ಆ್ಯಪ್ನಗರ

ಬಿಜೆಪಿ ಭದ್ರಕೋಟೆ ಬೆಂಗ್ಳೂರು ದಕ್ಷಿಣದಲ್ಲಿ ಕಾಂಗ್ರೆಸ್‌ ಒಗ್ಗಟ್ಟಿನ ಸವಾಲು

ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಒಡೆದ ಮನೆಯಂತಿದ್ದ ಕಾಂಗ್ರೆಸ್‌ನಲ್ಲಿ ಈ ಬಾರಿ ಒಗ್ಗಟ್ಟಿನ ಸೂತ್ರ ಕಾಣಿಸಿಕೊಳ್ಳುತ್ತಿದೆ. ಕ್ಷೇತ್ರ ವ್ಯಾಪ್ತಿಯ ಪ್ರಭಾವಿ ಶಾಸಕರು, ಮುಖಂಡರು ಪರಸ್ಪರ ಕೈಮಿಲಾಯಿಸಲು ಮನಸ್ಸು ಮಾಡಿದ್ದಾರೆ.

Vijaya Karnataka 4 Apr 2019, 9:45 am
ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಒಡೆದ ಮನೆಯಂತಿದ್ದ ಕಾಂಗ್ರೆಸ್‌ನಲ್ಲಿ ಈ ಬಾರಿ ಒಗ್ಗಟ್ಟಿನ ಸೂತ್ರ ಕಾಣಿಸಿಕೊಳ್ಳುತ್ತಿದೆ. ಕ್ಷೇತ್ರ ವ್ಯಾಪ್ತಿಯ ಪ್ರಭಾವಿ ಶಾಸಕರು, ಮುಖಂಡರು ಪರಸ್ಪರ ಕೈಮಿಲಾಯಿಸಲು ಮನಸ್ಸು ಮಾಡಿದ್ದಾರೆ.
Vijaya Karnataka Web JDS_Congress


ಬೆಂಗಳೂರು ಮಹಾನಗರದ ವಿಚಾರಕ್ಕೆ ಬಂದರೆ ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಿಡಿತ ಹೊಂದಿದ್ದಾರೆ. ಅವರು ಬೆಂಗಳೂರು ದಕ್ಷಿಣದ ವ್ಯಾಪ್ತಿಯ ಬಿಟಿಎಂ ಲೇಔಟ್‌ ಮತಕ್ಷೇತ್ರದಿಂದ ಸತತವಾಗಿ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಮತ್ತೊಂದೆಡೆ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅವರೂ ಪ್ರಭಾವಿಯಾಗಿದ್ದಾರೆ. ಆದರೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಈ ಮುಖಂಡರ ನಡುವೆ ಸಮನ್ವಯ ಇರುತ್ತಿರಲಿಲ್ಲ. ಇದು ಕಾಂಗ್ರೆಸ್‌ನ ರಾಜಕೀಯ ವಿರೋಧಿಗಳಿಗೆ ವರದಾನವಾಗಿ ಪರಿಣಮಿಸುತ್ತಿತ್ತು. ಆದರೆ, ಈ ಬಾರಿ ಬೆಂಗಳೂರು ದಕ್ಷಿಣದ ಚಿತ್ರಣವೇ ಬದಲಾಗಿದೆ. ಯುವ ಮುಖಂಡ ತೇಜಸ್ವಿ ಸೂರ್ಯ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಬಿಜೆಪಿ ಈ ನಿರ್ಧಾರ ಕೈಗೊಳ್ಳುವಾಗ ವಿಳಂಬ ಧೋರಣೆ ಅನುಸರಿಸಿತ್ತು. ಇದರ ಮಧ್ಯೆ ಕಾಂಗ್ರೆಸ್‌ನಿಂದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಹರಿಪ್ರಸಾದ್‌ ಅವರಿಗೆ ಹೈಕಮಾಂಡ್‌ ಮಟ್ಟದಲ್ಲಿ ಉತ್ತಮ ಸಂಪರ್ಕ ಇರುವುದರಿಂದ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

- ಒಗ್ಗಟ್ಟಿಗೇನು ಕಾರಣ? -

ಈ ಹಿಂದೆ ಕಾಂಗ್ರೆಸ್‌ನ ಬಣ ರಾಜಕೀಯದ ಕಾರಣದಿಂದ ಹರಿಪ್ರಸಾದ್‌ ಹಾಗೂ ರಾಮಲಿಂಗಾರೆಡ್ಡಿ ನಡುವೆಯೂ ಅಷ್ಟೊಂದು ಉತ್ತಮ ಗೆಳೆತನವಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದ್ದು ರಾಮಲಿಂಗಾರೆಡ್ಡಿ ಅವರೂ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ತಾತ್ಕಾಲಿಕವಾಗಿ ಅವರನ್ನು ಸಮಾಧಾನ ಪಡಿಸಲು ಕೆಪಿಸಿಸಿ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನವನ್ನು ಹೈಕಮಾಂಡ್‌ ಅವರಿಗೆ ನೀಡಿದೆ. ಬಿಜೆಪಿಯ ಭದ್ರಕೋಟೆ ಬೆಂಗಳೂರು ದಕ್ಷಿಣವನ್ನು ಕಾಂಗ್ರೆಸ್‌ಗೆ ಗೆಲ್ಲಿಸಿ ಕೊಟ್ಟರೆ ಅದರ ಶ್ರೇಯಸ್ಸು ಪಡೆದುಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಸಚಿವ ಸ್ಥಾನ ಸೇರಿದಂತೆ ಪಕ್ಷದಲ್ಲಿ ಮಹತ್ವದ ಹುದ್ದೆ ಪಡೆಯಲು ಇದರಿಂದ ಅನುಕೂಲ. ಈ ಹಂತದಲ್ಲಿ ಹರಿಪ್ರಸಾದ್‌ ಕೂಡ ಬೆಂಬಲಕ್ಕೆ ನಿಲ್ಲುತ್ತಾರೆ ಎನ್ನುವುದು ರಾಮಲಿಂಗಾರೆಡ್ಡಿ ಆಲೋಚನೆ. ಕ್ಷೇತ್ರದ ಇತರ ಶಾಸಕರು, ಮುಖಂಡರೂ ಇದೇ ದಿಕ್ಕಿನಲ್ಲಿ ಯೋಚಿಸುತ್ತಿದ್ದಾರೆ. ಹಾಗಾಗಿ ಬೆಂಗಳೂರು ದಕ್ಷಿಣದ ಕಾಂಗ್ರೆಸಿಗರು ಒಗ್ಗಟ್ಟಿನ ಮಂತ್ರ ಜಪಿಸುವಂತಾಗಿದೆ ಎಂಬ ಮಾತುಗಳು ಕೇಳಬರುತ್ತಿವೆ.

ಈ ಬಾರಿ ಜೆಡಿಎಸ್‌ ಬೆಂಬಲದೊಂದಿಗೆ ಕಾಂಗ್ರೆಸ್‌ ಸ್ಪರ್ಧೆ ಮಾಡಿದೆ. ಇದರಿಂದಾಗಿ ಮತ ವಿಭಜನೆಗೆ ಅವಕಾಶ ಇರುವುದಿಲ್ಲ. ಈ ಹಿಂದಿನ ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್‌ನಲ್ಲೆ ಒಡಕು ಇರುತ್ತಿದ್ದರೆ ಈ ಬಾರಿ ಬಿಜೆಪಿಯಲ್ಲಿ ಈ ಸಮಸ್ಯೆ ಕಾಡುತ್ತಿದೆ. ತೇಜಸ್ವಿ ಸೂರ್ಯ ಅವರನ್ನು ಮುಕ್ತವಾಗಿ ಸ್ವೀಕರಿಸಲು ಬಿಜೆಪಿಯ ಹಿರಿಯ ಶಾಸಕರು ತಯಾರಾಗುತ್ತಿಲ್ಲ. ಈ ಅಂಶವೂ ತಮಗೆ ಅನುಕೂಲವೆಂದು ಭಾವಿಸಿರುವ ಕಾಂಗ್ರೆಸ್‌ ನಾಯಕರು ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಸಾಂಘಿಕ ಹೋರಾಟದ ಉತ್ಸಾಹ ತೋರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌