ಆ್ಯಪ್ನಗರ

ಭಾರತ್ ಬಂದ್‌ನಿಂದ ಸ್ಯಾಂಡಲ್‌ವುಡ್‌ಗೆ ಕೋಟ್ಯಂತರ ನಷ್ಟ

ಭಾರತ ಬಂದ್‌ನಿಂದಾಗಿ ಕನ್ನಡ ಸಿನಿಮಾ ರಂಗದ ಬಹುತೇಕ ಚಟುವಟಿಕೆಗಳು ಸ್ತಬ್ಧವಾಗಿದ್ದವು. ಮಧ್ಯಾಹ್ನದವರೆಗೆ ರಾಜ್ಯದ ಬಹುತೇಕ ಕಡೆ ಚಿತ್ರ ಪ್ರದರ್ಶನ ನಿಲ್ಲಿಸಲಾಗಿತ್ತು. ಬಂದ್‌ನಿಂದಾಗಿ ಸಿನಿಮಾ ಉದ್ಯಮಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.

Vijaya Karnataka 11 Sep 2018, 12:17 pm
* ಶರಣು ಹುಲ್ಲೂರು
Vijaya Karnataka Web theater


ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಮತ್ತು ಇತರೆ ಪಕ್ಷಗಳು ಸೋಮವಾರ ಕರೆ ನೀಡಿದ್ದ ಭಾರತ್‌ ಬಂದ್‌ನ ಬಿಸಿ ಕನ್ನಡ ಚಿತ್ರರಂಗಕ್ಕೆ ತೀವ್ರವಾಗಿ ತಟ್ಟಿದೆ. ಕೇವಲ ಒಂದೇ ದಿನದಲ್ಲಿ ಚಿತ್ರರಂಗ ಹತ್ತು ಕೋಟಿಗೂ ಅಧಿಕ ನಷ್ಟ ಅನುಭವಿಸಿದೆ ಎಂದು ಗೊತ್ತಾಗಿದೆ.

ಈಗಾಗಲೇ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರಗಳಿಗೆ ಭಾರೀ ಹೊಡೆತ ಬಿದ್ದಿದ್ದು, ಇದರ ಪರಿಣಾಮ ಚಿತ್ರರಂಗದ ಮೇಲೆಯೂ ಗಣನೀಯವಾಗಿ ಬೀರಿದೆ.

ಸೋಮವಾರ ಬೆಳಗ್ಗೆಯಿಂದಾನೇ ರಾಜ್ಯದ ಬಹುತೇಕ ಚಿತ್ರಮಂದಿರಗಳು ಚಿತ್ರ ಪ್ರದರ್ಶನ ನಿಲ್ಲಿಸಿದ್ದವು. ಸ್ವಯಂ ಪ್ರೇರಿತವಾಗಿ ಚಿತ್ರಮಂದಿರಗಳು ಬಂದ್‌ ಆಗಿದ್ದರೆ, ಮಧ್ಯಾಹ್ನ ಪ್ರೇಕ್ಷಕರ ಕೊರತೆಯಿಂದಾಗಿ ಕೆಲ ಪ್ರದರ್ಶನಗಳನ್ನು ನಿಲ್ಲಿಸಲಾಯಿತು. ಶೂಟಿಂಗ್‌ಗೆ ತೆರಳಬೇಕಿದ್ದ ಕಲಾವಿದರು, ತಂತ್ರಜ್ಞರು, ದಿನಗೂಲಿ ಸಿನಿ ಕಾರ್ಮಿಕರು ಮನೆಯಲ್ಲಿ ಉಳಿಯಬೇಕಾಯಿತು. ಬಾಕ್ಸ್‌ ಆಫೀಸ್‌ನಲ್ಲಿ ಚೆನ್ನಾಗಿ ಕಲೆಕ್ಷನ್‌ ಮಾಡುತ್ತಿದ್ದ ಸಿನಿಮಾಗಳಿಗೆ ತೊಂದರೆ ಆಗುತ್ತಿದೆ ಎಂದು ಗೊಣಗಿದ ನಿರ್ಮಾಪಕರ ಸಂಖ್ಯೆಯೇ ಹೆಚ್ಚಿತ್ತು. ಇದು ಭಾರತ ಬಂದ್‌ ದಿನದ ಸ್ಯಾಂಡಲ್‌ವುಡ್‌ ಚಿತ್ರಣ.

ಬಂದ್‌ನಿಂದಾಗಿ ಸ್ಯಾಂಡಲ್‌ವುಡ್‌ಗೆ ಬರೋಬ್ಬರಿ ಹತ್ತು ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಥಿಯೇಟರ್‌ನಿಂದ ಬರುವ ಎಲ್ಲ ಸಿನಿಮಾಗಳ ಕಲೆಕ್ಷನ್‌ ಅಂದಾಜು ಎಂಟು ಕೋಟಿಯಾದರೆ, ಶೂಟಿಂಗ್‌ ಸಮಯದಲ್ಲಿ ಕಾರ್ಮಿಕರಿಗೆ ಸಲ್ಲುತ್ತಿದ್ದ ಸಂಬಳ ಎರಡು ಕೋಟಿಗೂ ಅಧಿಕವಾಗಿದೆ. ಇದೆಲ್ಲವೂ ನಷ್ಟದ ಬಾಬ್ತಿಗೆ ಸೇರುತ್ತದೆ. 'ಬಂದ್‌ನಿಂದಾಗಿ ನಾಲ್ಕು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವಾಗಲಿಲ್ಲ. ಸಿನಿಮಾ ಶೂಟಿಂಗ್‌ ಕೂಡ ನಿಲ್ಲಿಸಲಾಗಿತ್ತು. ಹೀಗಾಗಿ ಹತ್ತು ಕೋಟಿಗೂ ಹೆಚ್ಚು ನಷ್ಟವಾಗಿದೆ. ವೈಯಕ್ತಿಕವಾಗಿ ಇದನ್ನು ನಾನು ನಷ್ಟ ಎಂದು ಕರೆದಿಲ್ಲ. ಬಂದ್‌ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಬೆಂಬಲ ಸೂಚಿಸಿತ್ತು. ಹಾಗಾಗಿ ಸಹಜವಾಗಿಯೇ ಇದೆಲ್ಲ ಆಗುತ್ತದೆ' ಅಂತಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಭಾ.ಮಾ.ಹರೀಶ್‌.

ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ, ವಿಜಯಪುರ, ಗದಗ ಸೇರಿದಂತೆ ರಾಜ್ಯಾದ್ಯಂತ ಮುಂಜಾನೆಯಿಂದಲೇ ಸಿಂಗಲ್‌ ಸ್ಕ್ರೀನ್‌ ಮತ್ತು ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಪ್ರದರ್ಶನ ರದ್ದಾಗಿದ್ದವು. ಹೆಚ್ಚು ಚಿತ್ರಮಂದಿರಗಳು ಇರುವ ಮೆಜಸ್ಟಿಕ್‌ನ ಬಹುತೇಕ ಥಿಯೇಟರ್ಸ್‌ ಬಂದ್‌ ಆಗಿದ್ದವು. ಗೋಪಾಲನ್‌ ಮಾಲ್‌ ಸೇರಿದಂತೆ ಹಲವು ಮಾಲ್‌ಗಳ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲೂ ಚಿತ್ರಪ್ರದರ್ಶನ ಬಂದ್‌ ಬೋರ್ಡ್‌ ಬಿದ್ದಿತ್ತು. ಆನ್‌ಲೈನ್‌ನಲ್ಲೂ ಟಿಕೆಟ್‌ ಅಲಭ್ಯವಾಗಿದ್ದವು. ಯಜಮಾನ, ಮೈ ನೇಮ್‌ ಇಸ್‌ ಕಿರಾತಕ ಸೇರಿದಂತೆ ಹಲವು ಸಿನಿಮಾಗಳ ಚಿತ್ರೀಕರಣ ಕೂಡ ನಿಲ್ಲಿಸಲಾಗಿತು. ಅಲ್ಲದೇ, ಸ.ಹಿ. ಪ್ರಾ. ಶಾಲೆ ಕಾಸರಗೋಡು, ಅಯೋಗ್ಯ, ಪತಿ ಬೇಕು.ಕಾಮ್‌ ಹೀಗೆ ಹಲವು ಸಿನಿಮಾಗಳು ಯಶಸ್ವಿ ಪ್ರದರ್ಶನ ಕಾಣುತ್ತಿದ್ದವು. ಅವುಗಳ ಕಲೆಕ್ಷನ್‌ಗೆ ಸಹಜವಾಗಿಯೇ ಹೊಡೆತ ಬಿದ್ದಿದೆ. ಮಧ್ಯಾಹ್ನದ ನಂತರ ಬಂದ್‌ ಬಿಸಿ ತಣ್ಣಗಾದರೂ, ಪ್ರೇಕ್ಷಕರು ಮಾತ್ರ ಥಿಯೇಟರ್‌ನತ್ತ ಸುಳಿಯಲಿಲ್ಲ.

ಶನಿವಾರ ಮತ್ತು ಭಾನುವಾರ ಎಲ್ಲ ಕಲಾವಿದರು ಕ್ರಿಕೆಟ್‌ನಲ್ಲಿ ಪಾಲ್ಗೊಂಡಿದ್ದರಿಂದ ಹೆಚ್ಚು ನಷ್ಟವಾಗಿಲ್ಲ. ಥಿಯೇಟರ್‌ ಮತ್ತು ಕಾರ್ಮಿಕರ ಸಂಬಳ ಸೇರಿಸಿದರೆ ಬಂದ್‌ನಿಂದಾಗಿ ಹತ್ತು ಕೋಟಿಗೂ ಹೆಚ್ಚು ನಷ್ಟ ಸ್ಯಾಂಡಲ್‌ವುಡ್‌ಗೆ ಆಗಿದೆ.
ಭಾ.ಮಾ.ಹರೀಶ್‌, ಕಾರ್ಯದರ್ಶಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಈ ವಾರದಿಂದ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಿತ್ತು. ಕಲೆಕ್ಷನ್‌ ಕೂಡ ಹೆಚ್ಚಾಗಿತ್ತು. ಈ ಬಂದ್‌ನಿಂದಾಗಿ ಒಂದು ಕೋಟಿಯಷ್ಟು ನಮ್ಮ ಸಿನಿಮಾಗೆ ನಷ್ಟವಾಗಿದೆ.
ರಿಷಭ್‌ ಶೆಟ್ಟಿ, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌