ಆ್ಯಪ್ನಗರ

ನನ್ನ ಅಣ್ಣನ ಕೈಯಲ್ಲಿ ದೇಶ ಸುಭದ್ರ ಎಂದ ಪ್ರಿಯಾಂಕಾ

ರಾಹುಲ್‌ಗೆ ದೇಶದ ರಕ್ಷಣೆ ಬಗ್ಗೆ ಏನೂ ಗೊತ್ತಿಲ್ಲ ಎಂದು ಪ್ರತಿಪಕ್ಷಗಳು ಅಪಪ್ರಚಾರ ನಡೆಸುತ್ತಿವೆ. ಭಾರತವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶಕ್ತಿಶಾಲಿಯಾಗಬೇಕೆಂಬ ಕನಸಿದೆ. ಅವನನ್ನು ಬೆಂಬಲಿಸಿ, ಅವನ ಕೈಯಲ್ಲಿ ದೇಶ ಸುಭದ್ರವಾಗಿರಲಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.

Vijaya Karnataka 21 Apr 2019, 5:00 am
ವಯನಾಡ್‌: ಬಿಜೆಪಿ ನಾಯಕರಂತೆ ಕಾಂಗ್ರೆಸ್‌ ಯೋಧರ ತ್ಯಾಗ-ಬಲಿದಾನವನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುವುದಿಲ್ಲ. ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಇಂತಹ ಪಕ್ಷದ ಉಸ್ತುವಾರಿ ಹೊತ್ತಿರುವ ತಮ್ಮ ಸಹೋದರ ರಾಹುಲ್‌ ಗಾಂಧಿ ಕೈಯಲ್ಲಿ ದೇಶ ಸುಭದ್ರವಾಗಿರಲಿದೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
Vijaya Karnataka Web priyanka vadra


ಇದೇ ಮೊದಲ ಬಾರಿಗೆ ಕೇರಳದ ವಯನಾಡ್‌ನಲ್ಲಿ ಸಹೋದರ ರಾಹುಲ್‌ ಪರ ಚುನಾವಣಾ ಪ್ರಚಾರ ನಡೆಸಿದ ಅವರು, ''ರಾಹುಲ್‌ಗೆ ದೇಶದ ರಕ್ಷಣೆ ಬಗ್ಗೆ ಏನೂ ಗೊತ್ತಿಲ್ಲ ಎಂದು ಪ್ರತಿಪಕ್ಷಗಳು ಅಪಪ್ರಚಾರ ನಡೆಸುತ್ತಿವೆ. ಎಲ್ಲ ವರ್ಗದವರ ಸಂಕಷ್ಟಗಳಿಗೆ ಧ್ವನಿಯಾಗುವ ನನ್ನ ಸಹೋದರನಿಗೆ ದೇಶದ ಬಗ್ಗೆ ಅತೀವ ಕಳಕಳಿ ಇದೆ. ಭಾರತವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶಕ್ತಿಶಾಲಿಯಾಗಬೇಕೆಂಬ ಕನಸಿದೆ. ಅವನನ್ನು ಬೆಂಬಲಿಸಿ, ಅವನ ಕೈಯಲ್ಲಿ ದೇಶ ಸುಭದ್ರವಾಗಿರಲಿದೆ,'' ಎಂದು ಹೇಳಿದರು.

ದ್ವೇಷ ರಾಜಕಾರಣ ಮಾಡಲ್ಲ: ''ಬಾಲ್ಯದಲ್ಲಿಯೇ ದ್ವೇಷದ ಕಿಚ್ಚಿಗೆ ಅಜ್ಜಿ (ಇಂದಿರಾ ಗಾಂಧಿ) ಮತ್ತು ಅಪ್ಪನನ್ನು (ರಾಜೀವ್‌ ಗಾಂಧಿ) ಕಳೆದುಕೊಂಡ ನೋವು ನಮಗಿದೆ. ರಾಹುಲ್‌ ತನ್ನ ರಾಜಕೀಯ ಟೀಕಾಕಾರರನ್ನು ಎಂದಿಗೂ ದ್ವೇಷಿಸಲ್ಲ. ಹುತಾತ್ಮ ಅಪ್ಪ ಮತ್ತು ಅಮ್ಮನನ್ನು (ಸೋನಿಯಾ ಗಾಂಧಿ) ಕಳ್ಳರೆಂದು ಜರಿದವರನ್ನೇ ತಬ್ಬಿಕೊಳ್ಳುವ ಮೂಲಕ ಧೈರ್ಯ ತೋರಿದರು. ಇದು ಅವರು ಎಂದಿಗೂ ದ್ವೇಷ ರಾಜಕಾರಣ ಮಾಡಲ್ಲ ಎಂಬುದರ ಪ್ರತೀಕ,'' ಎಂದು ಪ್ರಿಯಾಂಕಾ ಹೇಳಿದರು. ಕಳೆದ ವರ್ಷ ರಾಹುಲ್‌ ಗಾಂಧಿ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿದ್ದ ಸಂಗತಿಯನ್ನು ಅವರು ಈ ರೀತಿ ವ್ಯಾಖ್ಯಾನಿಸಿ ಮತಯಾಚಿಸಿದರು.

''ರಾಷ್ಟ್ರೀಯತೆಯನ್ನೂ ಪ್ರಚಾರದ ಸರಕಾಗಿಸಿಕೊಂಡಿರುವ ಪ್ರಧಾನಿ ಮೋದಿ ಅವರು ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ. ಉದ್ಯಮಿಗಳ ಪರವಾಗಿದೆ. ಬರೀ ಸುಳ್ಳು ಆಶ್ವಾಸನೆಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರಷ್ಟೆ. ಇಂತಹ ದುರ್ಬಲ ಸರಕಾರನ್ನು ಭಾರತ ಎಂದಿಗೂ ನೋಡಿಲ್ಲ,'' ಎಂದು ವಾಗ್ದಾಳಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ