ಆ್ಯಪ್ನಗರ

ಅಮರ್ ಸೇರಿದಂತೆ 5 ಕನ್ನಡ ಚಿತ್ರಗಳ ಕಲರವ!

ಸ್ಯಾಂಡಲ್‌ವುಡ್‌ನಲ್ಲಿ ಸಹಜವಾಗಿಯೇ ಪ್ರತಿ ಶುಕ್ರವಾರ ಒಂದರಿಂದ ಹತ್ತರವರೆಗೂ ಸಿನಿಮಾಗಳು ಬಿಡುಗಡೆಯಾಗುತ್ತವೆ. ಇಂದು ಒಟ್ಟು 5 ಚಿತ್ರಗಳು ಬೆಳ್ಳಿತೆರೆಯನ್ನು ಅಲಂಕರಿಸಲು ಸಜ್ಜಾಗಿವೆ. 'ಅಮರ್', 'ಸುವರ್ಣ ಸುಂದರಿ', 'ಕೀರ್ತಿಗೊಬ್ಬ-2' 'ಕಮರೊಟ್ಟು ಚೆಕ್ ಪೋಸ್ಟ್', ಹಾಗೂ 'ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ದ' ಚಿತ್ರಗಳು ತೆರೆಗೆ ಬರಲಿವೆ.

Vijaya Karnataka Web 31 May 2019, 12:34 pm
ಇಂದು ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಸಂಭ್ರಮ ಜೋರಾಗಿದೆ. ರೆಬಲ್ ಸ್ಟಾರ್ ಅಂಬರೀಷ್ ಮಗ ಅಭಿಷೇಕ್ ಅಂಬರೀಷ್ ನಾಯಕತ್ವದ 'ಅಮರ್' ಸಿನಿಮಾ ಇಂದು ಬಿಡುಗಡೆಯಾಗಲಿದ್ದು, ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಅಮರ್ ಚಿತ್ರವು ಈಗಾಗಲೇ ಸಾಕಷ್ಟು ಹವಾ ಕ್ರಿಯೇಟ್ ಮಾಡಿದ್ದು, ಅಭಿಷೇಕ್ ಎಂಟ್ರಿ ಜೋರಾಗಿಯೇ ಇದೆ. ಅಭಿಷೇಕ್ ಅವರಿಗೆ ನಾಯಕಿಯಾಗಿ ಈ ಮೊದಲು ದರ್ಶನ್ ನಾಯಕತ್ವದ 'ಯಜಮಾನ'ದಲ್ಲಿ ನಟಿಸಿದ್ದ ನಟಿ ತಾನ್ಯಾ ಹೋಪ್ ನಾಯಕಿಯಾಗಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನೀಡಿರುವ ಈ ಚಿತ್ರವು ಇಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಸಂದೇಶ ನಾಗರಾಜ್ ನಿರ್ಮಿಸಿದ್ದಾರೆ.

ಅಭಿಷೇಕ್ ಅಂಬರೀಷ್ ನಾಯಕತ್ವದ ಈ ಚಿತ್ರವು ರೊಮ್ಯಾಂಟಿಕ್ ಲವ್ ಸ್ಟೋರಿ ಎಂದು ಬಿಂಬಿತವಾಗಿದೆ. ಆದರೆ ಈ ಚಿತ್ರದಲ್ಲಿ ಆಕ್ಷನ್‌ ದೃಶ್ಯಗಳಿಗೆ ಏನೇನೂ ಕೊರತೆಯಿಲ್ಲ.ಈಗಾಗಲೇ ಬಿಡುಗಡೆಯಾಗಿರುವ ಟೀಸರ್, ಟ್ರೇಲರ್ ಗಳ ಮೂಲಕ ಪ್ರೇಕ್ಷಕರು ಈ ಚಿತ್ರದಲ್ಲಿ ಸಾಕಷ್ಟು ಆಕ್ಷನ್ ದೃಶ್ಯಗಳಿವೆ ಎಂಬುದನ್ನು ಊಹಿಸಿಯಾಗಿದೆ. ಈ ಮೊದಲು ಅರಮನೆ. ಮೈನಾ ಮುಂತಾದ ಬಹಳಷ್ಟು ಚಿತ್ರಗಳನ್ನು ನಿರ್ದೇಶಿಸಿರುವ ನಾಗಶೇಖರ್ ಅವರು ಅಮರ್ ಚಿತ್ರವನ್ನು ಅದ್ದೂರಿ ಮೇಕಿಂಗ್ ಹಾಗೂ ಭಾರೀ ಬಜೆಟ್ ಮೂಲಕ ಕಟ್ಟಿಕೊಟ್ಟಿದ್ದಾರೆ ಎನ್ನಲಾಗಿದೆ.

ಈ ಚಿತ್ರದಲ್ಲಿ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿಶೇಷ ಪಾತ್ರದಲ್ಲಿ (ಗೆಸ್ಟ್ ರೋಲ್) ಕಾಣಿಸಿಕೊಂಡಿದ್ದಾರೆ. ನಟಿ ರಚಿತಾ ರಾಮ್, ನಿರ್ದೇಶಕ ನಿರೂಪ್ ಭಂಡಾರಿ ಮೊದಲಾದ ಅನೇಕ ಕಲಾವಿದರು ಸಹ ಸ್ಪೆಷಲ್ ಪಾತ್ರಗಳ ಮೂಲಕ ಈ ಚಿತ್ರದಲ್ಲಿ ನಟಿಸಿದ್ದಾರೆ. ಬಹುತಾರಾಗಣವನ್ನು ಹೊಂದಿರುವ ಈ ಚಿತ್ರವು ಕನ್ನಡದ ರೆಬಲ್ ಸ್ಟಾರ್ ಅಂಬರೀಷ್ ಅವರ ಮಗ ಅಭಿಷೇಕ್ ಅವರು ಸ್ಯಾಂಡಲ್‌ವುಡ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಚಿತ್ರವಾಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ಸಹಜವಾಗಿಯೇ ಪ್ರತಿ ಶುಕ್ರವಾರ ಒಂದರಿಂದ ಹತ್ತರವರೆಗೂ ಸಿನಿಮಾಗಳು ಬಿಡುಗಡೆಯಾಗುತ್ತವೆ. ಇಂದು ಒಟ್ಟು 5 ಚಿತ್ರಗಳು ಬೆಳ್ಳಿತೆರೆಯನ್ನು ಅಲಂಕರಿಸಲು ಸಜ್ಜಾಗಿವೆ. 'ಅಮರ್', 'ಸುವರ್ಣ ಸುಂದರಿ', 'ಕೀರ್ತಿಗೊಬ್ಬ-2' 'ಕಮರೊಟ್ಟು ಚೆಕ್ ಪೋಸ್ಟ್', ಹಾಗೂ 'ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ದ' ಚಿತ್ರಗಳು ತೆರೆಗೆ ಬರಲಿವೆ. ಅಮರ್ ಬಿಟ್ಟು ಮಿಕ್ಕ ಚಿತ್ರಗಳಲ್ಲಿ ಹೆಚ್ಚಿನವು ಹೊಸಬರ ಹೊಸ ಪ್ರಯತ್ನ ಎನ್ನುವುದು ಗಮನಿಸಬೇಕಾದ ಸಂಗತಿ ಎನ್ನಬಹುದು.

ಕಮರೊಟ್ಟು ಚೆಕ್ ಪೋಸ್ಟ್ ಹೆಸರಿನ ಚಿತ್ರವು 'ಸತ್ಯ ಘಟನೆಯನ್ನು ಆಧಾರವಾಗಿಟ್ಟುಕೊಂಡು ಮಾಡಿರುವ ಚಿತ್ರ' ಎನ್ನಲಾಗಿದೆ. ಈ ಚಿತ್ರದಲ್ಲಿ ಸನತ್, ಉತ್ಪಲ್ ನಾಯಕರಾಗಿದ್ದು, ಅಹಲ್ಯಾ ಮತ್ತು ಸ್ವಾತಿಕೊಂಡೆ ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ 'ತಿಥಿ' ಖ್ಯಾತಿಯ ಕಲಾವಿದ ಗಡ್ಡಪ್ಪ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಉಳಿದಂತೆ ತಾರಾಬಳಗ ಹಾಗೂ ತಾಂತ್ರಿಕ ವರ್ಗದಲ್ಲಿ ಹೊಸಬರೇ ಹೆಚ್ಚಾಗಿದ್ದಾರೆ.

ಇನ್ನು, 'ಸುವರ್ಣ ಸುಂದರಿ ಹೆಸರಿನ ಚಿತ್ರವು ಇಂದು ಬಿಡುಗಡೆಯಾಗಲಿದ್ದು,ಈ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ಸಾಯಿಕುಮಾರ್, ಸಾಕ್ಷಿ ಚೌಧರಿ, ಪೂರ್ಣಾ, ತಿಲಕ್, ಅವಿನಾಶ್, ಜೈಜಗದೀಶ್ ಮುಂತಾದವರು ನಟಿಸಿದ್ದಾರೆ. ಇದು 1508 ರಿಂದ 2018ರವರೆಗೆ ನಡೆಯುವ ಕಥೆಯನ್ನು ಒಳಗೊಂಡಿದೆ ಎನ್ನಲಾಗಿದೆ. ಇಂದು ಈ ಚಿತ್ರವು ರಾಜ್ಯಾಂದ್ಯಂತ ಬಿಡುಗಡೆಯಾಗಲಿದ್ದು, ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಕಾಯುತ್ತಿದೆ.

ಇನ್ನೊಂದು ಚಿತ್ರವಾದ 'ಕೀರ್ತಿಗೊಬ್ಬ-2' ಸಹ ಸಾಕಷ್ಟು ಹೊಸಬರೇ ಕಾಣಿಸಿಕೊಂಡಿರುವ ಚಿತ್ರವಾಗಿದೆ. ಈ ಚಿತ್ರವನ್ನು ಪ್ರತಾಪ್ ಎಂ ನಿರ್ಮಿಸಿ ನಿರ್ದೇಶನ ಸಹ ಮಾಡಿದ್ದಾರೆ. ಈ ಚಿತ್ರದ ಮೂಲಕ 'ಪಾರ್ಥ' ಎನ್ನುವ ಹೊಸಬ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಹೊಸಬರ ತಂಡ ಸ್ಯಾಂಡಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದೆ ಎನ್ನಬಹುದು.

ಇನ್ನು, 'ಒಮ್ಮೆ ನಿಶಬ್ಧ ಒಮ್ಮೆ ಯುದ್ಧ' ಚಿತ್ರವು ಈ ಮೊದಲು 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ನಟಿಸಿದ್ದ ಸಂಯುಕ್ತಾ ಹೆಗಡೆ ನಟಿಸಿರುವ ಚಿತ್ರವಾಗಿದೆ. ಈ ಚಿತ್ರವನ್ನು ಶ್ರೀ ನಾಗ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪ್ರಭು ಮುಂಡ್ಕರ್, ಸುಷ್ಮಾ ಗೌಡ, ರಾಮಕೃಷ್ಣ, 'ಎಡಕಲ್ಲು ಗುಡ್ಡದ ಮೇಲೆ' ಚಂದ್ರಶೇಖರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರ ಸಹ ಹೊಸಬರ ಚಿತ್ರ ಎನ್ನಬಹುದಾಗಿದ್ದು, ಕನ್ನಡ ಚಿತ್ರೋದ್ಯಮದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌