ಆ್ಯಪ್ನಗರ

ಪ್ರಚಾರಕ್ಕಾಗಿ ಸಹಾಯ ಮಾಡ್ತೀರಿ ಎಂದವರಿಗೆ ನಟ ಸೋನು ಸೂದ್‌ ಸಾಕ್ಷಿ ಸಮೇತ ಕೊಟ್ಟ ಉತ್ತರ ಇದು!

ಬಾಲಿವುಡ್‌ ನಟ ಸೋನು ಸೂದ್‌ ಅವರನ್ನು ಕೆಲವರು ಕಾಲೆಳೆಯುತ್ತಿದ್ದಾರೆ. ಬಡವರಿಗೆ ಸಹಾಯ ಮಾಡುತ್ತಿರುವ ಈ ಸ್ಟಾರ್‌ ಕಲಾವಿದನನ್ನು ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ. ಅದಕ್ಕೆ ಸೋನು ತಿರುಗೇಟು ನೀಡಿದ್ದಾರೆ.

Vijaya Karnataka Web 26 Oct 2020, 6:52 pm
ಸಿನಿಮಾಗಳಲ್ಲಿ ವಿಲನ್‌ ಆಗಿ ಕಾಣಿಸಿಕೊಂಡರೂ, ನಿಜ ಜೀವನದಲ್ಲಿ ಹೀರೋ ಎನಿಸಿಕೊಂಡವರು ನಟ ಸೋನು ಸೂದ್‌. ಬಡವರಿಗೆ, ವಲಸೆ ಕಾರ್ಮಿಕರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ಕೈಲಾದ ಸಹಾಯ ಮಾಡುತ್ತಿರುವ ಅವರಿಗೆ ಅನೇಕರು ಭೇಷ್‌ ಎಂದಿದ್ದಾರೆ. ಆದರೆ ಇನ್ನೂ ಕೆಲವರು 'ಇದೆಲ್ಲ ಪ್ರಚಾರದ ಗಿಮಿಕ್‌' ಎನ್ನುತ್ತಿದ್ದಾರೆ. ಜನರಿಗೆ ಇಂಥ ಅನುಮಾನ ಮೂಡಲು ಕಾರಣ ಏನು?
Vijaya Karnataka Web ಸೋನು ಸೂದ್‌


ಸಾಮಾನ್ಯವಾಗಿ ಟ್ವಿಟರ್‌ ಮೂಲಕ ಜನರು ಸೋನು ಸೂದ್‌ಗೆ ಮನವಿ ಸಲ್ಲಿಸುತ್ತಾರೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ತಮ್ಮ ಮಗನಿಗೆ ತೀವ್ರ ಅನಾರೋಗ್ಯ ಕಾಡುತ್ತಿದ್ದು, ಚಿಕಿತ್ಸೆಗೆ ಹಣ ನೀಡಿ ಎಂದು ಮನವಿ ಮಾಡಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸೋನು, 'ನಿಮ್ಮ ಮಗನನ್ನು ಮುಂಬೈನ ಎಸ್‌ಆರ್‌ಸಿಸಿ ಆಸ್ಪತ್ರೆಗೆ ನಾಳೆ ದಾಖಲು ಮಾಡಲಾಗುವುದು. ಇದೇ ವಾರ ಶಸ್ತ್ರಚಿಕಿತ್ಸೆ ಕೂಡ ನಡೆಯಲಿದೆ' ಎಂದು ಉತ್ತರ ನೀಡಿದ್ದರು. ಆದರೆ ಮನವಿ ಮಾಡಿಕೊಂಡ ವ್ಯಕ್ತಿಯ ಟ್ವೀಟ್‌ನಲ್ಲಿ ಸೋನು ಅವರನ್ನು ಟ್ಯಾಗ್‌ ಮಾಡಲಾಗಿರಲಿಲ್ಲ. ಹಾಗಿದ್ದರೂ ಸೋನುಗೆ ಈ ಟ್ವೀಟ್‌ ಹೇಗೆ ತಲುಪಿತು ಎಂದು ಜನರು ಅನುಮಾನದ ಪ್ರಶ್ನೆ ಮೂಡಿದೆ.

'ಈ ವ್ಯಕ್ತಿ ಟ್ವಿಟರ್‌ ಖಾತೆ ತೆರೆದಿರುವುದೇ ಅಕ್ಟೋಬರ್‌ ತಿಂಗಳಿನಲ್ಲಿ. ಮಾಡಿರುವುದು ಒಂದೇ ಒಂದು ಟ್ವೀಟ್‌. ಇರುವುದು 2-3 ಫಾಲೋವರ್ಸ್‌ ಮಾತ್ರ. ದೂರವಾಣಿ ಸಂಖ್ಯೆ, ವಿಳಾಸ, ಈ-ಮೇಲ್‌ ಮುಂತಾದ ಮಾಹಿತಿಯೂ ಇಲ್ಲ. ಆದರೂ ಇದು ಸೋನು ಸೂದ್‌ ಅವರ ಕಣ್ಣಿಗೆ ಬಿದ್ದು ಸಹಾಯ ಮಾಡಿದ್ದಾರೆ. ಇದೆಲ್ಲ ಪ್ರಚಾರ ತಂತ್ರ. ಈ ಹಿಂದೆ ಸಹಾಯಕ್ಕಾಗಿ ತಮ್ಮನ್ನು ಟ್ಯಾಗ್‌ ಮಾಡಿದ ಎಷ್ಟೋ ಟ್ವೀಟ್‌ಗಳಿಗೆ ಸೋನು ಇನ್ನೂ ಉತ್ತರ ನೀಡಿಲ್ಲ' ಎಂದು ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ.

also read: ದೇವರ ಜೊತೆಯಲ್ಲಿ ಸೋನು ಸೂದ್‌ ಫೋಟೋಗೆ ಪೂಜೆ! 'ಭಾರತ ರತ್ನ' ಕೊಡಿ ಎಂದು ಮೋದಿಗೆ ಫ್ಯಾನ್ಸ್‌ ಮನವಿ!

'ಅದೇ ಇದರಲ್ಲಿನ ಬೆಸ್ಟ್‌ ಪಾರ್ಟ್‌ ಬ್ರದರ್‌. ಅವರು ನನ್ನನ್ನು ಹೇಗೋ ಹುಡುಕುತ್ತಾರೆ, ನಾನು ಅವರನ್ನು ಹೇಗೋ ಹುಡುಕುತ್ತೇನೆ. ಉದ್ದೇಶ ಮುಖ್ಯವಾಗುತ್ತದೆ. ನಿಮಗೆ ಇದು ಅರ್ಥ ಆಗುವುದಿಲ್ಲ. ನಾಳೆ ಎಸ್‌ಆರ್‌ಸಿಸಿ ಆಸ್ಪತ್ರೆಯಲ್ಲಿ ರೋಗಿ ಇರುತ್ತಾರೆ. ನಿಮ್ಮ ಕೈಲಾದ ಸಹಾಯ ಮಾಡಿ. ಅವರಿಗೆ ಹಣ್ಣುಗಳನ್ನು ಕಳಿಸಿಕೊಡಿ. 2-3 ಫಾಲೋವರ್ಸ್‌ ಇರುವ ವ್ಯಕ್ತಿಗೆ ಹೆಚ್ಚು ಫಾಲೋವರ್ಸ್‌ ಇರುವವರಿಂದ ಪ್ರೀತಿ ಸಿಕ್ಕರೆ ಖುಷಿ ಆಗುತ್ತದೆ' ಎಂದು ಟ್ವೀಟ್‌ ಮಾಡಿರುವ ಸೋನು ಅವರು, ಆಸ್ಪತ್ರೆಯ ಕೆಲವು ದಾಖಲೆಗಳನ್ನು ಸಾಕ್ಷಿಯಾಗಿ ನೀಡಿದ್ದಾರೆ.

also read: ಬಡ ಕುಟುಂಬದ ಮಗುವಿನ ಹಾರ್ಟ್‌ ಸರ್ಜರಿಗೆ ನೆರವಾದ ಹೃದಯವಂತ ಸೋನು ಸೋದ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌