ಆ್ಯಪ್ನಗರ

ಪ್ರಧಾನಿಗೆ ಕೇಳೋದು ಉದ್ಯಮಿಗಳ ಮಾತು ಮಾತ್ರ!

ಕೇರಳದಲ್ಲಿ ಕಾಂಗ್ರೆಸ್‌ ಮತ್ತು ಎಡರಂಗದ ನಡುವೆ ನೇರ ಪೈಪೋಟಿ ಇದ್ದರೂ ರಾಹುಲ್‌, ಬಿಜೆಪಿಯನ್ನು ಟಾರ್ಗೆಟ್‌ ಮಾಡಿ ಹರಿಹಾಯ್ದರು.

Vijaya Karnataka 15 Mar 2019, 5:00 am
ತ್ರಿಶ್ಶೂರ್‌ (ಕೇರಳ): ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಗುರುವಾರ ಕೇರಳದಲ್ಲಿ ಹಲವು ರಾರ‍ಯಲಿಗಳಲ್ಲಿ ಪಾಲ್ಗೊಂಡು, ಕೇಂದ್ರ ಸರಕಾರದ ವಿರುದ್ಧ ಟೀಕೆಗಳ ಸುರಿಮಳೆಗರೆದರು.
Vijaya Karnataka Web rahul


''ರೈತರು ಮತ್ತು ಮೀನುಗಾರರ ಧ್ವನಿ ಎನ್‌ಡಿಎ ಸರಕಾರಕ್ಕೆ ಕೇಳಿಸುವುದಿಲ್ಲ. ಅನಿಲ್‌ ಅಂಬಾನಿ, ನೀರವ್‌ ಮೋದಿ ಅವರಂಥ ಉದ್ಯಮಿಗಳ ಮಾತಿಗೆ ಭಾರಿ ಬೆಲೆ ಇದೆ. ಇವರು ಏನೇ ಕೇಳಿದರೂ ಹತ್ತೇ ಸೆಕೆಂಡಿನಲ್ಲಿ ನಮ್ಮ ಪ್ರಧಾನಿ ಉತ್ತರಿಸುತ್ತಾರೆ. ರೈತರು, ಮೀನುಗಾರರ ರೀತಿ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಇವರು ಘೋಷಣೆ ಕೂಗುವುದಿಲ್ಲ. ಸಣ್ಣದಾಗಿ ಉಸುರಿದರೂ ಸಾಕು, ಸರಕಾರ ಸ್ಪಂದಿಸುತ್ತದೆ,'' ಎಂದು ಮೀನುಗಾರರ ಜತೆಗಿನ ಸಂವಾದದ ವೇಳೆ ಸರಕಾರದ ನಡೆಯನ್ನು ಅಣಕವಾಡಿದರು.

ಕೇರಳದಲ್ಲಿ ಕಾಂಗ್ರೆಸ್‌ ಮತ್ತು ಎಡರಂಗದ ನಡುವೆ ನೇರ ಪೈಪೋಟಿ ಇದ್ದರೂ ರಾಹುಲ್‌, ಬಿಜೆಪಿಯನ್ನು ಟಾರ್ಗೆಟ್‌ ಮಾಡಿ ಹರಿಹಾಯ್ದರು. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಲೆ ಶುರುವಾಗಿದ್ದು, ಕಾಂಗ್ರೆಸ್‌ನ ಹಲವು ಮುಖಂಡರು ಆ ಪಕ್ಷದತ್ತ ಒಲವು ತೋರಿದ್ದಾರೆ. ಇದೆಲ್ಲದರ ಸುಳಿವು ಪಡೆದೇ ಕಾಂಗ್ರೆಸ್‌ ಅಧ್ಯಕ್ಷರು ತಮ್ಮ ವಾಗ್ದಾಳಿಯ ದಿಕ್ಕನ್ನು ಬದಲಿಸಿದರು. ''ನಂಬಿಕೆಗೆ ಅಪಾತ್ರರಾದವರು ಮೋದಿ ಜತೆ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಈ ಬಾರಿ ನಿಜವಾದ ಹೋರಾಟ ನಡೆದಿರುವುದು ಕಾಂಗ್ರೆಸ್‌ ವರ್ಸಸ್‌ ಮೋದಿ ನಡುವೆ,'' ಎಂದರು.

''ಅನಿಲ್‌ ಅಂಬಾನಿಯನ್ನು ಅನಿಲ್‌ ಭಾಯ್‌, ನೀರವ್‌ ಮೋದಿಯನ್ನು ನೀರವ್‌ ಭಾಯ್‌ ಹಾಗೂ ಮೆಹುಲ್‌ ಚೋಕ್ಸಿಯನ್ನು ಮೆಹುಲ್‌ ಭಾಯ್‌ ಎಂದು ನಾನು ಕರೆಯುವುದಿಲ್ಲ. ಮೋದಿಯವರಿಗೆ ಮಾತ್ರ ಅಂತಹ ಅಭಿಮಾನ ಉಕ್ಕುತ್ತದೆ,'' ಎಂದು ಛೇಡಿಸಿದ ರಾಹುಲ್‌, ಬ್ಯಾಂಕ್‌ಗಳಿಗೆ ಪಂಗನಾಮ ಹಾಕಿದ ವಿಜಯ್‌ ಮಲ್ಯ ದೇಶ ತೊರೆಯುವ ಮುನ್ನ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಭೇಟಿ ಮಾಡಿದ್ದ ಸುದ್ದಿ ಕುರಿತು ಪ್ರಸ್ತಾಪಿಸಿದರು. ವಂಚಕ ಉದ್ಯಮಿ ಪರಾರಿಯಾಗಲು ಜೇಟ್ಲಿ ನೆರವಾದರು ಎಂದು ಟೀಕಿಸಿದರು.

ಸದ್ಯ 30ರಿಂದ 40 ಜನ ಪ್ರಭಾವಿಗಳು ಮಾತ್ರ ದೇಶದ ಬ್ಯಾಂಕಿ ವ್ಯವಸ್ಥೆಯ ಲಾಭ ಪಡೆಯುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಯುವ ಉದ್ಯಮಿಗಳಿಗೆ ಧಾರಾಳವಾಗಿ ಬ್ಯಾಂಕ್‌ ಸಾಲ ನೀಡಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಮೋದಿ ಸರಕಾರ ರೈತರ ಸಾಲ ಮನ್ನಾ ಮಾಡುವುದನ್ನು ಬಿಟ್ಟು ಅಂಬಾನಿ, ಚೋಕ್ಸಿ ಅವರಂಥ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ಕಳೆದ ಐದು ವರ್ಷಗಳಲ್ಲಿ 15 ಜನ ಶ್ರೀಮಂತರಿಗೆ ನೀಡಿದ್ದ 3.5 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಅನಿಲ್‌ ಅಂಬಾನಿ 45,000 ಕೋಟಿ ರೂ., ನೀರವ್‌ ಮೋದಿ 35,000 ಕೋಟಿ ಮತ್ತು ವಿಜಯ್‌ ಮಲ್ಯ 10,000 ಕೋಟಿ ರೂ. ಬ್ಯಾಂಕ್‌ ಸಾಲ ಪಡೆದಿದ್ದಾರೆ. ಆದರೆ, ಇವರೆಲ್ಲ ಪಡೆದ ಸಾಲಕ್ಕೆ ಪ್ರತಿಯಾಗಿ ಎಷ್ಟು ಉದ್ಯೋಗಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ರಾಹುಲ್‌ ಪ್ರಶ್ನಿಸಿದರು.

ಸಂತ್ರಸ್ತ ಕುಟುಂಬಗಳ ಭೇಟಿ

ಆಡಳಿತಾರೂಢ ಸಿಪಿಐ(ಎಂ) ಕಾರ್ಯಕರ್ತರ ವಿರುದ್ಧದ ರಾಜಕೀಯ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡ ಕಾಸರಗೋಡು ಮತ್ತು ಕಣ್ಣೂರಿನ ಕಾಂಗ್ರೆಸ್‌ ಕಾರ್ಯಕರ್ತರ ಮನೆಗಳಿಗೆ ತೆರಳಿ ಸಂತ್ರಸ್ತರಿಗೆ ರಾಹುಲ್‌ ಸಾಂತ್ವನ ಹೇಳಿದರು. ''ರಾಜಕೀಯ ವೈಷಮ್ಯ ಏನೇ ಇದ್ದರೂ ಕೊಲೆ ಮಾಡುವ ಮಟ್ಟದ ಹೇಯಕೃತ್ಯಕ್ಕೆ ಯಾರೂ ಕೈಹಾಕಬಾರದು. ಈ ಪ್ರಕರಣದಲ್ಲಿ ಕೃತ್ಯ ಎಸಗಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ದಂಡನೆಗೆ ಒಳಪಡಿಸದೇ ಬಿಡುವುದಿಲ್ಲ,'' ಎಂದು ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ