ಆ್ಯಪ್ನಗರ

ಉಕ, ವಿಜಯಪುರ, ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರಲ್ಲಿ ಜೆಡಿಎಸ್‌ ಅಷ್ಟಕಷ್ಟೇ, ಆದರೂ ಸ್ಪರ್ಧಿ ತೆನೆ ಹೊತ್ತ ಮಹಿಳೆ!

ಹಾಲಿ ಸಂಸದರಿರುವ ಕ್ಷೇತ್ರ ಬಿಟ್ಟು ಕೊಡುವುದಿಲ್ಲವೆಂದು ಕಾಂಗ್ರೆಸ್‌ ನಾಯಕರು ಹೇಳಿಕೊಂಡು ಬಂದಿದ್ದರು. ಆದರೆ, ಹಾಲಿ ಸಂಸದರಿರುವ ತುಮಕೂರನ್ನು ಕಾಂಗ್ರೆಸ್‌ ಕಳೆದುಕೊಂಡಿದೆ. ಈ ದೃಷ್ಟಿಯಿಂದಲೂ ಜೆಡಿಎಸ್‌ ಮುಂದೆ ಕೈನಾಯಕರು ಬಾಗಿದಂತಾಗಿದೆ.

Vijaya Karnataka 14 Mar 2019, 8:00 am
ಬೆಂಗಳೂರು: ದೋಸ್ತಿ ಪಕ್ಷಗಳ ನಡುವಿನ ಸೀಟು ಹೊಂದಾಣಿಕೆಯಲ್ಲಿ ಜೆಡಿಎಸ್‌ಗೆ ಬಂಪರ್‌ ಲಾಟರಿ ಹೊಡೆದಷ್ಟು ಲಾಭವಾಗಿದೆ. ಅದೇ ಕಾಲಕ್ಕೆ ತಾನು ಪ್ರಬಲ ಹೋರಾಟ ನೀಡುತ್ತಿದ್ದ ಕ್ಷೇತ್ರಗಳನ್ನು ಕಾಂಗ್ರೆಸ್‌ ಕಳೆದುಕೊಂಡಿದೆ.
Vijaya Karnataka Web JDS


'ಬಲವಂತದ ಮೈತ್ರಿ'ಯ ಪರಿಣಾಮವನ್ನು ಪ್ರಾರಂಭದಿಂದಲೂ ಕಾಂಗ್ರೆಸ್‌ ಅನುಭವಿಸುತ್ತ ಬಂದಿದೆ. ಪಾರ್ಲಿಮೆಂಟ್‌ ಎಲೆಕ್ಷನ್‌ ಕ್ಷೇತ್ರ ಹಂಚಿಕೆಯಲ್ಲೂ ಇದು ಮುಂದುವರಿದಿದ್ದು ಜೆಡಿಎಸ್‌ ವರಿಷ್ಠರ ಒತ್ತಡಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಮಣಿದಿದೆ. ಇದರೊಂದಿಗೆ ಸೀಟು ಹೊಂದಾಣಿಕೆ ಹಂತದಲ್ಲೆ ಕಾಂಗ್ರೆಸ್‌ಗೆ ಸ್ಪಷ್ಟ ಹಿನ್ನಡೆಯಾದಂತಾಗಿದೆ.

ಉತ್ತರ ಕನ್ನಡ, ವಿಜಯಪುರ, ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರಿನಲ್ಲಿ ಜೆಡಿಎಸ್‌ ನೆಲೆ ಅಷ್ಟಕ್ಕಷ್ಟೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆಯೇ ಪೈಪೋಟಿ ಇರುತ್ತಿತ್ತು. ಜೆಡಿಎಸ್‌ ಈ ಕ್ಷೇತ್ರಗಳಲ್ಲಿ ನೆಪಮಾತ್ರಕ್ಕೆ ಸ್ಪರ್ಧೆ ಮಾಡುತ್ತಿತ್ತು. ಅಂತಹ ಕ್ಷೇತ್ರಗಳನ್ನೇ ಮಿತ್ರಪಕ್ಷಕ್ಕೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್‌ ತನ್ನದೇ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗುವ ಸಂದಿಗ್ಧದಲ್ಲಿದೆ.

ಬಿಜೆಪಿಗೇ ಅನುಕೂಲ?: ಈ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿಯ ಸಂಸದರಿದ್ದಾರೆ. ಆದರೆ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಉತ್ತಮ ಪೈಪೋಟಿ ನೀಡಿದ್ದರು. ಮುಖ್ಯವಾಗಿ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೇರುಮಟ್ಟದ ಸಂಘಟನೆಯಿದೆ. ಜೆಡಿಎಸ್‌ಗೆ ಆ ಕೊರತೆ ಇದೆ. ಈ ಕ್ಷೇತ್ರಗಳಲ್ಲಿ ಜೆಡಿಎಸ್‌ ಮತ ಗಳಿಸಬೇಕಾದರೆ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರೇ ಬೆವರು ಹರಿಸಬೇಕಾಗುತ್ತದೆ. ಇಲ್ಲದಿದ್ದರೆ ಈ ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆಯನ್ನು ಗಂಭೀರವಾಗಿ ಪರಿಗಣಿಸುವುದು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಈ ಮೈತ್ರಿಯಿಂದ ಪರೋಕ್ಷವಾಗಿ ಬಿಜೆಪಿಗೆ ಅನುಕೂಲವಾಗಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ