ಆ್ಯಪ್ನಗರ

ರಾಜಕೀಯಕ್ಕೆ ನೆಹರು- ಗಾಂಧಿ ಕುಟುಂಬದ ಮತ್ತೊಂದು ಕುಡಿ

ಅವಂತಿಕಾ ನೆಹರು ರಾಜಕೀಯ ಪ್ರವೇಶ ಇನ್ನೊಂದು ಕಾರಣಕ್ಕೂ ಗಮನ ಸೆಳೆದಿದೆ. ಅವಂತಿಕಾ ತಂದೆ ಅರುಣ್‌ ನೆಹರು ಅವರು ರಾಜೀವ್‌ ಗಾಂಧಿಯವರ ಸೋದರ ಸಂಬಂಧಿ. ಮೂರು ದಶಕಗಳ ಹಿಂದೆ ಮುನಿಸಿಕೊಂಡು ಕಾಂಗ್ರೆಸ್‌ ತೊರೆದಿದ್ದರು.

Agencies 6 May 2019, 7:52 am
ರಾಯ್‌ಬರೇಲಿ: ಉತ್ತರ ಪ್ರದೇಶದ ಚುನಾವಣೆಯ ಕಾವಿನ ನಡುವೆ, ನೆಹರು-ಗಾಂಧಿ ಕುಟುಂಬದ ಮತ್ತೊಂದು ಕುಡಿಯನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸದ್ದಿಲ್ಲದೆ ಪರಿಚಯಿಸಿದ್ದಾರೆ. ಅವರೇ ಅರುಣ್‌ ಗಾಂಧಿಯವರ ಪುತ್ರಿ ಅವಂತಿಕಾ ನೆಹರು.
Vijaya Karnataka Web Priyanka Gandhi


ಅವಂತಿಕಾ ನೆಹರು ರಾಜಕೀಯ ಪ್ರವೇಶ ಇನ್ನೊಂದು ಕಾರಣಕ್ಕೂ ಗಮನ ಸೆಳೆದಿದೆ. ಅವಂತಿಕಾ ತಂದೆ ಅರುಣ್‌ ನೆಹರು ಅವರು ರಾಜೀವ್‌ ಗಾಂಧಿಯವರ ಸೋದರ ಸಂಬಂಧಿ. ಮೂರು ದಶಕಗಳ ಹಿಂದೆ ಮುನಿಸಿಕೊಂಡು ಕಾಂಗ್ರೆಸ್‌ ತೊರೆದಿದ್ದರು.

ತಾಯಿ ಸೋನಿಯಾ ಗಾಂಧಿ ಅವರ ರಾಯ್‌ಬರೇಲಿ ಕ್ಷೇತ್ರದ ಪ್ರಚಾರ ಸಭೆಯೊಂದರಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರಿಯಾಂಕಾ ಅವರು, ಅವಂತಿಕಾ ನೆಹರು ಅವರನ್ನು ಪರಿಚಯಿಸಿದ್ದಾರೆ. ''ಅವಂತಿಕಾ ನೆಹರು ನನ್ನ ಸೋದರಿ. ಮಾಜಿ ಸಂಸದ, ದಿವಂಗತ ಅರುಣ್‌ ನೆಹರು ಅವರ ಪುತ್ರಿ'' ಎಂದು ಪ್ರಿಯಾಂಕಾ ಸಭೆಗೆ ಪರಿಚಯಿಸಿದ್ದಾರೆ.

1980ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾಗಾಂಧಿಯವರು ಆಂಧ್ರಪ್ರದೇಶದ ಮೇಡಕ್‌ ಹಾಗೂ ಉತ್ತರಪ್ರದೇಶದ ರಾಯ್‌ಬರೇಲಿಯಲ್ಲಿ ಗೆದ್ದಿದ್ದರು. ನಂತರ ಅರುಣ್‌ ನೆಹರು ಅವರಿಗಾಗಿ ರಾಯ್‌ಬರೇಲಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಇದಕ್ಕೂ ಮುನ್ನ ಅರುಣ್‌ ಉದ್ಯಮಿಯಾಗಿದ್ದರು. 1980ರಿಂದ 1989ರವರೆಗೆ ಅರುಣ್‌ ಅವರು ಕಾಂಗ್ರೆಸ್‌ನಿಂದ ರಾಯ್‌ಬರೇಲಿ ಸಂಸದರಾಗಿದ್ದರು. ಇಂದಿರಾ ಗಾಂಧಿಯವರ ಹತ್ಯೆಯ ನಂತರ ಅರುಣ್‌ ನೆಹರು ಅವರು ರಾಜೀವ್‌ ಗಾಂಧಿ ನೇತೃತ್ವದ ಸರಕಾರದಲ್ಲಿ ಆಂತರಿಕ ಭದ್ರತೆಯ ಸಚಿವರಾಗಿದ್ದರು. ಬೋಫೋರ್ಸ್‌ ಹಗರಣದ ಬಳಿಕ ರಾಜೀವ್‌ ಗಾಂಧಿ ಹಾಗೂ ಅರುಣ್‌ ನೆಹರು ಅವರ ಸಂಬಂಧ ಹಳಸಿತ್ತು. ಅರುಣ್‌ ನೆಹರು ಕಾಂಗ್ರೆಸ್‌ನಿಂದ ಹೊರ ನಡೆದು ವಿ.ಪಿ. ಸಿಂಗ್‌ ಜತೆ ಕೈಜೋಡಿಸಿದರು. ಜನತಾದಳ ಅಭ್ಯರ್ಥಿಯಾಗಿ 1989ರಲ್ಲಿ ಉತ್ತರ ಪ್ರದೇಶದ ಬಿಲ್ಹೌರ್‌ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದರು.

1999ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಯ್‌ಬರೇಲಿಯಲ್ಲಿ ನೆಹರು ಕುಟುಂಬದ ನಿಷ್ಠಾವಂತ ಸತೀಶ್‌ ಶರ್ಮಾ ವಿರುದ್ಧ ಸೋತಿದ್ದರು. ಆಗ ಶರ್ಮಾ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದ ಪ್ರಿಯಾಂಕಾ ಗಾಂಧಿ, ಅರುಣ್‌ ನೆಹರು ವಿರುದ್ಧ ವಾಗ್ದಾಳಿ ನಡೆಸಿದ್ದರು. ''ನನ್ನ ತಂದೆಯವರ ಸಚಿವ ಸಂಪುಟದಲ್ಲಿದ್ದಾಗ ವಿಶ್ವಾಸ ದ್ರೋಹ ಎಸಗಿದ್ದ ವ್ಯಕ್ತಿ ಇಲ್ಲಿ ಹೇಗೆ ಸ್ಪರ್ಧಿಸುತ್ತಿದ್ದಾರೆ? ಅವರಿಗೆಷ್ಟು ಧೈರ್ಯ?'' ಎಂದು ಗುಡುಗಿದ್ದರು. ಅರುಣ್‌ ನೆಹರು ಚುನಾವಣೆಯಲ್ಲಿ ಸೋತಿದ್ದರು. ಕೆಲ ವರ್ಷಗಳ ನಂತರ ಉಭಯ ಕುಟುಂಬಗಳು ವಿರಸವನ್ನು ಮರೆತು ಒಂದಾಗಿದ್ದವು. 2013ರಲ್ಲಿ ಅರುಣ್‌ ನೆಹರು ನಿಧನದ ನಂತರ ಅವರ ಚಿತೆಗೆ ಪ್ರಿಯಾಂಕಾ ಗಾಂಧಿಯವರ ಪುತ್ರ ರೆಹಾನ್‌ ಅಗ್ನಿ ಸ್ಪರ್ಶ ಮಾಡಿದ್ದರು.

ಈಗ ರಾಜಕಾರಣದ ಚಕ್ರ ಒಂದು ಸುತ್ತು ಪೂರ್ಣಗೊಳಿಸುತ್ತಿದೆ. ಪ್ರಿಯಾಂಕಾ ಗಾಂಧಿಯವರು ಅವಂತಿಕಾ ನೆಹರು ಅವರನ್ನು ಪರಿಚಯಿಸಿದ್ದಾರೆ. ರಾಯ್‌ಬರೇಲಿಯಲ್ಲಿ ಬಿಜೆಪಿಯು ಕಾಂಗ್ರೆಸ್‌ನ ಮಾಜಿ ಶಾಸಕ ದಿನೇಶ್‌ ಸಿಂಗ್‌ ಅವರನ್ನು ಸೋನಿಯಾ ಗಾಂಧಿ ವಿರುದ್ಧ ಕಣಕ್ಕಿಳಿಸಿದೆ. ಒಂದು ಕಾಲದಲ್ಲಿ ಪ್ರಿಯಾಂಕಾ ಗಾಂಧಿಯವರಿಗೆ ಆಪ್ತರಾಗಿದ್ದ ದಿನೇಶ್‌ ಸಿಂಗ್‌ ಈಗ ಎದುರಾಳಿಯಾಗಿದ್ದಾರೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌