ಆ್ಯಪ್ನಗರ

Flashback: ಮತದಾನ ಪದ್ಧತಿ ಹುಟ್ಟಿದ್ದೇ ಮೈಸೂರಲ್ಲಿ !

ದೇಶದಲ್ಲೇ ಮೊದಲಿಗೆ ಮತದಾನ ವ್ಯವಸ್ಥೆ ಜಾರಿಯಾಗಿದ್ದು ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದ 1951ರಲ್ಲಿ ಅಲ್ಲ. ಅದಕ್ಕೂ 60 ವರ್ಷಗಳ ಮೊದಲೇ ಮೈಸೂರಿನಲ್ಲಿ ಮತದಾನ ನಡೆದಿತ್ತು ! ಆದರೆ ಆಗ ನಡೆದ ಮತದಾನ, ಅಲ್ಲಿನ ಮತದಾರರ ವಿವರ ಮಾತ್ರ ಸ್ವಾರಸ್ಯಕರ.

Vijaya Karnataka 5 Apr 2019, 8:56 am
ದೇಶದಲ್ಲೇ ಮೊದಲಿಗೆ ಮತದಾನ ವ್ಯವಸ್ಥೆ ಜಾರಿಯಾಗಿದ್ದು ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದ 1951ರಲ್ಲಿ ಅಲ್ಲ. ಅದಕ್ಕೂ 60 ವರ್ಷಗಳ ಮೊದಲೇ ಮೈಸೂರಿನಲ್ಲಿ ಮತದಾನ ನಡೆದಿತ್ತು ! ಆದರೆ ಆಗ ನಡೆದ ಮತದಾನ, ಅಲ್ಲಿನ ಮತದಾರರ ವಿವರ ಮಾತ್ರ ಸ್ವಾರಸ್ಯಕರ. ಮೈಸೂರಿನ ಪೌರಸಭೆ(ಪುರಸಭೆ)ಗೆ ಮೊದಲ ಬಾರಿ 1892ರಲ್ಲಿ ಚುನಾವಣೆ ನಡೆದಾಗ ಮತದಾರರ ಸಂಖ್ಯೆ 250ಮಾತ್ರ. ಮೈಸೂರು ಮಹಾರಾಜರು, ಮಹಾರಾಜ ಕಾಲೇಜು ಪ್ರಾಂಶುಪಾಲರು, ಮರಿಮಲ್ಲಪ್ಪ ಪ್ರೌಢಶಾಲೆ ಮುಖ್ಯೋಪಾಧ್ಯಾಯರು, ತೆರಿಗೆದಾರರ ಸಂಘದ ಅಧ್ಯಕ್ಷ ರು, ಅರಮನೆಯ ನಿವಾಸಿಗಳು, ಅಧಿಕಾರಿಗಳು, ಬ್ರಿಟಿಷರು ನೇಮಿಸಿದ್ದ ಜಿಲ್ಲಾಧಿಕಾರಿ ಹಾಗೂ ಆಯ್ದ ಗಣ್ಯರಷ್ಟೇ ಮತದಾನದ ಹಕ್ಕು ಹೊಂದಿದ್ದರು. ಮೈಸೂರು ರಾಜ್ಯಪತ್ರಗಳು ಹಾಗೂ ಕರ್ನಾಟಕ ಗೆಜೆಟಿಯರ್‌ಗಳಲ್ಲಿ ಇಂಥ ಅಪರೂಪದ ಮಾಹಿತಿ ಲಭ್ಯವಿದೆ.
Vijaya Karnataka Web maharaja


ಮೈಸೂರು ಇತಿಹಾಸ ಸಾರುವ ಗೆಜೆಟಿಯರ್‌ ಪ್ರಕಾರ, ನಗರಗಳಿಗೆ ಮೂಲ ಸೌಕರ್ಯ ಹಾಗೂ ನಾಗರಿಕ ಸೇವೆ ಕಲ್ಪಿಸಲು ಎಲ್ಲ ಸಂಸ್ಥಾನಗಳು ಪೌರಸಭೆಗಳನ್ನು ಸ್ಥಾಪಿಸಬೇಕೆಂದು ಬ್ರಿಟಿಷ್‌ ಆಡಳಿತ 1861ರಲ್ಲಿ ಆದೇಶ ಹೊರಡಿಸಿತ್ತು. ಪರಿಣಾಮ, ಮೈಸೂರಿನಲ್ಲಿ 1862ರ ಜುಲೈ 8ರಂದು ಪೌರಸಭೆ ಅಸ್ತಿತ್ವಕ್ಕೆ ಬಂತು. ಅದಾಗಿ 20 ವರ್ಷಗಳ ಬಳಿಕ ಆಡಳಿತ ನಡೆಸುತ್ತಿದ್ದ ಮಹಾರಾಜ ಚಾಮರಾಜ ಒಡೆಯರ್‌ಗೆ ಹೊಸ ಯೋಚನೆ ಬಂತು. ಅವರು ಪೌರಸಭೆಗೆ ತಾವೇ ನೇಮಕ ಮಾಡುವ ಬದಲು, ಗಣ್ಯರ ಮೂಲಕ ಆಯ್ಕೆ ಮಾಡಿಸಿದರೆ ಹೇಗೆ ಎಂದು ಚಿಂತಿಸಿದರು. ಅದೇ ಮತದಾನ ಪದ್ಧತಿ ಚಿಂತನೆಯ ಹುಟ್ಟಿನ ಕ್ಷ ಣ!

1892ರಲ್ಲಿ ಪೌರಸಭೆ ಆಡಳಿತದ ಅನುಕೂಲದ ದೃಷ್ಟಿಯಿಂದ ಮೈಸೂರು ನಗರವನ್ನು ಲಷ್ಕರ್‌, ಮಂಡಿ, ದೇವರಾಜ, ಚಾಮರಾಜ, ಕೃಷ್ಣರಾಜ, ಪೋರ್ಟ್‌ ಮತ್ತು ನಜರ್‌ಬಾದ್‌ ಎಂದು ಏಳು ಮೊಹಲ್ಲಾಗಳನ್ನಾಗಿ ವಿಂಗಡಿಸಿ,ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಮೊದಲಿಗೆ ಚುನಾವಣೆ ನಡೆಸಿದರು. ಹೀಗೆ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆಯೊಂದು ರೂಪುಗೊಂಡಿತು.

1906 ರಲ್ಲಿ 'ಮೈಸೂರು ಮುನ್ಸಿಪಲ್‌ ರೆಗ್ಯುಲೇಷನ್‌'ಎಂಬ ಕರಡಿನೊಂದಿಗೆ ಪೌರಸಭೆಗೆ ಶಾಸನಬದ್ಧ ಅಧಿಕಾರ ದೊರೆಯಿತು. ಮೊದಲ ಬಾರಿಗೆ ಮತದಾನಕ್ಕೂ ಅರ್ಹತೆ ನಿಗದಿಯಾಗಿತು. ಮೂರು ವರ್ಷ ಅವಧಿಯ ಪೌರಸಭೆಗೆ 30 ಮಂದಿ ಪುರಪಿತೃಗಳು ಬಂದರು. ಈ ಪೈಕಿ 20ಜನರ ಆಯ್ಕೆಗೆ ಕೆಲವರಿಗಷ್ಟೇ ಅರ್ಹತೆ ಇತ್ತು. ನಗರದ ತೆರಿಗೆದಾರರು, ವಕೀಲರು, ಸರಕಾರಿ ನೌಕರರು, ಪಟೇಲರು, ಶ್ಯಾನುಭೋಗರು, ಪದವೀಧರರು ಮಾತ್ರ ಮತದಾನದ ಹಕ್ಕು ಹೊಂದಿದ್ದರು. ಉಳಿದ 10 ಜನರನ್ನು ಮೀಸಲು ನೀತಿ ಪ್ರಕಾರ ನಾಮ ನಿರ್ದೇಶನ ಮಾಡುವ ವ್ಯವಸ್ಥೆ ಜಾರಿಗೆ ಬಂತು. ಹಾಗಾಗಿ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರು ಕೂಡ ಚುನಾಯಿತ ಪ್ರತಿನಿಧಿಗಳಾದರು.

-ಚೀ ಜ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌