ಆ್ಯಪ್ನಗರ

ಜಿಯಾ ಖಾನ್ ಸಾವಿಗೆ ಗರ್ಭಪಾತವೇ ಕಾರಣವೇ?

ಅರ್ಧದಷ್ಟು ಭ್ರೂಣ ಅವರ ಹೊಟ್ಟೆಯಲ್ಲೇ ಉಳಿದುಕೊಂಡಿತ್ತು', ಸಿಬಿಐ ಸಲ್ಲಿಸಿರುವ ಆಧಾರಗಳಲ್ಲಿ ಫ್ಯಾಮಿಲಿ ಡಾಕ್ಟರ್ ಕೊಟ್ಟಿರುವ ಹೇಳಿಕೆ ಸಹ ನಿರ್ಣಾಯಕವಾಗಿದೆ. ಜಿಯಾ ನಾಲ್ಕು ತಿಂಗಳ ಭ್ರೂಣವನ್ನು ಸೂರಜ್ ಒತ್ತಾಯಪೂರ್ವಕವಾಗಿ ತೆಗೆಸಿದ್ದ.

TNN 31 Jan 2018, 1:27 pm
ಬಾಲಿವುಡ್ ನಟಿ ಜಿಯಾ ಖಾನ್ ಸಾವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಯುವ ಹೀರೋ ಸೂರಜ್ ಪಾಂಚೋಲಿ ವಿರುದ್ಧ ಅಬೆಟ್ಮೆಂಟ್ ಆಫ್ ಸೂಸೈಡ್‌ನಡಿ (ಅತ್ಮಹತ್ಯೆಗೆ ಪ್ರೇರೇಪಣೆ)' ಮುಂಬೈ ಸೆಷನ್ ಕೋರ್ಟ್ ವಿಚಾರಣೆ ನಡೆಸಲಿದೆ. ಆರೋಪ ಸಾಬೀತಾದರೆ ಗರಿಷ್ಠ 10 ವರ್ಷಗಳ ಜೈಲುಶಿಕ್ಷೆಯಾಗುವ ಸಾಧ್ಯತೆಗಳಿವೆ.
Vijaya Karnataka Web jiah khan suicide sooraj pancholi charged with abetment
ಜಿಯಾ ಖಾನ್ ಸಾವಿಗೆ ಗರ್ಭಪಾತವೇ ಕಾರಣವೇ?


ಫೆಬ್ರವರಿ 14ರಿಂದ ಸೂರಜ್ ವಿಚಾರಣೆ ನಡೆಯಲಿದೆ. ಜಿಯಾ ಸಾವಿನ ಬಗ್ಗೆ ಸಿಬಿಐ ದಾಖಲು ಮಾಡಿರುವ ಚಾರ್ಜ್‍ಶೀಟ್‌ನಲ್ಲಿ ಹಲವು ವಿಷಯಗಳು ಬೆಳಕುಕಂಡಿವೆ. ಜಿಯಾ-ಸೂರಜ್ ಸಹಜೀವನ ನಡೆಸಿದ್ದು, ಬಳಿಕ ಗರ್ಭಿಣಿಯಾಗಿದ್ದು, ಒತ್ತಾಯಪೂರ್ವಕವಾಗಿ ಮಾಡಿದ ಗರ್ಭಪಾತ ವ್ಯತಿರಿಕ್ತ ಪರಿಣಾಮ ಬೀರಿತ್ತು ಎಂಬುದು ಸೇರಿದಂತೆ ಹಲವಾರು ಸಂಗತಿಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

'ಅರ್ಧದಷ್ಟು ಭ್ರೂಣ ಅವರ ಹೊಟ್ಟೆಯಲ್ಲೇ ಉಳಿದುಕೊಂಡಿತ್ತು', ಸಿಬಿಐ ಸಲ್ಲಿಸಿರುವ ಆಧಾರಗಳಲ್ಲಿ ಫ್ಯಾಮಿಲಿ ಡಾಕ್ಟರ್ ಕೊಟ್ಟಿರುವ ಹೇಳಿಕೆ ಸಹ ನಿರ್ಣಾಯಕವಾಗಿದೆ. ಜಿಯಾ ನಾಲ್ಕು ತಿಂಗಳ ಭ್ರೂಣವನ್ನು ಸೂರಜ್ ಒತ್ತಾಯಪೂರ್ವಕವಾಗಿ ತೆಗೆಸಿದ್ದ ಎಂದು ಗೊತ್ತಾಗಿದೆ. 'ಒಂದು ದಿನ ಸೂರಜ್ ಪಾಂಚೋಲಿ ವೈದ್ಯರಿಗೆ ಕರೆ ಮಾಡಿ, ಜಿಯಾ ಪಿಲ್ಸ್ ತೆಗೆದುಕೊಂಡಿದ್ದಾಳೆಂದು, ಆದರೆ ಅಬಾರ್ಷನ್ ಪೂರ್ಣಪ್ರಮಾಣದಲ್ಲಿ ಆಗಲಿಲ್ಲ. ಅರ್ಧದಷ್ಟು ಕಸ (ಸ್ಟಫ್) ಆಕೆ ಹೊಟ್ಟೆಯಲ್ಲೇ ಉಳಿದುಕೊಂಡಿದೆ' ಎಂದಿರುವುದಾಗಿ ಹೇಳಲಾಗಿದೆ.

ಆ ಬಳಿಕ ಅವರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದರು. ಜಿಯಾ ತನ್ನ ಡೆತ್‌ನೋಟ್‌ನಲ್ಲಿ ಗರ್ಭಪಾತದ ವಿಷಯವನ್ನು ಪದೇಪದೇ ಪ್ರಸ್ತಾಪಿಸಿರುವುದು ಗಮನಾರ್ಹ. 'ನನ್ನನ್ನು ನಿನಗೆ ಸಂಪೂರ್ಣ ಅರ್ಪಿಸಿಕೊಂಡೆ. ಆದರೆ ನೀನು ಪ್ರತಿಕ್ಷಣ ನನಗೆ ನರಕ ತೋರಿಸಿದೆ. ನನ್ನ ಪ್ರತಿ ಅಂಶವನ್ನೂ ನಾಶ ಮಾಡಿದೆ. ನನ್ನಲ್ಲಿ ಬೆಳೆಯುತ್ತಿರುವ ನಿನ್ನ ಮಗುವನ್ನು ಸಾಯಿಸುವ ಸಂದರ್ಭ ಬಂದಾಗ ಅದೆಷ್ಟು ನೋವನುಭವಿಸಿದೆ ನಿನಗರ್ಥವಾಗಲ್ಲ' ಎಂದು ಜಿಯಾ ಬರೆದಿದ್ದರು.

ಇಷ್ಟಕ್ಕೂ ನಡೆದದ್ದೇನು?
ಅಮಿತಾಬ್ ಬಚ್ಚನ್ ಹಾಗೂ ರಾಮ್ ಗೋಪಾಲ್ ವರ್ಮಾರ 'ನಿಶಬ್ಧ್' ಎಂಬ ಬಾಲಿವುಡ್ ಸಿನಿಮಾದಿಂದ ಪರಿಚಯವಾಗಿ, ಗಜಿನಿ, ಹೌಸ್‍ಫುಲ್‌ಗಳಿಂದ ಗಮನಸೆಳೆದಿದ್ದರು ಜಿಯಾ ಖಾನ್. 2013ರ ಜೂನ್ 3ರಂದು ಮುಂಬೈ ಜುಹೂದಲ್ಲಿನ ಫ್ಲಾಟ್‌ನಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಮೃತಪಟ್ಟಿದ್ದರು. ಇದು ಆತ್ಮಹತ್ಯೆಯಲ್ಲ, ಸೂರಜ್ ಪಾಂಚೋಲಿ ಕೊಲೆ ಮಾಡಿದ್ದಾನೆಂದು ಜಿಯಾ ತಾಯಿ ರುಬಿಯಾ ಆರೋಪಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಮುಂಬೈ ಪೊಲೀಸರು ಜಿಯಾ ಬಾಯ್‌ಫ್ರೆಂಡ್ ಪಾಂಚೋಲಿಯನ್ನು ಪ್ರಶ್ನಿಸಿದ್ದರು. ಕೊನೆಗೆ ಅದು ಆತ್ಮಹತ್ಯೆ ಎಂದು ಚಾರ್ಜ್‌ಶೀಟ್ ಸಿದ್ಧಪಡಿಸಿದ್ದರು. ಆದರೆ ಪೊಲೀಸರ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹೈಕೋರ್ಟ್ ಮೆಟ್ಟಿಲೇರಿದರು. ಹಾಗಾಗಿ ಪ್ರಕರಣ ಸಿಬಿಐಗೆ ಹಸ್ತಾಂತರವಾಗಿತ್ತು.

ಎಲ್ಲ ಕೋನಗಳಿಂದ ತನಿಖೆ ಮಾಡಿದ ಸಿಬಿಐ, ಜಿಯಾದು ಆತ್ಮಹತ್ಯೆ, ಅದಕ್ಕೆ ಪ್ರೇರೇಪಿಸಿದ್ದು ಸೂರಜ್ ಪಾಂಚೋಲಿ ಎಂದು ತಿಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಹಲವು ಆಧಾರಗಳನ್ನೂ ಸಲ್ಲಿಸಿದೆ. ಸೂರಜ್ ಜತೆ ಸಹಜೀವನ ನಡೆಸಿದ ಜಿಯಾ, ಆತನ ಬಟ್ಟೆ ಒಗೆಯುವುದು, ಇಸ್ತ್ರಿ ಮಾಡುವುದು, ಅಡುಗೆ ಮಾಡಿಡುವ, ಮನೆ ವರೆಸುವಂತಹ ಕೆಲಸಗಳೆಲ್ಲವನ್ನೂ ಮಾಡುತ್ತಿದ್ದರೆಂದು ಸಿಬಿಐ ತಿಳಿಸಿದೆ.

ನ್ಯಾಯಾ ಇನ್ನೂ ಜೀವಂತವಾಗಿದೆ: ರುಬಿಯಾ
ಸೂರಜ್ ಪಾಂಚೋಲಿ ಅಪರಾಧಿ ಎಂದು ಕೋರ್ಟ್ ಹೇಳಿರುವ ಬಗ್ಗೆ ಜಿಯಾ ತಾಯಿ ರುಬಿಯಾ ಸಂತಸ ವ್ಯಕ್ತಪಡಿಸಿದ್ದಾರೆ. 'ನಾಲ್ಕು ವರ್ಷಗಳ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ಈ ದೇಶದಲ್ಲಿ ನ್ಯಾಯ ಇನ್ನೂ ಬದುಕಿದೆ. ಆತ್ಮಹತ್ಯೆಗೆ ಪ್ರೇರೇಪಿಸಿದ ಎಂಬುದಕ್ಕಿಂತ ಆ ನೀಚನನ್ನು (ಸೂರಜ್) ಹಂತಕ ಎಂದು ಗುರುತಿಸಿದ್ದರೆ ಇನ್ನೂ ಸಂತೋಷವಾಗುತ್ತಿತ್ತು. ಇದೇ ಮನವಿಯಿಂದ ಹೈಕೋರ್ಟ್‌ಗೆ ಹೋಗುತ್ತೇನೆ' ಎಂದು ರುಬಿಯಾ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌