ಆ್ಯಪ್ನಗರ

ಲೋಕ ಸಮರ 6ನೇ ಹಂತದ ಚುನಾವಣೆ: 6 ಗಂಟೆ ವೇಳೆಗೆ 59.70% ಮತದಾನ

ಅರೆಸೇನಾ ಪಡೆಗಳು ಸೇರಿದಂತೆ ಒಟ್ಟು 60,000 ಭದ್ರತಾ ಸಿಬ್ಬಂದಿಯನ್ನು ದಿಲ್ಲಿಯಾದ್ಯಂತ ನಿಯೋಜಿಸಲಾಗಿದೆ.

Vijaya Karnataka Web 12 May 2019, 8:15 pm
ಹೊಸದಿಲ್ಲಿ: ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನಕ್ಕೆ ತೆರೆ ಬಿದ್ದಿದ್ದು, ಸಂಜೆ 6 ಗಂಟೆಯ ವೇಳೆಗೆ ಒಟ್ಟಾರೆ ಸರಾಸರಿ 59.70% ಮತದಾನ ದಾಖಲಾಗಿದೆ. ಹರ್ಯಾಣದಲ್ಲಿ ರಾತ್ರಿ 8ರ ವರೆಗೂ ಮತದಾನ ಮುಂದುವರಿದಿದ್ದು ಶೇ 65.39ರಷ್ಟು ಮತದಾನ ನಡೆದಿದೆ.
Vijaya Karnataka Web ಗೌತಮ್‌ ಗಂಭೀರ್ ಮತದಾನ
ಗೌತಮ್‌ ಗಂಭೀರ್ ಮತದಾನ


ಇಂದು 7 ರಾಜ್ಯಗಳ 59 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಿತು. ಸುಮಾರು 10 ಕೋಟಿ ಮತದಾರರು 979 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಿದರು.

ಆರನೇ ಹಂತದ ಚುನಾವಣೆಯಲ್ಲಿ ಸಂಜೆ 6 ಗಂಟೆ ವೇಳೆಗೆ ಪಶ್ಚಿಮ ಬಂಗಾಳದಲ್ಲಿ 80.13%, ದಿಲ್ಲಿ-55.4%, ಹರ್ಯಾಣ- 62.14%, ಉತ್ತರ ಪ್ರದೇಶ- 50.82%, ಬಿಹಾರ- 55.04%, ಜಾರ್ಖಂಡ್- 64.46%, ಮಧ್ಯಪ್ರದೇಶ- 60.12% ಮತದಾನ ನಡೆದಿದೆ.

ಮತದಾನಕ್ಕೂ ಮುನ್ನ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿರುವ ವರದಿಯಾಗಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಜಂಗಢದ ಮಹಾರಾಜ್‌ ಗಂಜ್‌ ಎಂಬಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ. ಸೇತುವೆ ನಿರ್ಮಾಣ ಮಾಡಬೇಕೆಂಬ ಹಲವು ದಶಕಗಳ ಭರವಸೆ ಈಡೇರದ ಕಾರಣ ಮತ ಚಲಾಯಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಮಧ್ಯಾಹ್ನ 2 ಗಂಟೆಯ ವೇಳೆಗೆ ಬಿಹಾರದಲ್ಲಿ ಶೇ. 35.22, ಮಧ್ಯಪ್ರದೇಶದಲ್ಲಿ 424.27, ಉತ್ತರ ಪ್ರದೇಶದಲ್ಲಿ 34.30, ಪಶ್ಚಿಮ ಬಂಗಾಳದಲ್ಲಿ 55.77, ಜಾರ್ಖಂಡ್‌ನಲ್ಲಿ 47.16, ಹೊಸದಿಲ್ಲಿಯಲ್ಲಿ ಶೇಕಡ. 33.16ರಷ್ಟು ಮತದಾನವಾಗಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಐಪಿಎಸ್‌ ಅಧಿಕಾರಿ ಭಾರತಿ ಘೋಷ್‌ ಮೇಲೆ ಹಲ್ಲೆ ನಡೆಸಲು ಯತ್ನಿಸಲಾಗಿದೆ. ಮತಗಟ್ಟೆಯಿಂದ ಅವರನ್ನು ಹೊರ ದಬ್ಬುವ ಪ್ರಯತ್ನವೂ ನಡೆದಿದೆ.


ಮೂರು ಗಂಟೆಯ ಅವಧಿಯಲ್ಲಿ ಜಾರ್ಖಂಡ್‌, ಪಶ್ಚಿಮ ಬಂಗಾಳ, ಮಧ್ಯಪ್ರದೇಶದಲ್ಲಿ ಉತ್ತಮ ಮತದಾನ ಆಗಿದೆ ಎಂದು ಚುನಾವಣೆ ಆಯೋಗದ ಮಾಹಿತಿ ತಿಳಿಸಿವೆ.

ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಶೀಲಾ ದೀಕ್ಷಿತ್‌, ಹೊಸದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌, ಪ್ರಿಯಾಂಕಾ ಗಾಂಧಿ ವಾದ್ರಾ, ರಾಬರ್ಟ್‌ ವಾದ್ರಾ ಸೇರಿದಂತೆ ಹಲವಾರು ಗಣ್ಯರು ಮತ ಚಲಾಯಿಸಿದರು. ಖ್ಯಾತ ಕ್ರಿಕೆಟಿಗ ಕಪಿಲ್‌ ದೇವ್‌, ಪತ್ನಿ ರೋಮಿ, ಪುತ್ರಿ ಆಮಿಯಾ ಜತೆ ಆಗಮಿಸಿ ಮತ ಚಲಾಯಿಸಿದರು.




ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಗೌತಮ್‌ ಗಂಭೀರ್‌ ದಂಪತಿ ಸಮೇತರಾಗಿ ಬಂದ ಮತ ಚಲಾಯಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಗುರುಗ್ರಾಮದಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ವಿರಾಟ್‌ ಕೊಹ್ಲಿ ಮತದಾನ


ಮತದಾನ ಆರಂಭವಾದ ಆರಂಭಿಕ ಎರಡು ಗಂಟೆಗಳಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಬೆಳಗ್ಗೆಯೇ ಬಂದು ಮತ ಚಲಾಯಿಸಲು ಹಲವಾರು ಮಂದಿ ಉತ್ಸುಕರಾಗಿ ಸರತಿ ಸಾಲಿನಲ್ಲಿ ನಿಂತಿದ್ದು ಕಂಡುಬಂದಿತ್ತು.


ಚುನಾವಣೆ ನಡೆಯಲಿರುವ ರಾಜ್ಯಗಳ ಪೈಕಿ ಅತ್ಯಂತ ಹೆಚ್ಚು ಕುತೂಹಲ ಮೂಡಿಸಿರುವುದು ರಾಷ್ಟ್ರ ರಾಜಧಾನಿ ಹೊಸದಿಲ್ಲಿ. ಇಲ್ಲಿನ ಎಲ್ಲಾ 7 ಕ್ಷೇತ್ರಗಳಲ್ಲೂ ಬಿಜೆಪಿ, ಆಡಳಿತಾರೂಢ ಆಪ್‌ ಮತ್ತು ಕಾಂಗ್ರೆಸ್‌ ನಡುವೆ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ.




ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಘಟಾನುಘಟಿ ನಾಯಕರ ಸ್ಪರ್ಧೆ, ದಿಲ್ಲಿಯಲ್ಲಿ ಜಿದ್ದಾಜಿದ್ದಿ ಪೈಪೋಟಿ ಹಿನ್ನೆಲೆಯಲ್ಲಿ 6ನೇ ಹಂತ ಮತಸಮರವು ಸೆಮಿಫೈನಲ್‌ ರೂಪ ಪಡೆದುಕೊಂಡಿದೆ.

ಹೇಮಾ ಮಾಲಿನಿ, ಸನ್ನಿ ಡಿಯೋಲ್‌, ರಾಜ್‌ ಬಬ್ಬರ್‌, ನಗ್ಮಾ ಬಿಜೆಪಿ ಪರ ಪ್ರಚಾರದ ಮೂಲಕ ಚುನಾವಣೆಗೆ ಬಾಲಿವುಡ್‌ ರಂಗು ಮೂಡಿಸಿದ್ದಾರೆ.

ಅರೆಸೇನಾ ಪಡೆಗಳು ಸೇರಿದಂತೆ ಒಟ್ಟು 60,000 ಭದ್ರತಾ ಸಿಬ್ಬಂದಿಯನ್ನು ದಿಲ್ಲಿಯಾದ್ಯಂತ ನಿಯೋಜಿಸಲಾಗಿದೆ.

ಕಣದಲ್ಲಿರುವ ಘಟಾನುಘಟಿಗಳು
ಅಖಿಲೇಶ್‌ ಯಾದವ್‌ (ಎಸ್ಪಿ, ಅಜಂಗಢ)
ದಿಗ್ವಿಜಯ್‌ ಸಿಂಗ್‌ (ಕಾಂಗ್ರೆಸ್‌, ಭೋಪಾಲ್‌)
ಸಾಧ್ವಿ ಪ್ರಜ್ಞಾ ಸಿಂಗ್‌ (ಬಿಜೆಪಿ, ಭೋಪಾಲ್‌)
ಗೌತಮ್‌ ಗಂಭೀರ್‌ (ಬಿಜೆಪಿ, ಪೂರ್ವ ದಿಲ್ಲಿ)
ಆತಿಶಿ, (ಆಪ್‌, ಪೂರ್ವ ದಿಲ್ಲಿ)
ಶೀಲಾ ದೀಕ್ಷಿತ್‌ (ಕಾಂಗ್ರೆಸ್‌, ಈಶಾನ್ಯ ದಿಲ್ಲಿ)
ಮನೋಜ್‌ ತಿವಾರಿ (ಬಿಜೆಪಿ, ಈಶಾನ್ಯ ದಿಲ್ಲಿ)
ಹರ್ಷವರ್ಧನ್‌ (ಬಿಜೆಪಿ, ಚಾಂದಿನಿ ಚೌಕ್‌)
ಮೀನಾಕ್ಷಿ ಲೇಖಿ (ಬಿಜೆಪಿ, ಹೊಸದಿಲ್ಲಿ)
ವಿಜೇಂದರ್‌ ಸಿಂಗ್‌ (ಕಾಂಗ್ರೆಸ್‌, ದಕ್ಷಿಣ ದಿಲ್ಲಿ)
ಹನ್ಸ್‌ ರಾಜ್‌ ಹನ್ಸ್‌ (ಬಿಜೆಪಿ, ವಾಯವ್ಯ ದಿಲ್ಲಿ)
ಪಿಂದರ್‌ ಸಿಂಗ್‌ ಹೂಡಾ (ಕಾಂಗ್ರೆಸ್‌, ಸೋನಿಪತ್‌)
ರೀಟಾ ಬಹುಗುಣ ಜೋಶಿ (ಬಿಜೆಪಿ, ಅಲಹಾಬಾದ್‌)
ಯೋಗೇಶ್‌ ಶುಕ್ಲಾ (ಕಾಂಗ್ರೆಸ್‌, ಅಲಹಾಬಾದ್‌)
ಮೇನಕಾ ಗಾಂಧಿ (ಬಿಜೆಪಿ, ಸುಲ್ತಾನ್‌ಪುರ)
ಸಂಜಯ್‌ ಸಿಂಗ್‌ (ಕಾಂಗ್ರೆಸ್‌, ಸುಲ್ತಾನ್‌ಪುರ)
ರಾಧಾಮೋಹನ್‌ ಸಿಂಗ್‌ (ಬಿಜೆಪಿ, ಪೂರ್ವಿ ಚಂಪಾರಣ್‌)
ಜ್ಯೋತಿರಾದಿತ್ಯ ಸಿಂಧಿಯಾ (ಕಾಂಗ್ರೆಸ್‌, ಗುನಾ)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ