ಕನ್ನಡ ಚಿತ್ರರಂಗದಲ್ಲಿ 2017ರಲ್ಲಿ ಬಂದ ಚಿತ್ರಗೀತೆಗಳು ಹೊಸ ಮೆರುಗು ಹಾಗೂ ತಾಜಾತನದಿಂದ ಕೂಡಿದ್ದವು ಎನ್ನಬಹುದು. ಟಪಾಂಗುಚ್ಚಿ ಹಾಡುಗಳ ಹಾವಳಿ ಕಡಿಮೆಯಾಗಿ ಸಾಹಿತ್ಯದಿಂದ ಗಮನ ಸೆಳೆಯುವ ಸುಮಧುರ ಹಾಡುಗಳು ಜನಪ್ರಿಯವಾಗಿದ್ದು ವಿಶೇಷ.
ಅರ್ಥಪೂರ್ಣ, ರಸಭರಿತ ಸಾಲುಗಳನ್ನು ಗೀತರಚನಾಕಾರರು ಬರೆದರು. ಅದನ್ನು ಜನರೂ ಮೆಚ್ಚಿಕೊಂಡರು. ಯೋಗರಾಜ್ ಭಟ್ ಬರೆದ ಹಾಡುಗಳು ವಿ. ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಹಿಟ್ ಆಗಿವೆ.
ರಾಜಕುಮಾರ ಚಿತ್ರದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಬರೆದ ಹಾಗೂ ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ವಿಜಯ ಪ್ರಕಾಶ್ ಹಾಡಿದ 'ಗೊಂಬೆ ಹಾಡುತೈತೆ..' ಸರ್ವಕಾಲದ ಜನಪ್ರಿಯ ಹಾಡಾಯಿತು. ಪುನೀತ್ ಅಭಿನಯದ ಈ ಹಾಡು ದೇಶ ವಿದೇಶಗಳಲ್ಲಿ ಮೋಡಿ ಮಾಡಿತು.
ಚೌಕ ಚಿತ್ರದ ಟಪ್ಪಾಂಗುಚಿ ಹಾಡು 'ಅಲ್ಲಾಡ್ಸ್ ಅಲ್ಲಾಡ್ಸ್..' ಜತೆಗೆ 'ಅಪ್ಪಾ ಐ ಲವ್ ಯೂ.. ಪಾ' ಹಾಡು ಜನಪ್ರಿಯಗೊಂಡಿತು. ಟಪಾಂಗುಚಿ ಹಾಡುಗಳನ್ನು ಇಷ್ಟಪಡುವವರು ಇದಕ್ಕೆ ಫಿದಾ ಆದರು. ಯೋಗರಾಜ್ ಭಟ್ ಬರೆದ ಹಾಡನ್ನು ಹರಿಕೃಷ್ಣ ರಾಗ ಸಂಯೋಜನೆಯಲ್ಲಿ ವಿಜಯ ಪ್ರಕಾಶ್ ಹಾಡಿದ್ದರು.
ಚಕ್ರವರ್ತಿ ಚಿತ್ರದ 'ಒಂದು ಮಳೆಬಿಲ್ಲು' ಹಾಡು, ರಾಗ ಚಿತ್ರದ 'ಮನಸ್ಸಿನ ಪುಟದಲಿ..' ಮತ್ತು 'ಆಲಿಸು ಬಾ..' ಅರ್ಥಪೂರ್ಣ ಸಾಹಿತ್ಯದಿಂದಲೂ ಗಮನ ಸೆಳೆದರೆ, ಮುಗುಳು ನಗೆ ಚಿತ್ರದ ಹೊಡಿ ಒಂಬತ್ತು ಹಾಡುಗಳು, ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದ 'ಹುಲಿ ಹುಲಿ..', ಮಾಸ್ ಹಾಡಾಗಿ ಗಮನ ಸೆಳೆದವು. ಹಾಗೆಯೇ ಮುಗುಳು ನಗೆ ಚಿತ್ರ ಹೊಡಿ ಒಂಬತ್ತ್ ಹಾಡು ಕೂಡ ಸೂಪರ್ಹಿಟ್ ಆಗಿತ್ತು.
ನಾಗಾಭರಣ ನಿರ್ದೇಶನದ ಅಲ್ಲಮ ಚಿತ್ರದಲ್ಲಿ ಬಳಸಿಕೊಂಡಿರುವ ಅಲ್ಲಮನ ವಚನಗಳಿಗೆ ಬಾಪು ಪದ್ಮನಾಭ್ ಸಂಗೀತ ನೀಡಿದ್ದಾರೆ. ಈ ಹಾಡುಗಳು ವಿಶೇಷವಾಗಿದ್ದವು ಎನ್ನುವುದರಲ್ಲಿ ಎರಡು ಮಾತಿಲ್ಲ.