* ಪದ್ಮಾ ಶಿವಮೊಗ್ಗ
ಯುವಕನೊಬ್ಬ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುವುದರ ಜತೆ, ಸಮಾಜದ ಏಳಿಗೆಗೂ ಶ್ರಮಿಸುವ ಕತೆಯನ್ನು ಅಸ್ತಿತ್ವ ಸಿನಿಮಾ ಹೇಳಲಿದೆ. ನೂತನ್ ಉಮೇಶ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಇಂದು (ಆ.19) ಬಿಡುಗಡೆ ಆಗುತ್ತಿದೆ.
ಚಿತ್ರವನ್ನು ಬಿ.ಎಸ್.ವಿಶ್ವ ಕಾರ್ಯಪ್ಪ ನಿರ್ಮಾಣ ಮಾಡಿದ್ದು, ಸಿನಿಮಾದ ಗೆಲುವಿನ ಭರವಸೆಯಲ್ಲಿದ್ದಾರೆ. ನಾಯಕ ಯುವರಾಜ್ನಿಗೆ ಇಲ್ಲಿ ಮೂರು ಶೇಡ್ಗಳಿವೆ. 'ಚಿತ್ರದಲ್ಲಿ ಕತೆಯೇ ಹೀರೋ. ಮೂವರು ಹುಡುಗಿಯರು ನಾಯಕನ ಜೀವನದಲ್ಲಿ ಹೇಗೆ ಬಂದು ಹೋಗುತ್ತಾರೆ ಅನ್ನೋದು ಚಿತ್ರದ ವಿಶೇಷ. ಯಾರು ನಾಯಕಿ ಆಗುತ್ತಾರೆ ಅನ್ನೋದು ಕೊನೆಯಲ್ಲಿ ಗೊತ್ತಾಗುತ್ತೆ' ಎನ್ನುತ್ತಾರೆ ಯುವರಾಜ್.
'ನಿರ್ದೇಶಕರು ಆರ್ಟಿಸ್ಟ್. ಹಾಗಾಗಿ ಪ್ರತಿಯೊಂದು ಫ್ರೇಮ್ ಕೂಡಾ ಪೇಯಿಂಟಿಂಗ್ ತರಹ ಬರೋವರೆಗೆ ಬಿಡುತ್ತಿರಲಿಲ್ಲ. ಪ್ರತಿಯೊಂದು ಪರ್ಫೆಕ್ಟ್ ಆಗಿಬೇಕು. ನಾನು ಚಿತ್ರೀಕರಣದ ಸಮಯದಲ್ಲಿ ಪ್ರತಿದಿನ ಅಳದೆ ಮನೆಗೆ ಹೋಗುತ್ತಿರಲಿಲ್ಲ. ಹಾಗೆ ನನ್ನಿಂದ ನಟನೆಯನ್ನು ತೆಗೆಸಿದ್ದಾರೆ. ಈಗ ಸಿನಿಮಾ ನೋಡಿದಾಗ ಬೈದಿದ್ದೆಲ್ಲಾ ಮರೆತೆ. ಅಷ್ಟು ಚೆನ್ನಾಗಿ ಮಾಡಿದ್ದಾರೆ' ಎಂದು ಹೇಳಲು ನಾಯಕ ಮರೆಯುವುದಿಲ್ಲ.
ಯುವರಾಜ್ ರಂಗಭೂಮಿ ಕಲಾವಿದರಾಗಿದ್ದರೂ, ಮೂರು ತಿಂಗಳು ಮತ್ತೆ ರಂಗ ತರಬೇತಿ ಪಡೆದಿದ್ದಾರೆ. 'ಸಾಮಾನ್ಯನಂತೆ ಬೀದಿಯಲ್ಲಿ ಹವಾಯಿ ಚಪ್ಪಲಿ ಹಾಕಿಕೊಂಡು ಅಲೆಯುವುದನ್ನೂ ಪ್ರಾಕ್ಟೀಸ್ ಮಾಡಿದ್ದೆವು. ಸ್ಕ್ರಿಪ್ಟ್ಗೆ ತಕ್ಕಂತೆ ರೆಡಿಯಾದ ನಂತರವೇ ಚಿತ್ರೀಕರಣ ಪ್ರಾರಂಭ ಮಾಡಿದ್ದು' ಎನ್ನುತ್ತಾರೆ.
ಈ ಚಿತ್ರವನ್ನು ಪ್ರೇಕ್ಷಕರು ಏಕೆ ನೋಡಬೇಕು ಅಂತ ಯುವರಾಜ್ ಅವರನ್ನು ಕೇಳಿದಾಗ ಅವರು ಅನೇಕ ಕಾರಣಗಳನ್ನು ಪಟ್ಟಿ ಮಾಡುತ್ತಾರೆ. 'ಸ್ಕ್ರಿಪ್ಟ್ ಸ್ಟ್ರಾಂಗ್ ಆಗಿದೆ. ಪಕ್ಕಾ ಕಮರ್ಷಿಯಲ್ ಎಂಟರ್ಟೇನ್ಮೆಂಟ್ ಚಿತ್ರ. ರೆಗ್ಯುಲರ್ ಜಾನರ್ ಬಿಟ್ಟು ಬೇರೆಯದೇ ರೀತಿ ಮಾಡಿರುವ ಸಿನಿಮಾವಿದು. ಇಬ್ಬರು ಯಶಸ್ವಿ ಚಿತ್ರಗಳನ್ನು ಕೊಟ್ಟವರು ಈ ಚಿತ್ರ ಮಾಡಿದ್ದಾರೆ. ಆಟೋ ರಾಜ ಚಿತ್ರ ನಿರ್ಮಾಣ ಮಾಡಿದ ನಿರ್ಮಾಪಕ ವಿಶ್ವ ಕಾರಿಯಪ್ಪ ಮತ್ತು ಕೃಷ್ಣನ್ ಮ್ಯಾರೇಜ್ ಸ್ಟೋರಿ ಚಿತ್ರ ಕೊಟ್ಟ ನಿರ್ದೇಶಕ ನೂತನ್ ಉಮೇಶ್ ಅವರ ಕಾಂಬಿನೇಶನ್ ಇಲ್ಲಿದೆ. ವಿಜಯ್ ಅಂತೋಣಿಯವರ ಸಂಗೀತ ಚಿತ್ರದ ಹೈಲೈಟ್. ಇತ್ತೀಚೆಗೆ ಹಿಟ್ ಆದ ಪಿಚ್ಚಕಾರನ್ ಚಿತ್ರಕ್ಕೂ ಇವರ ಸಂಗೀತವಿತ್ತು. ಎದೆಗಾರಿಕೆ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದ ಛಾಯಾಗ್ರಾಹಕ ರಾಕೇಶ್ ಈ ಚಿತ್ರವನ್ನು ಅದ್ಭುತವಾಗಿ ಕತೆಯ ಮೂಡ್ಗೆ ತಕ್ಕಂತೆ ಸೆರೆಹಿಡಿದಿದ್ದಾರೆ. ಪ್ರತಿಭಾವಂತ ಕಲಾವಿದರ ದಂಡೇ ಇಲ್ಲಿದೆ...' ಹೀಗೆ ಮುಂದುವರಿಯುತ್ತದೆ ನಾಯಕನ ವಿವರ.
ದುನಿಯಾ ರಶ್ಮಿ, ಸೋನು ಗೌಡ ಮತ್ತು ಪ್ರಜ್ಜು ಪೂವಯ್ಯ ನಾಯಕಿಯರಾಗಿ ನಟಿಸಿದ್ದಾರೆ. ನಾಲ್ಕು ಸಾಂಗ್ಸ್ ಇದ್ದು, ಒಂದು ಪಾರ್ಟಿ ಸಾಂಗ್ ಇದೆ. ಉತ್ತರ ಕರ್ನಾಟಕ ಮತ್ತು ವೆಸ್ಟರ್ನ್ ಶೈಲಿ ಮಿಕ್ಸ್ ಮಾಡಿರೋ 'ರಗಡ್ ಐತಿ ರಗಡ್ ಐತಿ' ಹಾಡು ಸಾಮಾಜಿಕ ಜಾಲತಾಣದಲ್ಲಿ ಹಾಡು 6 ಲಕ್ಷ ರೀಚ್ ಆಗಿದೆ.