್‌, ದಿಲ್ಲಿ ಮುಖ್ಯಮಂತ್ರಿ

ಬಿಜೆಪಿ ಪ್ರಣಾಳಿಕೆಯನ್ನು ಸರಿಯಾಗಿ ಓದಿಕೊಳ್ಳುವ ಮೊದಲೇ ಕಾಂಗ್ರೆಸ್‌ ತರಾತುರಿಯ ಟೀಕೆ ಮಾಡಿದೆ. 75 ಗುರಿಗಳ ಪೈಕಿ ಒಂದನ್ನೂ ಅದು ಅರ್ಥ ಮಾಡಿಕೊಂಡಿಲ್ಲ. ಟೀಕೆಗಾಗಿ ಟೀಕೆ ಎನ್ನುವ ಕೆಟ್ಟ ಜಾಯಮಾನಕ್ಕೆ ಶರಣಾಗಿದೆ.
-ನಿರ್ಮಲಾ ಸೀತಾರಾಮನ್‌, ಕೇಂದ್ರ ಸಚಿವೆ


ಬೆಂಕಿ ಜತೆ ಸರಸ ಬೇಡ: ಮೆಹಬೂಬಾ ಎಚ್ಚರಿಕೆ

ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕತೆಯ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 370ನೇ ವಿಧಿಯನ್ನು ತೆಗೆದು ಹಾಕುವ ಕುರಿತು ಬಿಜೆಪಿ ನೀಡಿರುವ ಚುನಾವಣೆ ಭರವಸೆ ಬಗ್ಗೆ ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತೊಮ್ಮೆ ಕಟು ಎಚ್ಚರಿಕೆ ನೀಡಿದ್ದಾರೆ. ''370ನೇ ವಿಧಿಯಿಂದ ಜಮ್ಮು-ಕಾಶ್ಮೀರವನ್ನು ಮುಕ್ತಗೊಳಿಸುವುದಾರೆ, ಇಡೀ ದೇಶದಿಂದಲೇ ಕಣಿವೆ ರಾಜ್ಯವನ್ನು ಮುಕ್ತಗೊಳಿಸಬೇಕಾಗುತ್ತದೆ. ದೇಶದ ಜತೆ ರಾಜ್ಯ ಬೆಸೆದುಕೊಂಡಿರುವುದಕ್ಕೆ 370ನೇ ವಿಧಿಯೇ ಕಾರಣ ಎಂದು ನಾನು ಈ ಹಿಂದೆ ಅನೇಕ ಬಾರಿ ಹೇಳಿದ್ದೇನೆ. ಆದರೂ ನೀವು (ಬಿಜೆಪಿ) ಆ ಬಗ್ಗೆ ತಲೆಕೆಡಿಸಿಕೊಳ್ಳದೇ ಮೂಗಿನ ನೇರಕ್ಕೆ ನಡೆದುಕೊಳ್ಳುತ್ತಿದ್ದೀರಿ. ಪ್ರತ್ಯೇಕ ಸ್ಥಾನಮಾನದ ಸೇತುವೆಯನ್ನು ಧ್ವಂಸಗೊಳಿಸಿದರೆ, ರಾಜ್ಯದ ಮೇಲಿನ ಹಿಡಿತವನ್ನೇ ಭಾರತ ಕಳೆದುಕೊಳ್ಳಬೇಕಾಗುತ್ತದೆ. ಈ ಬೆಂಕಿ ಜತೆಗಿನ ಸರಸವನ್ನು ಇಲ್ಲಿಗೆ ನಿಲ್ಲಿಸಿ,'' ಎಂದು ಮುಫ್ತಿ ತಾಕೀತು ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌