ಆ್ಯಪ್ನಗರ

ರಂಗನಾಯಕಿಯಾದ ಅದಿತಿ ಪ್ರಭುದೇವ

ನಟಿ ಅದಿತಿ ಪ್ರಭುದೇವ ಇದೀಗ ದಯಾಳ್‌ ಪದ್ಮನಾಭನ್‌ ನಿರ್ದೇಶನದ 'ರಂಗನಾಯಕಿ' ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಕುರಿತು ಲವಲವಿಕೆ ಜತೆ ಮಾತನಾಡಿದ್ದಾರೆ.

Vijaya Karnataka 28 Mar 2019, 5:00 am
ನಟಿ ಅದಿತಿ ಪ್ರಭುದೇವ ಇದೀಗ ದಯಾಳ್‌ ಪದ್ಮನಾಭನ್‌ ನಿರ್ದೇಶನದ 'ರಂಗನಾಯಕಿ' ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಕುರಿತು ಲವಲವಿಕೆ ಜತೆ ಮಾತನಾಡಿದ್ದಾರೆ.
Vijaya Karnataka Web aditi


* ನಂದಿನಿ ಕೆ.ಎಲ್‌

*ಮಹಿಳಾ ಪ್ರಧಾನ ಸಿನಿಮಾವನ್ನು ಒಪ್ಪಿಕೊಳ್ಳಲು ಕಾರಣವೇನು?

ಒಮ್ಮೆಯಾದರೂ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸಬೇಕೆಂಬ ಕನಸಿತ್ತು. ಇದು ಪ್ರತಿಯೊಬ್ಬ ನಟಿಯ ಆಸೆ ಕೂಡ ಆಗಿರುತ್ತದೆ. ಒಮ್ಮೆ ದಯಾಳ್‌ ಅವರನ್ನು ಭೇಟಿ ಮಾಡಿದಾಗ ಅವರು ಕಥೆ ಹೇಳಿ ಮುಗಿಸಿರುವುದರೊಳಗೆ ನನ್ನ ಕಣ್ಣಲ್ಲಿ ನೀರು ಬಂದಿತ್ತು. ಅವರ ನಿರ್ದೇಶನದ ಎಲ್ಲಾ ಚಿತ್ರಗಳು ಉತ್ತಮವಾಗಿಯೇ ಇರುತ್ತವೆ. ಹಾಗಾಗಿಯೇ ಈ ಚಿತ್ರದಲ್ಲಿ ಖುಷಿಯಿಂದ ಅಭಿನಯಿಸುತ್ತಿದ್ದೇನೆ.

*ರಂಗನಾಯಕಿಯಲ್ಲಿ ನಿಮ್ಮ ಪಾತ್ರ ಹೇಗಿದೆ?

ಇದರಲ್ಲಿ ನಾನು ಸಿಟಿಯಲ್ಲಿ ಕೆಲಸ ಮಾಡುವ ಸಾಮಾನ್ಯ ಹುಡುಗಿ. ಅವಳು ತನ್ನ ಬದುಕಿನಲ್ಲಿ ತನಾಗದ ಅನ್ಯಾಯದ ವಿರುದ್ಧ ಸೆಣಸಾಡುತ್ತಾಳೆ. ವಾಸ್ತವಕ್ಕೆ ಹತ್ತಿರದ ಪಾತ್ರ ಇದು. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಅನೇಕ ಸಲ ತಮ್ಮದಲ್ಲದ ತಪ್ಪುಗಳಿಗೆ ಹೊಣೆಯಾಗುತ್ತಾರೆ. ಇದರಿಂದ ಹೊರಬಂದು ತಮಗಾದ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಬೇಕು. ಇಂಥ ಮನೋಭಾವನೆಯ ದಿಟ್ಟ ಹೆಣ್ಣುಮಗಳ ಪಾತ್ರವದು. ಅವಳ ಬದುಕಿಗೆ ಅವಳೇ ನಾಯಕಿ.

*ಹಳೆಯ ಚಿತ್ರ ರಂಗನಾಯಕಿಗೂ ಈ ಚಿತ್ರಕ್ಕೂ ಸಂಬಂಧವಿದೆಯಾ?

ಖಂಡಿತಾ ಇಲ್ಲ. ಇದು ವಿಭಿನ್ನ ಜಾನರ್‌ನ ಸಿನಿಮಾ. ಇಲ್ಲಿ ಮಹಿಳಾ ಸಬಲೀಕರಣದ ಕುರಿತ ಕಥೆಯನ್ನು ಒಳಗೊಂಡಿದೆ.ಅಷ್ಟೇ ಜವಾಬ್ದಾರಿಯುತವಾದ ನಾಯಕಿ ಇವಳು. ಈ ಜಮಾನದ ಮಹಿಳೆಯರಿಗೆ ಕನೆಕ್ಟ್ ಆಗುವಂಹದ್ದು. ದಯಾಳ್‌ ಅವರು ಈ ರಂಗನಾಯಕಿ ಸಿನಿಮಾದ ನಂತರ ಇದನ್ನು ಮುಂದಿನ ಸೀರೀಸ್‌ಗಳ ರೀತಿ ಮಾಡಬೇಕೆಂಬ ಪ್ಲಾನ್‌ ಕೂಡ ಮಾಡಿದ್ದಾರೆ. ಎಲ್ಲಾ ಸೀರಿಸ್‌ಗಳಲ್ಲೂ ಮಹಿಳಾ ಪ್ರಧಾನ ಕಥೆ ಇರುತ್ತದೆ.

*ಆರತಿ ಅಭಿನಯದ ರಂಗನಾಯಕಿ ನೋಡಿದ್ದೀರಾ?

ಒಮ್ಮೆಯಲ್ಲ , ತುಂಬಾ ಸಲ ನೋಡೊದ್ದೇನೆ. ಅದರಲ್ಲಿ ಆರತಿ ಮತ್ತು ಅಂಬರೀಷ್‌ರ ನಟನೆ ಅದ್ಭುತವಾಗಿದೆ. ಮೊದಲಿನಿಂದಲೂ ನನಗೆ ಹಳೇ ಸಿನಿಮಾಗಳೆಂದರೆ ತುಂಬಾ ಇಷ್ಟ. ಕಲ್ಪನಾ, ಆರತಿ, ಜಯಂತಿ, ಮಂಜುಳಾ ಅವರ ಅಭಿನಯವನ್ನು ನೋಡಿ ಇಂದಿನ ಯುವ ನಟಿಯರು ಕಲಿಯುವುದು ಜಾಸ್ತಿ ಇದೆ.

*ಈಗ ಯಾವೆಲ್ಲಾ ಸಿನಿಮಾ ಕೈಯ್ಯಲ್ಲಿವೆ?

ಬಜಾರ್‌ ಚಿತ್ರ ತೆರೆಕಂಡ ನಂತರವೂ ಹಲವು ಸಿನಿಮಾಗಳಲ್ಲಿ ಆಫರ್‌ ಬರುತ್ತಿದೆ. ಕಥೆ, ಪಾತ್ರಗಳಿಗೆ ಅನುಸಾರವಾಗಿ ಸಿನಿಮಾ ಒಪ್ಪಿಕೊಳ್ಳುತ್ತೇನೆ. ಸಿಂಗ ಹಾಗೂ ತೋತಾಪುರಿ, ರಂಗನಾಯಕಿ ಚಿತ್ರಗಳಲ್ಲಿ ತೊಡಗಿಕೊಂಡಿದ್ದೇನೆ. ಜತೆಗೆ ಮತ್ತೆ ಎರಡು ಹೊಸ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ಸದ್ಯದಲ್ಲಿಯೇ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ.

*ಸಮ್ಮರ್‌ನಲ್ಲಿ ಎಲ್ಲಿ ಹೋಗ್ತೀರಿ?

ನನಗೆ ಮೊದಲಿನಿಂದಲೂ ಟ್ರಾವೆಲ್‌,ಬೇರೆ ಪ್ರದೇಶಗಳಿಗೆ ಪ್ರವಾಸ ಹೋಗುವುದು ಎಂದರೆ ಅಷ್ಟಕಷ್ಟೆ. ಬಿಡುವು ಸಿಕ್ಕರೆ ಆರಾಮವಾಗಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತೇನೆ. ನಮ್ಮೂರಿಗೆ ಹೋಗಬೇನಿಸಿದರೆ ಹೋಗಿಬರುತ್ತೇನೆ. ಬೇಸಿಗೆ ಸಮಯದಲ್ಲಿ ನಾನು ಫಿಟ್‌ನೆಸ್‌ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡುತ್ತೇನೆ. ಈ ಸೀಸನ್‌ನಲ್ಲಿ ಸಿಗುವ ಎಲ್ಲಾ ರೀತಿಯ ಹಣ್ಣುಗಳ ಜ್ಯೂಸ್‌ ಮಾಡಿ ಕುಡಿಯುತ್ತೇನೆ.

* ನೀವು ಆಯುರ್ವೇದಿಕ್‌ ವೈದ್ಯರಾಗಿದ್ದೀರಾ?

ಹಾಗೇನೂ ಇಲ್ಲ. ನಾನು ವಾರಕ್ಕೊಮ್ಮೆ ನನಗೆ ತಿಳಿದರುವ ಆರೋಗ್ಯ, ಆಹಾರ, ಫಿಟ್‌ನೆಸ್‌ಗೆ ಸಂಬಂಧಿಸಿದಂತಹ ವಿಷಯಗಳನ್ನು ಪ್ರಾಯೋಗಿಕವಾಗಿ ಆನ್‌ಲೈನ್‌ನಲ್ಲಿ ಹೇಳುತ್ತೇನೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ವಾರಕ್ಕೊಮ್ಮೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತ ವೀಡಿಯೋಗಳನ್ನು ಅಪ್‌ಲೋಡ್‌ ಮಾಡುತ್ತಿರುತ್ತೇನೆ.

---

ಹಿಂದಿನ ರಂಗನಾಯಕಿ ಅತ್ಯುತ್ತಮ ಸಿನಿಮಾ. ಆ ಹೆಸರು ಕೇಳಿದರೇ ನಮ್ಮಲ್ಲಿ ವೈಬ್ರೇಷನ್‌ ಮೂಡುತ್ತದೆ. ಈ ಚಿತ್ರದಲ್ಲಿ ಇವಳ ಜೀವನಕ್ಕೆ ಇವಳೇ ನಾಯಕಿಯಾಗಿದ್ದಾಳೆ. ಪಾತ್ರ ತುಂಬಾ ಇಷ್ಟವಾಗಿದೆ.

-ಅದಿತಿ ಪ್ರಭುದೇವ, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌