ಆ್ಯಪ್ನಗರ

ಕ್ರೇಜಿ ಹುಡುಗನ ಕಾಲೇಜು ದಿನಗಳು

ಈ ಶುಕ್ರವಾರ (ಆ.19)ರಿಲೀಸ್‌ ಆಗುತ್ತಿರುವ 'ಕ್ರೇಜಿ ಬಾಯ್‌' ಚಿತ್ರದ ಟ್ರೇಲರ್‌ ಮತ್ತು ಹಾಡುಗಳು ಈಗಾಗಲೇ ಪ್ರೇಕ್ಷಕರಿಗೆ ಇಷ್ಟವಾಗಿವೆ. ಅಲ್ಲದೇ, ಇನ್ನೂ ಅನೇಕ ಕೌತುಕದ ವಿಷಯಗಳು ಸಿನಿಮಾದಲ್ಲಿದ್ದು, ಈ ಚಿತ್ರವನ್ನು ಯಾಕೆ ನೋಡಬೇಕು ಅನ್ನುವ ಕುರಿತಾಗಿ ಸಿನಿಮಾ ತಂಡ ಲವಲವಿಕೆಯ ಜತೆ ಮಾತಾಡಿದೆ.

Vijaya Karnataka Web 17 Aug 2016, 4:00 am

ಈ ಶುಕ್ರವಾರ (ಆ.19)ರಿಲೀಸ್‌ ಆಗುತ್ತಿರುವ 'ಕ್ರೇಜಿ ಬಾಯ್‌' ಚಿತ್ರದ ಟ್ರೇಲರ್‌ ಮತ್ತು ಹಾಡುಗಳು ಈಗಾಗಲೇ ಪ್ರೇಕ್ಷಕರಿಗೆ ಇಷ್ಟವಾಗಿವೆ. ಅಲ್ಲದೇ, ಇನ್ನೂ ಅನೇಕ ಕೌತುಕದ ವಿಷಯಗಳು ಸಿನಿಮಾದಲ್ಲಿದ್ದು, ಈ ಚಿತ್ರವನ್ನು ಯಾಕೆ ನೋಡಬೇಕು ಅನ್ನುವ ಕುರಿತಾಗಿ ಸಿನಿಮಾ ತಂಡ ಲವಲವಿಕೆಯ ಜತೆ ಮಾತಾಡಿದೆ.

Vijaya Karnataka Web crazy boys team with lvk
ಕ್ರೇಜಿ ಹುಡುಗನ ಕಾಲೇಜು ದಿನಗಳು


-----

* ಶರಣು ಹುಲ್ಲೂರು

ಮಹೇಶ್‌ ಬಾಬು ನಿರ್ದೇಶನದ 'ಕ್ರೇಜಿ ಬಾಯ್‌' ಸಿನಿಮಾದಿಂದ ದಿಲೀಪ್‌ ಮತ್ತು ಆಶಿಕಾ ಸ್ಯಾಂಡಲ್‌ವುಡ್‌ಗೆ ನಾಯಕ, ನಾಯಕಿಯಾಗಿ ಪರಿಚಯ ಆಗುತ್ತಿದ್ದಾರೆ. ಇದೇ ಶುಕ್ರವಾರ (ಆ.19) ಚಿತ್ರವು ಬಿಡುಗಡೆ ಆಗುತ್ತಿದ್ದು, ಹತ್ತು ಹಲವು ಕಾರಣಗಳಿಂದಾಗಿ ಕ್ರೇಜಿ ಬಾಯ್‌ ನಿರೀಕ್ಷೆ ಮೂಡಿಸಿದ್ದಾನೆ. ಈಗಾಗಲೇ ರಿಲೀಸ್‌ ಆಗಿರುವ ಸಿನಿಮಾದ ಟ್ರೇಲರ್‌ ಮತ್ತು ಹಾಡುಗಳು ಪ್ರೇಕ್ಷಕರ ಮನಸು ಕದಿಯುವಲ್ಲಿ ಯಶಸ್ವಿ ಆಗಿವೆ. ಜತೆಗೆ ಮತ್ತಷ್ಟು ಕುತೂಹಲದ ಅಂಶಗಳೂ ಸಿನಿಮಾದಲ್ಲಿವೆ. ಈ ಎಲ್ಲದರ ಕುರಿತು ಲವಲವಿಕೆಯ ಆಫೀಸ್‌ಗೆ ಬಂದಿದ್ದ, ನಿರ್ದೇಶಕ ಮಹೇಶ್‌ ಬಾಬು, ನಾಯಕ ದಿಲೀಪ್‌ ಪ್ರಕಾಶ್‌ ಮತ್ತು ನಾಯಕಿ ಆಶಿಕಾ ಮಾತನಾಡಿದ್ದಾರೆ.

ಕ್ರೇಜಿ ಬಾಯ್‌ ಸಿನಿಮಾ ತಯಾರಾಗಲು ಕಾರಣವೇ ನಿರ್ಮಾಪಕ ಚಂದ್ರು. ಮಹೇಶ್‌ ಬಾಬು ಅವರ ಅರಸು, ಆಕಾಶ ಸಿನಿಮಾ ನೋಡಿದ್ದ ನಿರ್ಮಾಪಕರು, ದಿಲೀಪ್‌ ಎಂಬ ಹೊಸ ಹುಡುಗನನ್ನು ಸಿನಿಮಾ ರಂಗಕ್ಕೆ ಪರಿಚಯಿಸಬೇಕು ಅಂತ ಕೇಳಿಕೊಂಡರಂತೆ. ಸಿನಿಮಾ ಬಗೆಗಿನ ನಿರ್ಮಾಪಕರ ಆಸಕ್ತಿ ಮತ್ತು ದಿಲೀಪ್‌ ಖಂಡಿತ ಸಿನಿಮಾರಂಗದಲ್ಲಿ ಉಳಿದುಕೊಳ್ಳುತ್ತಾನೆ ಎಂಬ ನಂಬಿಕೆಯಿಂದ 'ಕ್ರೇಜಿ ಬಾಯ್‌' ಸಿನಿಮಾ ಮಾಡಿದ್ದಾರಂತೆ ನಿರ್ದೇಶಕರು.

'ದಿಲೀಪ್‌ ಮತ್ತು ಆಶಿಕಾರನ್ನು ನೋಡಿದ ನಂತರ, ಇಬ್ಬರಲ್ಲೂ ಸಮಾನ ಆಸಕ್ತಿಗಳಿದ್ದವು. ಹಾಗಾಗಿ ಒಟ್ಟಿಗೆ ಹತ್ತು ದಿನಗಳ ಕಾಲ ವರ್ಕ್‌ಶಾಪ್‌ ಮಾಡಿದೆವು. ಪಾತ್ರಗಳನ್ನು ಅರ್ಥ ಮಾಡಿಸುವುದರ ಜತೆಗೆ ದೃಶ್ಯಗಳಲ್ಲಿ ಹೇಗೆ ಇನ್‌ವಾಲ್ವ್‌ ಆಗಬೇಕು ಅಂತಾನೂ ಹೇಳಿಕೊಟ್ಟೆವು. ಹೀಗಾಗಿ ಸಲೀಸಾಗಿ ಅವರು ನಟಿಸಲು ಸಾಧ್ಯವಾಯಿತು' ಅಂತಾರೆ ನಿರ್ದೇಶಕರು.

ಕಾಲೇಜು ಹುಡುಗರ ಸುತ್ತ ಹೆಣೆದಿರುವ ಕತೆಯನ್ನು ಸಿನಿಮಾ ಮಾಡಿದ್ದರೂ, ಎಲ್ಲರ ಬದುಕಿಗೂ ಹತ್ತಿರವಾಗುವ ಸಾಕಷ್ಟು ಅಂಶಗಳು ಚಿತ್ರಕತೆಯಲ್ಲಿವೆಯಂತೆ. ಹೀಗಾಗಿ ಸ್ಕ್ರೀನ್‌ ಪ್ಲೇಗೆ ಹೆಚ್ಚು ಮಹತ್ವ ಕೊಡಲಾಗಿದೆ. ನಾಯಕನಿಗೆ ಕನ್ನಡದ ಬಗೆಗೆ ಹಿಡಿತವಿದ್ದ ಕಾರಣ, ಅದನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರಂತೆ.

ಹಿಂದಿಯ ಡಬ್ಬಿಂಗ್‌ ರೈಟ್ಸ್‌ ಭಾರೀ ಮೊತ್ತಕ್ಕೆ ಸೇಲ್‌ ಆಗಿದೆ. ಕಾಲೇಜು ಸ್ಟೂಡೆಂಟ್ಸ್‌ಗೆ ಮಾತ್ರವಲ್ಲ, ಪಾಲಕರಿಗೂ ಹೇಳಬಹುದಾದ ಹಲವು ವಿಷಯಗಳನ್ನು ಹೇಳಲಾಗಿದೆ. ಅದರಲ್ಲೂ ಸೆಕೆಂಡ್‌ ಹಾಫ್‌ನಲ್ಲಿ ಸಾಕಷ್ಟು ಸೆಂಟಿಮೆಂಟ್‌ ದೃಶ್ಯಗಳಿದ್ದು, ತಂದೆ ಮತ್ತು ಮಗನ ನಡುವಿನ ಬಾಂಧವ್ಯವನ್ನು ಅಪರೂಪ ಅನ್ನುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ಸಿನಿಮಾ ನೋಡಲು ಐದು ಕಾರಣಗಳು

1. ಅರಸು (ಪುನೀತ್‌ ರಾಜ್‌ಕುಮಾರ್‌ ನಟನೆ ಸಿನಿಮಾ) ನಂತರ ನಿರ್ದೇಶಕ ಮಹೇಶ್‌ ಬಾಬು ಮಾಡಿರುವ ದೊಡ್ಡ ಬಜೆಟ್‌ನ ಚಿತ್ರವಿದು.

2. ನುರಿತ ತಾಂತ್ರಿಕ ವರ್ಗ ಕೆಲಸ ಮಾಡಿದೆ. ಶೇಖರ್‌ಚಂದ್ರರ ಸಿನಿಮಾಟೋಗ್ರಫಿ, ಜೆಸ್ಸಿ ಗಿಫ್ಟ್‌ ಸಂಗೀತ, ರವಿವರ್ಮ ಅವರ ಸಾಹಸ ನಿರ್ದೇಶನ ಮತ್ತು ಹರ್ಷ, ಮುರಳಿ, ಚಿನ್ನಿಪ್ರಕಾಶ್‌, ಗಣೇಶ್‌ ಅವರ ಕೊರಿಯೋಗ್ರಫಿ ಚಿತ್ರಕ್ಕಿದೆ.ದಿಲ್‌ವಾಲಾ ಖ್ಯಾತಿ ಅನಿಲ್‌ ಸಂಭಾಷಣೆ ಬರೆದಿದ್ದಾರೆ.

3. ಹೊಸ ಹುಡುಗರ ಜತೆ ಹೆಸರಾಂತ ತಾರಾ ಬಳಗ ಸಿನಿಮಾದಲ್ಲಿದೆ. ರವಿಶಂಕರ್‌ ಖಳನಟನಾಗಿದ್ದರೆ, ಅನಂತ್‌ನಾಗ ಅತಿಥಿ ನಟ. ಸಾಧು ಕೋಕಿಲಾ ಡ್ರಾಮಾ ಮಾಸ್ಟರ್‌. ರಂಗಾಯಣ ರಘು ಕೂಡ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ.

4. ವಿಭಿನ್ನವಾದ ಸ್ಟೋರಿ ಇಲ್ಲಿದೆ. ಡಬಲ್‌ ಮೀನಿಂಗ್‌ ಇಲ್ಲ. ಎರಡೂ ಕಾಲು ಗಂಟೆ ಮನರಂಜನೆ ನೀಡುವ ಚಿತ್ರವಿದು. ಪ್ರತಿ ಕಾಲೇಜು ಹುಡುಗ, ಹುಡುಗಿಯರಿಗೂ ಈ ಸಿನಿಮಾ ಕನೆಕ್ಟ್ ಆಗುತ್ತದೆ.

5. ಚಿನ್ನಿಪ್ರಕಾಶ್‌ ನೃತ್ಯ ನಿರ್ದೇಶನದ ಹಾಡೊಂದಕ್ಕೆ ಒಂದು ಕೋಟಿ ರೂ. ಖರ್ಚು ಮಾಡಲಾಗಿದೆ. ರಿಚ್‌ ಮೇಕಿಂಗ್‌ನಲ್ಲಿ ಅದು ಮೂಡಿಬಂದಿದೆ. ಕಂಠೀರವ ಸ್ಟುಡಿಯೋದಲ್ಲಿ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗಿದೆ. ಇದು ಸಿನಿಮಾದ ಹೈಲೆಟ್‌ ಕೂಡ.

-----

ಇದು ನನ್ನ ಮೊದಲ ಸಿನಿಮಾ ಅಂತ ಅನಿಸುವುದೇ ಇಲ್ಲ. ಅಪರೂಪದ ಪಾತ್ರದೊಂದಿಗೆ ಸಿನಿಮಾರಂಗಕ್ಕೆ ಪರಿಚಯ ಆಗುತ್ತಿದ್ದೇನೆ ಅನ್ನುವ ಹೆಮ್ಮೆ ಇದೆ.

- ದಿಲೀಪ್‌ ಪ್ರಕಾಶ್‌, ನಾಯಕ

ನನ್ನ ಕರಿಯರ್‌ನಲ್ಲಿ ಇದು ಉತ್ತಮ ಸಿನಿಮಾವಾಗಲಿದೆ. ಈ ಚಿತ್ರದ ನಂತರ ನನಗೆ ಸಾಕಷ್ಟು ಅವಕಾಶಗಳು ಸಿಗುತ್ತವೆ ಅನ್ನುವ ನಂಬಿಕೆ ಕೂಡ ಇದೆ.

-ಆಶಿಕಾ, ನಾಯಕಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌