ಆ್ಯಪ್ನಗರ

ಮತದಾರರಿಗೆ ಧನ್ಯವಾದ ಅರ್ಪಿಸಿ, ತಾಯಿ ಆಶೀರ್ವಾದ ಪಡೆದ 'ನಮೋ'

ಸಂಜೆ ಅಹಮದಾಬಾದ್‌ಗೆ ಬಂದಿಳಿದ ಮೋದಿ ಅವರನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹಾಗೂ ಸಿಎಂ ವಿಜಯ್‌ ರೂಪಾಣಿ ಬರ ಮಾಡಿಕೊಂಡರು.

Vijaya Karnataka 26 May 2019, 10:18 pm
ಅಹಮದಾಬಾದ್‌ : ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಿದ ಬಳಿಕ ಮೊದಲ ಬಾರಿ ತವರು ರಾಜ್ಯ ಗುಜರಾತ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತದಾರರಿಗೆ ಧನ್ಯವಾದ ಅರ್ಪಿಸಿದರಲ್ಲದೇ, ತಮ್ಮ ತಾಯಿ ಹೀರಾಬೆನ್‌ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
Vijaya Karnataka Web modi2


ಸಂಜೆ ಅಹಮದಾಬಾದ್‌ಗೆ ಬಂದಿಳಿದ ಮೋದಿ ಅವರನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹಾಗೂ ಸಿಎಂ ವಿಜಯ್‌ ರೂಪಾಣಿ ಬರ ಮಾಡಿಕೊಂಡರು. ತವರಿಗೆ ಬಂದಿಳಿದ ತಕ್ಷಣ ಪ್ರಧಾನಿ ಏರ್‌ಪೋರ್ಟ್‌ ಸಮೀಪದಲ್ಲೇ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ಪ್ರತಿಮೆಗೆ ನಮನ ಸಲ್ಲಿಸಿದರು. ಅಲ್ಲಿಂದ ವಿಮಾನ ನಿಲ್ದಾಣದಿಂದ ಅದ್ಧೂರಿ ರೋಡ್‌ಶೋ ಮೂಲಕ ಕರೆದೊಯ್ಯಲಾಯಿತು. ಬಳಿಕ ನಡೆದ ರಾರ‍ಯಲಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ''ನಾನು ಲೋಕಸಭಾ ಚುನಾವಣಾ ಪ್ರಚಾರಕ್ಕೆ ತೆರಳಿದ ಮೂರೇ ದಿನಗಳಲ್ಲಿ ದೇಶದ ಜನರೇ ನಮ್ಮ ಪ್ರಚಾರದ ಮುಂಚೂಣಿ ವಹಿಸಿದ್ದಾರೆ ಎಂಬುದು ಅರಿವಾಯಿತು. ಈ ಬಾರಿ ಎನ್‌ಡಿಎ ಹಾಗೂ ಬಿಜೆಪಿ ಸಿಕ್ಕಿರುವುದು ಆಡಳಿತದ ಪರವಾದ ಮತ. ಇದೊಂದು ಧನಾತ್ಮಕ ಮತ ಎಂಬುದು ವಿಶೇಷ,'' ಎಂದು ಹೆಮ್ಮೆ ವ್ಯಕ್ತಪಡಿಸಿದರು.

''ಆರನೇ ಹಂತದ ಮತದಾನ ಪೂರ್ಣಗೊಂಡಾಗಲೇ ನಮಗೆ 300ಕ್ಕೂ ಅಧಿಕ ಸೀಟುಗಳಲ್ಲಿ ಜಯ ಸಿಗಲಿದೆ ಎಂದಿದ್ದೆ. ಆದರೆ ಕೆಲವರು ಅಗ ನನ್ನನ್ನು ಟೀಕಿಸಿದ್ದರು. ಇಂದು ಎಲ್ಲರಿಗೂ ಫಲಿತಾಂಶ ಉತ್ತರ ಕೊಟ್ಟಿದೆ. ಈ ಬಾರಿ ಮತದಾರರು ನೀಡಿರುವುದು ದಾಖಲೆ ಜನಾದೇಶ,'' ಎಂದು ಪ್ರತಿಪಕ್ಷಗಳಿಗೆ ಟಾಂಗ್‌ ಕೊಟ್ಟರು. ''ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೊ ನೋಡಿದೆ. ಪಶ್ಚಿಮ ಬಂಗಾಳದಲ್ಲಿ ಮಹಿಳೆಯೊಬ್ಬಳು ' ಮೋದಿ , ಮೋದಿ' ಎಂದು ಜೈಕಾರ ಕೂಗುತ್ತಿದ್ದಳು. ಯಾಕೆ ಎಂದು ಆಕೆಯನ್ನು ಪ್ರಶ್ನಿಸಿದಾಗ, 'ಗುಜರಾತಿಗೆ ಭೇಟಿ ನೀಡಿದಾಗ ಅಭಿವೃದ್ಧಿಯನ್ನು ಕಂಡೆ. ಅದು ನನಗೆ ಬಂಗಾಳದಲ್ಲಿಯೂ ಬೇಕು' ಎಂದಳು. ಯಾರಿಗೆ ಮತ ಹಾಕಿರುವೆ ಎಂದು ಪ್ರಶ್ನಿಸಿದಾಗ ಮಾತ್ರ ಆಕೆ ಮೌನಕ್ಕೆ ಶರಣಾದಳು,'' ಎಂದು ಹೇಳುವ ಮೂಲಕ ಬಂಗಾಳದಲ್ಲಿ ದೀದಿ ಆಡಳಿತದಲ್ಲಿನ ದುಸ್ಥಿತಿಯ ಬಗ್ಗೆ ಪರೋಕ್ಷವಾಗಿ ಕುಟುಕಿದರು.

ರಾರ‍ಯಲಿಯಲ್ಲಿ ಮೋದಿ ಭಾಷಣ ಮುಗಿಸಿದ ಬಳಿಕ ಅಲ್ಲಿ ನೆರೆದಿದ್ದ ಕಾರ್ಯಕರ್ತರು, ಬೆಂಬಲಿಗರು ಹಾಗೂ ಜನಸಾಮಾನ್ಯರು ತಮ್ಮ ಮೊಬೈಲ್‌ನಲ್ಲಿನ ಫ್ಲಾಷ್‌ಲೈಟ್‌ ಹಾಕಿ ಕೈ ಬೀಸಿದ್ದು ವಿಶೇಷವಾಗಿತ್ತು. ಜಾಗತಿಕವಾಗಿ ಭಾರತಕ್ಕೆ ಉನ್ನತ ಸ್ಥಾನ ಕೊಡಿಸೋಣ ಎಂಬ ಪ್ರಧಾನಿ ಮಾತಿಗೆ ಸಭಿಕರಿಂದ ಸಿಕ್ಕ ಸಮ್ಮತಿ ಇದಾಗಿತ್ತು.

ಇಂಥ ಪ್ರಚಂಡ ಜಯದ ಜತೆಗೆ ಮಹತ್ತರ ಜವಾಬ್ದಾರಿ ನನ್ನ ಹೆಗಲೇರಿದೆ. ಹಾಗಾಗಿ ನಾನು ಹೆಚ್ಚು ವಿನಮ್ರ ಮತ್ತು ಸರಳವಾಗಿ ಇರಬೇಕಿರುವುದು ಬಹಳ ಮುಖ್ಯ.
- ನರೇಂದ್ರ ಮೋದಿ, ನಿಯೋಜಿತ ಪ್ರಧಾನಿ

ಗುಜರಾತಿನಲ್ಲಿ 26 ಸೀಟುಗಳನ್ನು ಗೆದ್ದ ನಂತರ ನರೇಂದ್ರ ಭಾಯಿ ಇಲ್ಲಿಗೆ ಬಂದಿದ್ದಾರೆ. ಸ್ವಲ್ಪ ಜೋರಾಗಿ ಜೈಕಾರ ಕೂಗಿ, ನಿಮ್ಮ ಧ್ವನಿ ಪಶ್ಚಿಮ ಬಂಗಾಳಕ್ಕೂ ಕೇಳಲಿ.
- ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ ( ಮೋದಿ ಸ್ವಾಗತ ಭಾಷಣ ವೇಳೆ ಹೇಳಿದ್ದು)

ತಾಯಿಯ ಆರ್ಶೀವಾದ

ಸಾರ್ವಜನಿಕ ರಾರ‍ಯಲಿಯಲ್ಲಿ ಭಾಗಿಯಾದ ಬಳಿಕ ಗಾಂಧಿನಗರ ಜಿಲ್ಲೆಯ ಕುದಾಸನ್‌ ಗ್ರಾಮದಲ್ಲಿರುವ ತಮ್ಮ ಸಹೋದರ ಪಂಕಜ್‌ ಮೋದಿ ನಿವಾಸಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ತಾಯಿ ಹೀರಾಬೆನ್‌ (ಹೀರಾಬಾ) ಅವರ ಆರ್ಶೀವಾದ ಪಡೆದರು. ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಾ ಕೆಲ ಸಮಯ ಕಳೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ