ಆ್ಯಪ್ನಗರ

ದಿಗ್ವಿಜಯ್‌, ಸಿಂಧಿಯಾ ನಾಮಪತ್ರ; ಬಿಸಿಯೇರಿದ ಅಖಾಡ

ಹಿಂದೂ ಫೈರ್‌ಬ್ರಾಂಡ್‌ ನಾಯಕಿ ಪ್ರಜ್ಞಾ ಸಿಂಗ್‌ ಠಾಕೂರ್‌ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗುವ ಮೂಲಕ ಕಾವೇರಿರುವ ಭೋಪಾಲ್‌ ಕ್ಷೇತ್ರದಲ್ಲಿ ದಿಗ್ವಿಜಯ್‌ ಉಮೇದುವಾರಿಕೆ ಸಲ್ಲಿಸಿದರು.

Vijaya Karnataka 21 Apr 2019, 5:00 am
ಹೊಸದಿಲ್ಲಿ: ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್‌ ಸಿಂಗ್‌, ಕೇಂದ್ರದ ಮಾಜಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಕಾಂಗ್ರೆಸ್‌ನ ಹಲವು ಹಿರಿಯ ಮುಖಂಡರು ಶನಿವಾರ ನಾಮಪತ್ರ ಸಲ್ಲಿಸುವ ಮೂಲಕ ಲೋಕಸಮರದ ಅಖಾಡಕ್ಕೆ ಅಧಿಕೃತವಾಗಿ ಧುಮುಕಿದರು.
Vijaya Karnataka Web digvijay sigh


ಹಿಂದೂ ಫೈರ್‌ಬ್ರಾಂಡ್‌ ನಾಯಕಿ ಪ್ರಜ್ಞಾ ಸಿಂಗ್‌ ಠಾಕೂರ್‌ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗುವ ಮೂಲಕ ಕಾವೇರಿರುವ ಭೋಪಾಲ್‌ ಕ್ಷೇತ್ರದಲ್ಲಿ ದಿಗ್ವಿಜಯ್‌ ಉಮೇದುವಾರಿಕೆ ಸಲ್ಲಿಸಿದರು. 1989ರ ಬಳಿಕ ಸತತ ಬಿಜೆಪಿ ಗೆಲುವಿನೊಂದಿಗೆ ಕಮಲ ಪಾಳಯದ ಭದ್ರಕೋಟೆಯಾಗಿ ಮಾರ್ಪಟ್ಟಿರುವ ಭೋಪಾಲ್‌ ಕ್ಷೇತ್ರವನ್ನು ಮರಳಿ ತೆಕ್ಕೆಗೆ ಪಡೆಯಲು ಪಕ್ಷದ ಪ್ರಭಾವಿ ನಾಯಕ ಕಾಂಗ್ರೆಸ್‌ ದಿಗ್ವಿಜಯ್‌ ಸಿಂಗ್‌ ಅವರನ್ನು ಕಾಂಗ್ರೆಸ್‌ ಅಖಾಡಕ್ಕಿಳಿಸಿದೆ. ಕಾಂಗ್ರೆಸ್‌ನ 'ಹಿಂದೂ ಭಯೋತ್ಪಾದನೆ' ಆರೋಪಕ್ಕೆ ತಿರುಗೇಟು ನೀಡಲು 2008ರ ಮಾಲೇಗಾಂವ್‌ ಸ್ಫೋಟದ ಆರೋಪಿಯಾಗಿದ್ದ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರನ್ನು ದಿಗ್ವಿಜಯ್‌ ಎದುರಾಳಿಯಾಗಿ ಬಿಜೆಪಿ ನಿಲ್ಲಿಸಿದೆ.

ತಮ್ಮ ವಂಶಪಾರಂಪರ್ಯದ ಹಿನ್ನೆಲೆಯಲ್ಲಿ 'ಮಹಾರಾಜ' ಎಂತಲೇ ಖ್ಯಾತಿ ಪಡೆದಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಗುಣಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಇದೇ ಕ್ಷೇತ್ರದ ಹಾಲಿ ಸಂಸದರಾಗಿರುವ ಸಿಂಧಿಯಾ ಬಿಜೆಪಿಯ ಕೆ.ಪಿ. ಯಾದವ್‌ ಅವರ ವಿರುದ್ಧ ಕಣಕ್ಕಿಳಿದಿದ್ದಾರೆ. ಶಿವಪುರಿ ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆಗೂ ಮುನ್ನ ಗುಣಾದಿಂದ ಶಿವಪುರಿವರೆಗೂ ಸಿಂಧಿಯಾ ರೋಡ್‌ ಶೋ ನಡೆಸಿದರು. ವಿಶೇಷವಾಗಿ ನಿರ್ಮಿಸಲಾದ ರಥದಲ್ಲಿ ನಡೆದ ಈ ರೋಡ್‌ ಶೋ ವೇಳೆ ಪ್ರಮುಖ ಕಾಂಗ್ರೆಸ್‌ ನಾಯಕರು ಹಾಜರಿದ್ದರು. ಭಾರಿ ಸಂಖ್ಯೆಯ ಬೆಂಬಲಿಗರು ಸಾಥ್‌ ನೀಡಿದರು. ಭೋಪಾಲ್‌ ಮತ್ತು ಗುಣಾ ಕ್ಷೇತ್ರಗಳಿಗೆ ಮೇ 12ರಂದು (ಆರನೇ ಹಂತ) ಮತದಾನ ನಡೆಯಲಿದೆ.

ದಿಲ್ಲಿಯಲ್ಲಿ ಇದುವರೆಗೂ 86 ನಾಮಪತ್ರ: ಮೇ 12ರಂದು ಚುನಾವಣೆ ಎದುರಿಸಲಿರುವ ದಿಲ್ಲಿಯಲ್ಲಿ ಶನಿವಾರ ಒಂದೇ ದಿನ 38 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರೊಂದಿಗೆ ರಾಜಧಾನಿಯಲ್ಲಿ ಇದುವರೆಗೂ ಸಲ್ಲಿಕೆಯಾದ ಒಟ್ಟು ನಾಮಪತ್ರಗಳ ಸಂಖ್ಯೆ 86ಕ್ಕೆ ತಲುಪಿದೆ. ದಿಲ್ಲಿಯಲ್ಲಿ ಒಟ್ಟು 7 ಸ್ಥಾನಗಳಿಗಾಗಿ ಚುನಾವಣೆ ನಡೆಯಲಿದೆ.


ಜಯಂತ್‌ ಅತ್ಯಂತ ಶ್ರೀಮಂತ ಅಭ್ಯರ್ಥಿ

ಕೇಂದ್ರ ವಿಮಾನಯಾನ ಖಾತೆ ಸಹಾಯಕ ಸಚಿವ, ಹಜಾರಿಬಾದ್‌ನ ಬಿಜೆಪಿ ಅಭ್ಯರ್ಥಿ ಜಯಂತ್‌ ಸಿನ್ಹಾ ಅವರು ಜಾರ್ಖಂಡ್‌ನಲ್ಲೇ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಯಶವಂತ್‌ ಸಿನ್ಹಾ ಅವರ ಪುತ್ರರಾಗಿರುವ ಜಯಂತ್‌ ಒಟ್ಟು 76.91 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. 2014ರಲ್ಲೂ ಇದೇ ಕ್ಷೇತ್ರದಿಂದ ಆರಿಸಿ ಬಂದಿದ್ದ ಜಯಂತ್‌, ಆಗ ಸಲ್ಲಿಸಿದ್ದ ಆಸ್ತಿ ವಿವರದಲ್ಲಿ 55 ಕೋಟಿ ರೂ. ಸಂಪತ್ತು ಹೊಂದಿರುವುದಾಗಿ ಘೋಷಿಸಿದ್ದರು. ಜಯಂತ್‌ ಅವರ ಪ್ರತಿಸ್ಪರ್ಧಿ, ಕಾಂಗ್ರೆಸ್‌ನ ಗೋಪಾಲ್‌ ಸಾಹು ಅವರು 33.62 ಕೋಟಿ ರೂ. ಮತ್ತು ಸಿಪಿಐ ಅಭ್ಯರ್ಥಿ ಬುನೇಶ್ವರ್‌ ಮೆಹ್ತಾ 3.89 ಕೋಟಿ ರೂ. ಆಸ್ತಿ ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌