ಆ್ಯಪ್ನಗರ

ಚುನಾವಣೆ ಪ್ರಚಾರಕ್ಕೆ ರಕ್ಷಣಾಪಡೆ ಸಿಬ್ಬಂದಿ ಫೋಟೋ ಬಳಸುವಂತಿಲ್ಲ: ಆಯೋಗ ತಾಕೀತು

ಚುನಾವಣೆ ಪ್ರಚಾರದ ಜಾಹೀರಾತುಗಳು ಅಥವಾ ಇತರ ಪ್ರಚಾರ ಸಾಮಗ್ರಿಗಳಲ್ಲಿ ರಕ್ಷಣಾ ಸಿಬ್ಬಂದಿಗಳ ಫೋಟೋ ಪ್ರದರ್ಶಿಸುವುದು ಅಥವಾ ರಕ್ಷಣಾಧಿಕಾರಿಗಳ ಜತೆ ಭಾಗಿಯಾದ ಕಾರ್ಯಕ್ರಮಗಳಲ್ಲಿ ತೆಗೆಸಿಕೊಂಡ ಫೋಟೋ ಪ್ರದರ್ಶಿಸಕೂಡದು ಎಂದು ಆಯೋಗ ನಿರ್ದೇಶನ ನೀಡಿದೆ.

Vijaya Karnataka Web 10 Mar 2019, 3:08 pm

ಹೈಲೈಟ್ಸ್‌:

  • ಮಾರ್ಚ್‌ 9ರ ದಿನಾಂಕದ ಸೂಚನಾ ಪತ್ರದಲ್ಲಿ, ಚುನಾವಣೆ ಆಯೋಗ 2013ರಲ್ಲೇ ಈ ಕುರಿತು ಹೊರಡಿಸಿದ ಅಧಿಸೂಚನೆಯನ್ನು ನೆನಪಿಸಲಾಗಿದೆ.
  • ರಕ್ಷಣಾ ಸಚಿವಾಲಯ ಈ ವಿಚಾರವನ್ನು ಆಯೋಗದ ಗಮನಕ್ಕೆ ತಂದ ಬಳಿಕ ಆಯೋಗ ಈ ನಿರ್ದೇಶನ ಜಾರಿ ಮಾಡಿದೆ.
  • ಕೆಲವು ರಾಜಕೀಯ ಪಕ್ಷಗಳು ತಮ್ಮ ಚುನಾವಣೆ ಪ್ರಚಾರದಲ್ಲಿ ಭದ್ರತಾ ಸಿಬ್ಬಂದಿಯ ಫೋಟೋ ಬಳಸಿಕೊಳ್ಳುತ್ತಿವೆ ಎಂದು ಸಚಿವಾಲಯ ಮಾಹಿತಿ ನೀಡಿತ್ತು.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಹೊಸದಿಲ್ಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ, ರಾಜಕೀಯ ಪಕ್ಷಗಳ ಪ್ರಚಾರ ಸಾಮಗ್ರಿಗಳಲ್ಲಿ ರಕ್ಷಣಾ ಸಿಬ್ಬಂದಿ ಫೋಟೋಗಳನ್ನು ಬಳಸಿಕೊಳ್ಳುವಂತಿಲ್ಲ ಎಂದು ಚುನಾವಣೆ ಆಯೋಗ ತಾಕೀತು ಮಾಡಿದೆ.
ಚುನಾವಣೆ ಪ್ರಚಾರದ ಜಾಹೀರಾತುಗಳು ಅಥವಾ ಇತರ ಪ್ರಚಾರ ಸಾಮಗ್ರಿಗಳಲ್ಲಿ ರಕ್ಷಣಾ ಸಿಬ್ಬಂದಿಗಳ ಫೋಟೋ ಪ್ರದರ್ಶಿಸುವುದು ಅಥವಾ ರಕ್ಷಣಾಧಿಕಾರಿಗಳ ಜತೆ ಭಾಗಿಯಾದ ಕಾರ್ಯಕ್ರಮಗಳಲ್ಲಿ ತೆಗೆಸಿಕೊಂಡ ಫೋಟೋ ಪ್ರದರ್ಶಿಸಕೂಡದು ಎಂದು ಆಯೋಗ ನಿರ್ದೇಶನ ನೀಡಿದೆ.

ರಕ್ಷಣಾ ಸಚಿವಾಲಯ ಈ ವಿಚಾರವನ್ನು ಆಯೋಗದ ಗಮನಕ್ಕೆ ತಂದ ಬಳಿಕ ಆಯೋಗ ಈ ನಿರ್ದೇಶನ ಜಾರಿ ಮಾಡಿದೆ. ಕೆಲವು ರಾಜಕೀಯ ಪಕ್ಷಗಳು ತಮ್ಮ ಚುನಾವಣೆ ಪ್ರಚಾರದಲ್ಲಿ ಭದ್ರತಾ ಸಿಬ್ಬಂದಿಯ ಫೋಟೋ ಬಳಸಿಕೊಳ್ಳುತ್ತಿವೆ ಎಂದು ಸಚಿವಾಲಯ ಮಾಹಿತಿ ನೀಡಿತ್ತು.

ಮಾರ್ಚ್‌ 9ರ ದಿನಾಂಕದ ಸೂಚನಾ ಪತ್ರದಲ್ಲಿ, ಚುನಾವಣೆ ಆಯೋಗ 2013ರಲ್ಲೇ ಈ ಕುರಿತು ಹೊರಡಿಸಿದ ಅಧಿಸೂಚನೆಯನ್ನು ನೆನಪಿಸಲಾಗಿದೆ. 'ಆಧುನಿಕ ಪ್ರಜಾಪ್ರಭುತ್ವದಲ್ಲಿ ಭದ್ರತಾ ಪಡೆಗಳು ರಾಜಕೀಯೇತರ ಹಾಗೂ ಪೂರ್ವಗ್ರಹ ರಹಿತ ಸಂಸ್ಥೆಗಳಾಗಿವೆ. ಹೀಗಾಗಿ ಯಾವುದೇ ರಾಜಕೀಯ ಪಕ್ಷಗಳು ಅಥವಾ ನಾಯಕರು ತಮ್ಮ ಚುನಾವಣೆ ಪ್ರಚಾರದಲ್ಲಿ ಸಶಸ್ತ್ರ ಪಡೆಗಳನ್ನು ಬಳಸಿಕೊಳ್ಳದಂತೆ ಗರಿಷ್ಠ ಎಚ್ಚರವಹಿಸಬೇಕು' ಎಂದು ಆಯೋಗ ಸೂಚಿಸಿದೆ.

ಲೋಕಸಭೆ ಚುನಾವಣೆ 2019 ಕ್ಷಣಗಣನೆ ಆರಂಭ: ಇಂದು ಸಂಜೆ ಕೇಂದ್ರ ಚುನಾವಣೆ ಆಯೋಗ ಸುದ್ದಿಗೋಷ್ಠಿ

ಸೇನಾಪಡೆಗಳ ಮುಖ್ಯಸ್ಥರ ಫೋಟೋಗಳು ಅಥವಾ ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ರಕ್ಷಣಾ ಪಡೆ ಅಧಿಕಾರಿಗಳ ಜತೆ ತೆಗೆಸಿಕೊಂಡ ಭಾವಚಿತ್ರಗಳನ್ನೂ ಪ್ರೊಪಗಾಂಡಾ ಜಾಹೀರಾತು ಅಥವಾ ಚುನಾವಣೆ ಪ್ರಚಾರದಲ್ಲಿ ಬಳಸಿಕೊಳ್ಳಕೂಡದು ಎಂದು ಆಯೋಗ ಸ್ಪಷ್ಟಪಡಿಸಿದೆ.

ಹಾಗಿದ್ದರೂ, ರಾಜಕೀಯ ನಾಯಕರು ತಮ್ಮ ಭಾಷಣಗಳಲ್ಲಿ ಸರ್ಜಿಕಲ್‌ ದಾಳಿಯಂತಹ ವಿಚಾರಗಳನ್ನು ಪ್ರಸ್ತಾಪಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

ದಿಲ್ಲಿಯಲ್ಲಿ ಬಿಜೆಪಿಯದು ಎನ್ನಲಾದ ಒಂದು ಪೋಸ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಜತೆಗೆ ಭಾರತೀಯ ವಾಯುಪಡೆ ಪೈಲಟ್ ವಿಂಗ್ ಕಮಾಂಡರ್‌ ಅಭಿನಂದನ್ ವರ್ಧಮಾನ್ ಫೋಟೋವನ್ನೂ ಬಳಸಿಕೊಳ್ಳಲಾಗಿತ್ತು ಎಂಬ ದೂರಿನ ಹಿನ್ನೆಲೆಯಲ್ಲಿ ಆಯೋಗ ಈ ಸಲಹೆ ನೀಡಿದೆ.

ಚುನಾವಣೆ ದಿನಾಂಕ ಘೋಷಣೆಯಾದ ತಕ್ಷಣ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಅನಂತರ ಇಂತಹ ಯಾವುದೇ ಪ್ರಕರಣ ವರದಿಯಾದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಎಚ್ಚರಿಸಿರುವುದಾಗಿ 'ದಿ ಹಿಂದೂ' ವರದಿ ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ