ಆ್ಯಪ್ನಗರ

ಬಂಗಾಳದಲ್ಲಿ ಮೋದಿ-ದೀದಿ ಮಾತಿನ ಕದನ

ಬಿಜೆಪಿ ಮಹಾ ಪ್ರಚಾರಾಂದೋಲನದ ಭಾಗವಾಗಿ ಸಿಲಿಗುರಿ ಮತ್ತು ಕೋಲ್ಕೊತಾದಲ್ಲಿ ಬೃಹತ್‌ ರಾರ‍ಯಲಿ ನಡೆಸಿದ ಮೋದಿ, ಮಮತಾ ಬ್ಯಾನರ್ಜಿ ಅವರನ್ನು ರಾಜ್ಯದ ಅಭಿವೃದ್ಧಿ ಪಥದ 'ಸ್ಪೀಡ್‌ ಬ್ರೇಕರ್‌' ಎಂದು ಟೀಕಿಸಿದರು.

Vijaya Karnataka 4 Apr 2019, 5:00 am
ಕೋಲ್ಕೊತಾ: ಲೋಕಸಭಾ ಚುನಾವಣಾ ಕಣದಲ್ಲಿ ನಿರ್ಣಾಯಕ ರಾಜ್ಯವೆನಿಸಿರುವ ಪಶ್ಚಿಮ ಬಂಗಾಳ ಬುಧವಾರ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಹೈವೋಲ್ಟೇಜ್‌ ವಾಕ್ಸಮರಕ್ಕೆ ಸಾಕ್ಷಿಯಾಯಿತು. ಉಭಯ ನಾಯಕರು ಪ್ರಚಾರ ರಾರ‍ಯಲಿಗಳಲ್ಲಿ ಪರಸ್ಪರ ತೀವ್ರ ವಾಗ್ದಾಳಿಗಳ ಮೂಲಕ ಚುನಾವಣಾ ಕಣಕ್ಕೆ ರಂಗೇರಿಸಿದರು.
Vijaya Karnataka Web modi 1


ಬಿಜೆಪಿ ಮಹಾ ಪ್ರಚಾರಾಂದೋಲನದ ಭಾಗವಾಗಿ ಸಿಲಿಗುರಿ ಮತ್ತು ಕೋಲ್ಕೊತಾದಲ್ಲಿ ಬೃಹತ್‌ ರಾರ‍ಯಲಿ ನಡೆಸಿದ ಮೋದಿ, ಮಮತಾ ಬ್ಯಾನರ್ಜಿ ಅವರನ್ನು ರಾಜ್ಯದ ಅಭಿವೃದ್ಧಿ ಪಥದ 'ಸ್ಪೀಡ್‌ ಬ್ರೇಕರ್‌' ಎಂದು ಟೀಕಿಸಿದರು. ಕೂಚ್‌ ಬೆಹರ್‌ನಲ್ಲಿ ನಡೆದ ಟಿಎಂಸಿ ಪ್ರಚಾರ ರಾರ‍ಯಲಿಯಲ್ಲಿ ಇದೇ ಧಾಟಿಯಲ್ಲಿ ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ, ಮೋದಿ ಅವರನ್ನು 'ಎಕ್ಸ್‌ಪೈರಿ ಬಾಬು' ಎಂದು ಟೀಕಿಸಿದರು.

ಪ್ರಧಾನಿ ಮೋದಿ ಅವರಿಗೆ ತಿರುಗೇಟು ನೀಡಲೆಂದೇ ಮಂಗಳವಾರ ನಿಗದಿಯಾಗಿದ್ದ ತಮ್ಮ ಪ್ರಚಾರ ಸಭೆಯನ್ನು ಮಮತಾ ಬುಧವಾರಕ್ಕೆ ಮುಂದೂಡಿದ್ದು ವಿಶೇಷ.

''ಪಶ್ಚಿಮ ಬಂಗಾಳದಲ್ಲಿ ಸ್ಪೀಡ್‌ ಬ್ರೇಕರ್‌ ಇದ್ದಾರೆ. ಅವರು ಮತ್ತ್ಯಾರೂ ಅಲ್ಲ, ದೀದಿ ಎಂಬುದು ನಿಮಗೆಲ್ಲಾ ಗೊತ್ತಿದೆ. ಬಡತನದ ಮೇಲೆ ರಾಜಕಿಯ ಮಾಡುವುದೇ ಅವರ ನೀತಿ. ಹೀಗಾಗಿ ಬಡತನ ಹಾಗೇ ಇರಬೇಕು, ರಾಜ್ಯವು ಅಭಿವೃದ್ಧಿಯಿಂದ ದೂರ ಉಳಿಯಬೇಕೆಂದು ಅವರು ಬಯಸುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಮತ್ತೆ ವೇಗ ಪಡೆದುಕೊಳ್ಳಬೇಕೆಂದರೆ, 'ಸ್ಪೀಡ್‌ ಬ್ರೇಕರ್‌' ತೊಲಗಿಸಬೇಕು,'' ಎಂದು ಮೋದಿ ಹೇಳಿದರು.

ಚಿಟ್‌ ಫಂಡ್‌ ಹಗರಣ, ಆಯುಷ್ಮಾನ್‌ ಭಾರತ ಯೋಜನೆಯಿಂದ ದೂರ ಸರಿದ ಟಿಎಂಸಿ ಸರಕಾರದ ಕ್ರಮ ಸೇರಿದಂತೆ ಹಲವು ವಿಷಯಗಳಲ್ಲಿ ಮಮತಾ ಅವರನ್ನು ಗುರಿಯಾಗಿಸಿ ಮೋದಿ ಗುಡುಗಿದರು.

ಪಾಕಿಸ್ತಾನದ ಬೆಂಬಲಿಗರು: ಕೋಲ್ಕೊತಾದ ಐತಿಹಾಸಿಕ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲೂ ಟಿಎಂಸಿ ಮತ್ತು ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರಿಸಿದರು.

''ಕಾಂಗ್ರೆಸ್‌ ಮತ್ತು ಟಿಎಂಸಿ ಪಾಕ್‌ ಬೆಂಬಲಿಗ ಪಕ್ಷಗಳಾಗಿದ್ದು, ಉಗ್ರರ ವಿರುದ್ಧ ಹೋರಾಡುವ ದೇಶದ ಯೋಧರ ನೈತಿಕ ಸ್ಥೈರ್ಯ ಕುಗ್ಗಿಸಲು ಬಯಸುತ್ತಿವೆ. ಹೀಗಾಗಿಯೇ ಸೇನಾ ಪಡೆಗಳ ಬಗ್ಗೆ ಈ ಪಕ್ಷಗಳ ನಾಯಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ,'' ಎಂದು ಟೀಕಿಸಿದರು.

ಪಾಕಿಸ್ತಾನದಲ್ಲಿ ಇವರು ಹೀರೊಗಳು: ಪಾಕಿಸ್ತಾನದ ಬಾಲಾಕೋಟ್‌ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದಾಗ ಇಸ್ಲಾಮಾಬಾದ್‌ ಮತ್ತು ರಾವಲ್ಪಿಂಡಿಯ ಜನರಿಗೆ ಆಗುವುದಕ್ಕಿಂತಲೂ ಹೆಚ್ಚು ನೋವು ದೀದಿ ಮತ್ತು ಮಹಾಮೈತ್ರಿಕೂಟದ ಪಕ್ಷಗಳಿಗೆ ಆಗಿತ್ತು. ದಾಳಿಗೆ ಇವರ ಪ್ರತಿರೋಧ ಎಷ್ಟು ಜೋರಾಗಿತ್ತೆಂದರೆ, ಇವರೆಲ್ಲರೂ ಪಾಕಿಸ್ತಾನದಲ್ಲಿ ಹೀರೋಗಳಾಗಿ ಬಿಟ್ಟರು,'' ಎಂದರು.


ನೇರ ಚರ್ಚೆಗೆ ದೀದಿ ಸವಾಲು

ಪ್ರಧಾನಿ ಮೋದಿ ಪ.ಬಂಗಾಳ ಸರಕಾರದ ಸಾಧನೆ ಬಗ್ಗೆ ಮೋದಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿರುವ ಮಮತಾ, ಸಾರ್ವಜನಿಕ ಸಭೆ ಅಥವಾ ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ನೇರ ಚರ್ಚೆಗೆ ಬರುವಂತೆ ಪ್ರಧಾನಿಗೆ ಸವಾಲು ಎಸೆದಿದ್ದಾರೆ.


ಚೀನಿ ಭಾಷೆಯಲ್ಲಿ ಮಮತಾ ಪ್ರಚಾರ

ಚೀನಿ ಭಾಷಿಕ ಮತದಾರರನ್ನು ಸೆಳೆಯುವ ಸಲುವಾಗಿ ಮಮತಾ ಚೀನಿ ಭಾಷೆಯಲ್ಲೂ ಪ್ರಚಾರಕ್ಕೆ ಮುಂದಾಗಿದ್ದಾರೆ. ಕೋಲ್ಕೊತಾದ ಹಲವೆಡೆ ಗೋಡೆಗಳ ಮೇಲೆ 'ತೃಣಮೂಲ್‌ ಕಾಂಗ್ರೆಸ್‌ಗೆ ಮತ ನೀಡಿ' ಎಂಬ ಚೀನಿ ಭಾಷೆಯ ಬರಹಗಳು ರಾರಾಜಿಸುತ್ತಿವೆ. ಚೀನಾದ ಮೂಲನಿವಾಸಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಪೂರ್ವ ಕೋಲ್ಕತಾದ ಚೈನಾಟೌನ್‌ನಲ್ಲಿರುವ ತಂಗ್ರಾ ಎಂಬ ಪ್ರದೇಶದಲ್ಲಿ ಈ ಗೋಡೆ ಬರಹಗಳು ಗಮನ ಸೆಳೆಯುತ್ತಿವೆ.

60 ವರ್ಷಗಳ ಬಳಿಕ: ಚೀನಾ ಭಾಷಿಕರು ಇಲ್ಲಿ ವಾಸವಿದ್ದು, ಮತದಾನದ ಹಕ್ಕನ್ನು ಹೊಂದಿದ್ದಾರೆ. ಸುಮಾರು 60 ವರ್ಷಗಳ ಹಿಂದೆ ಎಡರಂಗದ ಪ್ರಾಬಲ್ಯ ಜೋರಾಗಿದ್ದಾಗ ಇಲ್ಲಿನ ಗೋಡೆಗಳ ಮೇಲೆ 'ಚೀನಾ ಅಧ್ಯಕ್ಷ ನಮ್ಮ ಅಧ್ಯಕ್ಷ ' ಎಂಬ ಬರಹಗಳನ್ನು ಚೀನಿ ಭಾಷೆಯಲ್ಲಿ ಬರೆಯಲಾಗಿತ್ತು. ಇದು ಭಾರಿ ವಿವಾದ ಸೃಷ್ಟಿಸಿತ್ತು. ಸುಮಾರು 60 ವರ್ಷಗಳ ಬಳಿಕ ಈಗ ಮತ್ತೆ ಮಮತಾ ಬ್ಯಾನರ್ಜಿ ಮತದಾರರ ಸೆಳೆಯಲು ಚೀನೀ ಭಾಷೆಯನ್ನು ಬಳಸಿಕೊಳ್ಳುತ್ತಿದ್ದಾರೆ.


ಅರುಣಾಚಲ ಪ್ರದೇಶದಲ್ಲಿ ಮೋದಿ ರಾರ‍ಯಲಿಗೂ ಮುನ್ನ ದಿನ ಬಿಜೆಪಿ ಭಾರಿ ಪ್ರಮಾಣದ ಹಣ ಹಂಚಿದೆ. ಪೊಲೀಸರು ದಾಳಿ ನಡೆಸಿದಾಗ 1.8 ಕೋಟಿ ರೂ. ಪತ್ತೆಯಾಗಿದೆ.

-ರಣದೀಪ್‌ ಸಿಂಗ್‌ ಸುರ್ಜೇವಾಲಾ,

ಕಾಂಗ್ರೆಸ್‌ ವಕ್ತಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ