ಆ್ಯಪ್ನಗರ

ದಾವಣಗೆರೆಗೆ ಮಾಜಿ ಸಿಎಂ ಜೆ ಎಚ್ ಪಟೇಲ್ ಅಣ್ಣನ ಪುತ್ರ ಅಭ್ಯರ್ಥಿ?

ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನ ಘೋಷಿತ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ನಿರಾಕರಿಸಿರುವುದರಿಂದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮಂಜಪ್ಪ ಹಾಗೂ ಮಾಜಿ ಸಿಎಂ ಜೆ.ಎಚ್‌.ಪಟೇಲ್‌ ಅವರ ಅಣ್ಣನ ಪುತ್ರ ತೇಜಸ್ವಿ ಪಟೇಲ್‌ ಹೆಸರು ಮುಂಚೂಣಿಗೆ ಬಂದಿದೆ.

Vijaya Karnataka 29 Mar 2019, 5:00 am
ಬೆಂಗಳೂರು: ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನ ಘೋಷಿತ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ನಿರಾಕರಿಸಿರುವುದರಿಂದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮಂಜಪ್ಪ ಹಾಗೂ ಮಾಜಿ ಸಿಎಂ ಜೆ.ಎಚ್‌.ಪಟೇಲ್‌ ಅವರ ಅಣ್ಣನ ಪುತ್ರ ತೇಜಸ್ವಿ ಪಟೇಲ್‌ ಹೆಸರು ಮುಂಚೂಣಿಗೆ ಬಂದಿದೆ.
Vijaya Karnataka Web TEJASWI PATEL


ವಯಸ್ಸಿನ ಕಾರಣ ನೀಡಿರುವ ಶಾಮನೂರು ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಬದಲಾವಣೆ ಸಂಬಂಧ ಕೆಪಿಸಿಸಿ ಕಚೇರಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಗುರುವಾರ ಸಭೆ ನಡೆಸಲಾಯಿತು. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಹಾಗೂ ಇತರ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಯಿತು. ಮಲ್ಲಿಕಾರ್ಜುನ್‌ ಸ್ಪರ್ಧೆಗೆ ಒಲವು ತೋರಿದರೂ ವೈಯಕ್ತಿಕವಾಗಿ ಅವರೇ ಆಸಕ್ತಿ ತೋರಲಿಲ್ಲ. ಹಾಗಾಗಿ ಮಂಜಪ್ಪ ಹೆಸರು ಸೂಚಿಸಲಾಯಿತು ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ನಿಂದ ಈ ಬಾರಿ ಮೈಸೂರು, ಕೊಪ್ಪಳದಲ್ಲಿ ಕುರುಬರಿಗೆ ಟಿಕೆಟ್‌ ನೀಡಲಾಗಿದೆ. ಮಂಜಪ್ಪ ಕೂಡ ಕುರುಬ ಸಮಾಜಕ್ಕೆ ಸೇರಿದವರಾಗಿದ್ದಾರೆ. ಅವರಿಗೂ ಅವಕಾಶ ಕೊಟ್ಟರೆ ಸಮುದಾಯದ ಮೂವರಿಗೆ ಟಿಕೆಟ್‌ ನೀಡಿದಂತಾಗುತ್ತದೆ. ಇದಕ್ಕೆ ಹೈಕಮಾಂಡ್‌ ಸಮ್ಮತಿ ಸಿಗುವುದೂ ಕಷ್ಟವಾಗಬಹುದು ಎಂಬ ಅಭಿಪ್ರಾಯ ಬಂತು. ನಂತರ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಇದೇ ವಿಚಾರವಾಗಿ ಚರ್ಚಿಸಲಾಯಿತು. ಪುನಃ ಕೆಪಿಸಿಸಿ ಕಚೇರಿಯಲ್ಲಿ ಜಿಲ್ಲಾ ಮುಖಂಡರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಯಿತು.

ಕ್ಷೇತ್ರದಲ್ಲಿ ಲಿಂಗಾಯತರಿಗೆ ಟಿಕೆಟ್‌ ನೀಡುವುದೇ ಉತ್ತಮವೆಂಬ ಅಭಿಪ್ರಾಯವೂ ಬಂದದ್ದರಿಂದ ಮಾಜಿ ಸಿಎಂ ಜೆ.ಎಚ್‌.ಪಟೇಲ್‌ ಸಹೋದರ ಪುತ್ರ ತೇಜಸ್ವಿ ಪಟೇಲ್‌ ಅವರನ್ನು ಪರಿಗಣಿಸುವಂತೆ ಸಲಹೆ ಬಂತು. ಸಂಘಟನಾ ಚಟುವಟಿಕೆಯಲ್ಲಿ ತೇಜಸ್ವಿ ಅಷ್ಟೊಂದು ಸಕ್ರಿಯರಾಗಿಲ್ಲದ್ದರಿಂದ ಹಿನ್ನಡೆಯಾಗಬಹುದು ಎಂಬ ಆಕ್ಷೇಪವೂ ವ್ಯಕ್ತವಾಯಿತು. ಅಂತಿಮವಾಗಿ ಮಂಜಪ್ಪ, ತೇಜಸ್ವಿ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡುವ ನಿರ್ಣಯಕ್ಕೆ ಬರಲಾಯಿತು ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ