* ಶರಣು ಹುಲ್ಲೂರು
ಕಾವೇರಿಯ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಿದೆ. ಜೀವ ಹಾನಿಯ ಜತೆಗೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೂ ಹಾನಿಯುಂಟಾಗಿದೆ. ಹಿಂಸಾ ರೂಪಕ್ಕೆ ತಿರುಗಿದ ಹೋರಾಟದ ಬಗ್ಗೆ ಸ್ಯಾಂಡಲ್ವುಡ್ ಸಿಲೆಬ್ರಿಟಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮದೇ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡುವುದು ಸರಿಯಾದ ಕ್ರಮವಲ್ಲವೆಂದು ಮಾತಾಡಿದ್ದಾರೆ. ಕನ್ನಡಿಗರು ಶಾಂತಿಪ್ರಿಯರು. ಹೋರಾಟ ಶಾಂತ ರೀತಿಯಿಂದಲೇ ನಡೆಯಬೇಕು ಎಂದಿರುವ ಇವರು, ರೈತರ ಪರವಾಗಿ ಬೇರೆ ಮಾರ್ಗದಲ್ಲಿ ಪ್ರತಿಭಟನೆ ಮಾಡೋಣ ಅನ್ನುತ್ತಿದ್ದಾರೆ.
ಪ್ರಚೋದನೆ ನೀಡುವಂತಹ ಮಾತುಗಳನ್ನೂ ಯಾರೂ ಆಡಬಾರದು ಅನ್ನುವುದು ಕಿಚ್ಚ ಸುದೀಪ್ ಮಾತು. 'ಸದ್ಯಕ್ಕೆ ಬೇಕಾಗಿರುವುದು ನಮ್ಮೆಲ್ಲರಲ್ಲೂ ಶಾಂತಿ. ನಾವು ನಮ್ಮದೇ ಆಸ್ತಿಪಾಸ್ತಿಗಳನ್ನು ನಷ್ಟ ಮಾಡಿಕೊಳ್ಳುತ್ತಿದ್ದೇವೆ. ನಮಗೆ ನ್ಯಾಯ ಸಿಗಬೇಕು ನಿಜ. ಅದಕ್ಕೆ ಬೇರೆ ರೀತಿಯ ಹೋರಾಟದ ಹಾದಿಗಳಿವೆ. ಬೆಂಕಿ ಹಾಕುವುದರಿಂದ, ಯಾರನ್ನೋ ಹೊಡೆಯುವುದರಿಂದ ನಮಗೆ ಖಂಡಿತಾ ನ್ಯಾಯ ಸಿಗದು' ಅನ್ನುವುದು ಸುದೀಪ್ ಮಾತು.
ತುರ್ತಾಗಿ ಶಾಂತಿಯನ್ನು ಕಾಪಾಡಿಕೊಳ್ಳಬೇಕಿದೆ ಅಂದಿದ್ದಾರೆ ದರ್ಶನ್. 'ಈಗ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ತುಂಬಾನೇ ಬೇಸರವಾಗುತ್ತದೆ. ಕನ್ನಡಿಗರು ಶಾಂತಿಪ್ರಿಯರು. ಕನ್ನಡಿಗರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು. ನಾವೂ ಕೂಡ ತೊಂದರೆ ಮಾಡುವುದು ಬೇಡ. ಕಾವೇರಿಯ ಹೋರಾಟಕ್ಕೆ ನಮ್ಮ ಬೆಂಬಲ ಸೂಚಿಸುತ್ತಲೇ, ಶಾಂತಿಯನ್ನು ಕಾಪಾಡಿಕೊಳ್ಳಬೇಕಿದೆ' ಅಂತಾರೆ ನಟ ದರ್ಶನ್.
ವಿದೇಶದಲ್ಲಿ ಶೂಟಿಂಗ್ನಲ್ಲಿರುವ ಯಶ್, ಅಲ್ಲಿಂದಲೇ ಶಾಂತಿಯ ಮಾತುಗಳನ್ನು ಆಡಿದ್ದಾರೆ. 'ದೊಡ್ಡ ದೊಡ್ಡ ವಿಷಯಗಳು ಶಾಂತಿಯಿಂದಾನೇ ಗೆದ್ದಿರೋದು. ವಯಲೆನ್ಸ್ನಿಂದ ಏನನ್ನೂ ಗೆಲ್ಲೋಕೆ ಸಾಧ್ಯವಿಲ್ಲ. ಕನ್ನಡಿಗರು ಶಾಂತಿಪ್ರಿಯರು. ಸದ್ಯ ನಡೆದುಕೊಳ್ಳುತ್ತಿರುವ ರೀತಿ ನಮಗೆ ಶೋಭೆ ತರುವಂಥದ್ದಲ್ಲ. ದಯವಿಟ್ಟು ಯಾರೂ ಕಾನೂನನ್ನು ಕೈಗೆ ತಗೆದುಕೊಳ್ಳಬಾರದು. ಬೆಂಕಿ ಹಚ್ಚುವುದಾಗಲಿ, ಯಾರಿಗೋ ಹೊಡೆಯುವುದರಿಂದ ಏನೂ ಪ್ರಯೋಜನ ಆಗಲಾರದು. ನಾವಿಲ್ಲಿ ತಮಿಳಿಗರನ್ನು ಹೊಡೆಯುತ್ತೇವೆ. ನಮ್ಮವರು ಅಲ್ಲಿಯೂ ಇದ್ದಾರೆ. ಅವರಿಗೆ ಏನಾಗಬಹುದು ಎಂಬುದನ್ನು ಯೋಚಿಸಬೇಕು. ಜನರು ತಗೆದುಕೊಳ್ಳುವ ಸಣ್ಣ ಪುಟ್ಟ ತೀರ್ಮಾನಗಳು ಎರಡು ರಾಜ್ಯಗಳ ಮಧ್ಯೆ ಗಲಭೆ ಸೃಷ್ಟಿ ಮಾಡುವ ಅಪಾಯವಿದೆ. ನಮಗೆ ನ್ಯಾಯ ಸಿಕ್ಕೇ ಸಿಗುತ್ತದೆ ಅನ್ನುವ ನಂಬಿಕೆ ಇದೆ. ಅದಕ್ಕಾಗಿ ನಾವೆಲ್ಲರೂ ಹೋರಾಡೋಣ. ನಿಮ್ಮೆಲ್ಲರನ್ನೂ ನಾನು ಕೇಳಿಕೊಳ್ಳುವುದು ಇಷ್ಟೆ, ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚೋದಕ ಬರಹವನ್ನು ಮತ್ತು ವಿಡಿಯೋಗಳನ್ನು ಹಾಕಬೇಡಿ. ರೈತರ ಪರವಾಗಿ ನಾವೆಲ್ಲರೂ ನಿಲ್ಲೋಣ. ಅದು ಶಾಂತಿಯುತವಾಗಿ ಇರಲಿ' ಅನ್ನುವುದು ಯಶ್ ಮಾತು.
'ಹೋರಾಟದ ನೆಪದಲ್ಲಿ ಗಲಾಟೆ ಮಾಡುವುದು ಬೇಡ. ಬೇರೆಯವರಿಗೆ ತೊಂದರೆ ಮಾಡುವುದರಿಂದ, ನಮಗೆ ನ್ಯಾಯ ಸಿಗುವುದಿಲ್ಲ. ಸರಕಾರಗಳ ಮೇಲೆ ಒತ್ತಡ ತರಲು ನೂರಾರು ದಾರಿಗಳಿವೆ. ಅದನ್ನು ಬಿಟ್ಟು ಹಿಂಸಾ ಮಾರ್ಗವನ್ನು ಆಯ್ದುಕೊಂಡಿರುವುದು ನೋವು ತಂದಿದೆ. ಕಾವೇರಿ ನೀರಿಗಾಗಿ ದೊಡ್ಡ ರೀತಿಯಲ್ಲೇ ಪ್ರತಿಭಟನೆ ಮಾಡೋಣ. ಸದಾ ರೈತರ ಪರವಾಗಿ ಮಾತಾಡೋಣ. ಅದು ಶಾಂತಿಯ ಮಾರ್ಗ ಆಗಿರಲಿ' ಅಂತಾರೆ ಪುನೀತ್ ರಾಜ್ಕುಮಾರ್.
ನಮ್ಮ ಆಸ್ತಿಗಳನ್ನು ನಾವೇ ಕಾಪಾಡಿಕೊಳ್ಳಬೇಕು ಅನ್ನುವುದು ಗಣೇಶ್ ಮಾತು. 'ಯಾರೋ ಯಾರನ್ನೋ ಹೊಡೆಯುವುದರಿಂದ, ಬೆಂಕಿ ಹಚ್ಚುವುದರಿಂದ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ರೈತರು ಹಿಂಸೆಯನ್ನು ಬಯಸುವಂಥವರು ಅಲ್ಲ. ಹಾಗಾಗಿ ನಾವೆಲ್ಲರೂ ಶಾಂತಿ ರೀತಿಯಿಂದ ಪ್ರತಿಭಟನೆ ಮಾಡೋಣ' ಎಂದು ಮನವಿ ಮಾಡಿಕೊಂಡಿದ್ದಾರೆ ಗಣೇಶ್.
ಅಲ್ಲದೇ, ನಟರಾದ ಪ್ರೇಮ್, ನೀನಾಸಂ ಸತೀಶ್, ವಿಜಯ ರಾಘವೇಂದ್ರ, ಶರಣ್, ಶ್ರೀಮುರಳಿ, ನಿರ್ದೇಶಕ ಪವನ್ ಒಡೆಯರ್, ಮುಂಗಾರು ಮಳೆ ಕೃಷ್ಣ, ನಟಿಯರಾದ ಹರಿಪ್ರಿಯಾ, ಮೇಘನಾ, ಅಮೂಲ್ಯ, ಶ್ರುತಿ ಹರಿಹರನ್ ಸೇರಿದಂತೆ ಸಾಕಷ್ಟು ಸಿಲೆಬ್ರಿಟಿಗಳು ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
-----
ಸದ್ಯ ನಡೆದುಕೊಳ್ಳುತ್ತಿರುವ ರೀತಿ ನಮಗೆ ಶೋಭೆ ತರುವಂಥದ್ದಲ್ಲ. ದಯವಿಟ್ಟು ಯಾರೂ ಕಾನೂನನ್ನು ಕೈಗೆ ತಗೆದುಕೊಳ್ಳಬಾರದು. ನಮಗೆ ನ್ಯಾಯ ಸಿಕ್ಕೇ ಸಿಗುತ್ತದೆ ಅನ್ನುವ ನಂಬಿಕೆ ಇದೆ. ಅದಕ್ಕಾಗಿ ನಾವೆಲ್ಲರೂ ಹೋರಾಡೋಣ.
* ಯಶ್, ನಟ