ಆ್ಯಪ್ನಗರ

ಕೆಜಿಎಫ್‌ ಟ್ರೇಲರ್‌ ನೋಡಿ ನಿಬ್ಬೆರಗಾದ ಅಂಬಿ

ಸ್ಯಾಂಡಲ್‌ವುಡ್‌ನಲ್ಲಿ ಭಾರೀ ನಿರೀಕ್ಷೆ ಸೃಷ್ಟಿಸಿರುವ ಕೆಜಿಎಫ್‌ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದೆ. ಹಲವು ತಿಂಗಳಿಂದ ಕಾದಿದ್ದ ಅಭಿಮಾನಿಗಳ ನಿರೀಕ್ಷೆಯನ್ನು ಇದು ಇನ್ನಷ್ಟು ಹೆಚ್ಚಿಸಿದೆ.

Vijaya Karnataka 10 Nov 2018, 12:59 pm
* ಪದ್ಮಾ ಶಿವಮೊಗ್ಗ
Vijaya Karnataka Web DSC_5613


ಭಾರೀ ಕುತೂಹಲಕ್ಕೆ ಕಾರಣವಾಗಿರುವ ಯಶ್‌ ನಟನೆಯ ಕೆಜಿಎಫ್‌ ಚಿತ್ರದ ಟ್ರೇಲರ್‌ ಅನ್ನು ರೆಬಲ್‌ಸ್ಟಾರ್‌ ಅಂಬರೀಷ್‌ ಬೆಂಗಳೂರಿನಲ್ಲಿ ಶುಕ್ರವಾರ ಬಿಡುಗಡೆ ಮಾಡಿದರು.

ಕನ್ನಡವೂ ಸೇರಿ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಡಿಸೆಂಬರ್‌ 21ರಂದು ಕೆಜಿಎಫ್‌ ರಿಲೀಸ್‌ ಆಗುತ್ತಿದ್ದು, ಅದಕ್ಕೂ ಮುನ್ನವೇ ಚಿತ್ರದ ಟ್ರೇಲರ್‌ ಅಷ್ಟೂ ಭಾಷೆಗಳಲ್ಲಿ ಲಾಂಚ್‌ ಆಗಿದೆ. ಕಾರ್ಯಕ್ರಮದಲ್ಲಿ ನೆರೆದಿದ್ದ ತಾರೆಯರು, ವಿವಿಧ ಚಿತ್ರೋದ್ಯಮಗಳ ಗಣ್ಯರು ಟ್ರೇಲರ್‌ ನೋಡಿ ನಿಬ್ಬೆರಗಾಗಿದ್ದು ಅವರ ಮಾತುಗಳಲ್ಲಿ ವ್ಯಕ್ತವಾಯಿತು.

ಟ್ರೇಲರ್‌ ಲಾಂಚ್‌ ಮಾಡಿದ ನಂತರ ಮಾತನಾಡಿದ ಅಂಬರೀಷ್‌, ಭಾರತೀಯ ಚಿತ್ರರಂಗಕ್ಕೆ ಕೆಜಿಎಫ್‌ ಅದ್ಭುತ ಕೊಡುಗೆಯಾಗಲಿದೆ. ಮೇಕಿಂಗ್‌ ಅದ್ಭುತವಾಗಿದ್ದು, ಹಾಲಿವುಡ್‌ ಚಿತ್ರಗಳನ್ನು ಮೀರಿಸುವಂತಿದೆ ಎಂದು ಹೇಳಿದರು.

ಎಲ್ಲ ಭಾಷೆಯ ಟ್ರೇಲರ್‌ಗಳು ರಿಲೀಸ್‌ ಆದ ನಂತರ ಮಾತನಾಡಿದ ಯಶ್‌, ಕೆಜಿಎಫ್‌ ಕನ್ನಡ ಸಿನಿಮಾ ಆಗಿಯಷ್ಟೇ ಅಲ್ಲದೆ ಇಡೀ ಇಂಡಿಯನ್‌ ಸಿನಿಮಾ ಆಗಿ ಹೊರಹೊಮ್ಮಿದೆ. ಓರ್ವ ಕನ್ನಡಿಗನಾಗಿ ನಾನು ಹೆಮ್ಮೆಪಡುತ್ತಿದ್ದೇನೆ. ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಹಿಂದಿಯೂ ಸೇರಿ ದಕ್ಷಿಣದ ಎಲ್ಲ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವುದಕ್ಕೆ ಖುಷಿಯಾಗಿದ್ದೇನೆಂದು ಹೇಳಿದರು.

ಇದಕ್ಕೂ ಮೊದಲು ಕಾರ್ಯಕ್ರಮಕ್ಕೆ ಬಂದು ಚಿತ್ರತಂಡಕ್ಕೆ ಶುಭ ಹಾರೈಸಿದ ತಮಿಳು ನಟ ವಿಶಾಲ್‌, 'ಯಶ್‌ ನನ್ನ ಸಹೋದರನಿದ್ದಂತೆ. ಅವರು ಭಾರತೀಯ ಚಿತ್ರರಂಗವೇ ಹೆಮ್ಮೆಪಡುವಂಥ ಸಿನಿಮಾ ಮಾಡಿದ್ದಾರೆ. ಇನ್ನು ಮುಂದೆ ಕನ್ನಡ ಚಿತ್ರಗಳೂ ಬೌಂಡರಿ ಬಾರಿಸಲಿ. ತಮಿಳಿನಲ್ಲೂ ಈ ಚಿತ್ರಕ್ಕೆ ಅದ್ಭುತ ಯಶಸ್ಸು ಸಿಗಲಿ. ಟ್ರೇಲರ್‌ ನೋಡಿ ನಾನು ಬೆರಗಾಗಿದ್ದೇನೆ' ಎಂದರು. ಎಲ್ಲರಿಗೂ ಕನ್ನಡಲ್ಲಿಯೇ 'ನಮಸ್ಕಾರ' ಹೇಳಿ ಕನ್ನಡದಲ್ಲಿಯೇ 'ಎಲ್ಲರಿಗೂ ವಂದನೆಗಳು' ಎಂದು ಹೇಳಿದರು.

ಕೆಜಿಎಫ್‌ ಸಿನಿಮಾ ಅದ್ಭುತವಾಗಿದೆ. ಈ ಕ್ಷಣ ನಿಜಕ್ಕೂ ಹೆಮ್ಮೆಯಾಗಿದೆ. ಭಾಷೆ ಎಂಬುದು ಗಡಿಯಲ್ಲ. ಕಲೆ ಎಲ್ಲಕ್ಕೂ ಮೀರಿದ್ದು. ಈ ಚಿತ್ರವು ಇಂಡಿಯನ್‌ ಸಿನಿಮಾ ಆಗಿ ಮೂಡಿ ಬಂದಿದೆ.
ಯಶ್‌, ನಟ

ಹಾಗೆಯೇ ಸದ್ಯಕ್ಕೆ ಆಸ್ಪ್ರೇಲಿಯಾದಲ್ಲಿರುವ ಹಿರಿಯ ನಟ ಶಿವರಾಜ್‌ ಕುಮಾರ್‌, ಕೆಜಿಎಫ್‌ ತಂಡಕ್ಕೆ ಯಶಸ್ಸು ಕೋರಿ ವಿಡಿಯೋ ಸಂದೇಶ ಕಳಿಸಿದ್ದಾರೆ. 'ಈ ಘಳಿಗೆ ಕನ್ನಡಕ್ಕೆ ಖುಷಿಯ ಸಂಗತಿ. ಹೆಮ್ಮೆಯ ವಿಚಾರ. ನಾನು ಆಸ್ಪ್ರೇಲಿಯಾದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿದ್ದೇನೆ. ಕೆಜಿಎಫ್‌ ದೊಡ್ಡ ಹಿಟ್‌ ಆಗಲಿ. ನಮ್ಮವರ ಮೇಕಿಂಗ್‌ನ್ನು ಅನ್ಯಭಾಷೆಯವರು ನೋಡಿ ಮೆಚ್ಚಲಿ' ಎಂದು ಹಾರೈಸಿದ್ದಾರೆ. ಅದೇ ರೀತಿ ಬಾಲಿವುಡ್‌ ನಟರಾದ ಫರ್ಹಾನ್‌ ಅಖ್ತರ್‌, ರಿತೀಶ್‌ ದೇಶಮುಖ್‌ ಮುಂತಾದವರು ವಿಡಿಯೋ ಸಂದೇಶ ಕಳಿಸಿ ಚಿತ್ರತಂಡಕ್ಕೆ ವಿಶ್‌ ಮಾಡಿದ್ದಾರೆ.

ಚಿತ್ರದ ನಾಯಕಿ ನಟಿ ಮಾಜಿ ಸುಪ್ರಾ ನ್ಯಾಷನಲ್‌ ಸುಂದರಿ ಶ್ರೀನಿಧಿ ಶೆಟ್ಟಿ , ನಿರ್ದೇಶಕ ಪ್ರಶಾಂತ್‌ ನೀಲ್‌, ನಿರ್ಮಾಪಕ ವಿಜಯ ಕಿರಗಂದೂರು ಮಾತನಾಡಿದರು.

ಹಿಂದಿ ಸೇರಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಂದ ನೂರಾರು ಮಾಧ್ಯಮ ಪ್ರತಿನಿಧಿಗಳು ಬಂದಿದ್ದರಲ್ಲದೆ, ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರ 2.0 ಚಿತ್ರದ ಆಡಿಯೋ ಲಾಂಚ್‌ನಂತೆಯೇ ಈ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌