* ಶರಣು ಹುಲ್ಲೂರು
ಗಣೇಶ್ ನಟನೆಯ 'ಆಟೋ ರಾಜಾ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟವರು ಸ್ಯಾನ್ ಗ್ರೂಪ್ ಆಫ್ ಕಂಪೆನಿಯ ಮಾಲೀಕ ಬಿ.ಎಸ್.ವಿಶ್ವ ಕಾರ್ಯಪ್ಪ. ಆ ಸಿನಿಮಾದ ಯಶಸ್ಸಿನ ನಂತರ ಮತ್ತೊಂದು ಚಿತ್ರ ಮಾಡುವುದಾಗಿ ಹೇಳಿದ್ದರು. 'ಅಸ್ತಿತ್ವ' ಚಿತ್ರದ ಮೂಲಕ ತಮ್ಮ ಮಾತನ್ನು ಅವರು ಉಳಿಸಿಕೊಂಡಿದ್ದಾರೆ. ಅಲ್ಲದೆ, ಎರಡನೇ ಸಿನಿಮಾದಲ್ಲಿ ಹೊಸ ಹುಡುಗರನ್ನು ಸಿನಿಮಾರಂಗಕ್ಕೆ ಪರಿಚಯಿಸುವ ಮಹತ್ವದ ಜವಾಬ್ದಾರಿಯನ್ನು ಅವರು ತೆಗೆದುಕೊಂಡಿದ್ದಾರೆ.
ಇದೇ ಶುಕ್ರವಾರ (ಆ.19) ಇವರ ನಿರ್ಮಾಣದ 'ಅಸ್ತಿತ್ವ' ಸಿನಿಮಾ ರಿಲೀಸ್ ಆಗುತ್ತಿದೆ. ಹಲವು ವಿಶೇಷತೆಗಳನ್ನು ಚಿತ್ರವು ಒಳಗೊಂಡಿರುವುದರಿಂದ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅಸ್ತಿತ್ವದ ಸಿನಿಮಾದ ನಿರ್ಮಾಣದ ಹಿಂದೆ ಒಂದಷ್ಟು ರೋಚಕ ವಿಷಯಗಳಿವೆ. ಆ ಕುರಿತು ಅವರು ಮಾತನಾಡುತ್ತಾ, 'ಈ ಬಾರಿ ಹೊಸ ಹುಡುಗರ ಜತೆ ವಿಭಿನ್ನ ಸಿನಿಮಾ ಮಾಡೋಣ ಅಂತ ತೀರ್ಮಾನ ಮಾಡಿದೆ. ಹೊಸ ರೀತಿಯ ಸ್ಟೋರಿಗಾಗಿ ಹುಡುಕುತ್ತಿದ್ದಾಗ, ಈ ಟೈಮ್ನಲ್ಲಿ ಸಿಕ್ಕವರು ನೂತನ್ ಉಮೇಶ್. ಆಗಲೇ ಅವರಿಗೆ ಒಂದು ಸಿನಿಮಾ ಮಾಡಿದ ಅನುಭವವಿತ್ತು. ಅವರೂ ಕೂಡ ನಿರ್ಮಾಪಕರನ್ನು ಹುಡುಕುತ್ತಿದ್ದರು. ಇಲ್ಲಿಂದ ನಮ್ಮ ಸಿನಿಮಾ ಕೆಲಸ ಶುರುವಾಯಿತು' ಎನ್ನುತ್ತಾರೆ ವಿಶ್ವ ಕಾರ್ಯಪ್ಪ.
ರಿಯಾಲಿಟಿಗೆ ಹತ್ತಿರವಿರುವ ಮತ್ತು ಪ್ರೇಕ್ಷಕರಿಗೆ ಥ್ರಿಲ್ ನೀಡುವ ಸಿನಿಮಾ ಮಾಡುವ ಆಸೆ ಮೊದಲಿನಿಂದಲೂ ಇವರಿಗೆ ಇತ್ತಂತೆ. ಈ ಎಲ್ಲಾ ಅಂಶಗಳು 'ಅಸ್ತಿತ್ವ' ಸಿನಿಮಾದ ಸ್ಟೋರಿಯಲ್ಲಿ ಸಿಕ್ಕ ಕಾರಣ, ನಿರ್ಮಾಣ ಮಾಡಲು ಮುಂದಾಗಿದ್ದಾರೆ. 'ಕತೆ ಕೇಳಿದಾಗ ನನಗೆ ಥ್ರಿಲ್ ಅನಿಸಿತು. ಅಲ್ಲದೆ ಈ ಕತೆಗೆ ಹೊಸ ಹುಡುಗರೇ ಬೇಕಿತ್ತು. ಹೀಗಾಗಿ ಸ್ನೇಹಿತ ಯುವರಾಜ್ ಮತ್ತು ನಮ್ಮ ಕಂಪೆನಿಯಲ್ಲೇ ಕೆಲಸ ಮಾಡುತ್ತಿದ್ದ ಹುಡುಗ ಮಧುಸೂದನ್ನನ್ನು ಆಯ್ಕೆ ಮಾಡಿದೆವು. ಮಧುಸೂದನ್ ಈಗಾಗಲೇ ತೆಲುಗಿನಲ್ಲಿ ಅನೇಕ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾನೆ. ಯುವರಾಜ್ಗೆ ಸಿನಿಮಾ ಮಾಡುವ ಉತ್ಸಾಹವಿದೆ. ಇಬ್ಬರಿಗೂ ತರಬೇತಿ ಕೊಡಿಸಿ, ಕ್ಯಾಮೆರಾ ಮುಂದೆ ನಿಲ್ಲಿಸಿದ್ದೇವೆ' ಅನ್ನುವುದು ನಿರ್ಮಾಪಕರ ಮಾತು.
ಅವಾರ್ಡ್ ಪಡೆದಿರುವ ಕಂಪೆನಿ :
ಬ್ಯುಸಿನೆಸ್ ಜತೆ ಅನೇಕ ಸಮಾಜಮುಖ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ವಿಶ್ವ ಕಾರ್ಯಪ್ಪ. ಇನ್ನು ಅವರ ಸ್ಯಾನ್ ಗ್ರೂಪ್ ಆಫ್ ಕಂಪೆನಿಗೆ ಮೊನ್ನೆ ನಡೆದ ಇಂಟರ್ ನ್ಯಾಷನಲ್ ಅಚೀವರ್ಸ್ ಕಾನ್ಫರೆನ್ಸ್ನಲ್ಲಿ 'ದ ಫಾಸೆಸ್ಟ್ ಗ್ರೋಯಿಂಗ್ ಇಂಡಿಯನ್ ಕಂಪೆನಿ' ಅವಾರ್ಡ್ ಬಂದಿದೆ. ಮೊನ್ನೆ 12ರಂದು ಬ್ಯಾಂಕಾಕ್ನಲ್ಲಿ ನಡೆದ ಸಮಾರಂಭದಲ್ಲಿ ವಿಶ್ವ ಕಾರ್ಯಪ್ಪ ಭಾಗವಹಿಸಿ, ಪ್ರಶಸ್ತಿ ತಗೆದುಕೊಂಡು ಬಂದಿದ್ದಾರೆ. ಸಿನಿಮಾ, ಮ್ಯಾಗಝಿನ್, ಸ್ಕೂಲ್, ಕಾಲೇಜ್, ಸಾಫ್ಟ್ವೇರ್, ರಿಯಲ್ ಎಸ್ಟೇಟ್ ಹೀಗೆ ಹತ್ತು ಹಲವು ಕೆಲಸಗಳನ್ನು ಸ್ಯಾನ್ ಗ್ರೂಪ್ ಆಫ್ ಕಂಪೆನಿ ಒಳಗೊಂಡಿದ್ದು, ಇಂಥದ್ದೊಂದು ಪ್ರತಿಷ್ಠಿತ ಪ್ರಶಸ್ತಿಬಂದಿದ್ದಕ್ಕೆ ಹೆಮ್ಮೆ ಪಡುತ್ತಾರೆ.
ಸಿನಿಮಾ ಕನಸು
ಮೊದಲಿನಿಂದಲೂ ಸಿನಿಮಾ ರಂಗಕ್ಕೆ ಬರಬೇಕು ಅನ್ನುವುದು ಇವರ ಕನಸಾಗಿತ್ತಂತೆ. 'ಸಿನಿಮಾ ನೋಡಿಯೇ ಬೆಳೆದುಕೊಂಡು ಬಂದವನು ನಾನು. ಸಿನಿಮಾ ನೋಡುವುದಷ್ಟೇ ಅಲ್ಲ, ಅಲ್ಲಿನ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ದಿನಕ್ಕೆ ಎರಡು ಸಿನಿಮಾಗಳನ್ನು ನೋಡದೇ ಇದ್ದರೆ ಸಮಾಧಾನವೇ ಆಗುತ್ತಿರಲಿಲ್ಲ. ಎಲ್ಲಾ ಭಾಷೆಯ ಚಿತ್ರಗಳನ್ನೂ ನೋಡಿದ್ದೇನೆ. ಹೀಗಾಗಿ ಸಿನಿಮಾ ರಂಗಕ್ಕೆ ಬಂದಿರುವುದಕ್ಕೆ ಹೆಮ್ಮೆ ಪಡುತ್ತೇನೆ' ಎನ್ನುತ್ತಾರೆ. 'ಅಸ್ತಿತ್ವ'ವನ್ನು ಸಕ್ಸೆಸ್ ದಂಡೆಗೆ ನಿಲ್ಲಿಸಿ, ಮತ್ತೊಂದು ಸಿನಿಮಾ ಮಾಡುವ ಯೋಜನೆ ಕೂಡ ಇವರದ್ದು. 'ಅಸ್ತಿತ್ವ' ಪ್ರೇಕ್ಷಕರಿಗೆ ಒಳ್ಳೆಯ ಸಿನಿಮಾ ನೋಡಿದ ಅನುಭವ ಕೊಡುತ್ತದೆ ಅನ್ನುವ ನಂಬಿಕೆ ಅವರದ್ದು.