ಭೋಪಾಲ್/ಹೊಸದಿಲ್ಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆಯನ್ನು 'ದೇಶಭಕ್ತ' ಎಂದು ಕರೆಯುವ ಮೂಲಕ ಭೋಪಾಲ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಸ್ವ ಪಕ್ಷದಿಂದಲೇ ತೀವ್ರ ಖಂಡನೆ ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡು ಕ್ಷಮೆಯಾಚಿಸಿ ವಿವಾದ ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸೇರಿದಂತೆ ಅನೇಕ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಮುಗಿಬಿದ್ದಿದ್ದು, ಇದು ಹಿಂಸಾ ಸಂಸ್ಕೃತಿಯನ್ನು ತೋರಿಸುತ್ತಿದೆ ಎಂದು ವಾಗ್ದಾಳಿ ನಡೆಸಿವೆ.
ಮಧ್ಯಪ್ರದೇಶದ ದೇವಸ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಂದ್ರ ಸೋಲಂಕಿ ಪರ ಅಗರ್ ಮಾಲ್ವಾದಲ್ಲಿ ಗುರುವಾರ ಪ್ರಚಾರ ನಡೆಸಿದ ಪ್ರಜ್ಞಾ ಸಿಂಗ್, ''ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ. ಅವರು ದೇಶಭಕ್ತರಾಗಿಯೇ ಜನರ ಮನದಲ್ಲಿ ಉಳಿಯುತ್ತಾರೆ. ಗೋಡ್ಸೆ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಿದ್ದಾರೆ. ಅವರನ್ನು ಉಗ್ರ ಎಂದು ಕರೆಯುತ್ತಿದ್ದಾರೆ. ಅವರು ಹೀಗೆ ಹೇಳುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಲಿ. ಅಂಥವರಿಗೆ ಈ ಚುನಾವಣೆ ಮೂಲಕ ಉತ್ತರ ನೀಡಲಾಗುತ್ತದೆ,'' ಎಂದು ಹೇಳುವ ಮೂಲಕ 'ಮಕ್ಕಳ್ ನೀದಿ ಮಯ್ಯಂ' ಪಕ್ಷದ ಮುಖ್ಯಸ್ಥ ಕಮಲ್ಹಾಸನ್ ವಿರುದ್ಧ ಕಿಡಿಕಾರಿದ್ದಾರೆ.
ಕಮಲ್ ಹಾಸನ್ ಕೆಲವು ದಿನಗಳ ಹಿಂದಷ್ಟೇ ತಮಿಳುನಾಡಿನ ಚುನಾವಣಾ ರಾರಯಲಿಯಲ್ಲಿ ಗೋಡ್ಸೆಯನ್ನು ಉಲ್ಲೇಖಿಸಿ, ''ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದೂ,'' ಎಂದು ಹೇಳಿಕೆ ನೀಡಿ ಹಲವರ ಆಕ್ರೋಶಕ್ಕೆ ಗುರಿಯಾಗಿದ್ದರು.
ಇತ್ತ ಗೋಡ್ಸೆ ಹೇಳಿಕೆ ವಿಚಾರವಾಗಿ ಚುನಾವಣಾ ಆಯೋಗವು, ಮಧ್ಯಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಯಿಂದ ಶುಕ್ರವಾರ ವರದಿ ಕೇಳಿದೆ.
ಬಿಜೆಪಿ ಖಂಡನೆ
ಮಹಾತ್ಮ ಗಾಂಧಿಯನ್ನು ಕೊಂದ ಹಂತಕನ ವೈಭವೀಕರಣಕ್ಕೆ ಪಕ್ಷವು ಅವಕಾಶ ನೀಡುವುದಿಲ್ಲ ಎಂದು ಹೇಳಿರುವ ಬಿಜೆಪಿಯು ಸಾಧ್ವಿ ಅವರ ಹೇಳಿಕೆಯನ್ನು ಖಂಡಿಸಿದೆ. ''ಪಕ್ಷವು ಇದನ್ನು ಸರ್ವತಾ ಒಪ್ಪುವುದಿಲ್ಲ. ಬಲವಾಗಿ ಖಂಡಿಸುತ್ತದೆ. ವಿವಾದಿತ ಹೇಳಿಕೆ ನೀಡಿದ್ದರ ಬಗ್ಗೆ ಅವರಿಂದ ಸ್ಪಷ್ಟನೆ ಕೋರಲಾಗಿದೆ. ಅವರಿಗೆ ಕ್ಷಮೆಯಾಚಿಸುವಂತೆ ಸೂಚಿಸಲಾಗಿತ್ತು. ರಾಜ್ಯ ಬಿಜೆಪಿ ಘಟಕದ ಮುಂದೆ ಕ್ಷಮೆಯಾಚಿಸಿದ್ದಾರೆ,'' ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ ಹೇಳಿದ್ದಾರೆ.
ಪ್ರಧಾನಿಯೂ ಕ್ಷಮೆಯಾಚಿಸಲಿ: ಕಾಂಗ್ರೆಸ್
''ಸಾಧ್ವಿ ಪ್ರಜ್ಞಾ ಸಿಂಗ್ ಅವರು ಗೋಡ್ಸೆಯನ್ನೂ ದೇಶಭಕ್ತ ಎಂದು ಕರೆಯುತ್ತಾರೆ, 2008ರ ಮುಂಬಯಿ ಉಗ್ರ ದಾಳಿಯಲ್ಲಿ ಹುತಾತ್ಮರಾದ ಮಾಜಿ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರ ಬಲಿದಾನವನ್ನು ಅವಮಾನಿಸುತ್ತಾರೆ. ಅವರ ಹೇಳಿಕೆಗೆ ನಾಚಿಕೆಯಾಗಬೇಕು. ಪ್ರಧಾನಿ ಮೋದಿ ಅವರಿಗೆ ನಿಜವಾದ ಕಳಕಳಿ ಇದ್ದರೆ, ಸಾಧ್ವಿ ಹೇಳಿಕೆಗೆ ಖುದ್ದು ಅವರೂ ಕ್ಷಮೆಯಾಚಿಸಬೇಕು,'' ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಆಗ್ರಹಿಸಿದ್ದಾರೆ.
ಕಮಲ್ ಹಾಸನ್ಗೆ ಚಪ್ಪಲಿ ಎಸೆತ
ಮಕ್ಕಳ್ ನೀದಿ ಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ತಮಿಳುನಾಡಿನ ಮಧುರೈ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಅವರ ಮೇಲೆ ಚಪ್ಪಲಿ ಎಸೆದ ಘಟನೆ ನಡೆದಿದೆ. ಗೋಡ್ಸೆ ಕುರಿತು ನೀಡಿದ ಹೇಳಿಕೆ ಬಳಿಕ ಅವರ ಮೇಲೆ ಈ ದಾಳಿ ನಡೆದಿರುವುದು ಗಮನಾರ್ಹ. ಅದೃಷ್ಟವಶಾತ್ ಚಪ್ಪಲಿ ಅವರಿಗೆ ತಾಗಿಲ್ಲ. ಪ್ರಕರಣ ಸಂಬಂಧ 11 ಮಂದಿ ವಿರುದ್ಧ ದೂರು ದಾಖಲಾಗಿದೆ.