ಆ್ಯಪ್ನಗರ

ಬರಿಗಾಲಲ್ಲಿ ಚಾಮುಂಡಿಬೆಟ್ಟ ಹತ್ತಿದ ಪುನೀತ್‌

ಪುನೀತ್‌ರಾಜ್‌ಕುಮಾರ್‌ ಇತ್ತೀಚೆಗೆ ಮೈಸೂರಿನ ಚಾಮುಂಡಿಬೆಟ್ಟವನ್ನು ಬರಿಗಾಲಿನಲ್ಲಿ ಹತ್ತಿ ಸುದ್ದಿಯಾಗಿದ್ದರು. ಈ ಬಗ್ಗೆ ಅವರು ಲವಲವಿಕೆ ಜತೆ ಮಾತನಾಡಿದ್ದಾರೆ.

Vijaya Karnataka 12 Jun 2019, 5:00 am
ಹರೀಶ್‌ ಬಸವರಾಜ್‌
Vijaya Karnataka Web PUNEETH RAJ 3



ನಾನು ಪ್ರತಿಸಲ ಮೈಸೂರಿಗೆ ಬಂದಾಗಲೂ ಚಾಮುಂಡಿ ಬೆಟ್ಟಕ್ಕೆ ಹೋಗುತ್ತೇನೆ. ಹೀಗೆ ಹೋದಾಗ ಎರಡು ಮೂರು ದಿನ ಅಲ್ಲಿ ಉಳಿಯುತ್ತೇನೆ ಅಂತಾದರೆ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಿಯೇ ದೇವಿಯ ದರ್ಶನ ಮಾಡುತ್ತೇನೆ ಎಂದು ಪುನೀತ್‌ರಾಜ್‌ಕುಮಾರ್‌ ಹೇಳಿದ್ದಾರೆ.

'ಚಾಮುಂಡಿ ಬೆಟ್ಟ ಮೈಸೂರಿಗರಿಗೆ ಮತ್ತು ಮೈಸೂರಿಗೆ ಬರುವವರಿಗೆಲ್ಲ ತಾಯಿ ಚಾಮುಂಡೇಶ್ವರಿ ನೀಡಿರುವ ಒಂದು ಪವಿತ್ರ ಸ್ಥಳ. ಚಾಮುಂಡಿ ಬೆಟ್ಟದ ವೈಶಿಷ್ಟ್ಯ ಬಹಳ ಚೆನ್ನಾಗಿದೆ. ನಂದಿ ವಿಗ್ರಹ ಸೆಳೆಯುತ್ತದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ನೀವು ನನ್ನನ್ನು ನೋಡಲು ಬರುವಾಗ ಫಿಟ್‌ ಆ್ಯಂಡ್‌ ಫೈನ್‌ ಆಗಿ ಬನ್ನಿ ಎಂದು ತಾಯಿಯೇ ಸಾವಿರದ ಒಂದು ಮೆಟ್ಟಿಲುಗಳನ್ನು ಸೃಷ್ಟಿ ಮಾಡಿದ್ದಾಳೆ. ಹಾಗಾಗಿ ನಾನು ಮೆಟ್ಟಿಲಿನ ಮೂಲಕ ಹೋಗುತ್ತೇನೆ. ಇದು ನನಗೆ ಚಿಕ್ಕ ವಯಸ್ಸಿನಿಂದಲೂ ರೂಢಿ. ನಮ್ಮ ತಂದೆಯ ಜತೆ ಶೂಟಿಂಗ್‌ಗೆ ಅಂತಾ ಬಂದಾಗಲೆಲ್ಲ ಬೆಟ್ಟ ಹತ್ತಿದ್ದೇನೆ.ಚಿಕ್ಕವನಾಗಿದ್ದಾಗ ಬೆಟ್ಟವನ್ನು ಖುಷಿಗಾಗಿ ಹತ್ತುತ್ತಿದ್ದೆ. ಈಗ ದೇವಿಯನ್ನು ಭಕ್ತಿಪೂರ್ವಕವಾಗಿ ನಮಿಸೋಣ ಎಂದು ಹತ್ತುತ್ತೇನೆ. ಹತ್ತುವಾಗ ಆಗುವ ಸುಸ್ತು ಹತ್ತಿ ತಾಯಿಯ ದರ್ಶನ ಪಡೆದ ಮೇಲೆ ಇರುವುದಿಲ್ಲ. ಅದೇ ಅಲ್ಲಿನ ವಿಶೇಷತೆ' ಎನ್ನುತ್ತಾರೆ ಅವರು.

'ಚಿಕ್ಕ ವಯಸ್ಸಿನಲ್ಲಿದ್ದಾಗ ಬೆಟ್ಟ ಗುಡ್ಡಗಳೆಂದರೆ ಬಹಳ ವಿಶೇಷವಾಗಿ ಕಾಣುತ್ತಿತ್ತು. ನಾನು ಎಲ್ಲಿಗಾದರೂ ಸಮುದ್ರದ ದಡಕ್ಕೆ ಹೋದಾಗಲೆಲ್ಲಾ ಮರಳಿನಲ್ಲಿ ಬೆಟ್ಟವನ್ನು ನಿರ್ಮಾಣ ಮಾಡಿ ಮೆಟ್ಟಿಲುಗಳನ್ನು ಮಾಡುತ್ತಿದ್ದೆ. ಈಗಿನ ಕಾಲದಂತೆ ಆಗೆಲ್ಲ ಐಪ್ಯಾಡ್‌, ಮೊಬೈಲ್‌ಗಳು ಇರುತ್ತಿರಲಿಲ್ಲ. ಹಾಗಾಗಿ ನಮಗೆ ಬೆಟ್ಟ ಗುಡ್ಡಗಳನ್ನು ನೋಡುವುದು, ಅವುಗಳನ್ನು ಹತ್ತುವುದು ಬಹಳ ಖುಷಿ ಕೊಡುತ್ತಿತ್ತು. ನಾನಂತೂ ತಿರುಪತಿ, ಚಾಮುಂಡಿ ಬೆಟ್ಟ ಎಲ್ಲವನ್ನೂ ಬರಿಗಾಲಲ್ಲಿ ಹತ್ತಿದ್ದೇನೆ. ನಾನು ಹೋದ ಕಡೆ ಎಲ್ಲಿಯಾದರೂ ಎರಡು ಮೂರು ದಿನ ಉಳಿಯುತ್ತೇನೆ ಎನ್ನುವುದಾದರೆ ಅಲ್ಲಿ ಹತ್ತಿರದ ಬೆಟ್ಟಗಳಿದ್ದರೆ ಹತ್ತಿ ಬರುತ್ತೇನೆ. ಇದು ದೇಹದ ಆರೋಗ್ಯಕ್ಕೂ ಒಳ್ಳೆಯದು ಮತ್ತು ಬೆಟ್ಟವನ್ನು ಹತ್ತಿ ದೇವರಿಗೆ ನಮಸ್ಕಾರ ಮಾಡುವುದು ಬೇರೆಯದೇ ಫೀಲ್‌ ಕೊಡುತ್ತದೆ. ಇವೆಲ್ಲ ನನ್ನ ವೈಯಕ್ತಿಕ ವಿಷಯಗಳು ಹಾಗಾಗಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರವಹಿಸಿ ಬೆಟ್ಟವನ್ನು ಏರುತ್ತೇನೆ' ಎನ್ನುತ್ತಾರವರು.

ಪುನೀತ್‌ ಚಾಮುಂಡಿ ಬೆಟ್ಟವನ್ನು ಹತ್ತುವಾಗ ಜನರಿಗೆ ಗೊತ್ತಾಗಬಾರದು ಎಂದು ಟೋಪಿ ಧರಿಸಿ ಹತ್ತಿದ್ದಾರೆ. ಆದರೂ ಒಂದಷ್ಟು ಮಂದಿ ಗುರುತಿಸಿ ಮಾತನಾಡಿಸಿದ್ದಾರೆ. ಬೆಟ್ಟದ ಮೇಲೆ ಅಂಗಡಿಯವರನ್ನೆಲ್ಲ ಮಾತನಾಡಿಸಿಕೊಂಡು, ಸೆಲ್ಫಿ ಕೇಳಿದವರಿಗೆ ಸೆಲ್ಫಿ ನೀಡಿ ಮರಳಿದ್ದಾರೆ ಪುನೀತ್‌.

---

ನನಗೆ ಚಾಮುಂಡಿ ಬೆಟ್ಟದ ಜತೆ ಬಹಳ ವಿಶೇಷ ನೆನಪುಗಳಿವೆ. ಬೆಟ್ಟ ಹತ್ತುವಾಗ ನಂದಿ ವಿಗ್ರಹ, ಬೆಟ್ಟದ ಮೇಲೆ ಒಂದಷ್ಟು ಅಂಗಡಿಗಳು. ಅಲ್ಲೆಲ್ಲ ನಾನು ಚಿಕ್ಕ ವಯಸ್ಸಿನಲ್ಲಿ ಆಟಿಕೆಗಳನ್ನು ಕೊಂಡುಕೊಂಡಿದ್ದು ಜ್ಞಾಪಕ ಬರುತ್ತದೆ. ಅಲ್ಲದೆ ನನಗೆ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತುವುದು ಬಹಳ ಇಷ್ಟ ಕೂಡ.

-ಪುನೀತ್‌ರಾಜ್‌ಕುಮಾರ್‌, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌