ಆ್ಯಪ್ನಗರ

ಚುನಾವಣಾ ಪ್ರಚಾರವಲ್ಲ, ತೀರ್ಥಯಾತ್ರೆ

ರಾಷ್ಟ್ರ ರಾಜಧಾನಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷ ಅಮಿತ್‌ ಶಾ ಆಯೋಜಿಸಿದ್ದ ಕೇಂದ್ರ ಸಚಿವ ಸಂಪುಟ ಸದಸ್ಯರಿಗೆ 'ಸ್ವಾಗತ ಹಾಗೂ ಆಭಾರ್‌ ಮಿಲನ್‌' ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರೆಲ್ಲರೂ ಭಾಗವಹಿಸಿದ್ದರು.

Vijaya Karnataka 22 May 2019, 5:00 am
ಹೊಸದಿಲ್ಲಿ: ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟಕ್ಕೆ ಸರಳ ಬಹುಮತ ಕಾಯಂ ಎಂದು ಭವಿಷ್ಯ ನುಡಿದ ಬೆನ್ನಿಗೆ ಬಿಜೆಪಿ ಪಾಳಯದಲ್ಲಿ ಚಿಗುರಿರುವ ಉತ್ಸಾಹಕ್ಕೆ ಮಂಗಳವಾರದ ಸಚಿವ ಸಂಪುಟ ಸಭೆ ಮತ್ತು ಔತಣಕೂಡ ಸಾಕ್ಷಿಯಾಯಿತು.
Vijaya Karnataka Web NDA DINNER (2)


ರಾಷ್ಟ್ರ ರಾಜಧಾನಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷ ಅಮಿತ್‌ ಶಾ ಆಯೋಜಿಸಿದ್ದ ಕೇಂದ್ರ ಸಚಿವ ಸಂಪುಟ ಸದಸ್ಯರಿಗೆ 'ಸ್ವಾಗತ ಹಾಗೂ ಆಭಾರ್‌ ಮಿಲನ್‌' ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರೆಲ್ಲರೂ ಭಾಗವಹಿಸಿದ್ದರು. ಟೀಮ್‌ ಮೋದಿ ಸರಕಾರ್‌ ಪಟ್ಟ ಶ್ರಮಕ್ಕೆ ಮತ್ತು ಕಳೆದ ಐದು ವರ್ಷಗಳ ಸಾಧನೆಗಳಿಗೆ ಅಭಿನಂದನೆ ಎಂದು ಈ ವೇಳೆ ಅಮಿತ್‌ ಶಾ ಹೇಳಿದರು. ಸಚಿರೆಲ್ಲರೂ ಸೇರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು.

ಈ ವೇಳೆ ಮಾತನಾಡಿದ ಪ್ರಧಾನಿ, '' ನಾನು ಹಲವು ಚುನಾವಣೆಗಳನ್ನು ಕಂಡಿದ್ದೇನೆ. ಆದರೆ ಈ ಬಾರಿ ಚುನಾವಣೆ ರಾಜಕೀಯದ ಹೊರತಾಗಿತ್ತು. ಪಕ್ಷ ಮಾತ್ರವಲ್ಲ ಜನಸಾಮಾನ್ಯರು ಕೂಡ ಲೋಕಸಮರದಲ್ಲಿ ನಮಗಾಗಿ ಹೋರಾಟ ನಡೆಸಿದರು. ಈ ಹಿಂದೆ ಪಕ್ಷದ ಪರವಾಗಿ ದೇಶದ ವಿವಿಧ ಕಡೆಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದೇನೆ. ವಿಶೇಷವಾಗಿ ಈ ಬಾರಿ ಪ್ರಚಾರ ವೇಳೆ ನನಗೆ ಒಂದು ತೀರ್ಥಯಾತ್ರೆ ಮಾಡಿದ ಅನುಭವವಾಯಿತು'', ಎಂದು ಸಂತಸ ವ್ಯಕ್ತಪಡಿಸಿದರು.

ದೇಶ ಸೇವೆಗೆ ಅಭಿನಂದನೆ: ಕಳೆದ ಐದು ವರ್ಷಗಳಲ್ಲಿ ದೇಶದ ಅಭಿವೃದ್ಧಿಗಾಗಿ ಕೇಂದ್ರ ಸಚಿವರು ತಮ್ಮ ಸೇವೆ ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ಶ್ರಮವನ್ನು ಗುರುತಿಸಿ ಅಭಿನಂದನೆ ತಿಳಿಸಲು ಆಭಾರ್‌ ಮಿಲನ್‌ ಆಯೋಜಿಸಲಾಗಿತ್ತು ಎಂದು ಸಭೆಯ ಬಗ್ಗೆ ಬಿಜೆಪಿ ನಾಯಕರು ಹೇಳಿದ್ದಾರೆ.

ಮತದಾನೋತ್ತರ ಫಲಿತಾಂಶದ ಭವಿಷ್ಯ ನುಡಿದ 14 ಮತಗಟ್ಟೆ ಸಮೀಕ್ಷೆಗಳ ಪೈಕಿ 12 ಸಮೀಕ್ಷೆಗಳು ಎನ್‌ಡಿಎಗೆ ಬಹುಮತ ಖಚಿತ ಎಂದಿವೆ. ಸುಮಾರು 282 ರಿಂದ 365 ಸೀಟುಗಳಲ್ಲಿ ಎನ್‌ಡಿಎ ಜಯಗಳಿಸಲಿದೆ ಎನ್ನಲಾಗಿದೆ. ಯುಪಿಎಗೆ 122 ಸೀಟುಗಳು ಸಿಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಭಾಗವಹಿಸಿದ್ದ ಪ್ರಮುಖರು
ಜೆಡಿಯು ಅಧ್ಯಕ್ಷ ಹಾಗೂ ಬಿಹಾರ ಸಿಎಂ ನಿತೀಶ್‌ ಕುಮಾರ್‌, ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಪುತ್ರ ಆದಿತ್ಯ ಠಾಕ್ರೆ, ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ರಾಮ್‌ವಿಲಾಸ್‌ ಪಾಸ್ವಾನ್‌, ಶಿರೋಮಣಿ ಅಕಾಲಿ ದಳ ಮಾಜಿ ಅಧ್ಯಕ್ಷ ಪ್ರಕಾಶ್‌ ಸಿಂಗ್‌ ಬಾದಲ್‌, ಅಧ್ಯಕ್ಷ ಸುಖಬೀರ್‌ ಸಿಂಗ್‌ ಬಾದಲ್‌, ತಮಿಳುನಾಡು ಸಿಎಂ ಹಾಗೂ ಎಐಎಡಿಎಂಕೆ ನಾಯಕ ಇ.ಕೆ. ಪಳನಿಸ್ವಾಮಿ, ಅಪ್ನಾ ದಳ ಮುಖ್ಯಸ್ಥೆ ಅನುಪ್ರಿಯಾ ಪಟೇಲ್‌, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ಅಧ್ಯಕ್ಷ ರಾಮದಾಸ್‌ ಅಠಾವಳೆ.

ಗುಜರಾತಿ ಥಾಲಿ ವಿಶೇಷ ಊಟ
ಅಶೋಕ ಹೋಟೆಲ್‌ನಲ್ಲಿ ಸಂಪುಟ ಸಚಿವರು ಹಾಗೂ ಎನ್‌ಡಿಎ ಮೈತ್ರಿಕೂಟದ ನಾಯಕರಿಗೆ ಅಧ್ಯಕ್ಷ ಅಮಿತ್‌ ಶಾ ಆಯೋಜಿಸಿದ್ದ ಔತಣಕೂಟದಲ್ಲಿ 35 ಬಗೆಯ ಜನಪ್ರಿಯ ಖಾದ್ಯಗಳನ್ನು ನೀಡಲಾಗಿತ್ತು.
ಮಹಾರಾಷ್ಟ್ರದ ಜನಪ್ರಿಯ ಖಾದ್ಯ ಪೂರನ್‌ ಪೊಲಿ, ಈಶಾನ್ಯ ರಾಜ್ಯಗಳ ವಿಶೇಷ ಖಾದ್ಯಗಳು, ದಿಲ್ಲಿಯ ಖ್ಯಾತ ಖಾದ್ಯಗಳ ಜತೆಗೆ ಗುಜರಾತಿನ ಥಾಲಿಯನ್ನು ಕೂಡ ನಾಯಕರು ಸೇವಿಸಿದರು ಎಂದು ಮೂಲಗಳು ತಿಳಿಸಿವೆ.

------
ಕೇಂದ್ರ ಸಚಿವ ಸಂಪುಟಕ್ಕೆ (ಟೀಮ್‌ ಮೋದಿ ಸರಕಾರ್‌) ಅಭಿನಂದನೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನವಭಾರತ ನಿರ್ಮಾಣಕ್ಕೆ ನಾವು ಇದೇ ಮಾದರಿಯ ಅಭಿವೃದ್ಧಿ ಗತಿಯನ್ನು ಕಾಯ್ದುಕೊಳ್ಳೋಣ.
- ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ