ಆ್ಯಪ್ನಗರ

ನಾಯಕರ ಮುಜುಗರ ಅರಿತು ಚುನಾವಣಾ ನಿವೃತ್ತಿ ಘೋಷಿಸಿದೆ

'75 ವರ್ಷ ದಾಟಿದವರಿಗೆ ಟಿಕೆಟಿಲ್ಲ' ಎಂಬ ಬಿಜೆಪಿಯ ಅಘೋಷಿತ ನಿಯಮಕ್ಕೆ ಬದ್ಧತೆ ತೋರಿ ಸ್ವತಃ ಚುನಾವಣೆ ಕಣದಿಂದ ದೂರ ಸರಿದಿದ್ದರೂ ಸುಮಿತ್ರಾ ಮಹಾಜನ್‌ ಅವರಿಗೆ ಇನ್ನೊಂದು ಅವಕಾಶ ನೀಡಬೇಕಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.

Vijaya Karnataka 10 May 2019, 5:00 am
ಇಂದೋರ್‌: 'ಮಿನಿ ಮುಂಬಯಿ' ಎಂದೇ ಜನಪ್ರಿಯಗೊಂಡಿರುವ ಮಧ್ಯಪ್ರದೇಶದ ಇಂದೋರ್‌ ಬಿಜೆಪಿ ಹಿರಿಯ ನಾಯಕಿ ಸುಮಿತ್ರಾ ಮಹಾಜನ್‌ ಅವರ ಪಾಲಿಗೆ ರಾಜಕೀಯ ಕರ್ಮಭೂಮಿ. ಕ್ಷೇತ್ರದಲ್ಲಿ ಇವರು 'ತಾಯಿ' ಎಂದೇ ಖ್ಯಾತರು. 1989ರಿಂದ ಇಂದೋರ್‌ ಕ್ಷೇತ್ರವನ್ನು ಪ್ರತಿನಿಧಿಸಿ ಸತತ 8 ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಹೆಗ್ಗಳಿಕೆ ಹೊಂದಿದ್ದಾರೆ ಸುಮಿತ್ರಾ. '75 ವರ್ಷ ದಾಟಿದವರಿಗೆ ಟಿಕೆಟಿಲ್ಲ' ಎಂಬ ಬಿಜೆಪಿಯ ಅಘೋಷಿತ ನಿಯಮಕ್ಕೆ ಬದ್ಧತೆ ತೋರಿ ಸ್ವತಃ ಚುನಾವಣೆ ಕಣದಿಂದ ದೂರ ಸರಿದಿದ್ದರೂ ಅವರಿಗೆ ಇನ್ನೊಂದು ಅವಕಾಶ ನೀಡಬೇಕಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ವಿಜಯ ಕರ್ನಾಟಕ ಸಹೋದರ ಪತ್ರಿಕೆ 'ಎಕನಾಮಿಕ್‌ ಟೈಮ್ಸ್‌'ಗೆ ನೀಡಿದ ಸಂದರ್ಶನದಲ್ಲಿ ಅವರು ತಾವು ಕೈಗೊಂಡ ನಿರ್ಧಾರ, ಮೋದಿ ನಾಯಕತ್ವ ಸೇರಿ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.
Vijaya Karnataka Web sumitra


* ಇಂದೋರ್‌ನಿಂದ ಈ ಬಾರಿ ಬಿಜೆಪಿ ಹೊಸ ಮುಖ ಶಂಕರ್‌ ಲಾಲ್‌ವಾನಿ ಅವರಿಗೆ ಟಿಕೆಟ್‌ ನೀಡಿದೆ, ಗೆಲ್ಲುವರೇ?
ಲಾಲ್‌ವಾನಿ ಎರಡು ಬಾರಿ ಕಾರ್ಪೊರೇಟರ್‌ ಹಾಗೂ ಒಮ್ಮೆ ಇಂದೋರ್‌ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದವರು. ಪಕ್ಷ ಸಂಘಟನೆಯಲ್ಲೂ ಎತ್ತಿದ ಕೈ. ಕ್ಷೇತ್ರದ ಜನತೆಗೆ ಚಿರಪರಿಚಿತರು. ಈ ಎಲ್ಲ ಹಿನ್ನೆಲೆಗಳಿಂದಲೇ ಪಕ್ಷವು ಅವರನ್ನು ಆಯ್ಕೆ ಮಾಡಿದ್ದು, ಇದು ಒಳ್ಳೆಯ ನಿರ್ಧಾರ. ಗೆಲ್ಲುವ ವಿಶ್ವಾಸವಿದೆ.

* ನೀವು ಟಿಕೆಟ್‌ ಸಿಗುವ ವಿಶ್ವಾಸದಲ್ಲಿ ಚುನಾವಣಾ ತಯಾರಿ ನಡೆಸಿದ್ದಿರಿ. ಬೇರೆಯವರಿಗೆ ಟಿಕೆಟ್‌ ನೀಡುವ ಇರಾದೆ ಹೊಂದಿದ್ದ ಬಗ್ಗೆ ಪಕ್ಷದ ವರಿಷ್ಠರು ನಿಮ್ಮೊಂದಿಗೆ ಚರ್ಚಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬಹುದಿತ್ತಲ್ಲವೇ?
ಪಕ್ಷಾಧ್ಯಕ್ಷರೇ ಈ ಬಗ್ಗೆ ನಿರ್ಧಾರ ಪ್ರಕಟಿಸಲಿ ಎಂದು ಸುಮ್ಮನಿದ್ದೆ. ಲೋಕಸಭೆಯ ಸ್ಪೀಕರ್‌ ಎಂಬ ಕಾರಣಕ್ಕೋ ಏನೋ ಅಮಿತ್‌ ಶಾ ನೇರವಾಗಿ ಹೇಳಲು ಹಿಂದೇಟು ಹಾಕಿದರು ಎನಿಸುತ್ತದೆ. ಪÜಕ್ಷದ ನಿರ್ಧಾರ ಸ್ಪಷ್ಟಪಡಿಸುವಂತೆ ಶಾ ಅವರಿಗೆ ಹಲವು ಬಾರಿ ಕರೆ ಮಾಡಿದ್ದೆ. ಆದರೆ ಅವರು ''ತಾಯಿ ಸದ್ಯಕ್ಕೆ ಬಿಟ್ಟುಬಿಡಿ. ನನಗೆ ಸ್ವಲ್ಪ ದಿನ ಸಮಯ ಕೊಡಿ,'' ಎಂದಿದ್ದರು. ನಂತರ ನನ್ನ ಪಾಡಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡೆ ವಿನಾಃ ಜನತೆ ನನ್ನ ಮೇಲೆಯೇ ಹೆಚ್ಚು ವಿಶ್ವಾಸ ಇಟ್ಟುಕೊಂಡಿದ್ದಾರೆಂಬ ಸಂಗತಿಯನ್ನು ಎಲ್ಲೂ ಹೇಳಿಕೊಳ್ಳಲಿಲ್ಲ.

* ರಾಜಕಾರಣಿಗಳು ನಿವೃತ್ತಿ ಬಯಸಲ್ಲ, ನಿಮ್ಮ ವಿಚಾರದಲ್ಲಿ?
ಚುನಾವಣಾ ಕಣದಿಂದ ಹಿಂದೆ ಸರಿದೆ, ಆದರೆ ರಾಜಕೀಯ ನಿವೃತ್ತಿ ಮಾತೇ ಇಲ್ಲ. ಪಕ್ಷದ ಸಭೆಗಳಿಗೆ ಹೋಗುತ್ತೇನೆ. ಶಕ್ತಿ ಇರುವರೆಗೂ ಪಕ್ಷಕ್ಕೆ ಹಾಗೂ ದೇಶಕ್ಕಾಗಿ ದುಡಿಯುತ್ತೇನೆ. ಲೋಕಸಭೆ ಸ್ಪೀಕರ್‌ ಆಗಿ ನನ್ನ ಅವಧಿಯಲ್ಲಿ ಗರಿಷ್ಠ ವಿಧೇಯಕಗಳು ಪಾಸಾಗಿರುವುದಕ್ಕೆ ಖುಷಿ ಇದೆ. ಹಾಗೆಯೇ ಸದನದ ಕಲಾಪ ಸದಸ್ಯರ ಅತಿಯಾದ ಗದ್ದಲಕ್ಕೆ ಸಾಕ್ಷಿಯಾಗಿದ್ದಕ್ಕೆ ಬೇಸರವಿದೆ.

* ರಾಜ್ಯದ ವಿಚಾರಕ್ಕೆ ಬಂದರೆ 2018ರ ವಿಧಾನಸಭೆ ಚುನಾವಣೆಯಲ್ಲಿನ ಸೋಲು ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವುದಿಲ್ಲವೇ?
ಬಿಜೆಪಿ ಒಳ್ಳೆಯ ಪ್ರದರ್ಶನವನ್ನೇ ತೋರಿತು. ನಮ್ಮ ಪಕ್ಷ ಪಡೆದದ್ದು 112 ಸ್ಥಾನ. ನಾಲ್ಕೈದು ಸ್ಥಾನಗಳ ಅಂತರದಲ್ಲಿ ಅಧಿಕಾರ ಕಳೆದುಕೊಂಡೆವು. ಹಾಗಂತ ಇದು ನಮಗೆ ಹಿನ್ನಡೆಯಲ್ಲ. ವಾಸ್ತವದಲ್ಲಿ ಬಿಜೆಪಿ ಮತಗಳಿಕೆ ಪ್ರಮಾಣ ಹೆಚ್ಚಿದ್ದು, ಇದರಿಂದ ಅನುಕೂಲವಾಗಲಿದೆ.

* ಮೋದಿ ಅಲೆ ಅಸೆಂಬ್ಲಿ ಎಲೆಕ್ಷನ್‌ನಲ್ಲಿನ ಹಿನ್ನಡೆಯನ್ನು ಬದಿಗೆ ಸರಿಸುವುದೇ?
ವಿಧಾನಸಭೆ ಚುನಾವಣೆ ಫಲಿತಾಂಶ ಯಾವ ರೀತಿಯಿಂದಲೂ ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರದು. ರಾಷ್ಟ್ರೀಯ ಭದ್ರತೆಯ ಜತೆಗೆ ಸರ್ವರ ಅಭಿವೃದ್ಧಿಗೆ ಮೋದಿ ಸರಕಾರ ಕೈಗೊಂಡ ನಿರ್ಧಾರಗಳು ಪಕ್ಷದ ಕೈಹಿಡಿಯಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ