ಮಹಿಳೆಯರಿಗೆ ದುಸ್ವಪ್ನವಾಗಿ ಕಾಡುವ ಸ್ತನ ಕ್ಯಾನ್ಸರ್ ಕುರಿತು ಅರಿವು ಮೂಡಿಸಲು ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ಮಾಸವನ್ನಾಗಿ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ಸ್ಯಾಂಡಲ್ವುಡ್ ನಟಿಯರೂ ಕೂಡಾ ಸ್ತನ ಕ್ಯಾನ್ಸರ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಕರೆ ನೀಡಿದರು.
----------
ಮಹಿಳೆಯರನ್ನು, ಕುಟುಂಬದವರನ್ನು ಕಂಗೆಡಿಸುವ ಸ್ತನ ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇಂದು ಹೆಚ್ಚಾಗಿದೆ. ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಚಿಕಿತ್ಸೆ ಪಡೆಯುವುದು ಅಗತ್ಯ. ಇದಕ್ಕೆ ಕಾರಣ, ಬೇರೆಲ್ಲಾ ಕ್ಯಾನ್ಸರ್ಗಳಂತೆ ಇದು ಖಚಿತವಾಗಿ ಮತ್ತು ಆರಂಭಿಕ ಮುನ್ಸೂಚನೆ ನೀಡುವುದಿಲ್ಲ. ಇದರಿಂದಾಗಿ ಕ್ಯಾನ್ಸರ್ ತೀವ್ರಗೊಂಡ ನಂತರ ಅರಿವಿಗೆ ಬರುವುದು ದುರಂತದ ಸಂಗತಿ. ಇದರ ಮುನ್ಸೂಚನೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳು ಜರುಗುತ್ತಿವೆ. ಅಲ್ಲದೆ, ಕಡಿಮೆ ವೆಚ್ಚದ ಚಿಕಿತ್ಸಾ ವ್ಯವಸ್ಥೆ ಮತ್ತು ಅತ್ಯಾಧುನಿಕ ಚಿಕಿತ್ಸೆ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸುವುದು ಅಗತ್ಯ ಇದೆ ಎಂದು ಸ್ಯಾಂಡಲ್ವುಡ್ ನಟಿಯರು ಅಭಿಪ್ರಾಯ ಪಟ್ಟಿದ್ದಾರೆ.
ಪುರಾತನ ಜೀವನ ಶೈಲಿ ರೂಢಿಸಿಕೊಳ್ಳಬೇಕು: ಸಂಜನಾ
ಹೆಣ್ಣು ಮಕ್ಕಳಿಗೆ ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಹಾಗಾಗಿ ತಮ್ಮ ದೇಹದ ಸೌಂದರ್ಯಕ್ಕಾಗಿ ಅತಿಯಾಗಿ ವ್ಯಾಯಾಮ ಮಾಡುತ್ತಾರೆ. ಅಲ್ಲದೆ, ಆಧುನಿಕ ಮಹಿಳೆಯರು ಪ್ರಕೃತಿ ಸಹಜವಾಗಿ ಜೀವನ ಶೈಲಿ ನಡೆಸದೆ ತೊಂದರೆ ಅನುಭವಿಸುತ್ತಾರೆ. ಅಂದರೆ ತಾಯಿಯಾದಾಗ ಮಗುವಿಗೆ ಎದೆಹಾಲು ನೀಡಬೇಕು. ಇದರಿಂದ ತಮ್ಮ ದೇಹದ ಸೌಂದರ್ಯ ಹಾಳಾಗುತ್ತದೆ ಎಂದು ಕೊಡದೆ ಇರುವವರನ್ನೂ ನಾವು ನೋಡಬಹುದು. ಹಾಲೂಡದೆ ಇರುವುದರಿಂದಲೇ ಈರೀತಿಯ ಕಾಯಿಲೆಗಳಿಗೆ ಆಸ್ಪದ ನೀಡಿದಂತಾಗುತ್ತಿದೆ. ಸೋಮಾರಿತನದ ಜೀವನ ಶೈಲಿ, ಟೆಂನ್ಷನ್, ಜಂಕ್ಪುಡ್, ರೆಡಿಮೇಡ್ ತಂಪುಪಾನೀಯಗಳ ಸೇವನೆ, ಹೀಗೆ ಹಲವು ಕಾರಣಗಳಿಂದ ಬ್ರೆಸ್ಟ್ ಕ್ಯಾನ್ಸರ್ ಬರುತ್ತದೆ. ಹಾಗಾಗಿ ಯೋಗ, ದ್ಯಾನ, ಪುರಾತನ ರೀತಿಯ ಬದುಕನ್ನು ರೂಢಿಸಿಕೊಳ್ಳಿರಿ ಎನ್ನುತ್ತಾರೆ ಸಂಜನಾ ಗಲ್ರಾನಿ.
ಒಳ ಉಡುಪಿನ ಬಗ್ಗೆ ಕಾಳಜಿವಹಿಸಿ: ಮಯೂರಿ
ಹುಡುಗಿಯರಿಗೆ ಬಾಹ್ಯ ಸೌಂದರ್ಯದಷ್ಟೇ ಸ್ವಚ್ಛತೆ ಬಹಳ ಮುಖ್ಯ. ನಮ್ಮ ದೇಹವನ್ನು ಸ್ವಚ್ಛವಾಗಿಟ್ಟುಕೊಂಡಷ್ಟೂ ಮನಸ್ಸು ಮತ್ತು ಆರೋಗ್ಯ ಚೆನ್ನಾಗಿರುತ್ತದೆ. ಒಳ ಉಡುಪುಗಳು ಸ್ವಚ್ಛವಾಗಿರಬೇಕು ಮತ್ತು ಆಗಾಗ ಬದಲಾಯಿಸುತ್ತಿರಬೇಕು. ಹಳೆಯದಾದ ಒಳ ಉಡುಪುಗಳನ್ನು ನಂತರ ಬಳಸಬೇಡಿ. ಬೇಸಿಗೆ ಕಾಲದಲ್ಲಿ ಎರಡು ಬಾರಿ ಬದಲಾಯಿಸಿದರೆ ಉತ್ತಮ. ಅತಿ ಬಿಗಿಯಾದ ಒಳ ಉಡುಪನ್ನು ಧರಿಸಬೇಡಿ. ಕನಿಷ್ಟ ರಾತ್ರಿಯ ವೇಳೆಯಾದರೂ ಇಂತಹ ಉಡುಪುಗಳಿಂದ ಬಳಸದಿರುವುದು ಉತ್ತಮ ಎನ್ನುತ್ತಾರೆ ನಟಿ ಮಯೂರಿ.
ಆಗಾಗ ಸ್ತನ ತಪಾಸಣೆ ಮಾಡಿಸಿಕೊಳ್ಳಿ: ನಭಾ
ಹೆಣ್ಣು ಮಕ್ಕಳು ಆರೋಗ್ಯ ಸರಿ ಇಲ್ಲದೇ ಇದ್ದಾಗ ನಿರ್ಲಕ್ಷ್ಯ ಮಾಡುತ್ತಾರೆ. ಇದು ಮುಂದೆ ಯಾವ ರೀತಿ ಅನಾರೋಗ್ಯಕ್ಕೆ ಕಾರಣವಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಮಧ್ಯ ವಯಸ್ಸಿನ ನಂತರ 6 ತಿಂಗಳಿಗೊಮ್ಮೆ ದೈಹಿಕ ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳಬೇಕು. ಅದಲ್ಲದೇ ಯಾವುದನ್ನು ನಿರ್ಲಕ್ಷಿಸಬಾರದು. ಪೌಷ್ಠಿಕತೆಯಿಂದ ಕೂಡಿದ ಆಹಾರ ತೆಗೆದುಕೊಳ್ಳಬೇಕು ಎನ್ನುತ್ತಾರೆ ನಭಾ ನಟೇಶ್.