ಶಬರಿಮಲೆ ವಿವಾದವೇ ಪ್ರಚಾರದ ಪ್ರಮುಖ ವಿಷಯವೆಂದ ಕುಮ್ಮನಂ
ಮಿಜೋರಾಂ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್, ಈ ಸಲದ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಶಬರಿಮಲೆ ವಿವಾದವನ್ನು ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.
Vijaya Karnataka 13 Mar 2019, 5:00 am
ತಿರುವನಂತಪುರಂ: ಪ್ರಚಾರದಲ್ಲಿ ಶಬರಿಮಲೆ ವಿವಾದ ಪ್ರಸ್ತಾಪಿಸಿದರೆ ಅದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಕೇರಳ ರಾಜ್ಯ ಮುಖ್ಯ ಚುನಾವಣಾಧಿಕಾರಿ ನೀಡಿರುವ ಎಚ್ಚರಿಕೆಯನ್ನು ಕಡೆಗಣಿಸಿರುವ ಮಿಜೋರಾಂ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್, ಈ ಸಲದ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಶಬರಿಮಲೆ ವಿವಾದವನ್ನು ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ. ''ಶಬರಿಮಲೆ ವಿವಾದದ ಮೂಲ ವಿಷಯ ಸಂಪ್ರದಾಯವನ್ನು ರಕ್ಷಿಸುವುದು ಮತ್ತು ಈ ಬಗ್ಗೆ ಮಾತನಾಡಿದರೆ ಯಾರ ಭಾವನೆಗೂ ನೋವಾಗುವುದಿಲ್ಲ. ಚುನಾವಣೆ ವೇಳೆ ಪ್ರಸ್ತಾಪಿಸುವ ಅನೇಕ ವಿಚಾರಗಳಿವೆ, ಅದರಲ್ಲಿ ಶಬರಿಮಲೆ ಸಹ ಒಂದು,'' ಎಂದು ಅವರು ತಿಳಿಸಿದ್ದಾರೆ. ''ಲಕ್ಷಾಂತರ ಜನ ಶಬರಿಮಲೆ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮುಂದೆ ಬರುತ್ತಿದ್ದಾರೆ. ಹೀಗಿರುವಾಗ ಇದನ್ನು ನಿರ್ಲಕ್ಷ್ಯ ಮಾಡಲಾಗದು. ಆದ್ದರಿಂದ ತಮ್ಮ ತೀರ್ಮಾನ ಪುನರ್ಪರಿಶೀಲಿಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಯವರನ್ನು ಮನವಿ ಮಾಡುತ್ತೇನೆ,'' ಎಂದೂ ತಿಳಿಸಿದ್ದಾರೆ. ಕುಮ್ಮನಂ ಅವರು ತಿರುವನಂತಪುರಂ ಕ್ಷೇತ್ರದಿಂದ ಕಾಂಗ್ರೆಸ್ ಶಶಿ ತರೂರ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಆಯೋಗದ ತೀರ್ಮಾಮವನ್ನು ಕಾಂಗ್ರೆಸ್ ಸಹ ವಿರೋಧಿಸಿದ್ದರೆ, ಸಿಪಿಐ (ಎಂ) ಬೆಂಬಲಿಸಿದೆ.