ಆ್ಯಪ್ನಗರ

ಗಣಿ ಹಗರಣದಿಂದ ಪಟ್ನಾಯಕ್‌ಗೆ ಸಂಕಷ್ಟ

ಸಿಎಂ ನವೀನ್‌ ಪಟ್ನಾಯಕ್‌ ಸರಕಾರ ಗಣಿ ಮಾಫಿಯಾದಲ್ಲಿ ತೊಡಗಿದೆ ಎಂದು ಆಪಾದಿಸಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌, ಮುಂದಿನ ದಿನಗಳಲ್ಲಿ ಪಟ್ನಾಯಕ್‌ ಅವರಿಗೆ ಕಷ್ಟದ ದಿನಗಳು ಎದುರಾಗಲಿವೆ ಎಂದು ಎಚ್ಚರಿಸಿದ್ದಾರೆ.

Vijaya Karnataka 21 Apr 2019, 5:00 am
ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಸರಕಾರದ ಸಾಧನೆಗಳನ್ನೇ ಶ್ರೀರಕ್ಷೆಯಾಗಿಸಿಕೊಂಡು ಬಿಜೆಪಿ ಒಡಿಶಾದ ಎಲ್ಲ 21 ಲೋಕಸಭಾ ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸುವ ಕಾರ್ಯತಂತ್ರದೊಂದಿಗೆ ಬಿಜೆಪಿ ಪ್ರಚಾರ ನಡೆಸುತ್ತಿದೆ. ಕರ್ನಾಟಕದಲ್ಲಿ ಈ ಹಿಂದೆ ಅಕ್ರಮ ಗಣಿಗಾರಿಕೆ ಚುನಾವಣಾ ವಿಷಯವಾಗಿದ್ದಂತೆ ಒಡಿಶಾದಲ್ಲಿಯೂ ಅಕ್ರಮ ಗಣಿಗಾರಿಕೆ ಸದ್ದು ಮಾಡುತ್ತಿದೆ. ಕರ್ನಾಟಕದ ಉಸ್ತುವಾರಿಯಾಗಿದ್ದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಇಲ್ಲಿಯೂ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಸಿಎಂ ನವೀನ್‌ ಪಟ್ನಾಯಕ್‌ ಸರಕಾರ ಗಣಿ ಮಾಫಿಯಾದಲ್ಲಿ ತೊಡಗಿದೆ ಎಂದು ಆಪಾದಿಸಿರುವ ಪ್ರಧಾನ್‌, ಮುಂದಿನ ದಿನಗಳಲ್ಲಿ ಪಟ್ನಾಯಕ್‌ ಅವರಿಗೆ ಕಷ್ಟದ ದಿನಗಳು ಎದುರಾಗಲಿವೆ ಎಂದು ಎಚ್ಚರಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದ ವಿವರ ಇಲ್ಲಿದೆ.
Vijaya Karnataka Web pradhan


* ರಾಜ್ಯದಲ್ಲಿ ಬಿಜೆಪಿಗಿರುವ ಜನಬೆಂಬಲ ಸೀಟುಗಳಾಗಿ ಪರಿವರ್ತನೆಯಾಗುವುದೇ?

ರಾಜ್ಯದಲ್ಲಿ ನವೀನ್‌ ಪಟ್ನಾಯಕ್‌ ಸರಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಇದರಿಂದ ಬಿಜೆಪಿಗೆ ಲಾಭವಾಗಲಿದೆ. ಜತೆಗೆ ಪ್ರಧಾನಿ ಅವರ ಪ್ರಚಾರಾಂದೋಲನ ನಮ್ಮ ಪಕ್ಷಕ್ಕೆ ಹೊಸ ಮತಬ್ಯಾಂಕ್‌ ಸೃಷ್ಟಿಸಲಿದೆ.

* ನಿಮ್ಮ ಪ್ರಕಾರ ಹೊಸ ಮತಬ್ಯಾಂಕ್‌ ಅಂದರೆ ಏನು?


ಪ್ರತಿಪಕ್ಷಗಳಂತೆ ಬಿಜೆಪಿ ಜಾತಿ ರಾಜಕಾರಣ ಮಾಡುವುದಿಲ್ಲ. 'ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌' ನಮ್ಮ ಪಕ್ಷದ ಧ್ಯೇಯ. ಪ್ರಧಾನಿ ಮೋದಿ ಐದು ವರ್ಷ ಕಾಲ ನೀಡಿದ ಭ್ರಷ್ಟಾಚಾರ ಮುಕ್ತ ಶುದ್ಧ ಆಡಳಿತವೇ ಹೊಸ ಮತಬ್ಯಾಂಕ್‌ ಸೃಷ್ಟಿಸಿದ್ದು, ಒಡಿಶಾದಲ್ಲಿ ಬಿಜೆಪಿಗೆ ಇದು ದೊಡ್ಡ ಮಟ್ಟದಲ್ಲಿ ವರದಾನವಾಗಲಿದೆ.

* ಮೋದಿ ಅವರು ಮತ್ತೊಂದು ಅವಧಿಗೆ ಪ್ರಧಾನಿಯಾಗಲ್ಲ ಎಂದ ನವೀನ್‌ ಪಟ್ನಾಯಕ್‌ ಹೇಳ್ತಾರಲ್ಲಾ?

ಗಣಿ ಮಾಫಿಯಾದ ಧಣಿಗಳಿಗೆ ಸರಕಾರಿ ವ್ಯವಸ್ಥೆಯನ್ನೇ ಅಡ ಇಟ್ಟಿರುವ ದಯನೀಯ ಪರಿಸ್ಥಿತಿ ಒಡಿಶಾದಲ್ಲಿದೆ. ಮೋದಿ ಸರಕಾರ ಮತ್ತೆ ಬಂದಲ್ಲಿ ಇಂತಹ ಮಾಫಿಯಾಗಳಿಗೆ ಕಡಿವಾಣ ಬೀಳುವುದು ಶತಃ ಸಿದ್ಧ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಜೈಲಿಗೆ ಹೋಗುವ ಭೀತಿಯಿಂದ ಹತಾಶೆಯಿಂದ ಪಟ್ನಾಯಕ್‌ ಹೀಗೆ ಹೇಳುತ್ತಿದ್ದಾರೆ. * ಮುಖ್ಯಮಂತ್ರಿ ವಿರುದ್ಧ ಗಣಿ ಮಾಫಿಯಾ, ಚಿಟ್‌ಫಂಡ್‌ ಹಗರಣದಂತಹ ಗಂಭೀರ ಆರೋಪಗಳಿದ್ದರೆ ಕೇಂದ್ರ ಸರಕಾರವೇಕೆ ತನಿಖೆಗೆ ಮುಂದಾಗಿಲ್ಲ?

ಚಿಟ್‌ಫಂಡ್‌ ಹಗರಣವೊಂದೇ ಅಲ್ಲ, ಕಲ್ಲಿದ್ದಲು ಗಣಿ ಹಗರಣದಲ್ಲೂ ಸಿಬಿಐ, ಪಟ್ನಾಯಕ್‌ ಅವರನ್ನು ವಿಚಾರಣೆ ನಡೆಸಿದೆ. ಕಾನೂನು ತನ್ನದೇ ಕ್ರಮಗಳನ್ನು ಕೈಗೊಳ್ಳಲಿದೆ. ಒಂದಂತೂ ನಿಜ, ಮುಂದಿನ ದಿನಗಳಲ್ಲಿ ಪಟ್ನಾಯಕ್‌ ಅವರಿಗೆ ಕಷ್ಟದ ದಿನಗಳು ಕಾದಿವೆ.

* ಎನ್‌ಡಿಎಗೆ ಬಹುಮತ ಬರದಿದ್ದರೆ ಬಿಜೆಪಿಯು ಬಿಜೆಡಿ ಜತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲಿದೆಯೇ?

ಪ್ರಧಾನಿ ಮೋದಿ ಆಡಳಿತದ ಬಗ್ಗೆ ದೇಶದ ಜನತೆಯಲ್ಲಿ ವಿಶ್ವಾಸವಿದೆ. 2014ಕ್ಕಿಂತಲೂ ಹೆಚ್ಚಿನ ಸ್ಥಾನಗಳು ಎನ್‌ಡಿಎಗೆ ಬರಲಿವೆ. ಇಲ್ಲಿ ಮೈತ್ರಿ ಪ್ರಶ್ನೆಯೇ ಉದ್ಭವಿಸದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ