ಆ್ಯಪ್ನಗರ

ಸೋನಿಯಾ ಅವಮಾನಕ್ಕೆ ಸೇಡಿನ ಶಪಥಗೈದು ಜಗನ್‌ ಪುನರುತ್ಥಾನ

ವಿಜಯಲಕ್ಷ್ಮೇ ಅವರು ಸಮರ್ಥನೆ ನೀಡುವ ಮೊದಲೇ ಕುರ್ಚಿಯಿಂದ ಎದ್ದು ಗದರಿಸಿದ್ದರು. ಇದರಿಂದ ಬೇಜಾರಾಗಿ , ತಮಗಾದ ಅವಮಾನವನ್ನು ಸಹಿಸಿಕೊಂಡು ವೈಎಸ್‌ಆರ್‌ ಪತ್ನಿ ಮತ್ತು ಪುತ್ರಿ ಹಿಂದಿರುಗಿದ್ದರು. ಅಂದೇ ಜಗನ್‌ಮೋಹನ್‌ ರೆಡ್ಡಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವ ಶಪಥಗೈದಿದ್ದರು!

Vijaya Karnataka 25 May 2019, 5:00 am
ಹೈದರಾಬಾದ್‌: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾಡಿದ ಅವಮಾನಕ್ಕೆ ಸರಿಯಾಗಿ ಹತ್ತು ವರ್ಷ ಬಳಿಕ ವೈಎಸ್‌ಆರ್‌ ಕಾಂಗ್ರೆಸ್‌ ಪಾರ್ಟಿ ನಾಯಕ ಜಗನ್‌ಮೋಹನ್‌ ರೆಡ್ಡಿ ಪ್ರತಿಕಾರ ತೀರಿಸಿಕೊಂಡಿದ್ದಾರೆ.
Vijaya Karnataka Web jagan

ಆಂಧ್ರಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಡಾ. ವೈ.ಎಸ್‌.ರಾಜಶೇಖರ ರೆಡ್ಡಿ ಅವರು 2009ರ ಸೆಪ್ಟೆಂಬರ್‌ನಲ್ಲಿ ಹೆಲಿಕಾಪ್ಟರ್‌ ಅಪಘಾತದಲ್ಲಿ ಮೃತರಾದ ನಂತರ 2010ರಲ್ಲಿ ಅವರ ಪತ್ನಿ ವಿಜಯಲಕ್ಷ್ಮೇ ಹಾಗೂ ಪುತ್ರಿ ಶರ್ಮಿಳಾ ರೆಡ್ಡಿ ದಿಲ್ಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭೇಟಿಗೆ ತೆರಳಿದ್ದರು. ರಾಜೀವ್‌ ಗಾಂಧಿ ಅವರೊಂದಿಗೆ ಡಾ. ವೈಎಸ್‌ಆರ್‌ ಆಪ್ತವಾಗಿದ್ದ ಕಾರಣ ಸೌಹಾರ್ದಯುತ ಸ್ವಾಗತವನ್ನು ತಾಯಿ ಮತ್ತು ಮಗಳು ಎದುರು ನೋಡುತ್ತಿದ್ದರು.
ಆದರೆ , ಅವರನ್ನು 10-15 ನಿಮಿಷ ಸೋನಿಯಾ ಅಧಿಕೃತ ನಿವಾಸದಲ್ಲಿ ಕಾಯಿಸಿ ನಂತರ ಒಳಬಿಡಲಾಯಿತು. ಕುಶಲೋಪರಿ ಬಳಿಕ ಸೀದಾ ವಿಚಾರಕ್ಕೆ ಬಂದ ಸೋನಿಯಾ ಗಾಂಧಿ ಗಂಭೀರ ಧ್ವನಿಯಲ್ಲಿ,'' ನಿಮ್ಮ ಮಗ ಜಗನ್‌ ನಡೆಸುತ್ತಿರುವ ಒದರ್ಪು ಯಾತ್ರೆಯನ್ನು ಕೂಡಲೇ ನಿಲ್ಲಿಸಲು ಹೇಳಿ,'' ಎಂದು ಒತ್ತಾಯಿಸಿದರು. ವಿಜಯಲಕ್ಷ್ಮೇ ಅವರು ಸಮರ್ಥನೆ ನೀಡುವ ಮೊದಲೇ ಕುರ್ಚಿಯಿಂದ ಎದ್ದು ಗದರಿಸಿದ್ದರು. ಇದರಿಂದ ಬೇಜಾರಾಗಿ , ತಮಗಾದ ಅವಮಾನವನ್ನು ಸಹಿಸಿಕೊಂಡು ವೈಎಸ್‌ಆರ್‌ ಪತ್ನಿ ಮತ್ತು ಪುತ್ರಿ ಹಿಂದಿರುಗಿದ್ದರು.
ಅಂದೇ ಜಗನ್‌ಮೋಹನ್‌ ರೆಡ್ಡಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವ ಶಪಥಗೈದಿದ್ದರು!
ನಂತರ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ 18 ತಿಂಗಳು ಜೈಲುವಾಸ ಅನುಭವಿಸಿ 2013ರ ಸೆಪ್ಟೆಂಬರ್‌ನಲ್ಲಿ ಜಾಮೀನಿನ ಮೇಲೆ ಹೊರಬಂದ ಜಗನ್‌ ತಮ್ಮ ವಿರುದ್ಧ ನಡೆಸಲಾದ ಷಡ್ಯಂತ್ರ ಅರಿತು ಕಾಂಗ್ರೆಸ್‌ ತೊರೆದು ಸ್ವಂತ ಪಕ್ಷ ಸ್ಥಾಪಿಸಿದರು. ತೆಲಂಗಾಣ ವಿಭಜನೆಯಂಥ ಹಲವು ಪ್ರಮುಖ ಬೆಳವಣಿಗೆಗಳ ಬಳಿಕ ತಮ್ಮ ತಂದೆ ಹಿಂದೆ ನಡೆಸಿದ್ದ ಪಾದಯಾತ್ರೆಯಿಂದ ಪ್ರಭಾವಿತರಾಗಿ ಆಂಧ್ರಪ್ರದೇಶದಾದ್ಯಂತ 3600 ಕಿ.ಮೀ. ಪಾದಯಾತ್ರೆ ನಡೆಸಿ ಪಕ್ಷ ಸಂಘಟಿಸಿದರು. 341 ದಿನಗಳಲ್ಲಿ 13 ಜಿಲ್ಲೆಗಳನ್ನು ಸುತ್ತಿದ ಜಗನ್‌ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಕೂಡ ಸ್ವಲ್ಪದರಲ್ಲಿಯೇ ಪಾರಾಗಿದ್ದರು.
ಅವರ ಛಲ, ಸರಳತೆ ಹಾಗೂ ಜನರೊಂದಿಗೆ ಬೆರೆಯುವಿಕೆಗೆ ಮನಸೋತ ಆಂಧ್ರ ಜನರು ಅಭೂತಪೂರ್ವ ಜಯ ತಂದುಕೊಡುವ ಮೂಲಕ ಜಗನ್‌ರನ್ನು ಮುಖ್ಯಮಂತ್ರಿಯಾಗಿಸುತ್ತಿದ್ದಾರೆ. ಆಂಧ್ರದಲ್ಲಿ ಒಂದು ಕಾಲದಲ್ಲಿ ಪ್ರಭಾವಶಾಲಿಯಾಗಿದ್ದ ಕಾಂಗ್ರೆಸ್‌ ಪಕ್ಷವನ್ನು ಕಳೆದ 10 ವರ್ಷಗಳ ಪರಿಶ್ರಮದಿಂದಾಗಿ ಜಗನ್‌ ಇಂದು ಹೇಳಹೆಸರಿಲ್ಲದಂತೆ ಧೂಳಿಪಟವಾಗಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌