ಆ್ಯಪ್ನಗರ

ಬಂಡಾಯ ಲೆಕ್ಕಿಸದೇ ಬಿಜೆಪಿ ಒಂಬತ್ತು ಸಂಸದರಿಗೆ ಕೊಕ್‌

ವಸುಂಧರಾ ರಾಜೇ ವಿರೋಧದ ನಡುವೆಯೂ ರಾಜಸಮಂದ್‌ ಕ್ಷೇತ್ರಕ್ಕೆ ಜೈಪುರ ರಾಜಮನೆತನದ ದಿಯಾ ಕುಮಾರಿ ಅವರನ್ನು ಪಕ್ಷ ಅಖಾಡಕ್ಕಿಳಿಸಿದೆ. ದಿಯಾ ಪ್ರವೇಶದೊಂದಿಗೆ ರಾಜಸಮಂದ್‌ ಕ್ಷೇತ್ರದ ಹಾಲಿ ಸಂಸದ ಹರಿ ಓಂ ಸಿಂಗ್‌ ರಾಥೋಡ್‌ ಅವರಿಗೆ ಟಿಕೆಟ್‌ ಕೈ ತಪ್ಪಿದೆ.

Vijaya Karnataka 8 Apr 2019, 5:00 am
ಹೊಸದಿಲ್ಲಿ: ಬಂಡಾಯದ ಬಗ್ಗೆ ತಲೆಕೆಡಿಸಿಕೊಳ್ಳದ ಬಿಜೆಪಿ ಹೈಕಮಾಂಡ್‌ ಇನ್ನೂ ಒಂಬತ್ತು ಹಾಲಿ ಸಂಸದರಿಗೆ ಲೋಕಸಭೆ ಚುನಾವಣೆಯ ಟಿಕೆಟ್‌ ನಿರಾಕರಿಸಿದ್ದು, ಹೊಸ ಮುಖಗಳಿಗೆ ಮಣೆ ಹಾಕಿದೆ. ರಾಜಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಏಕಪಕ್ಷೀಯ ನಿರ್ಧಾರಗಳಿಗೆ ಮೂಗುದಾರ ಹಾಕಲು ದಿಟ್ಟ ಕ್ರಮಗಳನ್ನು ಕೈಗೊಂಡಿದೆ.
Vijaya Karnataka Web vasudhara


ವಸುಂಧರಾ ರಾಜೇ ವಿರೋಧದ ನಡುವೆಯೂ ರಾಜಸಮಂದ್‌ ಕ್ಷೇತ್ರಕ್ಕೆ ಜೈಪುರ ರಾಜಮನೆತನದ ದಿಯಾ ಕುಮಾರಿ ಅವರನ್ನು ಪಕ್ಷ ಅಖಾಡಕ್ಕಿಳಿಸಿದೆ. ದಿಯಾ ಪ್ರವೇಶದೊಂದಿಗೆ ರಾಜಸಮಂದ್‌ ಕ್ಷೇತ್ರದ ಹಾಲಿ ಸಂಸದ ಹರಿ ಓಂ ಸಿಂಗ್‌ ರಾಥೋಡ್‌ ಅವರಿಗೆ ಟಿಕೆಟ್‌ ಕೈ ತಪ್ಪಿದೆ. ರಾಥೋಡ್‌ ಅವರ ಆರೋಗ್ಯ ಸರಿಯಿಲ್ಲದೇ ಇರುವುದರಿಂದ ಪಕ್ಷ ಈ ನಿರ್ಧಾರ ಕೈಗೊಂಡಿದೆ ಎಂದೂ ಹೇಳಲಾಗುತ್ತಿದೆ. ಆದರೆ, ಈ ನಿರ್ಧಾರ ರಾಜೇ ಅವರಿಗೆ ಇಷ್ಟವಾಗಿಲ್ಲ. ಇದಾಗಿ ಬಾಂಡ ಕ್ಷೇತ್ರದ ಪಕ್ಷದ ಸಂಸದ ಭೈರೋನ್‌ ಪ್ರಸಾದ್‌ ಮಿಶ್ರಾ ಅವರಿಗೆ ಕೊಕ್‌ ನೀಡಿ, ಆರ್‌.ಕೆ.ಪಟೇಲ್‌ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಶ್ಯಾಮ್‌ ಪ್ರಸಾದ್‌ ಗುಪ್ತಾ ಅವರು ಎಸ್ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ ಜಾತಿ ಸಮೀಕರಣದ ಲೆಕ್ಕಾಚಾರ ಬದಲಾಗಿದ್ದು ಈ ಕ್ರಮ ಕೈಗೊಳ್ಳಲು ಕಾರಣ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿ ಮುಖ್ಯಸ್ಥ ಹನುಮಾನ್‌ ಬೇನಿವಾಲ್‌ ಸ್ಪರ್ಧೆ ವಿಷಯದಲ್ಲಿಯೂ ಹೈಕಮಾಂಡ್‌, ರಾಜೇ ಅವರಿಗೆ ಇರಸುಮುರಸು ತರುವ ನಿರ್ಧಾರವನ್ನೇ ತೆಗೆದುಕೊಂಡಿತ್ತು. ರಾಜೇ ವಿರುದ್ಧ ಬಂಡಾಯ ಸಾರಿದ್ದ ಬೇನಿವಾಲ್‌ ಕಳದ ವರ್ಷ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ತೊರೆದು ಹೊಸ ಪಕ್ಷ ಸ್ಥಾಪಿಸಿದ್ದರು. ಈಗ ನಾಗೋರ್‌ ಕ್ಷೇತ್ರವನ್ನು ಬಿಜೆಪಿ ಅವರಿಗೆ ಬಿಟ್ಟುಕೊಟ್ಟಿದೆ.

ಝಾನ್ಸಿ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಉಮಾ ಭಾರತಿ ಬದಲಿಗೆ ಬೈದ್ಯನಾಥ್‌ ಸಮೂಹ ಸಂಸ್ಥೆಯ ಅನುರಾಗ್‌ ಶರ್ಮಾ ಅವರಿಗೆ ಹಾಗೂ ರಾಂಚಿ ಕ್ಷೇತ್ರದಲ್ಲಿ ರಾಮ್‌ ತಹಲ್‌ ಚೌಧರಿ ಬದಲಿಗೆ ಸಂಜಯ್‌ ಸೇಠ್‌ ಅವರಿಗೆ ಮಣೆ ಹಾಕಲಾಗಿದೆ.

ಜಾರ್ಖಂಡ್‌ ಮಾಜಿ ಸಚಿವ ಹಾಗೂ ಕೊಂಡೆರ್ಮಾ ಕ್ಷೇತ್ರದ ಹಾಲಿ ಸಂಸದ ರವಿಂದ್ರ ರಾಯ್‌ ಬದಲಿಗೆ ಅನ್ನಪೂರ್ಣ ದೇವಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಗ್ವಾಲಿಯರ್‌ನ ಸಂಸದ ನರೇಂದ್ರ ಸಿಂಗ್‌ ತೋಮರ್‌ ಅವರನ್ನು ಪಕ್ಕದ ಮೊರೆನಾ ಕ್ಷೇತ್ರಕ್ಕೆ ಎತ್ತಂಗಡಿ ಮಾಡಲಾಗಿದ್ದು, ವಿವೇಕ್‌ ಸೆಜ್ವಾಕರ್‌ಗೆ ಅವಕಾಶ ನೀಡಲಾಗಿದೆ. ಬರ್ಮೆರ್‌, ಗೋರಖ್‌ಪುರ, ದೇವರಿಯಾ, ಭದೋಹಿ, ಜೌನ್‌ಪುರ, ಘೋಸಿ ಮತ್ತು ಭೋಪಾಲ್‌ನಲ್ಲೂ ಇಂತಹದ್ದೇ ಬದಲಾವಣೆಗಳನ್ನು ಬಿಜೆಪಿ ಪ್ರಕಟಿಸಿದೆ. ಇದರಿಂದ ಬಂಡಾಯದ ಬಿಸಿ ತಟ್ಟಿದ್ದರೂ ಆ ಬಗ್ಗೆ ತಲೆಕೆಡಿಸಿಕೊಳ್ಳದೇ ದೀರ್ಘ ಕಾಲದ ಒಳಿತನ್ನು ಗುರಿಯಾಗಿಟ್ಟುಕೊಂಡು ದಿಟ್ಟ ಹೆಜ್ಜೆ ಇರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌